ಇಲ್ಲಿ ಒಬ್ಬ ವ್ಯಕ್ತಿಯ ಸ್ಥಿತಿಯ ಬಗ್ಗೆ ನಿಮ್ಮ ಗಮನಕ್ಕೆ ತರಬೇಕಿದೆ. ಇಡೀ ವರದಿಯನ್ನು ಓದಿದ ಮೇಲೆ ನಿಮ್ಮಲ್ಲಿ ಪ್ರಶ್ನೆಗಳು ಉಳಿದರೆ ಏನೂ ಮಾಡಲು ಸಾಧ್ಯವಿಲ್ಲ. ಏಕೆಂದರೆ, ಅಂಥ ಪ್ರಶ್ನೆಗಳು ಈ ವರದಿ ಮಾಡುವ ಸಂದರ್ಭದಲ್ಲೂ ಬಂದಿದ್ದು, ಉತ್ತರ ಏನೂ ಸಿಕ್ಕಿಲ್ಲ. ಆದ್ದರಿಂದ ಆಗಿರುವುದಷ್ಟನ್ನೇ ವರದಿ ಮಾಡಲಾಗುತ್ತಿದೆ.
ಆತನ ಹೆಸರು ರವಿ ಗುಪ್ತಾ. ಮಧ್ಯಪ್ರದೇಶದ ಭಿಂಡ್ ಜಿಲ್ಲೆಯವರು. ತಿಂಗಳಿಗೆ ಏಳು ಸಾವಿರ ರುಪಾಯಿ ಸಂಬಳ ಪಡೆಯುತ್ತಿದ್ದ ಅವರಿಗೇ ಮಾಹಿತಿ ಇಲ್ಲದೆ, ಅವರ ಹೆಸರಿನಲ್ಲಿ ಯಾವುದೋ ವಜ್ರದ ವ್ಯಾಪಾರ ಮಾಡುವ ಕಂಪೆನಿಯು ಖಾತೆ ತೆರೆದು, 132 ಕೋಟಿ ರುಪಾಯಿ ವ್ಯವಹಾರ ಆಗಿತ್ತಂತೆ.
ಆ ಕಾರಣಕ್ಕೆ ಆದಾಯ ತೆರಿಗೆ ಇಲಾಖೆಯಿಂದ 3 ಕೋಟಿಯ 49 ಲಕ್ಷ ರುಪಾಯಿ ತೆರಿಗೆ ಪಾವತಿಸುವಂತೆ ಮಾರ್ಚ್ 30, 2019ರ ಗಡುವು ನೀಡಲಾಗಿತ್ತು. ಆ ನಂತರ ಗಡುವು ವಿಸ್ತರಣೆ ಮಾಡಿ, ಜನವರಿ 17ರ 2020ನೇ ಇಸವಿಯ ತನಕ ನೀಡಲಾಯಿತು.

ಸಂತ್ರಸ್ತ ರವಿ ಗುಪ್ತಾ ಮಹಾರಾಷ್ಟ್ರ, ಮಧ್ಯಪ್ರದೇಶ ಪೊಲೀಸರಿಗೆ ಹಾಗೂ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾಗೆ ದೂರು ನೀಡಿದ್ದು, ಈ ವರೆಗೆ ಯಾವ ಸಂಸ್ಥೆಯಿಂದಲೂ ಏನೂ ಪ್ರಯೋಜನ ಆಗಿಲ್ಲ. ಆದರೆ ಏಳು ಸಾವಿರ ಪಗಾರ ಎಣಿಸುತ್ತಿದ್ದ ರವಿ ಗುಪ್ತಾ ಖಾತೆಯಲ್ಲಿ ನೂರಾ ಮೂವತ್ತೆರಡು ಕೋಟಿ ವ್ಯವಹಾರ ಮಾಡಿದ್ದು ಯಾರು ಅಥವಾ ಹೇಗೆ ಎಂಬ ಪ್ರಶ್ನೆ ಮಾತ್ರ ಹಾಗೇ ಉಳಿದಿದೆ.
ಆದರೆ, ರವಿ ಗುಪ್ತಾ ಖಾತೆಯಲ್ಲಿ ಇಷ್ಟು ದೊಡ್ಡ ಪ್ರಮಾಣದ ವ್ಯವಹಾರ ಆಗುತ್ತಿದ್ದದ್ದು ಎಂಟು- ಒಂಬತ್ತು ವರ್ಷದ ಹಿಂದೆ. ಆಗ ಗುಪ್ತಾ ವಯಸ್ಸು ಇಪ್ಪತ್ತೊಂದು. ಇಂದೋರ್ ನಲ್ಲಿ ಏಳು ಸಾವಿರ ರುಪಾಯಿ ಸಂಬಳ ತೆಗೆದುಕೊಂಡು ಕೆಲಸ ಮಾಡುತ್ತಿದ್ದ ರವಿ ಗುಪ್ತಾಗೇ ತಿಳಿಯದಂತೆ ಮುಂಬೈನ ಬ್ಯಾಂಕ್ ವೊಂದರಲ್ಲಿ ಅವರ ಹೆಸರಲ್ಲಿ ಖಾತೆ ತೆರೆದು, ನೂರಾರು ಕೋಟಿ ವ್ಯವಹಾರ ನಡೆದಿದೆ.
ರವಿ ಗುಪ್ತಾಗೆ ಸೇರಿದ ಆಸ್ತಿ ವಶಪಡಿಸಿಕೊಳ್ಳುವುದಾಗಿ ಆದಾಯ ತೆರಿಗೆ ಇಲಾಖೆಯಿಂದ ಎಚ್ಚರಿಕೆಯನ್ನೂ ನೀಡಲಾಗಿದೆ. "ನನಗೂ ಈ ವ್ಯವಹಾರಕ್ಕೂ ಸಂಬಂಧವೇ ಇಲ್ಲ. ಸರಿಯಾದ ತನಿಖೆ ನಡೆಸಿ, ನನಗೆ ನ್ಯಾಯ ಕೊಡಿಸಿ" ಎನ್ನುತ್ತಿದ್ದಾರೆ ರವಿ ಗುಪ್ತಾ.


Click it and Unblock the Notifications