ಕೊರೊನಾ ಬಿಕ್ಕಟ್ಟು ಆರ್ಥಿಕತೆ ಮೇಲೆ ಅಡ್ಡ ಪರಿಣಾಮ ಬೀರಿದೆ. ಈ ಹಿಂದೆ ಪಿಎಂ ಗರೀಬ್ ಕಲ್ಯಾಣ್ ಹಾಗೂ ಆತ್ಮನಿರ್ಭರ್ ಯೋಜನೆ ಅಡಿ ವಿವಿಧ ಪ್ಯಾಕೇಜ್ ಗಳನ್ನು ಘೋಷಣೆ ಮಾಡಿದೆವು ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಹೇಳಿದರು.
ಈ ಹಿನ್ನೆಲೆಯಲ್ಲಿ ಸೋಮವಾರ (ಅಕ್ಟೋಬರ್ 12, 2020) ಆರ್ಥಿಕ ಸಮಸ್ಯೆಗಳಿಂದ ಕಡಿಮೆ ಆಗಿರುವ ಗ್ರಾಹಕರ ಬೇಡಿಕೆ ಹೆಚ್ಚಿಸುವ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ಅವರ ಜತೆಗೆ ಹಣಕಾಸು ಖಾತೆ ರಾಜ್ಯ ಸಚಿವ ಅನುರಾಗ್ ಸಿಂಗ್ ಠಾಕೂರ್ ಇದ್ದರು. ನಿರ್ಮಲಾ ಸೀತಾರಾಮನ್ ಅವರು ಪ್ರಸ್ತಾವ ಮಾಡಿದ ಪ್ರಮುಖ ವಿಚಾರಗಳು ಹೀಗಿವೆ:
ಗ್ರಾಹಕರ ಖರ್ಚು ಸಂಬಂಧಿ ಪ್ರಸ್ತಾವಗಳು:
ಎಲ್ ಟಿಸಿ (ಲೀವ್ ಟ್ರಾವೆಲ್ ಕನ್ಸೆಷನ್) ಕ್ಯಾಶ್ ವೋಚರ್- ಕೇಂದ್ರ, ರಾಜ್ಯ ಸರ್ಕಾರಿ ನೌಕರರು ಅಥವಾ ಖಾಸಗಿ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸುವವರಿಗೆ ನಾಲ್ಕು ವರ್ಷಗಳಿಗೊಮ್ಮೆ ಸಿಗುತ್ತದೆ. ಎರಡು ಬಾರಿ ತಮ್ಮ ಊರುಗಳಿಗೆ ಅಥವಾ ಒಂದು ಪ್ರವಾಸಿ ಸ್ಥಳಕ್ಕೆ ತೆರಳಬಹುದು. ವಿಮಾನ, ರೈಲು ಪ್ರಯಾಣ ದರವನ್ನು ದೊರೆಯುತ್ತಿತ್ತು. ಹತ್ತು ದಿನಗಳ ರಜಾ ನಗದೀಕರಣ ಮಾಡಿಕೊಳ್ಳಬಹುದು.
ಯಾರಿಗೆ ಕೊರೊನಾ ಕಾರಣಕ್ಕೆ ಪ್ರಯಾಣಕ್ಕೆ ತೆರಳುವುದಕ್ಕೆ ಸಾಧ್ಯವಿಲ್ಲದಿದ್ದಲ್ಲಿ ಹಣವು ದೊರೆಯುತ್ತದೆ. ಅದರ ಮೂಲಕ ತಮಗೆ ಬೇಕಾದ ವಸ್ತುಗಳನ್ನು ಖರೀದಿಸಬಹುದು. ಆದರೆ ಯಾವುದಕ್ಕೆ ಜಿಎಸ್ ಟಿ 12% ಮತ್ತು ಅದಕ್ಕಿಂತ ಹೆಚ್ಚು ಬೀಳುತ್ತದೋ ಅಂಥ ವಸ್ತು ಖರೀದಿಸಬೇಕು. ಡಿಜಿಟಲ್ ಪೇಮೆಂಟ್ ಮಾಡಬೇಕು. ಅದರ ಇನ್ ವಾಯ್ಸ್ ಪ್ರಸ್ತುತ ಪಡಿಸಬೇಕು. ಮಾರ್ಚ್ 31, 2021ರೊಳಗೆ ಖರ್ಚು ಮಾಡಬೇಕು.
ಪ್ರಯಾಣದ ಖರ್ಚಿನ ಮೂರು ಪಟ್ಟು ಆಥವಾ ರಜಾ ನಗದೀಕರಣದ ಒಂದು ಪಟ್ಟಿನ ಮೊತ್ತಕ್ಕೆ ಖರೀದಿಸಬಹುದು.

ಕೇಂದ್ರ ಸರ್ಕಾರಿ ನೌಕರರು ಇದನ್ನು ಆರಿಸಿಕೊಂಡರೆ 5675 ಕೋಟಿ ವೆಚ್ಚ ಆಗುತ್ತದೆ. ಇನ್ನು ಪಿಎಸ್ ಬಿ, ಪಿಎಸ್ ಯು ಕೂಡ ಆಯ್ಕೆ ಮಾಡಿದರೆ 1900 ಕೋಟಿ ಆಗುತ್ತದೆ.
ಕೇಂದ್ರ, ರಾಜ್ಯ ಸರ್ಕಾರಿ ಹಾಗೂ ಖಾಸಗಿ ನೌಕರಿಗೆ ತೆರಿಗೆ ವಿನಾಯಿತಿ ದೊರೆಯುತ್ತದೆ.
ಕೇಂದ್ರ ಸರ್ಕಾರ, ಪಿಎಸ್ ಯು, ಪಿಎಸ್ ಬಿಯಿಂದ ಬೇಡಿಕೆ ಅಂದಾಜು 19 ಸಾವಿರ ಕೋಟಿ ಆಗುತ್ತದೆ. ಇನ್ನು ರಾಜ್ಯ ಸರ್ಕಾರಿ ನೌಕರರಿಂದ 9000 ಕೋಟಿ ರುಪಾಯಿ ಬೇಡಿಕೆ ಬರುತ್ತದೆ.
ಹೆಚ್ಚುವರಿ ಗ್ರಾಹಕರ ಬೇಡಿಕೆ 28,000 ಕೋಟಿ ರುಪಾಯಿ ಸೃಷ್ಟಿ ಆಗುತ್ತದೆ.
ಹಬ್ಬದ ಪ್ರಯುಕ್ತ ವಿಶೇಷ ಮುಂಗಡ ಯೋಜನೆ (ಸ್ಪೆಷಲ್ ಫೆಸ್ಟಿವ್ ಅಡ್ವಾನ್ಸ್ ಸ್ಕೀಮ್)-
ಸ್ಪೆಷಲ್ ಫೆಸ್ಟಿವ್ ಅಡ್ವಾನ್ಸ್
ಏಳನೇ ವೇತನ ಆಯೋಗ ಶಿಫಾರಸು ಜಾರಿಗೆ ಮುಂಚೆ 4500 ರುಪಾಯಿ ಹಬ್ಬದ ಮುಂಗಡ ನಾನ್ ಗೆಜೆಟೆಡ್ ಅಧಿಕಾರಿಗಳಿಗೆ ಸಿಗುತ್ತಿತ್ತು. ಏಳನೇ ವೇತನ ಆಯೋಗದಲ್ಲಿ ಅದಕ್ಕೆ ಅವಕಾಶ ಇರಲಿಲ್ಲ. ಆದರೆ ಈಗ ಒಂದು ಬಾರಿ ಎಲ್ಲರಿಗೂ ಸರ್ಕಾರ ಹಬ್ಬದ ಮುಂಗಡ ಒದಗಿಸುತ್ತಿದೆ. ಗೆಜೆಟೆಡ್- ನಾನ್ ಗೆಜೆಟೆಡ್ ಎಲ್ಲ ಅಧಿಕಾರಿಗಳಿಗೂ ಸೇರಿ 10,000 ರುಪಾಯಿ ನೀಡಲಾಗುತ್ತದೆ. ಅದನ್ನು 10 ಕಂತಿನಲ್ಲಿ ಹಿಂತಿರುಗಿಸಬೇಕು. ಇದನ್ನು ಮಾರ್ಚ್ 31, 2020ರೊಳಗೆ ಪಡೆಯಬಹುದು.
ಅದನ್ನು ಪ್ರೀಪೇಯ್ಡ್ ರುಪೇ ಕಾರ್ಡ್ ರೂಪದಲ್ಲಿ ನೀಡಲಾಗುತ್ತದೆ. ಅದನ್ನು ಮುಂದಿನ ಮಾರ್ಚ್ ನೊಳಗೆ ಖರ್ಚು ಮಾಡಬೇಕು. ಇದರಲ್ಲಿ ನಗದು ವಿಥ್ ಡ್ರಾ ಮಾಡಲು ಸಾಧ್ಯವಿಲ್ಲ. ಇದಕ್ಕೆ ಯಾವುದೇ ಬಡ್ಡಿ ಇಲ್ಲ.
ಇದರಿಂದ ಕೇಂದ್ರ ಸರ್ಕಾರ ನೌಕರರಿಗೆ 4000 ಸಾವಿರ ಕೋಟಿ ವಿತರಿಸಲಾಗುತ್ತದೆ, ಒಂದು ವೇಳೆ ರಾಜ್ಯದಿಂದಲೂ ಜಾರಿಗೆ ತಂದರೆ 8000 ಕೋಟಿ ರುಪಾಯಿ ಬೇಡಿಕೆ ಬರುತ್ತದೆ. ಇದರಲ್ಲಿ ಬ್ಯಾಂಕ್ ಶುಲ್ಕವನ್ನು ಸರ್ಕಾರವೇ ಭರಿಸುತ್ತದೆ.


Click it and Unblock the Notifications