ಬಡ್ಡಿ ಮನ್ನಾ ಯೋಜನೆ ಶೀಘ್ರ ಅನುಷ್ಠಾನಕ್ಕೆ ತರುವಂತೆ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಸೂಚನೆ
ಬಡ್ಡಿ ಮನ್ನಾ ಯೋಜನೆಯನ್ನು ಶೀಘ್ರವಾಗಿ ಅನುಷ್ಠಾನ ಮಾಡುವಂತೆ ಸುಪ್ರೀಂ ಕೋರ್ಟ್ ಬುಧವಾರದಂದು ಕೇಂದ್ರ ಸರ್ಕಾರಕ್ಕೆ ಹೇಳಿದೆ. ಇಎಂಐ ಪಾವತಿ ವಿನಾಯಿತಿ ಅವಧಿಯಲ್ಲಿ ಬಡ್ಡಿ ಮನ್ನಾಗೆ ಸಂಬಂಧಿಸಿದಂತೆ ಹಾಕಿರುವ ಅರ್ಜಿಗಳ ಅಹವಾಲುಗಳನ್ನು ಸುಪ್ರೀಂ ಕೋರ್ಟ್ ಆಲಿಸಿತು. ಈ ಅರ್ಜಿ ವಿಚಾರಣೆಯನ್ನು ನವೆಂಬರ್ 2ನೇ ತಾರೀಕಿಗೆ ಮುಂದೂಡಿತು.
ಬ್ಯಾಂಕ್ ಗಳು ಬಡ್ಡಿಯ ಮೇಲೆ ಬಡ್ಡಿ ಮನ್ನಾ ಮಾಡುತ್ತವೆ. ಆ ನಂತರ ಸರ್ಕಾರದಿಂದ ಅದಕ್ಕೆ ಪರಿಹಾರ ನೀಡಲಾಗುತ್ತದೆ. ಲೆಕ್ಕಾಚಾರಗಳನ್ನು ವಿವಿಧ ಆಧಾರದಲ್ಲಿ ಮಾಡಲಾಗುತ್ತದೆ. ಬ್ಯಾಂಕ್ ಗಳಿಗೆ ನಮಗೆ ಸರಿಯಾದ ಫಾರ್ಮಾಟ್ ನೀಡಿದ ಬಗ್ಗೆ ಖಾತ್ರಿ ಪಡಿಸಬೇಕು ಎಂದು ಸಾಲಿಸಿಟರ್ ಜನರಲ್ ಹೇಳಿದರು.
'ಬಡ್ಡಿಯ ಮೇಲಿನ ಬಡ್ಡಿ ಮನ್ನಾ' ಬಗ್ಗೆ ಕೇಂದ್ರದಿಂದ ಸುಪ್ರೀಂಗೆ ಅಫಿಡವಿಟ್
ಎರಡು ಕೋಟಿ ರುಪಾಯಿ ತನಕದ ಸಾಲಕ್ಕೆ ಬಡ್ಡಿ ಮೇಲೆ ಬಡ್ಡಿಯನ್ನು ಮನ್ನಾ ಮಾಡಲಾಗುತ್ತದೆ ಎಂದು ಕಳೆದ ಶನಿವಾರದಂದು ಸರ್ಕಾರ ತಿಳಿಸಿತ್ತು. ಕಳೆದ ಮಾರ್ಚ್ ತಿಂಗಳಲ್ಲಿ ಆರ್ ಬಿಐನಿಂದ ಮೊದಲಿಗೆ ಮೂರು ತಿಂಗಳ ಕಾಲ ಸಾಲದ ಇಎಂಐ ಘೋಷಿಸಲಾಯಿತು. ಆ ನಂತರ ಅದನ್ನು ಮತೆ ಮೂರು ತಿಂಗಳಿಗೆ ವಿಸ್ತರಿಸಲಾಗಿತ್ತು. ಆ ಅವಧಿಯಲ್ಲಿನ ಇಎಂಐ ಬಡ್ಡಿ ಮೇಲಿನ ಬಡ್ಡಿಯನ್ನು ಮನ್ನಾ ಮಾಡಬೇಕು ಎಂದು ಸುಪ್ರೀಂ ಕೋರ್ಟ್ ಗೆ ಅರ್ಜಿ ಹಾಕಿಕೊಳ್ಳಲಾಗಿತ್ತು.
ಸೆಪ್ಟೆಂಬರ್ 3ನೇ ತಾರೀಕಿನಂದು ಸುಪ್ರೀಂ ಕೋರ್ಟ್ ಮಧ್ಯಂತರ ಆದೇಶ ನೀಡಿ, 31ನೇ ಆಗಸ್ಟ್ ತನಕ ಬಾಕಿ ಉಳಿಸಿಕೊಂಡ ಖಾತೆಯನ್ನು ಎನ್ ಪಿಎ ಎಂದು ಘೋಷಣೆ ಮಾಡದಂತೆ ಸೂಚಿಸಿತ್ತು. ಅಕ್ಟೋಬರ್ 10ನೇ ತಾರೀಕಿನಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದಿಂದ ಸುಪ್ರೀಂ ಕೋರ್ಟ್ ಗೆ ಮಾಹಿತಿ ನೀಡಿ, ಎನ್ ಪಿಎ ಖಾತೆ ಎಂದು ವರ್ಗೀಕರಿಸಿರುವುದನ್ನು ರಕ್ಷಣ ತೆರವು ಮಾಡಲು ಸಾಧ್ಯವಿಲ್ಲ. ಇದರಿಂದ ಬ್ಯಾಂಕಿಂಗ್ ವ್ಯವಸ್ಥೆ ಮೇಲೆ ಪರಿಣಾಮ ಆಗುತ್ತದೆ ಎಂದು ತಿಳಿಸಿತ್ತು.