ಕೊರೊನಾ ಬಿಕ್ಕಟ್ಟು ಆರ್ಥಿಕತೆ ಮೇಲೆ ಅಡ್ಡ ಪರಿಣಾಮ ಬೀರಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದಿಂದ ಕೆಲವು ಪ್ರಮುಖ ಘೋಷಣೆ ಮಾಡಲಾಯಿತು. ಈ ಹಿಂದೆ ಪಿಎಂ ಗರೀಬ್ ಕಲ್ಯಾಣ್ ಹಾಗೂ ಆತ್ಮನಿರ್ಭರ್ ಯೋಜನೆ ಅಡಿ ವಿವಿಧ ಪ್ಯಾಕೇಜ್ ಗಳನ್ನು ಘೋಷಣೆ ಮಾಡಿದ್ದೆವು ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸೋಮವಾರ ಹೇಳಿದರು.
ಈ ಹಿನ್ನೆಲೆಯಲ್ಲಿ ಸೋಮವಾರ (ಅಕ್ಟೋಬರ್ 12, 2020) ಆರ್ಥಿಕ ಸಮಸ್ಯೆಗಳಿಂದ ಕಡಿಮೆ ಆಗಿರುವ ಗ್ರಾಹಕರ ಬೇಡಿಕೆ ಹೆಚ್ಚಿಸುವ ಬಗ್ಗೆ ಹಾಗೂ ರಾಜ್ಯ ಸರ್ಕಾರಗಳ ಬಂಡವಾಳ ವೆಚ್ಚಕ್ಕೆ ಹಣ ಒದಗಿಸುವ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ಅವರ ಜತೆಗೆ ಹಣಕಾಸು ಖಾತೆ ರಾಜ್ಯ ಸಚಿವ ಅನುರಾಗ್ ಸಿಂಗ್ ಠಾಕೂರ್ ಇದ್ದರು. ನಿರ್ಮಲಾ ಸೀತಾರಾಮನ್ ಅವರು ಪ್ರಸ್ತಾವ ಮಾಡಿದ ಪ್ರಮುಖ ವಿಚಾರಗಳು ಹೀಗಿವೆ:
ರಾಜ್ಯ ಸರ್ಕಾರ ಬಂಡವಾಳ ವೆಚ್ಚ (ಕ್ಯಾಪಿಟಲ್ ಎಕ್ಸ್ ಪೆಂಡಿಚರ್)
* 50 ವರ್ಷಗಳ ಅವಧಿಗೆ ಯಾವುದೇ ಬಡ್ಡಿ ವಿಧಿಸದೆ ಸಾಲವಾಗಿ 12,000 ಕೋಟಿ ರುಪಾಯಿಯನ್ನು ರಾಜ್ಯಗಳಿಗಾಗಿ ನೀಡಲಾಗುತ್ತದೆ.

* 12000 ಕೋಟಿ ರುಪಾಯಿಯಲ್ಲಿ 2500 ಕೋಟಿ ರುಪಾಯಿ ಈಶಾನ್ಯ ರಾಜ್ಯಗಳು ಮತ್ತು ಉತ್ತರಾಖಂಡ್ ಹಾಗೂ ಹಿಮಾಚಲ ಪ್ರದೇಶಕ್ಕೆ ಮೀಸಲು. 1600 ಕೋಟಿ (ಈಶಾನ್ಯ) ಉತ್ತರಾಖಂಡ್ ಮತ್ತು ಹಿಮಾಚಲ ಪ್ರದೇಶಕ್ಕೆ (900 ಕೋಟಿ) ನೀಡಲಾಗುತ್ತದೆ.
* ಬಾಕಿ ಮೊತ್ತದಲ್ಲಿ 7500 ಕೋಟಿ ರುಪಾಯಿಯನ್ನು ಇತರ ರಾಜ್ಯಗಳಿಗೆ ಹಣಕಾಸು ಆಯೋಗದ ಪಾಲಿನ ಪ್ರಕಾರ ವಿತರಿಸಲಾಗುತ್ತದೆ.
* ಇದರಲ್ಲಿ 50% ಮೊತ್ತವನ್ನು ಆರಂಭದಲ್ಲಿ ನೀಡಲಾಗುತ್ತದೆ.
* ಬಾಕಿ ಮೊತ್ತವನ್ನು ಮೊದಲ ಕಂತು ಬಳಸಿದ ಮೇಲೆ ನೀಡಲಾಗುತ್ತದೆ.
* ಬಳಕೆ ಮಾಡದ ಮೊತ್ತವನ್ನು ಮತ್ತೆ ವಿತರಣೆ ಮಾಡಲಾಗುತ್ತದೆ.
* ಆತ್ಮನಿರ್ಭರ್ ಪ್ಯಾಕೇಜ್ ನಲ್ಲಿ ಘೋಷಣೆ ಮಾಡಿದಂತೆ ವಿತ್ತೀಯ ಕೊರತೆಯಲ್ಲಿ ನೀಡಿದ ಗುರಿಯ ನಾಲ್ಕರಲ್ಲಿ ಮೂರನ್ನು ಪೂರೈಸಬೇಕು.
* ಈಗಾಗಲೇ ನಡೆಯುತ್ತಿರುವ ಕ್ಯಾಪಿಟಲ್ ಯೋಜನೆಗಳಿಗೆ ಈ ಹಣವನ್ನು ಬಳಸಬಹುದು. ಕಾಂಟ್ರ್ಯಾಕ್ಟರ್/ ಪೂರೈಕೆದಾರರ ಬಿಲ್ ಪಾವತಿಸಲು ಬಳಸಬಹುದು. ಈಗಾಗಲೇ ಚಾಲ್ತಿಯಲ್ಲಿರುವ ಯೋಜನೆಗೂ ಬಳಸಬಹುದು.
* ರಾಜ್ಯಗಳು ಈಗಾಗಲೇ ಪಡೆದ ಸಾಲಕ್ಕೆ ಮೇಲ್ಪಟ್ಟು ಈ ಮೊತ್ತ ದೊರೆಯುತ್ತದೆ.
ಕೇಂದ್ರ ಸರ್ಕಾರದ ಬಂಡವಾಳ ವೆಚ್ಚ (ಕ್ಯಾಪಿಟಲ್ ಎಕ್ಸ್ ಪೆಂಡಿಚರ್)
* ಈ ಹಿಂದೆ 4.13 ಲಕ್ಷ ಕೋಟಿ ಬಜೆಟ್ ನಲ್ಲಿ ಘೋಷಣೆ ಮಾಡಲಾಗಿತ್ತು. ಈಗ ಹೆಚ್ಚುವರಿಯಾಗಿ ರಸ್ತೆ, ರಕ್ಷಣೆ ಮೂಲಸೌಕರ್ಯ, ನೀರು ಪೂರೈಕೆ, ನಗರಾಭಿವೃದ್ಧಿಗಾಗಿ 25,000 ಕೋಟಿ ಘೋಷಣೆ.
* ಪರಿಷ್ಕೃತ ಅಂದಾಜು ಪಟ್ಟಿಯನ್ನು ಸಂಬಂಧಪಟ್ಟ ಸಚಿವಾಲಯದ ಜತೆ ಮಾತುಕತೆ ನಡೆಸಿದ ನಂತರ ನೀಡಲಾಗುತ್ತದೆ.


Click it and Unblock the Notifications