ಭಾರತದ ಕಾರ್ಪೊರೇಟ್ ಇತಿಹಾಸದ ಅತಿ ದೊಡ್ಡ ಬೇರ್ಪಡೆಗೆ ವೇದಿಕೆ ಸಿದ್ಧವಾಗಿದೆ. ಶಾಪೂರ್ ಜೀ ಪಲ್ಲೋನ್ ಜೀ ಸಮೂಹವು ಟಾಟಾ ಸನ್ಸ್ ನಿಂದ ಬೇರೆ ಆಗುವುದಾಗಿ ಸುಪ್ರೀಂ ಕೋರ್ಟ್ ಗೆ ಮಂಗಳವಾರ ತಿಳಿಸಿದೆ. ಆದಷ್ಟು ಬೇಗ ನ್ಯಾಯಸಮ್ಮತವಾದ ಹಾಗೂ ಒಮ್ಮತವಾದ ಪರಿಹಾರದೊಂದಿಗೆ ಈ ಪ್ರತ್ಯೇಕತೆ ನಡೆಯಲಿದೆ ಎಂದು ತಿಳಿಸಲಾಗಿದೆ. ಈ ಎರಡು ದೊಡ್ಡ ಸಮೂಹಗಳ ಮಧ್ಯದ ಬಾಂಧವ್ಯ ಎಪ್ಪತ್ತು ವರ್ಷದ್ದು. ಅದು ಇನ್ನೇನು ಕೊನೆಯಾಗಲಿದೆ.
ಶಾಪೂರ್ ಜೀ ಪಲ್ಲೋನ್ ಜೀ ಸಮೂಹವನ್ನು ಎಸ್ ಪಿ ಗ್ರೂಪ್ ಅಂತಲೇ ಕರೆಯಲಾಗುತ್ತದೆ. ಟಾಟಾ ಸನ್ಸ್ ನಲ್ಲಿ ಅದಕ್ಕೆ 18.5% ಪಾಲಿದೆ. ಈಗ ಟಾಟಾ ಸಮೂಹದಿಂದ ಬೇರ್ಪಡೆ ಆಗುವ ಬಗ್ಗೆ ನೀಡಿರುವ ಹೇಳಿಕೆಯಲ್ಲಿ, ಟಾಟಾ ಸಮೂಹದಿಂದ ಬೇರೆ ಆಗುವುದು ಅಗತ್ಯ. ಏಕೆಂದರೆ ನಿರಂತರವಾದ ವ್ಯಾಜ್ಯಗಳಿಂದ ಬದುಕುಗಳು ಹಾಗೂ ಆರ್ಥಿಕತೆ ಮೇಲೆ ಪರಿಣಾಮ ಬೀರುತ್ತದೆ ಎಂದು ಹೇಳಲಾಗಿದೆ.
ಸುಪ್ರೀಂ ಕೋರ್ಟ್ ಗೆ ತಿಳಿಸಿದ ಕೆಲ ಗಂಟೆಯಲ್ಲೇ ಹೇಳಿಕೆ
"ಈಗಿನ ಸ್ಥಿರ ಹಾಗೂ ಚರಾಸ್ತಿಗಳು, ಗುಡ್ ವಿಲ್, ಪೇಟೆಂಟ್ ಎಲ್ಲವನ್ನೂ ಮೌಲ್ಯ ಮಾಡಿ, ನ್ಯಾಯಸಮತವಾಗಿ ಹಾಗೂ ಒಮ್ಮತದ ಪರಿಹಾರವನ್ನು ಶೀಘ್ರವಾಗಿ ಕಂಡುಕೊಂಡುಕೊಳ್ಳುವುದು ಮುಖ್ಯವಾಗಿತ್ತು," ಎಂದು ಹೇಳಲಾಗಿದೆ. ಶಾಪೂರ್ ಗ್ರೂಪ್ ಹಾಗೂ ಟಾಟಾ ಮಧ್ಯದ ಬಾಂಧವ್ಯ ಎಪ್ಪತ್ತು ವರ್ಷದ್ದು. ಪರಸ್ಪರ ವಿಶ್ವಾಸ, ಉತ್ತಮ ನಂಬಿಕೆ ಮತ್ತು ಸ್ನೇಹದೊಂದಿಗೆ ಅದು ಒಗ್ಗೂಡಿತ್ತು. ಈ ಬೇರ್ಪಡೆಯೊಂದಿಗೆ ಸಮೂಹದ ಎಲ್ಲ ಭಾಗೀದಾರರ ಹಿತಾಸಕ್ತಿಯೂ ಕಾಪಾಡಿದಂತಾಗುತ್ತದೆ ಎಂದು ಮಿಸ್ತ್ರಿ ಕುಟುಂಬ ಭಾರವಾದ ಹೃದಯದಿಂದ ನಂಬುತ್ತದೆ," ಎನ್ನಲಾಗಿದೆ. ಎಸ್ ಪಿ ಸಮೂಹದ ಬಳಿಯ ಷೇರಿನ ಪಾಲನ್ನು ಖರೀದಿ ಮಾಡುವುದಾಗಿ ಟಾಟಾ ಸಮೂಹವು ಸುಪ್ರೀಂ ಕೋರ್ಟ್ ಗೆ ತಿಳಿಸಿದ ಕೆಲವೇ ಗಂಟೆಗಳಲ್ಲಿ ಈ ಹೇಳಿಕೆ ಬಂದಿದೆ. ಮಿಸ್ತ್ರಿ ಸಮೂಹದ ಬಳಿ ಇರುವ ಟಾಟಾ ಸನ್ಸ್ ಪಾಲನ್ನು ಅಡ ಇಡುವುದಾಗಲೀ ಅಥವಾ ಮಾರುವುದಾಗಲೀ ಮಾಡುವಂತಿಲ್ಲ. ಮುಂದಿನ ವಿಚಾರಣೆ ಇರುವ ಅಕ್ಟೋಬರ್ 28ರ ತನಕ ಯಥಾ ಸ್ಥಿತಿಯನ್ನು ಕಾಯ್ದುಕೊಳ್ಳಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಈ ಪ್ರಕರಣದಲ್ಲಿ ಅಂತಿಮ ವಾದವನ್ನು ಅಂದಿನಿಂದ ಆಲಿಸಲು ಸುಪ್ರೀಂ ಕೋರ್ಟ್ ಆರಂಭಿಸುತ್ತದೆ.
2016ರಲ್ಲಿ ಮಿಸ್ತ್ರಿ ಅವರ ಸ್ಥಾನದಿಂದ ಕಿತ್ತೊಗೆಯಲಾಯಿತು
ಟಾಟಾ ಗ್ರೂಪ್ ನಲ್ಲಿ ಎಸ್ ಪಿ ಸಮೂಹಕ್ಕೆ ಅತಿ ದೊಡ್ಡ ಪಾಲಾದ 18.37% ಇದೆ. ಸದಾ ಎಸ್ ಪಿ ಸಮೂಹವು ಟಾಟಾ ಗ್ರೂಪ್ ಹಿತಾಸಕ್ತಿಯನ್ನು ಕಾಪಾಡಿಕೊಂಡು ಬರುವ ಪಾತ್ರವನ್ನೇ ನಿರ್ವಹಿಸುತ್ತಿದೆ. ಸದ್ಯಕ್ಕೆ ಕೊರೊನಾ ಬಿಕ್ಕಟ್ಟಿನ ಕಾರಣಕ್ಕೆ ಟಾಟಾ ಸಮೂಹವು ಆರ್ಥಿಕ ಸಮಸ್ಯೆಯಲ್ಲಿದೆ ಎನ್ನಲಾಗಿದೆ. ಇನ್ನು ಷೇರು ಪಾಲುದಾರನಾಗಿ ಎಸ್ ಪಿ ಸಮೂಹವು ತನ್ನ ಮತ ಚಲಾಯಿಸುವ ಹಕ್ಕನ್ನು ಸಹ ಟಾಟಾ ಸಮೂಹದ ಹಿತಾಸಕ್ತಿ ರಕ್ಷಣೆಗಾಗಿಯೇ ಬಳಸಿತ್ತು. ಹೇಳಿಕೆಯಲ್ಲಿ ತಿಳಿಸಿರುವ ಪ್ರಕಾರ, 2012ರಲ್ಲಿ ಎಸ್ ಪಿ ಸಮೂಹದ ಸೈರಸ್ ಮಿಸ್ತ್ರಿ ಅವರನ್ನು ಟಾಟಾ ಸನ್ಸ್ ಅಧ್ಯಕ್ಷರನ್ನಾಗಿ ನೇಮಿಸಲಾಯಿತು. ಇದು ಕೇವಲ ಹೆಮ್ಮೆಯ ಸಂಗತಿಯಷ್ಟೇ ಆಗಿರಲಿಲ್ಲ. ಟಾಟಾ ಸನ್ಸ್ ಆಡಳಿತ ಮಂಡಳಿಯ 'ಒಳಗಿನವರಲ್ಲಿ' ಒಬ್ಬರು ಎಂದು ಜವಾಬ್ದಾರಿ ದೃಷ್ಟಿಯಿಂದಲೂ ಪರಿಗಣಿಸಲಾಗಿತ್ತು. ಟಾಟಾ ಸಮೂಹದಲ್ಲಿ ಮಹತ್ವದ ಬದಲಾವಣೆ ಕಾಣಲಾರಂಭಿಸಿತು. ಟಾಟಾದಲ್ಲಿ ನಾಯಕತ್ವ ಸ್ಥಾನದಲ್ಲಿ ಇದ್ದ ಒಂದು ತಲೆಮಾರು ಗ್ರೂಪ್ ನ ಭವಿಷ್ಯದ ಆಡಳಿತ ದೃಷ್ಟಿಯಿಂದ ನಿವೃತ್ತಿಯಾಗುತ್ತಾ ಬಂತು. ಈ ನಾಯಕರಲ್ಲಿ ಹಲವರು ಟಾಟಾ ಸನ್ಸ್ ಮಂಡಳಿಯಲ್ಲಿ ಸೇವೆ ಸಲ್ಲಿಸಿದ್ದರು. ಟಾಟಾ ಟ್ರಸ್ಟ್ ಗಳಲ್ಲಿ ಬಹು ಪಾಲಿನ ಷೇರು ಹೊಂದಿದ್ದವರಾಗಿದ್ದರು. ಆಗ ಮಿಸ್ತ್ರಿ ಅವರು ಸಾಂಸ್ಥಿಕವಾಗಿ ಉತ್ತರದಾಯಿತ್ವ ಆಗುವಂಥ ಆಡಳಿತ ರಚನೆಗೆ ಪ್ರಯತ್ನಿಸಿದರು. ಸೆಬಿಯ ಒಳಗಿನವರ ವ್ಯವಹಾರ ಕಾನೂನುಗಳಿಗೆ ವಿರುದ್ಧವಾಗದಂತೆ ಸಮತೋಲನ ಹಾಗೂ ಪರಾಮರ್ಶೆ ಮಾಡುತ್ತಾ ಎಲ್ಲ ಭಾಗೀದಾರರಿಗೆ ಮಾಹಿತಿ ರವಾನಿಸಿದರು ಎಂದು ಎಸ್ ಪಿ ಸಮೂಹದ ಹೇಳಿಕೆಯಲ್ಲಿ ತಿಳಿಸಲಾಗಿದೆ. ಮುಂದುವರಿದು, ಅಕ್ಟೋಬರ್ 2016ರಲ್ಲಿ ಮಿಸ್ತ್ರಿ ಅವರ ಸ್ಥಾನದಿಂದ ಕಿತ್ತೊಗೆಯಲಾಯಿತು. ಆಡಳಿತಾತ್ಮಕ ಸುಧಾರಣೆ ಅನುಷ್ಠಾನಕ್ಕೆ ತರುವಾಗಲೇ ಹಾಗೆ ಮಾಡಲಾಯಿತು.
1,00,000 ಕೋಟಿ ರುಪಾಯಿಗೆ ಹೆಚ್ಚು ಸಾಲ
"ತೀರಾ ದುರಂತ ಏನೆಂದರೆ, ಈಗಿನ ಟಾಟಾ ಸನ್ಸ್ ನಾಯಕತ್ವವು ಉದ್ಯಮದಲ್ಲಿ ಮೌಲ್ಯ ನಾಶ ಮಾಡುವುದಷ್ಟೇ ಅಲ್ಲ, ಈ ಕಲಾಪದಲ್ಲಿ ದಾರಿ ತಪ್ಪಿಸುವ ಹಲವು ಅಂಶಗಳನ್ನು ಸಾಬೀತು ಮಾಡುವುದಕ್ಕೆ ಹೊರಟಿದೆ. ಸಾರ್ವಜನಿಕರಿಗೆ ಗೊತ್ತಿರುವಂತೆಯೇ ಹಲವು ಸಮಸ್ಯೆಗಳನ್ನು ಕೆಲವು ವರ್ಷಗಳ ಹಿಂದೆಯೇ ಗುರುತಿಸಲಾಗಿದೆ. ಅವು ಸಮೂಹವನ್ನು ಪೀಡಿಸುತ್ತಲೇ ಇದೆ. ಅದು ಟಾಟಾ ಸ್ಟೀಲ್ ನ ಯು.ಕೆ. ಕಾರ್ಯ ನಿರ್ವಹಣೆಯೇ ಇರಬಹುದು, ಅಲ್ಲಿ ಕಳೆದ ಮೂರು ವರ್ಷದಲ್ಲಿ ಕಾರ್ಯ ನಿರ್ವಹಣೆ ನಷ್ಟ ಅಂತಲೇ ಹೆಚ್ಚುವರಿಯಾಗಿ 11,000 ಕೋಟಿ ಆಗಿದೆ ಅಥವಾ ಸಮೂಹದ ವಿಮಾನ ಯಾನ ಉದ್ಯಮ ಕೂಡ ಅದೇ ಸ್ಥಿತಿಯಲ್ಲಿದೆ,'' ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. ಈ ಕಾರ್ಯಗಳು ಅಥವಾ ಕೆಲವು ಸಮಸ್ಯೆಗಳಿಂದಾಗಿ ಟಾಟಾ ಸಮೂಹದ ಕಂಪೆನಿಗಳ ಒಟ್ಟು ಸಾಲ ಅಂದಾಜು 1,00,000 ಕೋಟಿ ರುಪಾಯಿಗೆ ಹೆಚ್ಚುವಂತೆ ಮಾಡಿದೆ. ಟಿಸಿಎಸ್ ಒಂದನ್ನು ಹೊರತುಪಡಿಸಿ ಕಳೆದ ತ್ರೈಮಾಸಿಕದಲ್ಲಿ ಲಿಸ್ಟೆಡ್ ಗ್ರೂಪ್ ಕಂಪೆನಿಗಳಿಗೆ ಅಂದಾಜು 14 ಸಾವಿರ ಕೋಟಿ ರುಪಾಯಿ ನಷ್ಟವಾಗಿದ್ದು, ಅದು ಚಿಂತೆಗೆ ಕಾರಣವಾಗಿದೆ. ದುರಂತವೆಂದರೆ, ಈ ಕಾರ್ಯದಿಂದ ಅಲ್ಪ ಪ್ರಮಾಣದ ಷೇರುದಾರರಿಗೆ ಭಾರೀ ಹಾನಿಯಾಗಿದೆ. ಅದು ಟಾಟಾ ಸನ್ಸ್ ಒಳಗಿನ ಎಸ್ ಪಿ ಗ್ರೂಪ್ ಆಗಿರಬಹುದು ಅಥವಾ ಟಾಟಾ ಸಮೂಹದಲ್ಲಿ ಲಿಸ್ಟೆಡ್ ಕಂಪೆನಿಗಳ ಹತ್ತಾರು ಲಕ್ಷ ಮಂದಿ ಷೇರುದಾರರಿರಬಹುದು ನಷ್ಟ ಅನುಭವಿಸುವಂತಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಒಟ್ಟಿಗೆ ಮುಂದುವರಿಯುವುದು ಅಸಾಧ್ಯ
ಕೊರೊನಾ ಬಿಕ್ಕಟ್ಟಿನ ಮಧ್ಯೆ ಟಾಟಾ ಸನ್ಸ್ ನಿಂದ ಎಸ್ ಪಿ ಸಮೂಹಕ್ಕೆ ತಡೆಯೊಡ್ಡಲು ಸಾಂಸ್ಥಿಕ ಪ್ರಯತ್ನ ನಡೆಯುತ್ತಿದೆ. ಎಸ್ ಪಿ ಸಮೂಹದಿಂದ ಚೇತರಿಸಿಕೊಳ್ಳಲಾಗದ ಹಾನಿ ತಡೆಯುವುದಕ್ಕೆ ಯತ್ನ ನಡೆಯುತ್ತಿದೆ. ನೂರೈವತ್ತು ವರ್ಷದಷ್ಟು ಹಳೆಯ, ದೇಶದ ಎರಡನೇ ಅತಿ ದೊಡ್ಡ ನಿರ್ಮಾಣ ಕಂಪೆನಿ ಎಸ್ ಪಿ ಸಮೂಹ. ಮಹತ್ವವಾದ ಯೋಜನೆಗಳನ್ನು ಭಾರತ ಮತ್ತು ವಿದೇಶಗಳಲ್ಲಿ ಕೈಗೆತ್ತಿಕೊಂಡಿದೆ. ಕೊರೊನಾ ಬಿಕ್ಕಟ್ಟಿನ ಮಧ್ಯೆ ಮಿಸ್ತ್ರಿ ಕುಟುಂಬವು ವೈಯಕ್ತಿಕ ಆಸ್ತಿಗಳನ್ನು ಭದ್ರತೆಯಾಗಿ ನೀಡಿ, ಹಣ ಸಂಗ್ರಹಿಸುವ ಯತ್ನದಲ್ಲಿದೆ. ಕಂಪೆನಿಯ ಅರವತ್ತು ಸಾವಿರ ಸಿಬ್ಬಂದಿ ಹಾಗೂ ಒಂದು ಲಕ್ಷಕ್ಕೂ ಹೆಚ್ಚು ವಲಸಿಗ ಕಾರ್ಮಿಕರ ಬದುಕು ಉಳಿಸಲು ಈ ನಡೆಗೆ ಕಂಪೆನಿ ಮುಂದಾಗಿದೆ. ಆದರೆ ಹಣ ಸಂಗ್ರಹಕ್ಕೆ ಟಾಟಾ ಸನ್ಸ್ ಅಡ್ಡಗಾಲಾಗಿದೆ. ಈಗ ಷೇರಿನ ಪಾಲನ್ನು ಅಡಮಾನ ಮಾಡುವುದಕ್ಕೋ ಅಥವಾ ಮಾರುವುದಕ್ಕೋ ಸುಪ್ರೀಂ ಕೋರ್ಟ್ ತಡೆ ಬಂದಿರುವುದು ಎಸ್ ಪಿ ಗ್ರೂಪ್ ಗೆ ಹಿನ್ನಡೆ ಆಗಿದೆ. ಈಗಿನ ಸ್ಥಿತಿಯಲ್ಲಿ ಮಿಸ್ತ್ರಿ ಕುಟುಂಬವು ಭೂತ, ಭವಿಷ್ಯತ್ ಹಾಗೂ ವರ್ತಮಾನಗಳ ಬಗ್ಗೆ ಆಲೋಚನೆ ಮಾಡಬೇಕಿದೆ. ಟಾಟಾ ಸನ್ಸ್ ನ ಈ ಹಿಂದಿನ ನಡೆ ಹಾಗೂ ಈಗಿನ ಪ್ರಯತ್ನಗಳಿಂದ ಎಸ್ ಪಿ ಸಮೂಹಕ್ಕೆ ಅಂತಿಮ ತೀರ್ಮಾನಕ್ಕೆ ಬರಲೇಬೇಕು ಎಂಬಂತೆ ಮಾಡಿದೆ. ಇನ್ನು ಟಾಟಾ ಗ್ರೂಪ್ ಹಾಗೂ ಎಸ್ ಪಿ ಸಮೂಹ ಎರಡೂ ಒಟ್ಟಿಗೆ ಇರುವುದು ಅಸಾಧ್ಯ ಎಂಬಂತೆ ಆಗಿದೆ ಎಂದು ಹೇಳಿಕೆಯಲ್ಲಿ ತಿಳಿಸಿದೆ.
More From GoodReturns

Bank Holiday: ನಾಳೆ ಕರ್ನಾಟಕದಲ್ಲಿ ಬ್ಯಾಂಕ್ ತೆರೆದಿರುತ್ತೋ, ಇಲ್ಲವೋ? ಸ್ಪಷ್ಟ ಮಾಹಿತಿ ತಿಳಿಯಿರಿ

Silver Price Today: ಬೆಳ್ಳಿ ದರದಲ್ಲಿ ಇಂದು 5,000 ಕುಸಿತ; ಭಾರತದಲ್ಲಿ ಇಂದಿನ ಬೆಲೆ ತಿಳಿಯಿರಿ

LPG Crisis Bengaluru: ಕೋಳಿ ವ್ಯಾಪಾರಕ್ಕೂ ತಟ್ಟಿದ LPG ಕೊರತೆ ಬಿಸಿ; ಬೆಂಗಳೂರಲ್ಲಿ ಮಾರಾಟ ಭಾರಿ ಕುಸಿತ

Bengaluru: ಬೀದಿ ಬದಿ ವ್ಯಾಪಾರಕ್ಕೆ ಅವಕಾಶವಿಲ್ಲ; ಈ ರಸ್ತೆಯ ವ್ಯಾಪಾರಿಗಳಿಗೆ ದೊಡ್ಡ ಸಂಕಷ್ಟ

Eid-ul-Fitr 2026: ರಂಜಾನ್ ಹಬ್ಬ ಇಂದೋ, ನಾಳೆಯೋ; ಕೇರಳದಲ್ಲಿ ಮಾತ್ರ ಇಂದು ಆಚರಣೆ ಯಾಕೆ?

Oil Price Tension: ಮದ್ಯಪ್ರಾಚ್ಯ ಉದ್ವಿಗ್ನತೆ ನಡುವೆ ತೈಲ ಮಾರುಕಟ್ಟೆ ತಲ್ಲಣ, ಭಾರತಕ್ಕೆ ಸವಾಲು; ಎಚ್ಚರಿಕೆ ಸೂಚನೆ

Petrol Price Hike: ಪ್ರೀಮಿಯಂ ಪೆಟ್ರೋಲ್ ದರ ಏರಿಕೆ-ಲೀಟರ್ಗೆ 2 ಹೆಚ್ಚಳ, ಸಾಮಾನ್ಯ ಇಂಧನ ದರ ಸ್ಥಿರ

Good Friday 2026: ಈ ವರ್ಷ ಗುಡ್ ಫ್ರೈಡೇ ಯಾವಾಗ? ಈಸ್ಟರ್ ದಿನಾಂಕ ಮತ್ತು ಸಂಪೂರ್ಣ ಮಾಹಿತಿ ತಿಳಿಯಿರಿ

Gold Price Today India: ಯುಗಾದಿ ಬಳಿಕ ಏರಿಕೆ ಹಾದಿ ಹಿಡಿದ ಚಿನ್ನದ ಬೆಲೆ-24K/100gನಲ್ಲಿ 6,500 ರೂ. ಜಿಗಿತ!

8th Pay Commission: 8ನೇ ವೇತನ ಆಯೋಗದಿಂದ ಮಹತ್ವದ ಅಪ್ಡೇಟ್; ಪ್ರಶ್ನಾವಳಿ ಸಲ್ಲಿಸಲು ಮಾ.31ರ ವರೆಗೂ ಅವಕಾಶ

Flipkart CFO: ಐಪಿಒಗೆ ಮುನ್ನ ಫ್ಲಿಪ್ಕಾರ್ಟ್ನಲ್ಲಿ ದೊಡ್ಡ ಬದಲಾವಣೆ: CFO ಸ್ಥಾನ ತ್ಯಜಿಸಿದ ವೆಂಕಟರಾಮನ್



Click it and Unblock the Notifications