ಸೆನ್ಸೆಕ್ಸ್ 1000 ಪಾಯಿಂಟ್ಸ್ ಕುಸಿಯುವುದು ಅಂದರೆ ಈ ಹಿಂದೆಲ್ಲ ಅಪರೂಪದಲ್ಲಿ ಅಪರೂಪದ ಘಟನೆ ಎಂಬಂತೆ ಇತ್ತು. ಆದರೆ ಇತ್ತೀಚೆಗೆ ಪದೇ ಪದೇ ಸಂಭವಿಸುವ ವಿದ್ಯಮಾನ ಎಂಬಂತಾಗಿದೆ. ಮಾರ್ಚ್ 7ನೇ ತಾರೀಕಿನ ಸೋಮವಾರ ಸಹ ಷೇರುಪೇಟೆ ಕರಡಿ ಹಿಡಿತಕ್ಕೆ ಸಿಲುಕಿತು. 1500 ಪಾಯಿಂಟ್ಸ್ನಷ್ಟು ನೆಲ ಕಚ್ಚಿತು ಸೆನ್ಸೆಕ್ಸ್. ನಿಮಗೆ ಗೊತ್ತೆ ಫೆಬ್ರವರಿ ಆರಂಭದಿಂದ ಇಲ್ಲಿಯ ತನಕ ಹೂಡಿಕೆದಾರರ ಸಂಪತ್ತು 29 ಲಕ್ಷ ಕೋಟಿ ರೂಪಾಯಿಗೂ ಹೆಚ್ಚು ಮೊತ್ತ ಕೊಚ್ಚಿಹೋಗಿದೆ.
ಉಕ್ರೇನ್ನ ಮೇಲಿನ ರಷ್ಯಾದ ದಾಳಿಯು ಈಗ ಜಾಗತಿಕವಾಗಿ ತೀವ್ರವಾಗಿ ಪರಿಣಾಮ ಬೀರುತ್ತಿದೆ. ಇನ್ನು ಯುಎಸ್ ಹಾಗೂ ಅದರ ಯುರೋಪಿಯನ್ ಮಿತ್ರರಾಷ್ಟ್ರಗಳು ಜಾಗತಿಕ ಪೂರೈಕೆಗೆ ಹಾನಿ ಆಗದಂತೆ ರಷ್ಯಾದ ತೈಲ ಮತ್ತು ನೈಸರ್ಗಿಕ ಅನಿಲವನ್ನು ನಿಷೇಧಿಸುವ ಸಾಧ್ಯತೆ ಹೆಚ್ಚುತ್ತಿದೆ. ಈ ಸುದ್ದಿಯು ಕಚ್ಚಾ ಬೆಲೆಯನ್ನು 13 ವರ್ಷಗಳ ಗರಿಷ್ಠ ಮಟ್ಟಕ್ಕೆ ಏರುವಂತೆ ಮಾಡಿದ್ದು, ಇದು ಭಾರತದಂತಹ ಬೆಳವಣಿಗೆ ಕಾಣುತ್ತಿರುವ ಮಾರುಕಟ್ಟೆಗಳಿಗೆ ಆತಂಕಕ್ಕೆ ಪ್ರಮುಖ ಕಾರಣವಾಗಿದೆ.
ಭಾರತವು ತನ್ನ ತೈಲ ಅಗತ್ಯದ ಶೇ 80ಕ್ಕಿಂತ ಹೆಚ್ಚು ಆಮದು ಮಾಡಿಕೊಳ್ಳುತ್ತದೆ. ತೈಲ ಬೆಲೆಯಲ್ಲಿನ ಪ್ರತಿ ಏರಿಕೆಯು ದೇಶಕ್ಕೆ ದೊಡ್ಡ ಅಪಾಯವಾಗಿದೆ. ಏಕೆಂದರೆ ಅದು ಹಣದುಬ್ಬರದ ಚಿಂತೆಗೆ ಕಾರಣ ಆಗುತ್ತದೆ. ಜತೆಗೆ ವ್ಯಾಪಾರ ಕೊರತೆಯನ್ನು ಹೆಚ್ಚಿಸುತ್ತದೆ ಮತ್ತು ಕಾರ್ಪೊರೇಟ್ ಗಳಿಕೆಗಳು ಹಾಗೂ ಆರ್ಥಿಕ ಬೆಳವಣಿಗೆ ಹಿನ್ನಡೆಯನ್ನು ಉಂಟು ಮಾಡುತ್ತದೆ.

ಅಂತಾರಾಷ್ಟ್ರೀಯ ಬೆಂಚ್ಮಾರ್ಕ್ ಬ್ರೆಂಟ್ ಕಚ್ಚಾ ಫ್ಯೂಚರ್ಸ್ ಸಂಜೆ 5.58ರ ಹೊತ್ತಿಗೆ ಶೇ 6ರಷ್ಟು ಹೆಚ್ಚಳವಾಗಿ ಬ್ಯಾರೆಲ್ಗೆ 125 ಯುಎಸ್ಡಿಯಂತೆ ವಹಿವಾಟು ನಡೆಸಿತು. ಅಂದಹಾಗೆ ಇಂಟ್ರಾಡೇಯಲ್ಲಿ ಗರಿಷ್ಠ ಮಟ್ಟವಾದ 139.13 ಯುಎಸ್ಡಿಯನ್ನು ಮುಟ್ಟಿತ್ತು. ಹೀಗೆ ಇಂಟ್ರಾಡೇ ಗರಿಷ್ಠವನ್ನು ಮುಟ್ಟಿದ ನಂತರ, ಇದು 2008ರಿಂದ ಈಚೆಗೆ ಅತ್ಯಧಿಕವಾಗಿದೆ.
ಆದರೆ ಅಮೆರಿಕ ಕಚ್ಚಾ ತೈಲ ಮಾರ್ಚ್ 7ರಂದು ಬ್ಯಾರೆಲ್ಗೆ 130 ಯುಎಸ್ಡಿ ತಲುಪಿತು. "ಖಾಸಗಿ ಮೌಲ್ಯಮಾಪನವು 2022ರ ಭಾರತದ ಆರ್ಥಿಕ ಬೆಳವಣಿಗೆ ಮುನ್ಸೂಚನೆಯನ್ನು ಶೇಕಡಾ 7.8ಕ್ಕೆ ಇಳಿಸಿರುವುದರಿಂದ ವ್ಯಾಪಾರಿಗಳು ಆತಂಕ ವ್ಯಕ್ತಪಡಿಸಬಹುದು, ರಫ್ತಿನ ಮೇಲೆ ರಷ್ಯಾ-ಉಕ್ರೇನ್ ಸಂಘರ್ಷದ ಪ್ರಭಾವ ಮತ್ತು ಏರುತ್ತಿರುವ ತೈಲ ಬೆಲೆಗಳು ಏರಿಳಿತದ ಪರಿಣಾಮಗಳನ್ನು ಉಂಟು ಮಾಡುತ್ತವೆ," ಎಂದು ಸಂಶೋಧಕರೊಬ್ಬರು ತಿಳಿಸಿದ್ದಾರೆ.
ಕಚ್ಚಾ ತೈಲ ಬಿಕ್ಕಟ್ಟಿನಿಂದಾಗಿ ರೂಪಾಯಿ ಮೌಲ್ಯ ಸೋಮವಾರ ಡಾಲರ್ ವಿರುದ್ಧ ರೂಪಾಯಿ ಮೌಲ್ಯವು ದಾಖಲೆಯ ಕನಿಷ್ಠ ಮಟ್ಟವಾದ 77.05ಕ್ಕೆ ಕುಸಿದಿದೆ. "ಯುಎಸ್ ಡಾಲರ್ ವಿರುದ್ಧ ರೂಪಾಯಿ ಹೆಚ್ಚು ದುರ್ಬಲ ಆಗಬಹುದು, ಆದರೆ ಹೆಚ್ಚುತ್ತಿರುವ ಸರಕು ಬೆಲೆಗಳು ಹಣದುಬ್ಬರವನ್ನು ಹೆಚ್ಚಿಸಬಹುದು," ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಪಾಶ್ಚಾತ್ಯ ದೇಶಗಳು ರಷ್ಯಾದ ಮೇಲೆ ನಿರ್ಬಂಧ ಹೇರಿರುವುದಕ್ಕೆ ಕಾರಣ ಇದೆ. ಉಕ್ರೇನ್ನಿಂದ ರಷ್ಯಾವು ಮಿಲಿಟರಿ ಪಡೆಗಳನ್ನು ಹಿಂಪಡೆಯಬೇಕು ಹಾಗೂ ಕೀವ್ನಲ್ಲಿ ಶಾಂತಿಯನ್ನು ಪುನರ್ ಸ್ತಾಪಿಸುವುದಕ್ಕೆ ರಷ್ಯಾದ ಮೇಲೆ ಒತ್ತಡ ಹೇರುವುದು ಈಗಿನ ಉದ್ದೇಶವಾಗಿದೆ.
ಆದರೆ ಬಲವಾದ ಪ್ರತಿರೋಧದ ಹೊರತಾಗಿಯೂ ಉಕ್ರೇನ್ ಮೇಲೆ ರಷ್ಯಾ ಆಕ್ರಮಣಕಾರಿಯಾಗಿದೆ. ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರು ಫೈಟರ್ ಜೆಟ್ಗಳು ಮತ್ತು ಹೆಚ್ಚಿನ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ಒದಗಿಸುವಂತೆ ಪಾಶ್ಚಾತ್ಯ ದೇಶಗಳನ್ನು ಕೇಳುತ್ತಿದ್ದಾರೆ ಮತ್ತು ರಷ್ಯಾದ ಪಡೆಗಳ ವಿರುದ್ಧ ಹೋರಾಡಲು ಸೈನ್ಯಕ್ಕೆ ಸೇರಲು ವಿದೇಶಿ ಪ್ರಜೆಗಳಿಗೆ ಮನವಿ ಮಾಡಿದ್ದಾರೆ.
ಈ ಎಲ್ಲ ಆತಂಕಗಳು ಜಗತ್ತಿನಾದ್ಯಂತ ಮಾರುಕಟ್ಟೆಯ ಭಾವನೆಯನ್ನು ಮತ್ತಷ್ಟು ಕೆಡಿಸಿದವು. ಬಿಎಸ್ಇ ಸೆನ್ಸೆಕ್ಸ್ 1,491 ಪಾಯಿಂಟ್ಗಳು ಅಥವಾ ಶೇಕಡಾ 2.7ರಷ್ಟು ಕುಸಿದು 52,843 ಕ್ಕೆ ತಲುಪಿತು ಮತ್ತು ನಿಫ್ಟಿ 50 ಕಳೆದ ವರ್ಷ ಜುಲೈ ನಂತರ ಮೊದಲ ಬಾರಿಗೆ ತನ್ನ ನಿರ್ಣಾಯಕ 16,000 ಪಾಯಿಂಟ್ಸ್ ಗುರುತನ್ನು ಮುರಿದು, 382 ಪಾಯಿಂಟ್ಗಳಷ್ಟು ಇಳಿದು 15,863ಕ್ಕೆ ತಲುಪಿದೆ.
ಬಿಎಸ್ಇ ಮಾರುಕಟ್ಟೆ ಬಂಡವಾಳ ಮಾರ್ಚ್ 7ನೇ ತಾರೀಕಿನಂದು 241.1 ಲಕ್ಷ ಕೋಟಿ ರೂಪಾಯಿಗೆ ಇಳಿದಿದ್ದು, ಫೆಬ್ರವರಿ 2ನೇ ತಾರೀಕಿನಂದು ಇದು 270.6 ಲಕ್ಷ ಕೋಟಿ ರೂಪಾಯಿ ಇತ್ತು. ಇನ್ನು ನಿಫ್ಟಿ ಮಿಡ್ಕ್ಯಾಪ್ 100 ಮತ್ತು ಸ್ಮಾಲ್ಕ್ಯಾಪ್ 100 ಸೂಚ್ಯಂಕಗಳು ತಲಾ ಶೇ 2ರಷ್ಟು ಕುಸಿದವು. ವಾಹನ, ಬ್ಯಾಂಕಿಂಗ್, ಹಣಕಾಸು ಸೇವೆಗಳು ಮತ್ತು ರಿಯಾಲ್ಟಿ ಗರಿಷ್ಠ ಇಳಿಕೆಗೆ ಸಾಕ್ಷಿಯಾಗಿದ್ದು, ಶೇಕಡಾ 4ರಿಂದ 5ರಷ್ಟು ಕುಸಿಯಿತು, ಆದರೆ ಲೋಹವು ಶೇಕಡಾ 2.1ರಷ್ಟು ಲಾಭ ಕಂಡಿತು.
"ಜಾಗತಿಕ ಆರ್ಥಿಕತೆ ಈ ವರ್ಷ ಆರ್ಥಿಕ ಹಿಂಜರಿತದ ಅಪಾಯವನ್ನು ಎದುರಿಸುತ್ತಿವೆ. ಏಕೆಂದರೆ ಉಕ್ರೇನ್ನ ಮೇಲೆ ರಷ್ಯಾದ ದಾಳಿಯು ಸಪ್ಲೈ ಚೈನ್ ಅನ್ನು ತೀವ್ರವಾಗಿ ಅಡ್ಡಿಪಡಿಸುತ್ತದೆ. ಈಗಿನ ಸಂಘರ್ಷ ಪ್ರಾರಂಭ ಆದಾಗಿನಿಂದ ಸರಕುಗಳ ಬೆಲೆಗಳು ಹೆಚ್ಚಳವಾಗಿದೆ. ಬ್ರೆಂಟ್ ಕಚ್ಚಾ ತೈಲ ಬೆಲೆಗಳು ಶೇ 10ರಷ್ಟು ಏರಿದೆ. ಆದರೆ ನಿಕ್ಕಲ್ನಂತಹ ಪ್ರಮುಖ ಲೋಹಗಳು, ಅಲ್ಯೂಮಿನಿಯಂ ಮತ್ತು ತಾಮ್ರದ ಬೆಲೆಗಳು ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ಏರಿವೆ," ಎಂದು ವರದಿಯೊಂದು ತಿಳಿಸಿದೆ.
ರಷ್ಯಾ ತೈಲದ ಮೇಲಿನ ನಿಷೇಧದ ಹೊಡೆತವು ಈಗಾಗಲೇ ಅಲುಗುತ್ತಿರುವ ಜಾಗತಿಕ ಆರ್ಥಿಕತೆಗೆ ಭೀಕರ ಪೆಟ್ಟಾಗಿದೆ. "ನಿರ್ಬಂಧವು ಈಗಾಗಲೇ ಬಿಗಿಯಾದ ಪೂರೈಕೆ ಕಡೆಯಿಂದ ಅಗಾಧ ಒತ್ತಡವನ್ನು ಉಂಟು ಮಾಡುತ್ತಿದೆ. ಮಾರ್ಚ್ 10ರಂದು ಘೋಷಣೆ ಆಗಲಿರುವ 5 ರಾಜ್ಯಗಳ ಚುನಾವಣೆ ಫಲಿತಾಂಶಕ್ಕಾಗಿ ದೇಶೀಯ ಮಾರುಕಟ್ಟೆಗಳು ಕಾಯುತ್ತಿವೆ," ಎನ್ನಲಾಗಿದೆ.
More From GoodReturns

Petrol-Diesel Price: ಏರಿಕೆಯಾಗುವುದಿಲ್ಲ ಪೆಟ್ರೋಲ್, ಡೀಸೆಲ್ ಬೆಲೆ; ಭಾರತದ ಇಂಧನ ಪೂರೈಕೆ ಬಗ್ಗೆ ಸರ್ಕಾರ ಹೇಳಿದ್ದೇನು?

Hubballi Vijayapura: ಉತ್ತರ ಕರ್ನಾಟಕಕ್ಕೆ ಸಂಚಾರ ಕ್ರಾಂತಿ...ಹುಬ್ಬಳ್ಳಿ–ವಿಜಯಪುರ NH52 ದ್ವಿಪಥ ರಸ್ತೆ ಅಭಿವೃದ್ಧಿ ಆರಂಭ!

Hosur Road: ಹೊಸೂರು ರಸ್ತೆ ಪ್ರಯಾಣಿಕರಿಗೆ ಬಿಗ್ ಅಪ್ಡೇಟ್! ಇನ್ಮೇಲೆ ಸಂಚಾರ ಮತ್ತಷ್ಟು ಸುಲಭ

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

Karnataka Budget 2026: ಬಜೆಟ್ ನಂತರ ಗ್ಯಾರಂಟಿ ಯೋಜನೆಗಳು ಇರುತ್ತಾ? ರಾಜ್ಯದ ಜನರಿಗೆ ಇರುವ ನಿರೀಕ್ಷೆಗಳೇನು? ತಿಳಿಯಿರಿ

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Karnataka Weather: ರಾಜ್ಯದಲ್ಲಿ ಮತ್ತಷ್ಟು ಹೆಚ್ಚಾಗಲಿದೆ ಬಿಸಿಲು! ಹೇಗಿದೆ ಇಂದಿನ ಹವಾಮಾನ?

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!



Click it and Unblock the Notifications