ನವದೆಹಲಿ, ನವೆಂಬರ್ 14: ಕೇಂದ್ರ ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ಅವರು ಬಡ್ಡಿ ದರಗಳನ್ನು ಕಡಿಮೆ ಮಾಡಲು ಭಾರತೀಯ ರಿಸರ್ವ್ ಬ್ಯಾಂಕ್ (RBI) ಅನ್ನು ಒತ್ತಾಯಿಸಿದ್ದಾರೆ. ನ.14 ರ ಗುರುವಾರ CNBC-TV18 ಗ್ಲೋಬಲ್ ಲೀಡರ್ಶಿಪ್ ಶೃಂಗಸಭೆಯಲ್ಲಿ ಪಿಯೂಷ್ ಗೋಯ ಮಾತನಾಡಿದರು.
ವಿತ್ತೀಯ ನೀತಿ ನಿರ್ಧಾರಗಳಲ್ಲಿ ಪ್ರಮುಖ ಅಂಶವಾಗಿ ಆಹಾರ ಹಣದುಬ್ಬರದ ಮೇಲಿನ ಅವಲಂಬನೆಯನ್ನು ಪ್ರಶ್ನಿಸಿ ಮಾತನಾಡಿದ ಅವರು " ಆಹಾರ ಹಣದುಬ್ಬರವನ್ನು ಪರಿಗಣಿಸಿ ಬಡ್ಡಿದರ ಕಡಿತ ಮಾಡುವ ನಿರ್ಧಾರವು ಆರ್ಥಿಕ ಸಿದ್ಧಾಂತದ ದೃಷ್ಟಿಕೋನದಿಂದ ದೋಷಪೂರಿತವಾಗಿದೆ. ಇದು ದೀರ್ಘಾವಧಿಯಲ್ಲಿ ಹಣದುಬ್ಬರವನ್ನು ಹೆಚ್ಚಿಸಿ ಆರ್ಥಿಕ ಅಸ್ಥಿರತೆಗೆ ಕಾರಣವಾಗಬಹುದು" ಎಂದು ಹೇಳಿದ್ದಾರೆ.

ಇದೇ ವೇಳೆ " ಈ ಹೇಳಿಕೆಯೂ ತಮ್ಮ ವೈಯಕ್ತಿಕ ಅಭಿಪ್ರಾಯವಾಗಿದೆಯೇ ಹೊರತು ಸರ್ಕಾರದ ಅಧಿಕೃತ ನಿಲುವಲ್ಲ" ಎಂದು ಸ್ಪಷ್ಟಪಡಿಸಿದರು. ಡಿಸೆಂಬರ್ ತಿಂಗಳ ಹೊತ್ತಿಗೆ ಹಣದುಬ್ಬರ ದರ ಕಡಿಮೆಯಾಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ ಸಚಿವರು, ಭಾರತದ ಸ್ವಾತಂತ್ರ್ಯದ ನಂತರ ನೋಡುವುದಾದರೆ ಮೋದಿ ಸರ್ಕಾರದ ಅವಧಿಯಲ್ಲಿ ಹಣದುಬ್ಬರ ದರವು ಕಡಿಮೆಯಾಗಿದೆ ಎಂದು ಹೇಳಿದ್ದಾರೆ.
ಇನ್ನು ವಿದೇಶಿ ಸಂಸ್ಥೆಗಳ ಹೂಡಿಕೆದಾರರು (ಎಫ್ಐಐ) ಹಣವನ್ನು ಹಿಂತೆಗೆದುಕೊಳ್ಳುವ ಬಗ್ಗೆ ಕಳವಳ ವ್ಯಕ್ತಪಡಿಸಿದ ಅವರು "ಭಾರತದಲ್ಲಿ ಹೂಡಿಕೆ ಮಾಡುವಾಗ ತ್ರೈಮಾಸಿಕ ಲಾಭ ನಷ್ಟಗಳನ್ನು ಮಾತ್ರ ನೋಡಬಾರದು, ಬದಲಾಗಿ ದೀರ್ಘಾವಧಿಯ ದೃಷ್ಟಿಕೋನವನ್ನು ತೆಗೆದುಕೊಳ್ಳಬೇಕು "ಎಂದು ಗೋಯಲ್ ಅವರು ಸಲಹೆ ನೀಡಿದರು. ಜೊತೆಗೆ ಅಲ್ಪಾವಧಿಯ ಅಸ್ಥಿರತೆಯ ಹೊರತಾಗಿಯೂ, ಭಾರತದ ದೀರ್ಘಕಾಲೀನ ಆರ್ಥಿಕ ಸೂಚಕಗಳು ಸಕಾರಾತ್ಮಕವಾಗಿವೆ ಎಂದು ಅವರು ವಿಶ್ಲೇಷಿಸಿದರು.
ಕಳೆದ 14 ತಿಂಗಳಿಗೆ ಹೋಲಿಸಿದ್ರೆ ಅಕ್ಟೋಬರ್ನಲ್ಲಿ ಹಣದುಬ್ಬರ ಗರಿಷ್ಠ ಮಟ್ಟ ತಲುಪಿದೆ. ಚಿಲ್ಲರೆ ಹಣದುಬ್ಬರದಲ್ಲಿ ಭಾರತದಲ್ಲಿ ಹಠಾತ್ ಏರಿಕೆ ಕಾಣುತ್ತಿರುವಾಗಲೇ ಗೋಯಲ್ ಅವರು ಈ ರೀತಿಯ ಹೇಳಿಕೆ ನೀಡಿದ್ದಾರೆ. ಚಿಲ್ಲರೆ ಹಣದುಬ್ಬರ ಎಂದರೆ ದೈನಂದಿನ ಬಳಕೆಯ ಸರಕುಗಳಾದ ಆಹಾರ, ಬಟ್ಟೆ, ಇಂಧನ ಇತ್ಯಾದಿಗಳ ಬೆಲೆಗಳು ಏರುವುದಾಗಿದೆ.
ಅಕ್ಟೋಬರ್ 2024ರಲ್ಲಿ ಭಾರತದ ಚಿಲ್ಲರೆ ಹಣದುಬ್ಬರ ದರವು 6.21%ಕ್ಕೆ ಏರಿಕೆಯಾಗಿದ್ದು, ಇದು ಕಳೆದ 14 ತಿಂಗಳಲ್ಲಿ ಗರಿಷ್ಠ ಮಟ್ಟವಾಗಿದೆ. ಇದು ಪ್ರಾಥಮಿಕವಾಗಿ ಏರುತ್ತಿರುವ ತರಕಾರಿ ಬೆಲೆಗಳಿಂದ ಪ್ರೇರಿತವಾಗಿದೆ. ಇದು ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ನಿಗದಿಪಡಿಸಿದ 6%ನ ಸಹಿಷ್ಣುತೆ ಮಿತಿಯನ್ನು ಮೀರಿದೆ. ಹೀಗಾಗಿ ಇದು ರಿಸರ್ವ್ ಬ್ಯಾಂಕ್ನ ನೀತಿ ನಿಲುವಿನ ಮೇಲೆ ಚರ್ಚೆಯನ್ನು ಹುಟ್ಟುಹಾಕಿದೆ. ಹಣದುಬ್ಬರವನ್ನು ಶೇಕಡಾ 4 ರ ಗುರಿಯೊಂದಿಗೆ ಶೇಕಡಾ 2-6 ರ ವ್ಯಾಪ್ತಿಯಲ್ಲಿ ಇಡುವುದು ಆರ್ಬಿಐ ಆದೇಶವಾಗಿದೆ.
ಆರ್ಬಿಐ ಗವರ್ನರ್ ಶಕ್ತಿಕಾಂತ ದಾಸ್ ಪ್ರತಿಕ್ರಿಯೆ ಏನು?
ಇದೇ ಕಾರ್ಯಕ್ರಮದಲ್ಲಿ ಶಕ್ತಿಕಾಂತ್ ದಾಸ್ ಕೂಡಾ ಹಾಜರಿದ್ದು, "ಒಂದೆಡೆ ಹಣದುಬ್ಬರವನ್ನು ನಿಯಂತ್ರಿಸುವುದು ಮತ್ತು ಮತ್ತೊಂದೆಡೆ ಆರ್ಥಿಕ ಬೆಳವಣಿಗೆಗೆ ಬೇಕಾದ ಪರಿಸ್ಥಿತಿಗಳನ್ನು ಸೃಷ್ಟಿಸುವುದು ಎಂಬ ಎರಡು ವಿರುದ್ಧವಾದ ಗುರಿಗಳ ನಡುವೆ ಸಮತೋಲನ ಸಾಧಿಸುವುದು ಆರ್ಬಿಐಗೆ ಯಾವಾಗಲೂ ಸವಾಲಿನ ಕೆಲಸವಾಗಿದೆ" ಎಂದು ಹೇಳಿದರು.
ಅಕ್ಟೋಬರ್ನಲ್ಲಿ ನಡೆದ ವಿತ್ತೀಯ ನೀತಿ ಸಮಿತಿಯ ಸಭೆಯಲ್ಲಿ, ಹಣದುಬ್ಬರ ಮತ್ತು ಆರ್ಥಿಕ ಬೆಳವಣಿಗೆ ಎರಡನ್ನೂ ಗಮನದಲ್ಲಿಟ್ಟುಕೊಂಡು, ತಟಸ್ಥ ನಿಲುವನ್ನು ಅನುಸರಿಸಲು ನಿರ್ಧರಿಸಲಾಗಿದೆ. ಈ ನಿರ್ಧಾರದಿಂದ, ಬೇಕಾದಾಗ ಬಡ್ಡಿ ದರವನ್ನು ಕಡಿಮೆ ಮಾಡುವ ಅಥವಾ ಹೆಚ್ಚಿಸುವ ಸ್ವಾತಂತ್ರ್ಯ ಆರ್ಬಿಐಗೆ ಸಿಕ್ಕಿದೆ ಎಂದು ಹೇಳಿದ್ದಾರೆ.
ರೆಪೋ ದರವನ್ನು ಕಡಿಮೆ ಮಾಡುವ ಬಗ್ಗೆ ಗೋಯಲ್ ಅವರು ಪ್ರಸ್ತಾಪಿಸಿದಾಗ, ಶಕ್ತಿಕಾಂತ್ ದಾಸ್ ಅವರು ನಗುತ್ತಾ, 'ವಿತ್ತೀಯ ನೀತಿಯ ಕುರಿತು ನಾವು ಡಿಸೆಂಬರ್ನಲ್ಲಿ ವಿವರವಾದ ನಿರ್ಧಾರ ತೆಗೆದುಕೊಳ್ಳಲಿದ್ದೇವೆ. ಆಗ ನನ್ನ ಅಭಿಪ್ರಾಯವನ್ನು ಹೇಳುತ್ತೇನೆ' ಎಂದು ಹೇಳಿದರು.


Click it and Unblock the Notifications