ಅಜಿತ್ ಪವಾರ್ ವಿಮಾನ ಅಪಘಾತದಲ್ಲಿ ಮೃತಪಟ್ಟ ಸುದ್ದಿ, ಇಡೀ ಇಂಡಿಯಾದಲ್ಲಿ ಸಂಚಲನಕ್ಕೆ ಕಾರಣ ಆಗಿದೆ. ಎನ್ಸಿಪಿ ನಾಯಕ ಹಾಗೂ ಮಹಾರಾಷ್ಟ್ರ ಉಪಮುಖ್ಯಮಂತ್ರಿ ಕೂಡ ಆಗಿದ್ದ ಇದೇ ಅಜಿತ್ ಪವಾರ್ ಅವರು ಪ್ರಯಾಣ ಮಾಡುತ್ತಿದ್ದ ವಿಮಾನ, ಮಹಾರಾಷ್ಟ್ರದ ಬಾರಾಮತಿಯ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ಆಗುವಾಗ ಸ್ಫೋಟಗೊಂಡಿದೆ. ಹೀಗಾಗಿ ವಿಮಾನದಲ್ಲಿ ಇದ್ದ ಎಲ್ಲಾ 5 ಜನ ದುರಂತಕ್ಕೆ ಬಲಿಯಾಗಿದ್ದಾರೆ. ಆದರೆ ಹೀಗೆ ವಿಮಾನ ದುರಂತದಲ್ಲಿ ಜೀವ ಹೋಗುವ ಮೊದಲು ಅಜಿತ್ ಪವಾರ್ ಅವರು, ಸೋಷಿಯಲ್ ಮೀಡಿಯಾದಲ್ಲಿ ನೀಡಿರುವ ಕೊನೆಯ ಸಂದೇಶ ವೈರಲ್ ಆಗುತ್ತಿದೆ.
ಮಹಾರಾಷ್ಟ್ರ ರಾಜ್ಯದಲ್ಲಿ ಇದೀಗ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಯುತ್ತಿದ್ದು, ಚುನಾವಣೆಗಾಗಿ ಪ್ರಚಾರ ಮಾಡಲು ಎನ್ಸಿಪಿ ನಾಯಕ & ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಪ್ರಯಾಣ ಮಾಡುತ್ತಿದ್ದರು ಎನ್ನಲಾಗಿದೆ. ಅಜಿತ್ ಪವಾರ್ ಮಂಗಳವಾರ ಮುಂಬೈನಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಭಾಗವಹಿಸಿದ್ದರು. ನಂತರ ಇಂದು ಮುಂಬೈ ನಗರದಿಂದ ಪುಣೆ ಕಡೆಗೆ ಅವರು ಪ್ರಯಾಣ ಬೆಳೆಸಿದ್ದರು. ಆದರೆ ಹೀಗೆ ಬಾರಾಮತಿ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ಆಗುವಾಗ ಅಜಿತ್ ಪವಾರ್ ಅವರು ಇದ್ದ ವಿಮಾನ ರನ್ವೇ ಹಾದಿಯಲ್ಲೇ ಸ್ಫೋಟಗೊಂಡಿದೆ. ಹಾಗಾದರೆ, ಸಾವಿಗೂ ಮೊದಲು ಅಜಿತ್ ಪವಾರ್ ಅವರು, ಸೋಷಿಯಲ್ ಮೀಡಿಯಾದಲ್ಲಿ ಹೇಳಿದ್ದು ಏನು?

ಅಜಿತ್ ಪವಾರ್ ಕೊನೆಯ ಸಂದೇಶ...
ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಸಾಯುವ ಮೊದಲು ನೀಡಿದ್ದ ಸಂದೇಶ ನೆರೆಯ ರಾಜ್ಯ ಮಹಾರಾಷ್ಟ್ರದ ಜನರ ಕಣ್ಣು ಒದ್ದೆ ಮಾಡುತ್ತಿದೆ. ಅಜಿತ್ ಪವಾರ್ ಅವರು ತಮ್ಮ ಜೀವವನ್ನೇ ಕಳೆದುಕೊಳ್ಳುವ ಸುಮಾರು 10 ಗಂಟೆಗಳ ಮೊದಲು ಮಹಾರಾಷ್ಟ್ರ ಅಭವೃದ್ಧಿ ಬಗ್ಗೆ ಟ್ವೀಟ್ ಪೋಸ್ಟ್ ಮಾಡಿದ್ದಾರೆ. ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರ ಪೋಸ್ಟ್ ಹಂಚಿಕೊಂಡು ಅಭಿವೃದ್ಧಿಯ ಬಗ್ಗೆಯೇ ಜಪ ಮಾಡಿದ್ದಾರೆ. ಈ ಮೂಲಕ ಸಾಯುವ ಸಮಯದಲ್ಲೂ ಅಜಿತ್ ಅವರು ಅಭಿವೃದ್ಧಿ ಬಗ್ಗೆ ಯೋಚಿಸಿದ್ದರು ಎಂಬುದು ಅವರ ಬೆಂಬಲಿಗರು ಹಾಗೂ ಅಭಿಮಾನಿಗಳ ಎದೆಯನ್ನ ಮತ್ತಷ್ಟು ಭಾರ ಮಾಡಿದೆ.
ಲಕ್ಷಾಂತರ ಕೋಟಿ ರೂಪಾಯಿ ಯೋಜನೆಗಳು
ಅಜಿತ್ ಪವಾರ್ ಅವರು ವಿಮಾನ ಅಪಘಾತದಲ್ಲಿ ಜೀವ ಬಿಡುವ ಕೆಲವೇ ಗಂಟೆಗಳ ಮೊದಲು ಸಿಎಂ ದೇವೇಂದ್ರ ಫಡ್ನವೀಸ್ ಅವರ ನೇತೃತ್ವದಲ್ಲಿ ನಡೆದ ಸಂಪುಟ ಸಭೆಯಲ್ಲಿ ಭಾಗವಹಿಸಿದ್ದರು. ಈ ವೇಳೆ ಲಕ್ಷಾಂತರ ಕೋಟಿ ರೂಪಾಯಿ ಯೋಜನೆಗಳಿಗೆ ಅನುಮತಿ ನೀಡಲಾಗಿತ್ತು. ಇದೇ ವಿಚಾರವನ್ನ ಸಿಎಂ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದರು. ಸಿಎಂ ಮಾಡಿದ್ದ ಪೋಸ್ಟ್ ಅನ್ನೇ ಅಜಿತ್ ಪವಾರ್ ಅವರು ಹಂಚಿಕೊಂಡಿದ್ದರು. ಹೀಗೆ ತಾವು ಬದುಕಿದ್ದ ಸಮಯದಲ್ಲೂ ಅಭಿವೃದ್ಧಿಗಾಗಿ ಹೋರಾಡಿದ್ದ ನಾಯಕ, ಸಾವಿಗೆ ಮೊದಲು ಕೂಡ ಅಭಿವೃದ್ಧಿ ವಿಚಾರ ಬಿಟ್ಟಿಲ್ಲ ಎಂದು ಅವರ ಬೆಂಬಲಿಗರು ಈಗ ಕಂಬನಿ ಮಿಡಿಯುತ್ತಾ ಭಾವುಕರಾಗಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಈ ಹಳೆಯ ಪೋಸ್ಟ್ ವೈರಲ್ ಆಗುತ್ತಿದೆ.
Credit: Oneindia


Click it and Unblock the Notifications