ಇಎಂಐ ವಿನಾಯಿತಿ ಎರಡು ವರ್ಷದ ತನಕ ವಿಸ್ತರಿಸಬಹುದು ಎಂದ ಕೇಂದ್ರ ಸರ್ಕಾರ
ಕೊರೊನಾ ಬಿಕ್ಕಟ್ಟಿನ ಸಂದರ್ಭ ಎಂಬ ಕಾರಣಕ್ಕೆ ಘೋಷಣೆ ಮಾಡಿದ್ದ 6 ತಿಂಗಳ ಇಎಂಐ ವಿನಾಯಿತಿಯನ್ನು ಎರಡು ವರ್ಷಗಳ ತನಕ ವಿಸ್ತರಿಸಬಹುದು ಎಂದು ಸುಪ್ರೀಂ ಕೋರ್ಟ್ ಗೆ ಕೇಂದ್ರ ಸರ್ಕಾರ ತಿಳಿಸಿದೆ. ಆಗಸ್ಟ್ 31ನೇ ತಾರೀಕಿನ ತನಕ ಇದ್ದ ಇಎಂಐ ವಿನಾಯಿತಿ ಅವಧಿ ಕೊನೆಯಾದ ಒಂದು ದಿನದ ನಂತರ ಸರ್ಕಾರದಿಂದ ಈ ಪ್ರತಿಕ್ರಿಯೆ ಬಂದಿದೆ.
EMI ವಿನಾಯಿತಿ: ಬಡ್ಡಿ ಪಾವತಿಯಲ್ಲಿ ಸರ್ಕಾರದ ಜವಾಬ್ದಾರಿ ಪ್ರಶ್ನಿಸಿದ 'ಸುಪ್ರೀಂ'
ಸದ್ಯಕ್ಕೆ ಸಾಲ ಪಡೆದಿರುವ ಕಾರ್ಪೊರೇಟ್ ಹಾಗೂ ವೈಯಕ್ತಿಕ ಸಾಲಗಾರರಿಗೆ ಆಗಸ್ಟ್ 31ರ ತನಕ ಇಎಂಐ ಪಾವತಿಯಿಂದ ವಿನಾಯಿತಿ ನೀಡಲು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಅವಕಾಶ ನೀಡಿತ್ತು. ಇನ್ನು ಸರ್ಕಾರವನ್ನು ಪ್ರತಿನಿಧಿಸಿರುವ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಸುಪ್ರೀಂ ಕೋರ್ಟ್ ಗೆ ಮಾಹಿತಿ ನೀಡಿದ್ದಾರೆ.
ಜಿಡಿಪಿ 23 ಪರ್ಸೆಂಟ್ ಕುಸಿದಿದೆ
ಇಎಂಐ ವಿನಾಯಿತಿ ಇದ್ದ ಅವಧಿಗೆ ಸಾಲದ ಮೇಲಿನ ಬಡ್ಡಿ ಮನ್ನಾ ಮಾಡಬೇಕಾ ಎಂಬ ಬಗ್ಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಹಾಗೂ ಬ್ಯಾಂಕರ್ಸ್ ಒಕ್ಕೂಟದ ಮಧ್ಯೆ ಮಾತುಕತೆ ನಡೆದಿದೆ. ಸದ್ಯದಲ್ಲೇ ಪರಿಹಾರ ದೊರೆಯಲಿದೆ ಎಂದು ಅವರು ಹೇಳಿದ್ದಾರೆ. ಇದರ ಜತೆಗೆ ಇತರ ಸಮಸ್ಯೆಗಳೂ ಇವೆ. ಜಿಡಿಪಿ 23 ಪರ್ಸೆಂಟ್ ಕುಸಿದಿದೆ. ಆರ್ಥಿಕತೆ ಒತ್ತಡದಲ್ಲಿದೆ ಎಂದು ಸರ್ಕಾರದ ಪರ ವಕೀಲರು ಹೇಳಿದ್ದಾರೆ.
ಆರ್ ಬಿಐ ಹಾಗೂ ಬ್ಯಾಂಕರ್ಸ್ ಅಸೋಸಿಯೇಷನ್ ಜತೆ ಚರ್ಚೆ
ಇಎಂಐ ವಿನಾಯಿತಿ ಘೋಷಣೆ ಮಾಡಿದ್ದ ಅವಧಿಯಲ್ಲಿ ಬಡ್ಡಿಯ ಮೇಲೆ ಬಡ್ಡಿ ಹಾಕುವ ಭಾಗದ ಬಗ್ಗೆ ಆರ್ ಬಿಐ ಅಧಿಕಾರಿಗಳ ಜತೆ ಚರ್ಚೆ ನಡೆಸಲಾಗಿದೆ. ಈ ವಿಚಾರದಲ್ಲಿ ಬಹಳ ಜವಾಬ್ದಾರಿಯಿಂದ ಹೇಳುತ್ತಿದ್ದೇನೆ. ಹರೀಶ್ ಸಾಳ್ವೆ ಅವರು ಕೂಡ ಬ್ಯಾಂಕರ್ಸ್ ಅಸೋಸಿಯೇಷನ್ ಗಳ ಜತೆ ಮಾತನಾಡಿದ್ದಾರೆ. ಹಲವು ಸಮಸ್ಯೆಗಳನ್ನು ಪರಿಹರಿಸಲಾಗುವುದು ಎಂದು ಸಾಲಿಸಿಟರ್ ಜನರಲ್ ಹೇಳಿದ್ದಾರೆ.
ಬಡ್ಡಿಯ ಮೇಲೆ ಬಡ್ದಿ ಬಗ್ಗೆ ಅಹವಾಲು ಆಲಿಕೆ
ಬಡ್ಡಿಯ ಮೇಲೆ ಬಡ್ಡಿ ಹಾಕುವ ವಿಚಾರಕ್ಕೆ ಸಂಬಂಧಿಸಿದಂತೆ ನ್ಯಾಯಮೂರ್ತಿ ಎಂ.ಆರ್. ಶಾ ಅವರು ಬುಧವಾರ ಮತ್ತೊಮ್ಮೆ ಅಹವಾಲು ಆಲಿಸಲಿದ್ದಾರೆ. ಇಎಂಐ ವಿನಾಯಿತಿ ಘೋಷಿಸಿದ್ದ ಅವಧಿಯಲ್ಲಿ ಬಡ್ಡಿ ಮನ್ನಾ ಮಾಡುವ ಬಗ್ಗೆ ಸರ್ಕಾರದ ನಿಲುವು ಏನು? ಆರ್ ಬಿಐ ಹಿಂದೆ ಸರ್ಕಾರ ಅವಿತಿಟ್ಟುಕೊಳ್ಳುವುದು ಸಾಧ್ಯವಿಲ್ಲ ಎಂದು ಕಳೆದ ವಾರ ಸುಪ್ರೀಂ ಕೋರ್ಟ್ ಹೇಳಿತ್ತು.
ಇಎಂಐ ವಿನಾಯಿತಿ ವಿಸ್ತರಣೆಗೆ ಮನವಿ ಮಾಡಿ ಅರ್ಜಿ
ಬಡ್ಡಿ ಮನ್ನಾ ಮಾಡುವುದು ಸಾಧ್ಯವಿಲ್ಲ. ಹಾಗೆ ಮಾಡಿದರೆ ಬ್ಯಾಂಕ್ ಗಳ ಆರ್ಥಿಕ ಸ್ಥಿರತೆ ಹಾಗೂ ಆರೋಗ್ಯಕ್ಕೆ ಅಪಾಯ ಎದುರಾಗುತ್ತದೆ ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಹೇಳಿತ್ತು. ಅಶೋಕ್ ಭೂಷಣ್ ಅವರ ನೇತೃತ್ವದ ಪೀಠವು ಈ ಪ್ರಕರಣದ ವಿಚಾರಣೆ ನಡೆಸುತ್ತಿದೆ. ಕೊರೊನಾ ಬಿಕ್ಕಟ್ಟಿನ ಮಧ್ಯೆ ಹೊರೆ ಆಗಬಾರದು ಎಂದು ನೀಡಿದ್ದ ಇಎಂಐ ವಿನಾಯಿತಿ ಅವಧಿ ವಿಸ್ತರಣೆ ಮಾಡುವಂತೆ ಅರ್ಜಿದಾರರಾದ ಗಜೇಂದ್ರ ಶರ್ಮಾ, ವಿಶಾಲ್ ತಿವಾರಿ ಕೇಳಿದ್ದರು.