ಪಿಎಂ ಗರೀಬ್ ಕಲ್ಯಾಣ್ ಅನ್ನ ಯೋಜನಾ ನವೆಂಬರ್ ಕೊನೆ ತನಕ ವಿಸ್ತರಣೆ
ಪಿಎಂ ಗರೀಬ್ ಕಲ್ಯಾಣ್ ಅನ್ನ ಯೋಜನಾವನ್ನು ನವೆಂಬರ್ ಕೊನೆ ತನಕ ವಿಸ್ತರಣೆ ಮಾಡಿ, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮಂಗಳವಾರ ಘೋಷಣೆ ಮಾಡಿದರು. ದೇಶವನ್ನು ಉದ್ದೇಶಿಸಿ ಅವರು ಮಾಡಿದ ಭಾಷಣದಲ್ಲಿ ಈ ವಿಷಯವನ್ನು ಅವರು ತಿಳಿಸಿದರು. ಈ ಯೋಜನೆಯು 80 ಕೋಟಿ ಜನರನ್ನು ಒಳಗೊಳ್ಳಲಿದೆ ಎಂದು ಅವರು ಮಾಹಿತಿ ನೀಡಿದರು.
ವಿಶ್ವದ ಬೇರೆ ದೇಶಗಳಿಗೆ ಹೋಲಿಸಿದರೆ ಕೊರೊನಾ ವಿಷಯದಲ್ಲಿ ಭಾರತದ ಸ್ಥಿತಿ ಉತ್ತಮವಾಹಿದೆ. ಭಾರತದಲ್ಲಿ ಸಮಯಕ್ಕೆ ಸರಿಯಾಗಿ ಲಾಕ್ ಡೌನ್ ಘೋಷಣೆ ಮಾಡಿದ್ದರಿಂದ ಹಲವು ಜೀವಗಳನ್ನು ಉಳಿಸಲು ಸಾಧ್ಯವಾಯಿತು ಎಂದು ಅವರು ಹೇಳಿದರು. ಲಾಕ್ ಡೌನ್ ಅವಧಿಯಲ್ಲಿ ಎಷ್ಟು ಎಚ್ಚರಿಕೆಯಿಂದ ಇದ್ದರೋ ಅದೇ ಪ್ರಮಾಣದಲ್ಲಿ ಈಗಲೂ ಇರಬೇಕಾದ ಅಗತ್ಯ ಇದೆ ಎಂದು ಅವರು ಹೇಳಿದರು.
'ನರೇಂದ್ರ ಮೋದಿ ಅಧಿಕಾರಕ್ಕೆ ಬಂದ ಮೇಲೆ ಚೀನಾ ಆಮದು ಹೆಚ್ಚಾಗಿದೆ'
ಇಂಥ ಸಂಕಷ್ಟದ ಸಮಯದಲ್ಲಿ ಯಾರೂ ಹಸಿವಿನಿಂದ ಇರಬಾರದು ಎಂಬ ಕಾರಣಕ್ಕಾಗಿ ಪಿಎಂ ಗರೀಬ್ ಕಲ್ಯಾಣ್ ಅನ್ನ ಯೋಜನಾ ತರಲಾಗಿದ್ದು, ಅದರ ಅಡಿಯಲ್ಲಿ 1.75 ಲಕ್ಷ ಕೋಟಿ ರುಪಾಯಿ ಖರ್ಚು ಮಾಡಲಾಗಿದೆ. 31 ಸಾವಿರ ಕೋಟಿ ರುಪಾಯಿಯನ್ನು ನೇರವಾಗಿ ಜನರ ಖಾತೆಗೆ ಜಮೆ ಮಾಡಲಾಗಿದೆ. 9 ಕೋಟಿ ರೈತರಿಗೆ ಹೆಚ್ಚುವರಿಯಾಗಿ ಅನುಕೂಲ ಆಗಿದೆ. ಅವರ ಖಾತೆಗೆ ನೇರವಾಗಿ 18 ಸಾವಿರ ಕೋಟಿ ತಲುಪಿದೆ.
ಪಿಎಂ ಗರೀಬ್ ಕಲ್ಯಾಣ್ ರೊಜ್ ಗಾರ್ ಯೋಜನಾವನ್ನು 50 ಸಾವಿರ ಕೋಟಿ ರುಪಾಯಿಯಲ್ಲಿ ಅನುಷ್ಠಾನಕ್ಕೆ ತರಲಾಗಿದೆ. ಯು.ಎಸ್. ನ ಒಟ್ಟು ಜನಸಂಖ್ಯೆಯ 2.5 ಪಟ್ಟು ಹೆಚ್ಚು ಜನರಿರುವ ಭಾರತದಲ್ಲಿ ಉಚಿತ ಪಡಿತರದ ಅನುಕೂಲ ಪಡೆದಿರುವುದು ಎಲ್ಲರನ್ನೂ ಅಚ್ಚರಿಗೆ ದೂರಿದೆ ಎಂದು ಅವರು ಹೇಳಿದ್ದಾರೆ.
ನವೆಂಬರ್ ಕೊನೆ ತನಕ ಪ್ರತಿ ತಿಂಗಳು ಕುಟುಂಬದ ಒಬ್ಬ ಸದಸ್ಯರಿಗೆ ತಲಾ ಐದು ಕೇಜಿ ಅಕ್ಕಿ ಅಥವಾ ಹಿಟ್ಟು ಎಂಬ ಲೆಕ್ಕಾಚಾರದಲ್ಲಿ ಈ ಯೋಜನೆ ಅಡಿಯಲ್ಲಿ ವಿತರಣೆ ಮಾಡಲಾಗುತ್ತದೆ. ಇದರ ಜತೆಗೆ ಪ್ರತಿ ಕುಟುಂಬಕ್ಕೆ ಒಂದು ಕೇಜಿ ಕಾಳು ವಿತರಿಸಲಾಗುತ್ತದೆ. ಇದಕ್ಕಾಗಿ ಸರ್ಕಾರ 90 ಸಾವಿರ ಕೋಟಿ ಹೆಚ್ಚು ಖರ್ಚು ಮಾಡುತ್ತಿದೆ ಎಂದು ಮೋದಿ ತಿಳಿಸಿದ್ದಾರೆ.