ಗೋದಿ ಕೆಜಿಗೆ 2 ರುಪಾಯಿ, ಅಕ್ಕಿ ಕೆಜಿಗೆ 3 ರುಪಾಯಿ: ಕೇಂದ್ರ ಸರ್ಕಾರ ಘೋಷಣೆ
ದೇಶದಲ್ಲಿ ಉಂಟಾಗಿರುವ ತುರ್ತು ಪರಿಸ್ಥಿತಿಯಿಂದಾಗಿ ಜನರನ್ನು ಕಾಪಾಡಲು ಕೇಂದ್ರ ಸರ್ಕಾರ ಮಹತ್ವದ ಘೋಷಣೆ ಮಾಡಿದೆ. ಗೋಧಿ ಕೆಜಿಗೆ 2 ರುಪಾಯಿ ಮತ್ತು ಅಕ್ಕಿ ಕೆಜಿಗೆ 3 ರುಪಾಯಿಯಂತೆ ನೀಡಲಾಗುವುದು ಎಂದು ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಘೋಷಣೆ ಮಾಡಿದ್ದಾರೆ.
ದೇಶದ 80 ಕೋಟಿ ಜನರಿಗೆ ಈ ಸೌಲಭ್ಯ ಲಭ್ಯವಿದ್ದು , 37 ರುಪಾಯಿ ಅಕ್ಕಿ ಕೇವಲ 3 ರುಪಾಯಿಗೆ ಮತ್ತು 27 ರುಪಾಯಿಯ ಗೋಧಿ 2 ರುಪಾಯಿಗೆ ದೊರೆಯಲಿದೆ. ಹೀಗಾಗಿ ಜನರು ಅಗತ್ಯ ವಸ್ತುಗಳ ಪೂರೈಕೆ ಬಗ್ಗೆ ಭಯ ಬೀಳುವ ಅಗತ್ಯ ಇಲ್ಲ ಎಂದು ಪ್ರಕಾಶ್ ಜಾವಡೇಕರ್ ಹೇಳಿದ್ದಾರೆ.
ಜನರು ಮನೆಯಲ್ಲಿದ್ದು ಸಹಕಾರ ನೀಡಬೇಕು. ಪ್ರತಿ ಬಾರಿ ಯಾವುದಾದರೂ ಕೆಲಸ ಮಾಡಿದ ಬಳಿಕ ಸಾಬೂನಿನಿಂದ ಕೈ ತೊಳೆಯಬೇಕು. ಗಾಳಿ ಮಾತಿಗೆ ಕಿವಿಗೊಟ್ಟು ಮನೆಯಿಂದ ಆಚೆ ಬಾರಬಾರದು. ಕೆಮ್ಮು ಕಫ, ಜ್ವರ ಕಂಡು ಬಂದಲ್ಲಿ ಕೂಡಲೇ ವೈದ್ಯರನ್ನು ಸಂಪರ್ಕಿಸುವಂತೆ ಅವರು ಸಾರ್ವಜನಿಕಲ್ಲಿ ಮನವಿ ಮಾಡಿಕೊಂಡರು.
ಕರೋನ ವೈರಸ್ನಿಂದ ಆದ ಆರ್ಥಿಕ ಪರಿಣಾಮವನ್ನು ಅಧ್ಯಯನ ಮಾಡುವ ಸರ್ಕಾರ, ಅದಕ್ಕಿಂತ ಮೊದಲು ಬಿಕ್ಕಟ್ಟನ್ನು ಪರಿಹರಿಸೋಣ ಎಂದು ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಹೇಳಿದ್ದಾರೆ.
ಎಲ್ಲಾ ರಾಜ್ಯಗಳಿಗೆ ಸಹಾಯವಾಣಿಗಳನ್ನು ಪ್ರಾರಂಭಿಸಲು ತಿಳಿಸಲಾಗಿತ್ತು. ಈಗ ಗೃಹ ಸಚಿವಾಲಯವು ತನ್ನದೇ ಆದ ಸಹಾಯವಾಣಿ ಸಂಖ್ಯೆಯನ್ನು ಪ್ರಕಟಿಸುತ್ತದೆ. ಅಗತ್ಯ ವಸ್ತುಗಳು ಜನರಿಗೆ ಸಿಗುವಂತೆ ಅವಕಾಶ ಮಾಡಿಕೊಡಲಾಗಿದೆ ಎಂದು ಅವರು ಹೇಳಿದ್ದಾರೆ.