"ಬಾಕಿ ಇರುವ ಹಣವನ್ನು ಶೇಕಡಾ ನೂರರಷ್ಟು ವಾಪಸ್ ಮಾಡ್ತೀನಿ. ಇದನ್ನು ತೆಗೆದುಕೊಂಡು, ಈ ಕೇಸ್ ಇಲ್ಲಿಗೆ ಮುಗಿಸಿಬಿಡಿ" ಎಂದು ದೇಶಬಿಟ್ಟು ಪರಾರಿ ಆಗಿರುವ ಮದ್ಯದ ಉದ್ಯಮಿ ವಿಜಯ್ ಮಲ್ಯ ಬುಧವಾರ ಮಗದೊಮ್ಮೆ ಮನವಿ ಮಾಡಿಕೊಂಡಿದ್ದಾರೆ. ಕೇಂದ್ರ ಸರ್ಕಾರದ 20 ಲಕ್ಷ ಕೋಟಿ ರುಪಾಯಿ ಆರ್ಥಿಕ ಪ್ಯಾಕೇಜ್ ಘೋಷಣೆಗೆ ಅಭಿನಂದನೆ ಸಲ್ಲಿಸಿ, ಆ ನಂತರ ಈ ಹಿಂದೆ ಕೂಡ ಇಟ್ಟಿದ್ದ ಬೇಡಿಕೆಯನ್ನು ಪುನರುಚ್ಚರಿಸಿದ್ದಾರೆ.
"Covid 19 ಪ್ಯಾಕೇಜ್ ಗಾಗಿ ಸರ್ಕಾರಕ್ಕೆ ಅಭಿನಂದನೆಗಳು. ಅವರು ತಮಗೆ ಬೇಕಾದಷ್ಟು ಕರೆನ್ಸಿ ಮುದ್ರಿಸಿಕೊಳ್ಳಬಹುದು. ಆದರೆ ಸರ್ಕಾರದ ಒಡೆತನದಲ್ಲಿ ಇರುವ ಬ್ಯಾಂಕ್ ಗೆ ನನ್ನಂಥ ಸಣ್ಣ ಕಾಂಟ್ರಿಬ್ಯೂಟರ್ ಗಳು ಶೇಕಡಾ 100ರಷ್ಟು ಹಿಂತಿರುಗಿಸಲು ಬಯಸುವ ಸಾಲವನ್ನು ನಿರಂತರವಾಗಿ ನಿರ್ಲಕ್ಷಿಸುವುದು ಸರಿಯೇ?" ಎಂದು ಟ್ವೀಟ್ ಮಾಡಿದ್ದಾರೆ.
ಬೇಷರತ್ ಆಗಿ ಪೂರ್ತಿ ಹಣ ವಾಪಸ್ ಮಾಡ್ತೀನಿ
ಕಿಂಗ್ ಫಿಷರ್ ಏರ್ ಲೈನ್ಸ್ ಗಾಗಿ ಮಾಡಿದ ಸಾಲವನ್ನು ಹಿಂತಿರುಗಿಸದ ಮಲ್ಯ ದೇಶ ಬಿಟ್ಟು ಪರಾರಿಯಾಗಿದ್ದಾರೆ. ಅವರ ಮೇಲೆ 9000 ಕೋಟಿ ರುಪಾಯಿಯಷ್ಟು ವಂಚನೆ ಹಾಗೂ ಅಕ್ರಮ ಹಣ ವರ್ಗಾವಣೆ ಆರೋಪಗಳಿವೆ. ಇದೀಗ, "ಬೇಷರತ್ ಆಗಿ ಪೂರ್ತಿ ಹಣವನ್ನು ಹಿಂತಿರುಗಿಸುತ್ತೇನೆ, ಅದನ್ನು ದಯವಿಟ್ಟು ತೆಗೆದುಕೊಳ್ಳಿ" ಎಂದಿದ್ದಾರೆ.
ಯು.ಕೆ. ಸುಪ್ರೀಂ ಕೋರ್ಟ್ ನಲ್ಲಿ ಮನವಿ
ಯು.ಕೆ.ಯಿಂದ ಭಾರತಕ್ಕೆ ಹಸ್ತಾಂತರ ಪ್ರಕರಣದಲ್ಲಿ ಲಂಡನ್ ಹೈಕೋರ್ಟ್ ನಲ್ಲಿ ವಿಜಯ್ ಮಲ್ಯ ಹಾಕಿಕೊಂಡಿದ್ದ ಮೇಲ್ಮನವಿ ತಿರಸ್ಕೃತವಾಗಿದೆ. ಇದೀಗ ಅವರು ಯು.ಕೆ. ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ. ಈ ಹಿಂದೆ ಕೂಡ, ಕಿಂಗ್ ಫಿಷರ್ ಏರ್ ಲೈನ್ಸ್ ಗಾಗಿ ಪಡೆದಿದ್ದ ಮೊತ್ತವನ್ನು ಪೂರ್ತಿಯಾಗಿ ಹಿಂತಿರುಗಿಸುವುದಾಗಿ ಮಲ್ಯ ಟ್ಬೀಟ್ ಗಳನ್ನು ಮಾಡಿದ್ದಾರೆ.
ಬ್ಯಾಂಕ್ ಗಳು ಹಣ ಸ್ವೀಕರಿಸುವ ಸ್ಥಿತಿಯಲ್ಲಿ ಇಲ್ಲ
ಆದರೆ, ಬ್ಯಾಂಕ್ ಗಳು ಹಣವನ್ನು ಸ್ವೀಕರಿಸುವ ಸ್ಥಿತಿಯಲ್ಲಿ ಇಲ್ಲ ಹಾಗೂ ಜಾರಿ ನಿರ್ದೇಶನಾಲಯವು ಬ್ಯಾಂಕ್ ಗಳ ಪರವಾಗಿ ಜಪ್ತಿ ಮಾಡಿಕೊಂಡಿರುವ ವಿಜಯ್ ಮಲ್ಯ ಆಸ್ತಿಯನ್ನು ಬಿಡುಗಡೆ ಮಾಡಿಕೊಡುವ ಪರಿಸ್ಥಿತಿಯಲ್ಲಿ ಇಲ್ಲ. ಈ ಮಧ್ಯೆ ವಿಜಯ್ ಮಲ್ಯ ಕೇಂದ್ರ ಸರ್ಕಾರವನ್ನು ಪದೇ ಪದೇ ಮನವಿ ಮಾಡುತ್ತಲೇ ಇದ್ದಾರೆ.


Click it and Unblock the Notifications