ಎಸ್ಬಿಐಗೆ ದೆಹಲಿ ಮೂಲದ ಕಂಪನಿಯಿಂದ ಬಹುಕೋಟಿ ರುಪಾಯಿ ವಂಚನೆ
ದೇಶದೆಲ್ಲೆಡೆ ಈಗೇನಿದ್ದರೂ ಒಂದೇ ಸಮಸ್ಯೆ ಅದು ಕೊರೊನಾವೈರಸ್ ಸೋಂಕು. ರಾಷ್ಟ್ರವ್ಯಾಪಿ ಸೋಂಕು ತಡೆಯಲು ಲಾಕ್ಡೌನ್ ಮುಂದುವರಿಸಲಾಗಿದೆ. ಹೀಗಿರುವ ಅತ್ತ ದೆಹಲಿ ಮೂಲದ ಕಂಪನಿ ವಿರುದ್ಧ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾಗೆ ಬಹುಕೋಟಿ ವಂಚಿಸಿದ ಗಂಭೀರ ಆರೋಪಕ್ಕೆ ಸಂಬಂಧಿಸಿದಂತೆ ಎಫ್ಐಆರ್ ದಾಖಲಿಸಲಾಗಿದೆ.
ದೆಹಲಿ ಮೂಲದ ಕಂಪನಿಯು, ಭಾರತದ ಅತಿದೊಡ್ಡ ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಎಸ್ಬಿಐಗೆ 173 ಕೋಟಿ ರುಪಾಯಿ ವಂಚಿಸಿದ ಆರೋಪದ ಮೇಲೆ ಅದರ ನಿರ್ದೇಶಕರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಸೆಂಟ್ರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ (ಸಿಬಿಐ) ಶುಕ್ರವಾರ ತಿಳಿಸಿದೆ.
ದೆಹಲಿಯ ರೋಹಿನಿಯಲ್ಲಿ ನೋಂದಾಯಿತ ಕಚೇರಿ ರಾಮ್ ದೇವ್ ಇಂಟರ್ನ್ಯಾಷನಲ್ ಲಿಮಿಟೆಡ್ ಕಂಪನಿ ಮೇಲೆ ಪ್ರಕರಣ ದಾಖಲಾಗಿದೆ ಹಾಗೂ ಅದರ ನಿರ್ದೇಶಕರಾದ ನರೇಶ್ ಕುಮಾರ್, ಸುರೇಶ್ ಕುಮಾರ್ ಮತ್ತು ಸಂಗಿತಾ ಸೇರಿದಂತೆ ಮೂವರು ಅಪರಿಚಿತ ಸಾರ್ವಜನಿಕರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಸಿಬಿಐ ವಕ್ತಾರರು ತಿಳಿಸಿದ್ದಾರೆ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಕರ್ನಲ್ ಶಾಖೆಗೆ ಈ ಕಂಪನಿಯು 173.11 ಕೋಟಿ ರೂ ಬೃಹತ್ ಮೊತ್ತದ ವಂಚನೆ ಹಾಗೂ ಮೋಸ ಮಾಡಿದೆ. ಬ್ಯಾಂಕ್ ಮೂಲಕ ಸಾಲ ಪಡೆದು ಕಂಪನಿಯ ಆವರಣದಲ್ಲಿ ನಿರ್ಮಿಸಿದ್ದ ಯಂತ್ರೋಪಕರಣಗಳನ್ನು ಅನಧೀಕೃತವಾಗಿ ತೆಗೆಯಲಾಗಿದೆ. ಅಲ್ಲದೇ, ಸಾಲ ಪಡೆಯಲು ಹಲವು ನಕಲಿ ದಾಖಲೆಗಳನ್ನು ನೀಡಲಾಗಿದ ಎಂದು ಸಿಬಿಐ ವಕ್ತಾರ ಆರ್ ಕೆ ಗೌರ್ ಅವರು ತಿಳಿಸಿದ್ದಾರೆ.