ಲಾಕ್ಡೌನ್ ಅವಧಿಯ EMIಗೆ ಬಡ್ಡಿ ಏಕೆ? ಆರ್ಬಿಐ ಮೇಲೆ ಸುಪ್ರೀಂ ಕಿಡಿ
ನವದೆಹಲಿ, ಜೂನ್ 5: ಕೊರೊನಾವೈರಸ್ ಲಾಕ್ಡೌನ್ ಪರಿಣಾಮವಾಗಿ ದೇಶದ ಬಡವರ್ಗ, ಮಧ್ಯಮ ವರ್ಗ ಭಾರೀ ಸಂಕಷ್ಟಕ್ಕೆ ಸಿಲುಕಿಕೊಂಡಿದೆ. ಕಳೆದ ಮೂರು ತಿಂಗಳಿನಿಂದ ಆದಾಯವಿಲ್ಲದೇ ಮಾಡಿರುವ ಸಾಲ ತೀರಿಸಲಾಗದೇ ತೊಂದರೆ ಅನುಭವಿಸುತ್ತಿದ್ದಾರೆ.
ಲಾಕ್ಡೌನ್ ನಂತರದ ಆರ್ಥಿಕತೆ; ತೀವ್ರ ಆತಂಕ ವ್ಯಕ್ತಪಡಿಸಿದ ಮಾಜಿ ಹಣಕಾಸು ಕಾರ್ಯದರ್ಶಿ
ಇದಕ್ಕೆ ಸ್ವಲ್ಪ ಪರಿಹಾರ ಎನ್ನುವಂತೆ ಕೇಂದ್ರ ಸರ್ಕಾರ ಮುಂದಿನ ಮೂರು ತಿಂಗಳು ಕಟ್ಟಬೇಕಿರುವ ಸಾಲದ ಕಂತುಗಳಿಗೆ ವಿನಾಯಿತಿ ನೀಡಿದೆ. ಆದರೆ, ಎಲ್ಲರ ಪ್ರಶ್ನೆ ಬಡ್ಡಿಗೆ ವಿನಾಯಿತಿ ಏಕೆ ನೀಡುತ್ತಿಲ್ಲ ಎನ್ನುವುದಾಗಿದೆ. ಇಎಂಐ ಮಾತ್ರ ಮುಂದೂಡಿಲ್ಪಟ್ಟಿದೆ ಹೊರತು ಬಡ್ಡಿಯನ್ನು ಸಾಲಗಾರರು ಕಟ್ಟಲೇಬೇಕಿದೆ.
ಈ ಬಗ್ಗೆ ಸುಪ್ರೀಂಕೋರ್ಟ್ ಗುರುವಾರ ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದನ್ನು ವಿಚಾರಣೆ ನಡೆಸಿ, ರೀಸರ್ವ ಬ್ಯಾಂಕ್ ನ್ನು ಬಡ್ಡಿಗೆ ವಿನಾಯಿತಿ ನೀಡದ್ದಕ್ಕೆ ತರಾಟೆಗೆ ತೆಗೆದುಕೊಂಡಿದೆ.
ಆರ್ಬಿಐ ನಿರ್ಧಾರ ಜನರಿಗೆ ಮಾರಕ
ಇಎಂಐ ಮರುಪಾವತಿಯನ್ನು ಮುಂದೂಡಿರುವ ಅವಧಿಗೂ ಗ್ರಾಹಕರು ಬಡ್ಡಿ ಪಾವತಿಸಬೇಕು ಎಂಬ ಆರ್ಬಿಐ ನಿರ್ಧಾರ ಜನರಿಗೆ ಮಾರಕ. ಜನರ ಆರೋಗ್ಯಕ್ಕಿಂತ ಆರ್ಥಿಕ ವಿಚಾರಗಳು ನಿಮಗೆ ಹೆಚ್ಚು ಮಹತ್ವದ್ದೇ ಎಂದು ಆರ್ಬಿಐನ್ನು ಸುಪ್ರೀಂಕೋರ್ಟ್ ತೀವ್ರ ತರಾಟೆಗೆ ತೆಗೆದುಕೊಂಡಿದೆ.
ಗಂಭೀರವಾದ ವಿಚಾರ
ಸಾಲ ಮರುಪಾವತಿಯ ಅವಧಿಯನ್ನು ಒಂದೆಡೆ ವಿಸ್ತರಿಸಿ, ಇನ್ನೊಂದೆಡೆ ಸಾಲದ ಮೇಲೆ ಬಡ್ಡಿ ಹೇರುವುದು ಗಂಭೀರವಾದ ವಿಚಾರ. ಇಲ್ಲಿ ಎರಡು ಅಂಶಗಳನ್ನು ಗಣನೆಗೆ ತೆಗೆದುಕೊಳ್ಳಬೇಕಾಗುತ್ತದೆ. ಒಂದು, ಸಾಲದ ಮೇಲಿನ ಬಡ್ಡಿಯನ್ನು ಮನ್ನಾ ಮಾಡುವುದು ಮತ್ತು ಇನ್ನೊಂದು, ಬಡ್ಡಿಯ ಮೇಲಿನ ಬಡ್ಡಿ ಮನ್ನಾ ಮಾಡುವುದು ಎಂದು ಸುಪ್ರೀಂ ಹೇಳಿದೆ.
ಗಜೇಂದ್ರ ಶರ್ಮಾ ಎನ್ನುವರಿಂದ ಪಿಐಎಲ್
ವಿಸ್ತರಣೆಗೊಂಡ ಇಎಂಐ ಅವಧಿಗೂ ಬಡ್ಡಿ ಹಾಕುವುದನ್ನು ಪ್ರಶ್ನಿಸಿ ಗಜೇಂದ್ರ ಶರ್ಮಾ ಎಂಬವರು ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್) ಸುಪ್ರೀಂಗೆ ಸಲ್ಲಿಸಿದ್ದರು. ನ್ಯಾಯಮೂರ್ತಿಗಳಾದ ಅಶೋಕ್ ಭೂಷಣ್, ಸಂಜಯ್ ಕಿಶನ್ ಕೌಲ್ ಮತ್ತು ಎಂ.ಆರ್. ಶಾ ಅವರ ಪೀಠವು ಅರ್ಜಿಯ ವಿಚಾರಣೆ ನಡೆಸುತ್ತಿದೆ. ಜೂನ್ 12ಕ್ಕೆ ಮೊದಲು ಈ ಕುರಿತು ಕೇಂದ್ರ ಹಾಗೂ ಆರ್ಬಿಐ ಜಂಟಿ ಪ್ರಮಾಣಪತ್ರ ಸಲ್ಲಿಸುವಂತೆ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರಿಗೆ ಪೀಠ ಸೂಚಿಸಿದೆ.
ಬಡ್ಡಿ ಮನ್ನಾ ಮಾಡಲು ಸಾಧ್ಯವಿಲ್ಲ
ಸಾಲ ಮರುಪಾವತಿ ಮುಂದೂಡಿಕೆ ಅವಧಿಗೆ ಬಡ್ಡಿ ಮನ್ನಾ ಮಾಡಲು ಸಾಧ್ಯವಿಲ್ಲ. ಬಡ್ಡಿ ಮನ್ನಾ ಮಾಡಿದರೆ ಬ್ಯಾಂಕುಗಳ ಆರ್ಥಿಕ ಸ್ಥಿರತೆಯನ್ನು ಅಪಾಯಕ್ಕೆ ಒಡ್ಡುವುದರ ಜತೆಗೆ ಠೇವಣಿದಾರರ ಹಿತಾಸಕ್ತಿಯನ್ನೂ ಹಾಳುಗೆಡವಿದಂತಾಗುತ್ತದೆ. ಬಡ್ಡಿ ಮನ್ನಾದಿಂದ ಬ್ಯಾಂಕುಗಳಿಗೆ 2 ಲಕ್ಷ ಕೋಟಿ ರುಪಾಯಿವರೆಗೆ ನಷ್ಟವಾಗಬಹುದು ಎಂಬುದು ಆರ್ಬಿಐ ವಾದವಾಗಿದೆ.