ನೌಕರಿಯಲ್ಲಿ ಬಡ್ತಿ ಸಿಗದಿರಲು ಕಾರಣಗಳೇನು ಗೊತ್ತೆ?
ಕೆಲವೊಮ್ಮೆ ಕಂಪನಿಗಳು ಹಲವಾರು ಉದ್ಯೋಗಿಗಳಿಗೆ ಸಂಬಳ ಏರಿಕೆ ಹಾಗೂ ಹುದ್ದೆಯ ಬಡ್ತಿ ಸೌಲಭ್ಯಗಳಿಗೆ ಕತ್ತರಿ ಹಾಕುತ್ತವೆ. ಬೇರೆಯವರಿಗೆ ಬಡ್ತಿ ದೊರಕಿದರೂ ಕೆಲವರಿಗೆ ಮಾತ್ರ ಇದು ಸಿಗುವುದೇ ಇಲ್ಲ.
ಕೆಲವೊಮ್ಮೆ ಕಂಪನಿಗಳು ಹಲವಾರು ಉದ್ಯೋಗಿಗಳಿಗೆ ಸಂಬಳ ಏರಿಕೆ ಹಾಗೂ ಹುದ್ದೆಯ ಬಡ್ತಿ ಸೌಲಭ್ಯಗಳಿಗೆ ಕತ್ತರಿ ಹಾಕುತ್ತವೆ. ಬೇರೆಯವರಿಗೆ ಬಡ್ತಿ ದೊರಕಿದರೂ ಕೆಲವರಿಗೆ ಮಾತ್ರ ಇದು ಸಿಗುವುದೇ ಇಲ್ಲ. ಆದರೆ ಹೀಗೆ ಆದಾಗ ಉದ್ಯೋಗಿಯು ಸುಮ್ಮನೆ ಕುಳಿತುಕೊಳ್ಳಕೂಡದು. ತನಗೆ ಯಾಕೆ ಸಂಬಳ ಹೆಚ್ಚಳ ಹಾಗೂ ಬಡ್ತಿ ಸಿಕ್ಕಿಲ್ಲ ಎಂಬುದರ ಪರಿಶೀಲನೆಗೆ ಮುಂದಾಗಬೇಕು. ಆದರೆ ಅದಕ್ಕೂ ಮುನ್ನ ಯಾವೆಲ್ಲ ಕಾರಣಗಳಿಗಾಗಿ ಈ ಸೌಲಭ್ಯಗಳನ್ನು ಕಂಪನಿಗಳು ಕೆಲವೊಮ್ಮೆ ನೀಡುವುದಿಲ್ಲ ಎಂಬುದನ್ನು ತಿಳಿಯುವುದು ಸೂಕ್ತ. ಅಂಥ ಕಾರಣಗಳನ್ನು ಇಲ್ಲಿ ಪಟ್ಟಿ ಮಾಡಿದ್ದು, ಆ ಸಂದರ್ಭಗಳಲ್ಲಿ ಏನು ಮಾಡಬೇಕೆಂಬುದನ್ನೂ ಇಲ್ಲಿ ತಿಳಿಸಿದ್ದೇವೆ. ನೀವೂ ಬಡ್ತಿ ವಂಚಿತ ನತದೃಷ್ಟರಾಗಿದ್ದಲ್ಲಿ ಇದನ್ನು ಓದಿ ಪ್ರಯತ್ನಕ್ಕೆ ಮುಂದಾಗಿ.
1. ನೀವು ಕೇಳಲಿಲ್ಲ, ಅವರು ಕೊಡಲಿಲ್ಲ !
ನೀವು ಕಂಪನಿಯಲ್ಲಿ ಅತ್ಯಂತ ಶ್ರದ್ಧೆ ಹಾಗೂ ಪರಿಶ್ರಮದಿಂದ ಕೆಲಸ ಮಾಡುವವರಲ್ಲಿ ಒಬ್ಬರಾಗಿರುವಿರಿ. ನೀವು ನಿಮ್ಮ ಕೆಲಸದಿಂದ ಕಂಪನಿಗೆ ಸಾಕಷ್ಟು ಲಾಭ ಮಾಡಿಕೊಟ್ಟಿರುವಿರಿ ಎಂಬುದನ್ನು ಸಹ ಒಪ್ಪಿಕೊಳ್ಳೋಣ. ಆದರೆ ಇದನ್ನೆಲ್ಲ ಕಂಪನಿ ಅಧಿಕಾರಿಗಳು ಗಮನದಲ್ಲಿಟ್ಟುಕೊಂಡು ನಿಮಗೆ ವೇತನ ಹೆಚ್ಚಳ ಹಾಗೂ ಬಡ್ತಿ ನೀಡುತ್ತಾರೆ ಎಂಬುದು ನಿಮ್ಮ ನಿರೀಕ್ಷೆಯಾಗಿದ್ದರೆ ಅದು ತಪ್ಪಾದೀತು. ಎಲ್ಲಿಯವರೆಗೆ ನೀವು ಕೇಳುವುದಿಲ್ಲವೋ ಅಲ್ಲಿಯವರೆಗೆ ನಿಮಗೆ ಅದು ಸಿಗಲಾರದು. ನೀವು ಸಂಬಳ ಹೆಚ್ಚಳ ಹಾಗೂ ಬಡ್ತಿ ಡಿಮ್ಯಾಂಡ್ ಮಾಡಿಲ್ಲವೆಂದಾದರೆ ನೀವು ಈಗಿರುವ ಹುದ್ದೆ ಹಾಗೂ ಪಡೆಯುತ್ತಿರುವ ಸಂಬಳದಿಂದ ಖುಷಿಯಾಗಿರುವಿರಿ ಎಂದೇ ಕಂಪನಿ ತಿಳಿದುಕೊಳ್ಳುತ್ತದೆ. ಅಷ್ಟೇ ಏಕೆ, ನೀವು ಬಡ್ತಿ ಕೇಳಿಲ್ಲವೆಂದಾದರೆ ಬಡ್ತಿ ಪಡೆಯಬಹುದಾದ ಮಟ್ಟಕ್ಕೆ ನೀವು ಕೆಲಸವನ್ನೇ ಮಾಡಿರಲಿಕ್ಕಿಲ್ಲ ಎಂದೂ ಕಂಪನಿ ಭಾವಿಸುತ್ತದೆ. ಹೀಗಾಗಿ ನೀವು ಕಂಪನಿಗೆ ಸಲ್ಲಿಸುತ್ತಿರುವ ವಿಶೇಷ ಸೇವೆಗಳ ಬಗ್ಗೆ ಬಾಸ್ಗೆ ತಿಳಿಸುತ್ತ ಇರಿ ಹಾಗೂ ನೀವು ವೇತನ ಹೆಚ್ಚಳ ಹಾಗೂ ಬಡ್ತಿ ಬಯಸುತ್ತಿರುವುದನ್ನು ನೇರವಾಗಿ ಹೇಳಿ.
2. ಸಂಬಳ ಹೆಚ್ಚಳಕ್ಕೆ ನೀವು ಅರ್ಹರಾ?
ಮನೆ ಕೊಳ್ಳಲು ಅಥವಾ ಕುಟುಂಬದಲ್ಲಿನ ಯಾವುದೋ ಹಣಕಾಸು ಸಮಸ್ಯೆ ನಿಭಾಯಿಸಲು ವೇತನ ಹೆಚ್ಚಳವನ್ನು ನೀವು ಬಯಸುತ್ತಿದ್ದರೆ ಅದು ತಪ್ಪಾದೀತು. ವೇತನ ಹೆಚ್ಚಳ ಹಾಗೂ ಬಡ್ತಿ ಇವು ಸಂಪೂರ್ಣ ವ್ಯವಹಾರಿಕ ಪ್ರಕ್ರಿಯೆಗಳಾಗಿದ್ದು ನಿಮ್ಮ ಉತ್ತಮ ಪ್ರದರ್ಶನ ಹಾಗೂ ಇನ್ನೂ ಕೆಲ ವಾಸ್ತವಿಕ ಅಂಶಗಳ ಮೇಲೆ ಆಧರಿತವಾಗಿರುತ್ತವೆ. ಹೀಗಾಗಿ ಬಡ್ತಿ ಕೇಳುವ ಮುನ್ನ ಕಂಪನಿಗೆ ನಿಮ್ಮಿಂದಾದ ಲಾಭ ಅಥವಾ ಅನುಕೂಲಗಳ ಬಗ್ಗೆ ಸೂಕ್ತ ದಾಖಲೆಗಳನ್ನು ಸಂಗ್ರಹಿಸಿ ಅವುಗಳ ಆಧಾರದಲ್ಲಿ ಮಾತನಾಡಿ. ನೀವು ಹೆಚ್ಚಳಕ್ಕೆ ಅರ್ಹರಾಗಿರುವುದನ್ನು ಸಾಬೀತು ಪಡಿಸದೇ ಇದ್ದಲ್ಲಿ ಬಡ್ತಿ ಸಿಗಲಾರದು.
3. ನೀವು ಇತರರೊಂದಿಗೆ ಸರಿಯಾಗಿ ಬೆರೆಯುತ್ತಿಲ್ಲವೆ?
ಕೆಲಸದ ಸ್ಥಳದಲ್ಲಿ ಸದಾ ಕಿರಿಕಿರಿ ಮಾಡುವ ಸಹೋದ್ಯೋಗಿಯನ್ನು ಯಾರೂ ಬಯಸುವುದಿಲ್ಲ. ಆಗಾಗ ಇತರರೊಂದಿಗೆ ವಾಗ್ವಾದ ನಡೆಸುವುದು, ಪದೆ ಪದೆ ಯಾವುದಾದರೂ ವಿಷಯಕ್ಕೆ ದೂರು ನೀಡುವುದು ಮುಂತಾದುವುಗಳನ್ನು ಮಾಡುತ್ತಿದ್ದರೆ ಅಂಥವರು ಒಂದು ರೀತಿಯ ಅಪ್ರಿಯ ವ್ಯಕ್ತಿಗಳಾಗಿ ಬಿಡುತ್ತಾರೆ. ವೇತನ ಹೆಚ್ಚಳ ಹಾಗೂ ಬಡ್ತಿ ನೀಡುವಿಕೆ ಸಂದರ್ಭದಲ್ಲಿ ಸಹಜವಾಗಿಯೇ ಇಂಥವರು ನಿರ್ಲಕ್ಷಿಸಲ್ಪಡುತ್ತಾರೆ. ನಿಮಗೆ ಬಡ್ತಿ ಬೇಕಿದ್ದಲ್ಲಿ ಎಲ್ಲರೊಂದಿಗೆ ಉತ್ತಮವಾಗಿ ಬೆರೆತು ಉತ್ತಮ ವ್ಯಕ್ತಿಯಾಗಿ ಗುರುತಿಸಿಕೊಳ್ಳಿ.
4. ಎಲ್ಲವನ್ನೂ ನೀವೊಬ್ಬರೆ ಮಾಡುವುದು
ಎಲ್ಲ ಕೆಲಸವನ್ನು ಒಬ್ಬರೇ ಮಾಡುವುದಕ್ಕಿಂತ ತಂಡವಾಗಿ ಕೆಲಸ ಮಾಡುವವರಿಗೆ ಬೇಗನೆ ಬಡ್ತಿ ಸಿಗುತ್ತವೆ. ಆದರೆ ತಂಡದಲ್ಲಿದ್ದರೂ ಯಶಸ್ಸನ್ನು ಎಲ್ಲರೊಂದಿಗೆ ಹಂಚಿಕೊಳ್ಳದಿರುವುದು ಅಥವಾ ಚಿಕ್ಕ ಪುಟ್ಟ ವಿಷಯಗಳಿಗೆ ಬೇರೆಯವರನ್ನು ಹೊಣೆ ಮಾಡುವುದು ಮುಂತಾದ ಕಾರಣಗಳಿಂದ ನಿಮಗೆ ಬಡ್ತಿ ದೊರಕದಿರಬಹುದು. ತಂಡದಲ್ಲಿದ್ದರೂ ತಂಡದ ಎಲ್ಲ ಯಶಸ್ಸನ್ನು ಒಬ್ಬನೇ ಕ್ರೆಡಿಟ್ ಪಡೆಯಲು ಯತ್ನಿಸುವುದರಿಂದ ಯಾವುದೇ ಪ್ರಯೋಜನವಿಲ್ಲ. ದೀರ್ಘಾವಧಿಯಲ್ಲಿ ನಿಮ್ಮ ವೇತನ ಹೆಚ್ಚಳ ಹಾಗೂ ಬಡ್ತಿ ಸೌಲಭ್ಯಗಳಿಗೆ ಕತ್ತರಿ ಬೀಳುವ ಸಂಭವಗಳೇ ಜಾಸ್ತಿ.
5. ಅತಿಯಾದ ನಿರೀಕ್ಷೆ ಸಲ್ಲದು
ನಿಮ್ಮ ಕಾರ್ಯಕ್ಷಮತೆಯನ್ನು ನೀವು ತೀರಾ ಉತ್ಪ್ರೇಕ್ಷೆಯಾಗಿ ತೆಗೆದುಕೊಳ್ಳುವುದು ಸಹ ಕೆಲವೊಮ್ಮೆ ಬಡ್ತಿ ತಡೆಗೆ ಕಾರಣವಾಗುತ್ತದೆ. ಕಂಪನಿಗೆ ಏನೋ ದೊಡ್ಡ ಲಾಭ ಮಾಡಿರುವೆ ಎಂದು ನೀವಂದುಕೊಂಡಿದ್ದರೂ ಬಾಸ್ಗೆ ಹಾಗೆ ಅನಿಸದಿರಬಹುದು. ಒಟ್ಟಾರೆ ಮಾರುಕಟ್ಟೆ ಸ್ಥಿತಿಗತಿ ಹಾಗೂ ಕಂಪನಿಯ ಕಾರ್ಯನಿರ್ವಹಣೆ ಕುರಿತಾಗಿ ನಿಮಗೆ ಸರಿಯಾದ ಮಾಹಿತಿ ಇಲ್ಲದಿರುವಾಗಲೂ ಹೀಗಾಗುತ್ತದೆ. ನೀವು ಶೇ.15 ರಷ್ಟು ಸಂಬಳ ಹೆಚ್ಚಳ ಬಯಸುತ್ತಿರಬಹುದು. ಆದರೆ ಒಟ್ಟಾರೆ ನಿಮ್ಮ ಕಂಪನಿಯ ಉತ್ಪಾದನಾ ವಲಯವು ಆ ನಿರ್ದಿಷ್ಟ ವರ್ಷದಲ್ಲಿ ತೀರಾ ಕಳಪೆ ಸಾಧನೆ ಮಾಡಿದ್ದಲ್ಲಿ ನಿಮಗೆ ಅಷ್ಟೊಂದು ಹೆಚ್ಚಳ ಸಿಗಲಾರದು. ನಿಮ್ಮ ನಿರೀಕ್ಷೆಗಳು ಆದಷ್ಟೂ ವಾಸ್ತವಕ್ಕೆ ಹತ್ತಿರವಾಗಿರಬೇಕು.
6. ಪದೇ ಪದೇ ತಪ್ಪು ಮಾಡುತ್ತಿರುವುದು
ಶ್ರದ್ಧೆ, ನಿಷ್ಠೆ, ಪ್ರಾಮಾಣಿಕತೆ ಹಾಗೂ ನಿಖರವಾದ ಕಾರ್ಯಕ್ಷಮತೆಗಳು ಓರ್ವ ಉದ್ಯೋಗಿಯಲ್ಲಿ ಇರಲೇಬೇಕಾದ ಮೂಲ ಅಂಶಗಳಾಗಿವೆ. ಪ್ರಾಜೆಕ್ಟ್ ವರದಿ ತಯಾರಿಸುವಾಗ ಆಗಾಗ ತಪ್ಪುಗಳನ್ನು ಮಾಡುವುದು, ಅದರಿಂದ ಕಂಪನಿಗೆ ನಷ್ಟವಾಗುವುದು ಅಥವಾ ಮುಖಭಂಗವಾಗುವುದು ಮುಂತಾದ ಘಟನೆಗಳಿಂದ ನಿಮ್ಮ ವೇತನ ಹೆಚ್ಚಳಕ್ಕೆ ತಡೆ ಉಂಟಾಗಬಹುದು. ಇಂಥ ಸಂದರ್ಭಗಳಲ್ಲಿ ನಿಮ್ಮ ನೌಕರಿ ಉಳಿದರೆ ಅದೇ ಹೆಚ್ಚು ಎನ್ನುವಂತಾಗಬಹುದು, ಹೀಗಾಗಿ ಗಮನವಿಟ್ಟು ನಿಖರವಾಗಿ ಕೆಲಸ ಮಾಡಬೇಕು.
7. ಅರ್ಹತೆಗಿಂತ ಹೆಚ್ಚು ಸಂಬಳ ಪಡೆಯುತ್ತಿದ್ದರೆ?
ನಿಮಗೆ ವೇತನ ಹೆಚ್ಚಳ ಅಥವಾ ಬಡ್ತಿ ಸಿಗದಿದ್ದಲ್ಲಿ ಕಂಪನಿಯ ಪ್ರಾಮುಖ್ಯತೆಯ ಲಿಸ್ಟ್ನಲ್ಲಿ ನಿಮ್ಮ ಸ್ಥಾನ ಎಲ್ಲಿದೆ ಎಂಬುದನ್ನು ಒಮ್ಮೆ ಪರಿಶೀಲಿಸಿ. ನೀವು ಈಗಾಗಲೇ ನಿಮ್ಮದೇ ಹುದ್ದೆಯ ಬೇರೆ ಉದ್ಯೋಗಿಗಳಿಗಿಂತ ಹೆಚ್ಚು ಸಂಬಳ ಪಡೆಯುತ್ತಿದ್ದಲ್ಲಿ ಅಥವಾ ನಿಮ್ಮ ಹುದ್ದೆ ಅರ್ಹತೆಗಿಂತಲೂ ಹೆಚ್ಚಾಗಿದ್ದರೆ ಸಹಜವಾಗಿಯೇ ಕಂಪನಿ ನಿಮ್ಮ ಸೌಲಭ್ಯಗಳನ್ನು ಕೆಲ ವರ್ಷಗಳವರೆಗೆ ತಡೆಹಿಡಿಯಬಹುದು. ಇನ್ನು ಕೆಲ ಬಾರಿ ನಿಮ್ಮ ಕಾರ್ಯಕ್ಷಮತೆಯನ್ನು ಆಧರಿಸಿ ನಿಮಗೆ ಸಂಬಳ ಎಂಬ ಆಧಾರದಲ್ಲಿ ನೇಮಕವಾಗಿದ್ದರೆ ಸಹ ಬಡ್ತಿ ಸಿಗಲಾರವು. ಇತರರಿಗಿಂತ ತೀರಾ ಉನ್ನತ ಮಟ್ಟದ ಕಾರ್ಯಕ್ಷಮತೆಯನ್ನು ನೀವು ತೋರಿಸಿದಲ್ಲಿ ಬಡ್ತಿ ಸಿಗಬಹುದು.
8. ಎಷ್ಟು ಬೇಕೋ ಅಷ್ಟೆ ಕೆಲಸ ಮಾಡುವುದು
ಸದ್ಯಕ್ಕೆ ಎಷ್ಟು ಬೇಕೋ ಅಷ್ಟು ಮಾತ್ರ ಕೆಲಸ ಮಾಡುವುದು ಒಬ್ಬ ಕಳಪೆ ಉದ್ಯೋಗಿಯ ಲಕ್ಷಣವಾಗಿದೆ. ನಿಮಗೆ ವಹಿಸಿದ ಕೆಲಸವನ್ನೂ ಮೀರಿ ಮತ್ತಷ್ಟು ಜವಾಬ್ದಾರಿಗಳನ್ನು ಹೊತ್ತುಕೊಂಡು ಶ್ರದ್ಧೆಯಿಂದ ನಿಭಾಯಿಸಿದಲ್ಲಿ ಮಾತ್ರ ಕಂಪನಿ ನಿಮ್ಮತ್ತ ನೋಡುತ್ತದೆ. ಒಂದು ವೇಳೆ ಕಳೆದ ಕೆಲ ವರ್ಷಗಳಿಂದ ನಿಮಗೆ ವೇತನ ಹೆಚ್ಚಳ ಹಾಗೂ ಬಡ್ತಿ ಸಿಕ್ಕಿಲ್ಲವೆಂದಾದರೆ ಮೊದಲು ನಿಮ್ಮ ಕಾರ್ಯಕ್ಷಮತೆಯನ್ನು ಪರೀಕ್ಷಿಸಿಕೊಳ್ಳಿ.
9. ಹೊಸ ಕೌಶಲ್ಯಗಳನ್ನು ಕಲಿಯದಿರುವುದು
ಹೊಸ ಕೌಶಲಗಳನ್ನು ಕಲಿತು ಕಂಪನಿಗೆ ಲಾಭ ಮಾಡಿಕೊಡುವ ಉದ್ಯೋಗಿ ನೀವಾಗಿದ್ದಲ್ಲಿ ನಿಮಗೆ ಬಡ್ತಿ ಸಿಗುವ ಸಾಧ್ಯತೆಗಳು ಹೆಚ್ಚಾಗುತ್ತವೆ. ಹಾಗೆಯೇ ಉದ್ಯಮ ವಲಯದ ಬದಲಾವಣೆಗಳು, ತಾಂತ್ರಿಕತೆ ಇವುಗಳಲ್ಲಿ ಪಳಗಿದಲ್ಲಿ ಮತ್ತಷ್ಟು ಅನುಕೂಲವಾಗುತ್ತದೆ. ಆದರೆ ನೀವು ಹೊಸ ಬದಲಾವಣೆಗಳಿಗೆ ತೆರೆದುಕೊಳ್ಳದಿದ್ದಲ್ಲಿ ಬಡ್ತಿ ಸಿಗುವುದು ಕಷ್ಟ. ಬಡ್ತಿ ಸಿಗುವುದು ಬಿಡಿ, ಇರುವ ಕೆಲಸವೂ ಹೋಗಬಹುದು.
10. ಬರೀ ಸಮಸ್ಯೆಗಳನ್ನು ಸೃಷ್ಟಿಸುವ ಉದ್ಯೋಗಿಯಾದರೆ ಕಷ್ಟ
ಆಗಾಗ ಯಾವುದಾದರೂ ದೂರು ಅಥವಾ ಸಮಸ್ಯೆಗಳನ್ನು ಹೊತ್ತುಕೊಂಡು ಬಾಸ್ ಬಳಿಗೆ ಹೋಗುವ ಉದ್ಯೋಗಿ ನೀವಾಗಿರುವಿರಾ? ನಿಮ್ಮ ಕೆಳಹಂತದವರು ಯಾವುದಾದರೂ ಸಮಸ್ಯೆ ಹೊತ್ತು ನಿಮ್ಮಲ್ಲಿಗೆ ಬಂದಾಗ ಅದನ್ನು ಪರಿಹರಿಸುವುದು ನಿಮಗೆ ಸಾಧ್ಯವಾಗುವುದಿಲ್ಲವೆ? ಈ ಪ್ರಶ್ನೆಗಳಿಗೆ ನಿಮ್ಮ ಉತ್ತರ 'ಹೌದು' ಎಂದಾಗಿದ್ದಲ್ಲಿ ನಿಮಗೆ ವೇತನ ಹೆಚ್ಚಳ ಹಾಗೂ ಬಡ್ತಿ ದೊರಕುವ ಸಾಧ್ಯತೆಗಳು ಕಡಿಮೆ ಎಂದೇ ಹೇಳಬೇಕು. ಉನ್ನತ ಹುದ್ದೆಯಲ್ಲಿರುವವರು ಎಂಥದೇ ಸಮಸ್ಯೆ ಎದುರಾದರೂ ಅದನ್ನು ತಕ್ಷಣ ಪರಿಹರಿಸುವ ಸಾಮರ್ಥ್ಯ ಹೊಂದಿರಲೇಬೇಕು. ನಿಮಗೆ ಆ ಚಾಲಾಕಿತನ ಇದ್ದಲ್ಲಿ ನಿಮ್ಮ ಬಡ್ತಿ ಹಾಗೂ ವೇತನ ಹೆಚ್ಚಳವನ್ನು ಯಾರೂ ತಡೆಯಲಾರರು.