ಕೇಂದ್ರ ಸರ್ಕಾರ ಇಲಾಖೆಗಳು, ಸಾರ್ವಜನಿಕ ಸ್ವಾಮ್ಯದ ಸಂಸ್ಥೆಗಳು (ಪಿಎಸ್ ಯುಗಳು) ಮತ್ತು ಕೆಲವು ರಾಜ್ಯ ಸರ್ಕಾರದ ಪಿಎಸ್ ಯುಗಳು ಹತ್ತಿರ ಹತ್ತಿರ 7 ಲಕ್ಷ ಕೋಟಿ ರುಪಾಯಿ ತನಕ ಬಾಕಿ ಇದೆ. ಇದು ಮಾರ್ಚ್ 31, 2020ರ ಅಂಕಿ- ಅಂಶ. ಆ ನಂತರ ಕೂಡ ಬಾಕಿ ಏರುತ್ತಲೇ ಸಾಗಿದೆ ಎಂದು ಮೂಲಗಳು ತಿಳಿಸಿವೆ.
ಈ ಹಣದ ಬಿಡುಗಡೆ ಆಗಿದ್ದರೆ ಮುಳುಗುತ್ತಿರುವ ಆರ್ಥಿಕತೆಗೆ ಇದೇ ದೊಡ್ಡ ಉತ್ತೇಜನ ಆಗಿರುತ್ತಿತ್ತು. ಆಗ ಹೆಚ್ಚುವರಿ ಹಣವನ್ನು ಮೀಸಲಿಡಬೇಕಿರಲಿಲ್ಲ ಅಥವಾ ಸಾರ್ವಜನಿಕ ವಲಯದಿಂದ ಸಾಲ ಪಡೆಯಬೇಕಿರಲಿಲ್ಲ. ಏಕೆಂದರೆ, ಸರ್ಕಾರಿ ಸ್ವಾಮ್ಯದ ಸಂಸ್ಥೆಗಳು ಅಥವಾ ಪಿಎಸ್ ಯುಗಳಿಂದ ಬಾಕಿ ಇರಿಸಿಕೊಂಡಿರುವ ಸಂಸ್ಥೆಗಳ ಪೈಕಿ ಹಲವು ಸಂಸ್ಥೆಗಳು ನಗದು ದೃಷ್ಟಿಯಿಂದ ಶ್ರೀಮಂತವಾಗಿವೆ.
ಸರ್ಕಾರದ ಇಲಾಖೆಗಳನ್ನು ಹೊರತುಪಡಿಸಿ, ಈಚಿನ ವರ್ಷಗಳಲ್ಲಿ ಕಾರ್ಖಾನೆಗಳಿಗೆ ಖರೀದಿ ಮಾಡಿದ ಸರಕುಹಾಗೂ ಪಡೆದ ಸೇವೆಗಳಿಗೆ ಬಾಕಿ ಪಾವತಿಸಬೇಕಿದೆ. ಅದರಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI), ರೈಲ್ವೇಸ್, ಇಂಡಿಯಾ ಪೋಸ್ಟ್, ರಾಜ್ಯ ವಿದ್ಯುತ್ ವಿತರಣಾ ಸಂಸ್ಥೆಗಳು (ಎಸ್ ಇಬಿಗಳು/ಡಿಸ್ಕಾಂಗಳು) ಒಳಗೊಂಡಿವೆ.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ಉಳಿದಿರುವ ಬಾಕಿ ಎಷ್ಟು?
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವೊಂದೇ ಈ ವರ್ಷದ ಫೆಬ್ರವರಿಗೆ 25,900 ಕೋಟಿ ರುಪಾಯಿಯನ್ನು ವಿವಿಧ ಯೋಜನೆಗಳಿಗೆ ಬಾಕಿ ಉಳಿಸಿಕೊಂಡಿತ್ತು. ಅದನ್ನು ಹೊರತುಪಡಿಸಿ, ವಿವಿಧ ಕಾಂಟ್ರ್ಯಾಕ್ಟರ್ ಗಳಿಗೆ 76,653 ಕೋಟಿ ರುಪಾಯಿ ಪಾವತಿಸಬೇಕಾದಂತೆ ಕ್ಲೇಮ್ ನ ಕೇಸ್ ಗಳು ನಡೆಯುತ್ತಿವೆ. ಈ ವರ್ಷದ ಮಾರ್ಚ್ ಅಂತ್ಯದ ಹೊತ್ತಿಗೆ ರಾಜ್ಯಗಳ ಡಿಸ್ಕಾಂಗಳು ವಿದ್ಯುತ್ ಉತ್ಪಾದಿಸುವ ಕಂಪೆನಿಗಳಿಗೆ 91,860 ಕೋಟಿ ಬಾಕಿ ಉಳಿಸಿಕೊಂಡಿದ್ದವು. ಜುಲೈ 31ರ ಹೊತ್ತಿಗೆ ಆ ಮೊತ್ತ 1.17 ಲಕ್ಷ ಕೋಟಿಗೆ ಏರಿಕೆ ಆಯಿತು. ಅದೇ ರೀತಿ ಡಿಸ್ಕಾಂಗಳು ಪವರ್ ಗ್ರಿಡ್ ಕಾರ್ಪೊರೇಷನ್ ಗಳಿಗೆ ಡಿಸ್ಕಾಂಗಳು 6,145 ಕೋಟಿ ರುಪಾಯಿ ಬಾಕಿ ಉಳಿಸಿಕೊಂಡಿವೆ.
ಸಕ್ಕರೆ ಕಾರ್ಖಾನೆಗಳಿಗೆ ಹಣ ನೀಡಬೇಕಿದೆ
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸಕ್ಕರೆ ಮಿಲ್ಸ್ ಗಳಿಗೆ 9400 ಕೋಟಿ ಬಾಕಿ ಉಳಿಸಿಕೊಂಡಿವೆ. ಆ ಪೈಕಿ 8300 ಕೋಟಿ ರುಪಾಯಿ ಕೇಂದ್ರ ಸರ್ಕಾರವು ಬಾಕಿ ಉಳಿಸಿಕೊಂಡಿರುವ ವಿವಿಧ ಸಬ್ಸಿಡಿ ಹಾಗೂ ಬಡ್ಡಿ ರಿಯಾಯಿತಿ. ಇನ್ನು ಸಕ್ಕರೆ ಮಿಲ್ಸ್ ನಿಂದ ಉತ್ಪಾದನೆಯಾದ ವಿದ್ಯುತ್ ಅನ್ನು ರಾಜ್ಯಗಳು ಖರೀದಿಸಿದ್ದು, ಅದಕ್ಕೆ 1100 ಕೋಟಿ ರುಪಾಯಿ ಪಾವತಿ ಮಾಡಬೇಕಿದೆ. ಇನ್ನು ದೇಶದಾದ್ಯಂತ ಕಬ್ಬು ಪೂರೈಕೆ ಮಾಡಿರುವ ರೈತರಿಗೆ ಸಕ್ಕರೆ ಮಿಲ್ಸ್ ನಿಂದ 17,300 ಕೋಟಿ ರುಪಾಯಿಗೂ ಹೆಚ್ಚು ಬಾಕಿ ಇದೆ. ಮಾರ್ಚ್ 31, 2020ಕ್ಕೆ ತೈಲ ಚಿಲ್ಲರೆ ಮಾರಾಟಗಾರರಿಗೆ ಸೀಮೆ ಎಣ್ಣೆ ಹಾಗೂ ಅಡುಗೆ ಅನಿಲ ಸಬ್ಸಿಡಿ 27,000 ಕೋಟಿ ರುಪಾಯಿ ಬಾಕಿ ಉಳಿಸಿಕೊಂಡಿದೆ. ವೆಚ್ಚಗಳನ್ನು ಗಮನಿಸುವ ಕಾರ್ಯದರ್ಶಿ ಟಿ.ವಿ. ಸೋಮನಾಥನ್ ಹೇಳಿರುವಂತೆ, ಮಾರ್ಚ್ 31, 2020ಕ್ಕೆ ಎಂಎಸ್ ಎಂಇಗಳಿಗೆ 1000 ಕೋಟಿ ರುಪಾಯಿಗಿಂತ ಕಡಿಮೆ ಸರ್ಕಾರದಿಂದ ಬಾಕಿ ಇದೆ. ರಕ್ಷಣಾ ಸಂಸ್ಥೆಗಳು, ರೈಲ್ವೇಸ್ ಮತ್ತಿತರರ ಸಂಸ್ಥೆಗಳಿಂದ, ಕೇಂದ್ರ ಮತ್ತು ಇಲಾಖೆಯ ಇತರ ಸಂಸ್ಥೆಗಳಿಂದ ಮಾರ್ಚ್ ಕೊನೆ ಹೊತ್ತಿಗೆ 10 ಸಾವಿರ ಕೋಟಿಗಿಂತ ಕಡಿಮೆ ಮೊತ್ತದ ಬಾಕಿ ಪಾವತಿಸಬೇಕಿದೆ ಎಂದು ಅವರು ಹೇಳಿದ್ದಾರೆ.
9.5 ಲಕ್ಷ ಕೋಟಿ ಕೇಂದ್ರದಿಂದ ಪಾವತಿಸಬೇಕಿದೆ
ಮೇ ತಿಂಗಳಲ್ಲಿ ಎಂಎಸ್ ಎಂಇ ಸಚಿವ ನಿತಿನ್ ಗಡ್ಕರಿ ಮಾತನಾಡಿ, ಕೇಂದ್ರ- ರಾಜ್ಯ ಸರ್ಕಾರ ಮತ್ತು ಕಾರ್ಪೊರೇಟ್ ಇಂಡಿಯಾ ಒಟ್ಟು ಸೇರಿ 5 ಲಕ್ಷ ಕೋಟಿ ರುಪಾಯಿಗೂ ಹೆಚ್ಚು ಮೊತ್ತವನ್ನು ಎಂಎಸ್ ಎಂಇಗಳಿಗೆ ಬಾಕಿ ಪಾವತಿಸಬೇಕಿದೆ ಎಂದಿದ್ದರು. ಕೇಂದ್ರ ಸರ್ಕಾರವು ಮಾರ್ಚ್ 31, 2020ಕ್ಕೆ ಫುಡ್ ಕಾರ್ಪೊರೇಷನ್ ಆಫ್ ಇಂಡಿಯಾಗೆ ಬಾಕಿ ಉಳಿಸಿಕೊಂಡಿರುವ 2.5 ಲಕ್ಷ ರುಪಾಯಿಯನ್ನು ಸಹ ಒಂದು ವೇಳೆ ಸೇರಿಸಿಕೊಂಡರೆ, ಸರ್ಕಾರದಿಂದ ವಿವಿಧ ಸಂಸ್ಥೆಗಳಿಗೆ ಬಾಕಿ ಉಳಿಸಿಕೊಂಡಿರುವ ಮೊತ್ತ 9.5 ಲಕ್ಷ ಕೋಟಿ ಅಥವಾ FY21 ಅಂದಾಜು ಜಿಡಿಪಿಯ 4.2% ಆಗುತ್ತದೆ. ಈ ವರೆಗೆ ಕೇಂದ್ರದಿಂದ ಘೋಷಣೆ ಮಾಡಿರುವ ಆರ್ಥಿಕ ಪ್ಯಾಕೇಜ್ ಜಿಡಿಪಿಯ 1.4%ನಷ್ಟಾಗುತ್ತದೆ. ಅಕ್ಟೋಬರ್- ನವೆಂಬರ್ ನಲ್ಲಿ ಮತ್ತೊಂದು ಸುತ್ತಿನ ಆರ್ಥಿಕ ಪ್ಯಾಕೇಜ್ ಘೋಷಣೆ ಮಾಡುವ ಸಾಧ್ಯತೆ ಇದೆ. ಅದರಲ್ಲಿ ಮೂಲಸೌಕರ್ಯ, ನಿರ್ಮಾಣ ವಲಯದ ಮೇಲೆ ಗಮನ ಹರಿಸಲಾಗುತ್ತದೆ. ನಗರ ಪ್ರದೇಶದ ಬಡವರಿಗೆ ಉದ್ಯೋಗ ಒದಗಿಸಲು ಯೋಜನೆ ರೂಪಿಸಲಾಗುತ್ತದೆ.


Click it and Unblock the Notifications