ರಾಜ್ಯದಲ್ಲಿ ಸರ್ಕಾರಿ ಬಸ್ ಸೇವೆಗಳ ಸ್ಥಗಿತದ ಬಿಸಿ ಮತ್ತೆ ಇಟ್ಟಿದೆ. ಇಂದು ಪ್ರಯಾಣಿಕರಿಗೆ ಸಾರಿಗೆಯಿಂದ ತೊಂದರೆಯಾಗಲಿದೆ. ಕಾರಣ ಏನು ಅಂದ್ರೆ, ಇಂದು ರಾಜ್ಯಾದ್ಯಂತ ಬಸ್ ಮುಷ್ಕರ ನಡೆಯುತ್ತಿದೆ. 26 ತಿಂಗಳ ಬಾಕಿ ಹಣ ಬಿಡುಗಡೆ ಮಾಡಲು ಸರ್ಕಾರ ಅನುಮೋದನೆ ನೀಡಿದರೂ, ತಮ್ಮ ಪ್ರಮುಖ ಬೇಡಿಕೆಗಳು ಇನ್ನೂ ಸಂಪೂರ್ಣವಾಗಿ ಈಡೇರಿಲ್ಲವೆಂದು ಸಾರಿಗೆ ನೌಕರರ ಸಂಘಟನೆಗಳು ಆರೋಪ ಮಾಡಿದ್ದು, ಇಂದು ಬಸ್ ಮುಷ್ಕರ ನಡೆಯುತ್ತಿದೆ.

ಹೌದು, ಸುಮಾರು ರಾಜ್ಯದ ನಾಲ್ಕು ಪ್ರಮುಖ ಸಾರಿಗೆ ನಿಮಗಳಿಂದ ಈ ಪ್ರತಿಭಟನೆ ನಡೆಯುತ್ತಿದೆ ಎನ್ನಲಾಗ್ತಿದೆ. ಈ ಪ್ರತಿಭಟನೆಯಲ್ಲಿ ಸುಮಾರು 1.15 ಲಕ್ಷಕ್ಕೂ ಹೆಚ್ಚು ನೌಕರರು ಜಂಟಿ ಕ್ರಿಯಾ ಸಮಿತಿಯಡಿ ಒಂದಾಗಲಿದ್ದಾರೆ ಎಂದು ಹೇಳಲಾಗ್ತಿದೆ.. ಈ ನಿಗಮಗಳಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್ಆರ್ಟಿಸಿ), ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ), ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (ಎನ್ಡಬ್ಲ್ಯೂಕೆಆರ್ಟಿಸಿ) ಹಾಗೂ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (ಕೆಕೆಆರ್ಟಿಸಿ) ಸೇರಿವೆ. ಈ ನಾಲ್ಕು ನಿಗಮಗಳು ನಗರಗಳು, ಪಟ್ಟಣಗಳು ಮತ್ತು ಗ್ರಾಮಗಳನ್ನು ಸಂಪರ್ಕಿಸುವ ಸಾವಿರಾರು ಬಸ್ಗಳನ್ನು ಪ್ರತಿದಿನ ಸಂಚರಿಸುತ್ತಿವೆ. ಹೀಗಾಗಿ ಮುಷ್ಕರ ನಡೆದರೆ ಸಾಮಾನ್ಯ ಜನರಿಗೆ ತೀವ್ರ ತೊಂದರೆ ಉಂಟಾಗಬಹುದು.
ಇನ್ನು ಸರ್ಕಾರ 26 ತಿಂಗಳ ಬಾಕಿ ವೇತನಕ್ಕಾಗಿ ಒಟ್ಟು ₹1,271.92 ಕೋಟಿ ಮಂಜೂರು ಮಾಡಿದೆ. ಇದರಲ್ಲಿ 2022ರ ಜನವರಿ 1ರಿಂದ 2023ರ ಫೆಬ್ರವರಿ 28ರವರೆಗೆ ಇರುವ 14 ತಿಂಗಳ ಬಾಕಿಗೆ ₹718.93 ಕೋಟಿ ಹಾಗೂ 2021ರ ಜನವರಿ 1ರಿಂದ ಡಿಸೆಂಬರ್ 31ರವರೆಗೆ ಇರುವ 12 ತಿಂಗಳ ಬಾಕಿಗೆ ₹552.99 ಕೋಟಿ ವಿಶೇಷ ಅನುದಾನವಾಗಿ ನೀಡಲು ತೀರ್ಮಾನಿಸಲಾಗಿದೆ ಎನ್ನಲಾಗ್ತಿದೆ. ಈ ನಿರ್ಧಾರವನ್ನು ಸರ್ಕಾರ ಅಧಿಕೃತ ಆದೇಶದ ಮೂಲಕ ಪ್ರಕಟಿಸಿದೆ.
ಅಂದಹಾಗೆ ಸಾರಿಗೆ ಸಚಿವರು ಬಜೆಟ್ ಬಳಿಕ ಈ ಹಣ ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿರುವ ಬಗ್ಗೆಯೂ ಮೂಲ ಮಾಹಿತಿ ತಿಳಿಸಿದೆ.. ಜೊತೆಗೆ, ಶೇಕಡಾವಾರು ಆಧಾರಿತ ವೇತನ ಪರಿಷ್ಕರಣೆ ಕುರಿತು ಕಾರ್ಮಿಕ ಸಂಘಟನೆಗಳೊಂದಿಗೆ ಚರ್ಚೆ ಆರಂಭಿಸಲು ಸರ್ಕಾರ ಒಪ್ಪಿಕೊಂಡಿದೆ ಎನ್ನಲಾಗಿದ್ದು, ಈ ವೇತನ ಪರಿಷ್ಕರಣೆ ಏಪ್ರಿಲ್ 1, 2025ರಿಂದ ಜಾರಿಗೆ ಬರಲಿದೆ ಎಂದು ತಿಳಿಸಲಾಗಿದೆ. ಆದರೂ 38 ತಿಂಗಳ ಸಂಪೂರ್ಣ ಬಾಕಿ ವೇತನವನ್ನು ಒಟ್ಟಾಗಿ ಪಾವತಿಸಬೇಕು ಎಂಬ ಒಕ್ಕೂಟಗಳ ಬೇಡಿಕೆ ಇನ್ನೂ ಅಂಗೀಕರಿಸಲ್ಪಟ್ಟಿಲ್ಲ.
ಈ ಹಿನ್ನೆಲೆಯಲ್ಲಿ ಫೆಬ್ರವರಿ 19ರಂದು ಬೆಳಿಗ್ಗೆ 10ರಿಂದ ಸಂಜೆ 4ರವರೆಗೆ ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ "ಬೆಂಗಳೂರು ಚಲೋ" ಹೆಸರಿನ ಬೃಹತ್ ಪ್ರತಿಭಟನೆ ನಡೆಸಲು ಸಂಘಟನೆಗಳು ನಿರ್ಧರಿಸಿವೆ. ಸರ್ಕಾರದಿಂದ ಸ್ಪಷ್ಟ ಮತ್ತು ಲಿಖಿತ ಭರವಸೆ ಸಿಗುವವರೆಗೆ ಹೋರಾಟ ಮುಂದುವರಿಸುವುದಾಗಿ ಅವರು ತಿಳಿಸಿದ್ದಾರೆ. ಸಂಜೆ 4 ಗಂಟೆಯೊಳಗೆ ತೃಪ್ತಿಕರ ನಿರ್ಧಾರವಾಗದಿದ್ದರೆ, ಫೆಬ್ರವರಿ 20ರಿಂದ ಬಸ್ ಸೇವೆ ಸ್ಥಗಿತಗೊಳ್ಳುವ ಸಾಧ್ಯತೆ ಇದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಯೂನಿಯನ್ ನಾಯಕರ ಪ್ರಕಾರ, ಕಳೆದ ಎರಡು ವರ್ಷಗಳಲ್ಲಿ ಹಲವು ಬಾರಿ ಸಚಿವರು ಮತ್ತು ಅಧಿಕಾರಿಗಳೊಂದಿಗೆ ಮಾತುಕತೆ ನಡೆದರೂ ಅಂತಿಮ ನಿರ್ಧಾರ ಆಗಿಲ್ಲ. ಭಾಗಶಃ ಪಾವತಿ ಬೇಡ, ಬಡ್ಡಿಯೊಂದಿಗೆ ಪೂರ್ಣ ಬಾಕಿ ವೇತನ ಬೇಕು ಎಂಬುದು ನೌಕರರ ಸ್ಪಷ್ಟ ನಿಲುವಾಗಿದೆ.
ಬಸ್ ಸೇವೆ ಸ್ಥಗಿತಗೊಂಡರೆ ಕಚೇರಿಗೆ ಹೋಗುವವರು, ವಿದ್ಯಾರ್ಥಿಗಳು, ದಿನಸಿ ವ್ಯಾಪಾರಿಗಳು ಹಾಗೂ ಗ್ರಾಮೀಣ ಪ್ರದೇಶದ ಜನರಿಗೆ ದೊಡ್ಡ ಸಮಸ್ಯೆ ಉಂಟಾಗಬಹುದು. ಆದ್ದರಿಂದ ಪ್ರಯಾಣಿಕರು ಅಧಿಕೃತ ಪ್ರಕಟಣೆಗಳನ್ನು ಗಮನಿಸಿ, ಅಗತ್ಯವಿದ್ದರೆ ಪರ್ಯಾಯ ಪ್ರಯಾಣ ವ್ಯವಸ್ಥೆ ಮಾಡಿಕೊಂಡುಕೊಳ್ಳುವುದು ಉತ್ತಮ ಎಂದು ಸೂಚಿಸಲಾಗಿದೆ.
ಇದೀಗ ಸರ್ಕಾರ ಮತ್ತು ನೌಕರರ ನಡುವಿನ ಮಾತುಕತೆ ಯಾವ ದಿಕ್ಕಿಗೆ ಸಾಗುತ್ತದೆ ಎಂಬುದರ ಮೇಲೆ ರಾಜ್ಯಾದ್ಯಂತ ಬಸ್ ಸಂಚಾರದ ಭವಿಷ್ಯ ನಿರ್ಧಾರವಾಗಲಿದೆ.


Click it and Unblock the Notifications