ವಿಜಯ್ ಮಲ್ಯ 'ದಿವಾಳಿ' ಎಂದು ಘೋಷಿಸಿದ ಬ್ರಿಟನ್ನಿನ ನ್ಯಾಯಾಲಯ
ಭಾರತದ ಬ್ಯಾಂಕ್ಗಳಿಗೆ ಸಾವಿರಾರು ಕೋಟಿ ರೂಪಾಯಿ ವಂಚಿಸಿ ಇಂಗ್ಲೆಂಡ್ಗೆ ಪರಾರಿಯಾಗಿರುವ ವಿಜಯ್ ಮಲ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ, ಉದ್ಯಮಿ ವಿಜಯ್ ಮಲ್ಯ ದಿವಾಳಿಯಾಗಿದ್ದಾರೆ ಎಂದು ಬ್ರಿಟನ್ನಿನ ನ್ಯಾಯಾಲಯವೊಂದು ಸೋಮವಾರ ಪ್ರಕಟಿಸಿದೆ.
ಈ ನ್ಯಾಯಾಲಯದ ಆದೇಶದಿಂದಾಗಿ ಕಿಂಗ್ ಫಿಶರ್ ಏರ್ ಲೈನ್ಸ್ ಗೆ ಸಾಲ ನೀಡಿ ಮಲ್ಯ ಅವರಿಂದ ಬರಬೇಕಿರುವ ಬಾಕಿ ಮೊತ್ತವನ್ನು ವಸೂಲು ಮಾಡಲು ವಿಶ್ವದಾದ್ಯಂತ ಅವರ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳುವ ವಿಚಾರದಲ್ಲಿ ಎದುರು ನೋಡುತ್ತಿರುವ ಭಾರತೀಯ ಸ್ಟೇಟ್ ಬ್ಯಾಂಕ್ ನೇತೃತ್ವದ ಬ್ಯಾಂಕ್ ಗಳ ಒಕ್ಕೂಟದ ಹಾದಿಯನ್ನು ಸುಗಮಗೊಳಿಸಿದೆ.
ಲಂಡನ್ ಹೈಕೋರ್ಟ್ ಚಾನ್ಸರಿ ವಿಭಾಗದ ವರ್ಚುಯಲ್ ವಿಚಾರಣೆ ವೇಳೆಯಲ್ಲಿ ವಿಜಯ್ ಮಲ್ಯ ದಿವಾಳಿಯೆಂದು ಐಸಿಸಿ ನ್ಯಾಯಾಧೀಶ ಮೈಕೆಲ್ ಬ್ರಿಗ್ಸ್ ತೀರ್ಪಿನಲ್ಲಿ ಹೇಳಿದ್ದಾರೆ. ಕಾನೂನು ಸಂಸ್ಥೆಗಳಾದ ಟಿಎಲ್ಟಿ ಎಲ್ಎಲ್ಪಿ ಮತ್ತು ನ್ಯಾಯವಾದಿ ಮಾರ್ಸಿಯಾ ಶೆಕರ್ಡೆಮಿಯನ್ ಪ್ರತಿನಿಧಿಸುವ ಭಾರತೀಯ ಬ್ಯಾಂಕುಗಳು ದಿವಾಳಿತನದ ಆದೇಶವನ್ನು ಭಾರತೀಯ ಬ್ಯಾಂಕುಗಳ ಪರವಾಗಿ ನೀಡಬೇಕೆಂದು ವಾದಿಸಿದ್ದರು.
ಮಲ್ಯ ಅವರ ಆಸ್ತಿಗಳನ್ನು ವಶಪಡಿಸಿಕೊಳ್ಳಲು ಈ ತೀರ್ಪಿನಿಂದಾಗಿ ಅವಕಾಶ ಸಿಕ್ಕಂತಾಗಿದೆ. ಹೈಕೋರ್ಟ್ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸುವುದಾಗಿ ಮಲ್ಯ ಇದೇ ವೇಳೆ ಹೇಳಿದ್ದಾರೆ, ಆದರೆ ಇದಕ್ಕೆ ಅನುಮತಿ ನಿರಾಕರಿಸಲಾಗಿದೆ.
ಮೇನಲ್ಲಿ ಆನ್ಲೈನ್ ಮೂಲಕ ವಿಚಾರಣೆ ನಡೆಸಲಾಗಿತ್ತು, ಬ್ಯಾಂಕುಗಳು ಸಲ್ಲಿಸಿದ್ದ ದಿವಾಳಿತನದ ಅರ್ಜಿಯನ್ನು ತಿದ್ದುಪಡಿ ಮಾಡುವ ಕಾನೂನನ್ನು ಲಂಡನ್ ಹೈಕೋರ್ಟ್ ಎತ್ತಿಹಿಡಿದಿತ್ತು, ಭಾರತದಲ್ಲಿ ಇರುವ ಆಸ್ತಿಗಳ ಮೇಲೆ ತಮ್ಮ ಆಸ್ತಿಗೆ ಭದ್ರತೆಯನ್ನು ನೀಡಬೇಕು ಎಂದು ವಿಜಯ್ ಮಲ್ಯ ಅವರು ನ್ಯಾಯಲಯದಲ್ಲಿ ಅರ್ಜಿ ಸಲ್ಲಿಸಿದರು.