2019 ಹೊಸ ವರ್ಷಕ್ಕೆ ನಿಮ್ಮ ಯೋಜನೆ ಹೇಗಿರಬೇಕು?
ವರ್ಷಾಂತ್ಯದ ರಜಾಕಾಲ ಆರಂಭವಾಗಿದ್ದು ಎಲ್ಲೆಲ್ಲೂ ಹೊಸ ವರ್ಷದ ಆಗಮನದ ಸಂಭ್ರಮಾಚರಣೆಗಳು ಮುಗಿಲು ಮುಟ್ಟಿವೆ. ಹೊಸ ವರ್ಷವನ್ನು ಸಂಭ್ರಮದಿಂದ ಬರಮಾಡಿಕೊಳ್ಳುತ್ತಿರುವ ಈ ಸಂದರ್ಭದಲ್ಲಿ ಕೆಲ ಹಳೆಯ ತಪ್ಪುಗಳನ್ನು ಸರಿಪಡಿಸಿಕೊಂಡು ಮುಂದಿನ ಹೆಜ್ಜೆ ಇಡಲ
ವರ್ಷಾಂತ್ಯದ ರಜಾಕಾಲ ಆರಂಭವಾಗಿದ್ದು ಎಲ್ಲೆಲ್ಲೂ ಹೊಸ ವರ್ಷದ ಆಗಮನದ ಸಂಭ್ರಮಾಚರಣೆಗಳು ಮುಗಿಲು ಮುಟ್ಟಿವೆ. ಹೊಸ ವರ್ಷವನ್ನು ಸಂಭ್ರಮದಿಂದ ಬರಮಾಡಿಕೊಳ್ಳುತ್ತಿರುವ ಈ ಸಂದರ್ಭದಲ್ಲಿ ಕೆಲ ಹಳೆಯ ತಪ್ಪುಗಳನ್ನು ಸರಿಪಡಿಸಿಕೊಂಡು ಮುಂದಿನ ಹೆಜ್ಜೆ ಇಡಲು ಅಣಿಯಾಗೋಣ.
ಹೊಸದೊಂದು ಆರಂಭ ಅನೇಕ ಹೊಸ ಕೆಲಸಗಳನ್ನು ಆರಂಭಿಸುವ ಶುಭ ಘಳಿಗೆಯೂ ಆಗಿರುತ್ತದೆ. ಹೊಸ ವರ್ಷದ ಉತ್ಸಾಹ ಹಾಗೂ ತಾಜಾತನದ ನವ ಪರ್ವದಲ್ಲಿ ಹಳೆಯ ಕೆಲ ವಿಚಾರಗಳು, ಅಭ್ಯಾಸಗಳನ್ನು ಜೀವನದಿಂದ ದೂರ ಮಾಡಿ ಜೀವನಕ್ಕೆ ಉತ್ತಮವಾದ ರೀತಿಯಲ್ಲಿ ಬದುಕಲು ಸಂಕಲ್ಪ ಮಾಡುವುದು ಸಹಜವಾಗಿದೆ. ಇದು ಜೀವನದ ಆರ್ಥಿಕ ಯೋಜನೆಗಳಿಗೂ ಅನ್ವಯಿಸುತ್ತದೆ.
ಇಷ್ಟು ವರ್ಷ ಅಶಿಸ್ತಿನ ಹಣಕಾಸು ಜೀವನದ ಅನೇಕ ತಪ್ಪುಗಳಿಂದ ಏಳಿಗೆ ಹೊಂದಲು ಕಷ್ಟವಾಗಿರಬಹುದು ಅಲ್ಲವೆ? ಪದೆ ಪದೆ ಅವೇ ತಪ್ಪುಗಳನ್ನು ಮಾಡುತ್ತ ಕೊರಗಿದ್ದು ಅದೆಷ್ಟೊ ಬಾರಿ.. ಹೀಗಾಗಿ ಈ ನವ ಮನ್ವಂತರದ ಕಾಲದಲ್ಲಿ ಕೆಲ ಹೊಸ ಹಣಕಾಸು ಅಭ್ಯಾಸಗಳನ್ನು ರೂಢಿಸಿಕೊಳ್ಳಲು ಗಟ್ಟಿ ಸಂಕಲ್ಪ ಮಾಡೋಣ. ಬರುವ ವರ್ಷ ಮಾತ್ರವಲ್ಲದೆ ಸಂಪೂರ್ಣ ಜೀವನಕ್ಕೆ ಒಳ್ಳೆಯದಾಗುವಂಥ ಹಣಕಾಸು ಶಿಸ್ತನ್ನು ಅಳವಡಿಸಿಕೊಳ್ಳೋಣ. ಅಂಥ ಯಾವೆಲ್ಲ ಹಣಕಾಸು ಶಿಸ್ತಿನ ಪಾಠಗಳನ್ನು ಈ ಹೊಸ ವರ್ಷಾರಂಭದಲ್ಲಿ ಕಲಿತು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂಬುದನ್ನು ಈ ಅಂಕಣದಲ್ಲಿ ತಿಳಿಸಲಾಗಿದೆ. ನೀವೂ ತಿಳಿದುಕೊಂಡು ಹೊಸ ವರ್ಷಕ್ಕೆ ಹೊಸ ಸಂಕಲ್ಪಗಳನ್ನು ಮಾಡಿ ಆ ನಿಟ್ಟಿನಲ್ಲಿ ದೃಢವಾಗಿ ನಡೆಯಲು ಯತ್ನಿಸಿ.
ನಿಮ್ಮ ಬಜೆಟ್ನ ಇತಿಮಿತಿಗಳನ್ನು ಅರಿತುಕೊಳ್ಳಿ
ನೀವು ಎಷ್ಟು ಗಳಿಸುತ್ತೀರಿ ಎಂಬುದರ ಮೇಲೆ ನೀವೆಷ್ಟು ಶ್ರೀಮಂತರು ಎಂಬುದನ್ನು ನಿರ್ಧರಿಸಲಾಗದು. ಆದರೆ ಗಳಿಸಿದ್ದರಲ್ಲಿ ನೀವೆಷ್ಟು ಉಳಿಸುತ್ತೀರಿ ಎಂಬುದರ ಮೇಲೆ ನಿಮ್ಮ ಶ್ರೀಮಂತಿಕೆ ಅವಲಂಬಿಸಿದೆ ಎಂದು ಹಿರಿಯರು ಹೇಳುವ ಮಾತು ಸಾರ್ವಕಾಲಿಕ ಸತ್ಯವಾಗಿದೆ. ಹೀಗಾಗಿ ಜೀವನದಲ್ಲಿ ಆರ್ಥಿಕ ಶಿಸ್ತು ಪಾಲಿಸದವರು ಯಾವಾಗ ಬೇಕಾದರೂ ಹಣಕಾಸಿನ ತೀವ್ರ ಮುಗ್ಗಟ್ಟು ಎದುರಿಸಬೇಕಾಗಿ ಬರಬಹುದು. ಹೀಗಾಗಿ ನಮ್ಮ ಗಳಿಕೆಗಿಂತ ಖರ್ಚುಗಳು ಹೆಚ್ಚಾಗದಂತೆ ನೋಡಿಕೊಳ್ಳುವುದು ಅಗತ್ಯವಾಗಿದೆ.
ಆರ್ಥಿಕ ಶಿಸ್ತಿಗಾಗಿ ಮಾಸಿಕ ಅಥವಾ ವಾರ್ಷಿಕ ಬಜೆಟ್ ತಯಾರಿಸಿ. ಎಲ್ಲ ಅಗತ್ಯ ಖರ್ಚುಗಳ ಬಗ್ಗೆ ಅಂದಾಜು ಹಾಕಿಕೊಳ್ಳಿ. ವರ್ಷದುದ್ದಕ್ಕೂ ಈ ಬಜೆಟ್ನ ಪರಿಧಿಯೊಳಗೆಯೇ ನಿಮ್ಮ ಖರ್ಚು ವೆಚ್ಚಗಳು ಇರುವಂತೆ ಪ್ರಯತ್ನಿಸಿ. ಯಾವೆಲ್ಲ ಅನವಶ್ಯಕ ಖರ್ಚುಗಳನ್ನು ನಿಲ್ಲಿಸಬಹುದು ಎಂಬುದನ್ನು ಖಚಿತವಾಗಿ ನಿರ್ಧರಿಸಿ ಅದರಂತೆ ನಡೆದುಕೊಳ್ಳಿ. ನಿಮ್ಮ ಆದಾಯದಲ್ಲಿ ಶೇ.70 ರಷ್ಟು ಖರ್ಚು ಹಾಗೂ ಇನ್ನುಳಿದ ಶೇ.30 ರಷ್ಟು ಹಣವನ್ನು ಉಳಿತಾಯಕ್ಕೆ ಮೀಸಲಿಡಿ. ತಿಂಗಳ ಆರಂಭದಲ್ಲಿಯೇ ಉಳಿತಾಯದ ಹಣವನ್ನು ತಕ್ಷಣ ಮರಳಿ ತೆಗೆಯಲಾಗದಂತೆ ಸೂಕ್ತ ಹೂಡಿಕೆ ಯೋಜನೆಗೆ ಹಾಕಿಬಿಡಿ.
ಸಾಲಗಳನ್ನು ಸರಿಯಾದ ಸಮಯಕ್ಕೆ ತೀರಿಸಿ
ಜೀವನದಲ್ಲಿನ ಕೆಲ ಗುರಿಗಳನ್ನು ಸಾಧಿಸಲು ಹಣಕಾಸು ಮುಗ್ಗಟ್ಟು ಇರುವಾಗ ಸಾಲದ ಹಣದಿಂದ ಆ ಗುರಿಯನ್ನು ಸಾಧಿಸಲು ಸಾಧ್ಯವಾಗುತ್ತದೆ. ಆದರೆ ಪಡೆದ ಸಾಲವನ್ನು ಸೂಕ್ತವಾಗಿ ನಿಭಾಯಿಸಿದಾಗ ಮಾತ್ರ ಎಲ್ಲವೂ ಸುಸೂತ್ರಬಾಗಿರಲು ಸಾಧ್ಯ ಎಂಬುದು ಗೊತ್ತಿರಲಿ. ಪಡೆದ ಸಾಲದ ಕಂತುಗಳನ್ನು ಸಮಯಕ್ಕೆ ಸರಿಯಾಗಿ ಪಾವತಿಸುವುದರಿಂದ ನಿಮ್ಮ ಕ್ರೆಡಿಟ್ ಸ್ಕೋರ್ ಸುಧಾರಿಸುತ್ತದೆ ಹಾಗೂ ಭವಿಷ್ಯದಲ್ಲಿ ಮತ್ತೊಂದು ಸಾಲವನ್ನು ಸುಲಭವಾಗಿ ಪಡೆಯಲು ಸಾಧ್ಯವಾಗುತ್ತದೆ. ನಿಮ್ಮ ಲೋನ್ ಹಿಸ್ಟರಿ ಆಧರಿಸಿಯೇ ಸಂಸ್ಥೆಗಳು ನಿಮಗೆ ಸಾಲ ನೀಡುತ್ತವೆ. ಸಾಲ ಪಡೆದು ಸರಿಯಾದ ಸಮಯಕ್ಕೆ ಕಟ್ಟಲು ಆಗುತ್ತಿಲ್ಲವೆಂದಾದರೆ ಯಾವುದಾದರೂ ದೊಡ್ಡ ಮೊತ್ತ ಕೈಸೇರಿದಾಗ ಸಾಲವನ್ನು ಸಂಪೂರ್ಣ ಮರುಪಾವತಿಸಿ ಸಾಲದ ಖಾತೆಯನ್ನು ಕ್ಲೋಸ್ ಮಾಡುವುದೇ ಜಾಣತನ. ಇಲ್ಲವಾದರೆ ಒಂದು ಕಡೆ ಸಾಲದ ಮೊತ್ತಕ್ಕೆ ಬಡ್ಡಿ ಬೆಳೆಯುತ್ತ ಹೋಗುತ್ತದೆ. ಅದೇ ಕಾಲಕ್ಕೆ ನಿಮ್ಮ ಕ್ರೆಡಿಟ್ ರೇಟಿಂಗ್ ಸಹ ಕುಸಿಯಲಾರಂಭಿಸುತ್ತದೆ.
ಶಿಸ್ತುಬದ್ಧವಾಗಿ ಹೂಡಿಕೆ ಮಾಡಿ
ಹೂಡಿಕೆ ಎಂಬುದು ಒಮ್ಮೆ ಮಾಡಿ ಸುಮ್ಮನಾಗುವ ಪ್ರಕ್ರಿಯೆಯಲ್ಲ. ಬದಲಾಗಿ ಇದೊಂದು ನಿರಂತರ ಕ್ರಿಯೆಯಾಗಿದ್ದು, ಮಾರುಕಟ್ಟೆಗಳ ಸ್ಥಿತಿಗತಿಗಳನ್ನು ಆಧರಿಸಿ ಹೊಸ ಹೂಡಿಕೆಗಳನ್ನು ಮಾಡುತ್ತ ಹೆಚ್ಚೆಚ್ಚು ಆದಾಯ ಗಳಿಸುವತ್ತ ಗಮನ ಹರಿಸಬೇಕಾಗುತ್ತದೆ. ನಿಯಮಿತವಾಗಿ ಹೂಡಿಕೆ ಮಾಡಿದಲ್ಲಿ ನಿಧಾನವಾಗಿ ಹೂಡಿಕೆಯ ಮೊತ್ತವನ್ನು ಹೆಚ್ಚಿಸಿಕೊಳ್ಳಬಹುದು. ನಿಮ್ಮ ರಿಸ್ಕ್ ತಡೆಯುವ ಸಾಮರ್ಥ್ಯ ಹಾಗೂ ಹೂಡಿಕೆಯ ಅವಧಿಯನ್ನು ಆಧರಿಸಿ ಸೂಕ್ತ ಪ್ರತಿಫಲವನ್ನು ಪಡೆದುಕೊಳ್ಳಬಹುದು. ಮ್ಯೂಚುವಲ್ ಫಂಡ್ನ ಸಿಪ್ ಯೋಜನೆ ಹಾಗೂ ರೆಕರಿಂಗ್ ಡಿಪಾಸಿಟ್ (ಆರ್ಡಿ) ಯೋಜನೆಗಳ ಮೂಲಕ ಮಾಸಿಕ ಸಣ್ಣ ಮೊತ್ತದ ಉಳಿತಾಯ ಆರಂಭಿಸಬಹುದು.
ತೆರಿಗೆ ಉಳಿತಾಯ ಯೋಜನೆ
ತೆರಿಗೆ ನಿರ್ವಹಣೆಯು ಹಣಕಾಸು ನಿರ್ವಹಣೆಯ ಬಹು ಮುಖ್ಯ ಅಂಗವಾಗಿದೆ. ತೆರಿಗೆ ಪಾವತಿಯ ಕೊನೆಯ ದಿನಾಂಕದವರೆಗೂ ಸುಮ್ಮನಿದ್ದು ಕೊನೆಯ ಗಳಿಗೆಯಲ್ಲಿ ಗಡಿಬಿಡಿ ಮಾಡುವ ಚಾಳಿ ಇದ್ದರೆ ಈ ವರ್ಷದಿಂದ ಆ ಚಾಳಿಯನ್ನು ಬಿಟ್ಟು ಬಿಡಿ. ಜನೆವರಿ, ಫೆಬ್ರುವರಿ ಹಾಗೂ ಮಾರ್ಚ್ ತಿಂಗಳಲ್ಲಿ ಮಾತ್ರ ತೆರಿಗೆ ಉಳಿತಾಯದ ಬಗ್ಗೆ ಚಿಂತಿಸುವುದನ್ನು ಬಿಟ್ಟು ಇಡೀ ವರ್ಷ ಅದಕ್ಕಾಗಿ ಸೂಕ್ತ ಯೋಜನೆ ರೂಪಿಸಿ. ಹೀಗೆ ಮಾಡಿದಲ್ಲಿ ಅತ್ಯುತ್ತಮ ತೆರಿಗೆ ಉಳಿತಾಯದ ಯೋಜನೆಗಳ ಬಗ್ಗೆ ಸಂಶೋಧನೆ ನಡೆಸಲು ನಿಮಗೆ ಸಾಕಷ್ಟು ಸಮಯಾವಕಾಶ ಸಿಗುತ್ತದೆ. ಜೊತೆಗೆ ಕೊನೆಯ ಕ್ಷಣದ ಆತಂಕಗಳಿಂದ ಪಾರಾಗಬಹುದಾಗಿದೆ.
ಹಣಕಾಸು ಗುರಿ ಇರಲಿ
ಸುಮ್ಮನೆ ಯಾವುದೋ ಯೋಜನೆಗಳಲ್ಲಿ ಹಣ ಹೂಡುವುದಕ್ಕಿಂತ ನಿರ್ದಿಷ್ಟವಾದ ಗುರಿಯನ್ನಿಟ್ಟುಕೊಂಡು ಉಳಿತಾಯ ಆರಂಭಿಸಿ. ಇಂಥ ದಿನಾಂಕದಂದು ಇಷ್ಟು ಹಣವನ್ನು ಉಳಿಸುತ್ತೇನೆ ಎಂಬ ಸ್ಪಷ್ಟ ಗುರಿಯನ್ನಿಟ್ಟುಕೊಂಡು ಉಳಿತಾಯ ಮಾಡಲಾರಂಭಿಸುವುದು ಸೂಕ್ತ. ಹೀಗೆ ಮಾಡಿದಾಗ ಯಾವ ಹೂಡಿಕೆ ಯೋಜನೆಯಲ್ಲಿ ಹಣ ಹೂಡಬೇಕೆಂಬ ಬಗ್ಗೆ ನಿಖರತೆ ಇರುತ್ತದೆ. ಜೊತೆಗೆ ಯಾವುದೋ ಗುರಿಯ ಸಾಧನೆಯ ಬೆನ್ನತ್ತಿದಾಗ ಅದರ ಯಶಸ್ಸಿನ ನಂತರ ಸಿಗುವ ಆನಂದದ ಮುಂದೆ ಯಾವುದೂ ಸಾಟಿ ಇರುವುದಿಲ್ಲ. ಹಾಗೆಯೇ ಹಣಕಾಸು ಗುರಿಯನ್ನು ಸಾಧಿಸಿದಾಗಲೂ ಒಂದು ನಿರಾಳ ಹಾಗೂ ನೆಮ್ಮದಿಯ ಭಾವನೆ ನಿಮ್ಮದಾಗುವುದು ಖಂಡಿತ.