ಹಣ ಯಾಕೆ ಉಳಿಸಬೇಕು ಅನ್ನೊರಿಗೆ ಇಲ್ಲಿದೆ ಉತ್ತರ
ಹಣ ಕಂಡರೆ ಹೆಣ ಬಾಯಿಬಿಡತ್ತೆ, ದುಡ್ಡಿದ್ದವನೇ ದೊಡ್ಡಪ್ಪ ಇವು ಹಣದ ಮಹತ್ವ ಸಾರುವ ಗಾದೆಗಳು. ಗಾದೆ ಕನ್ನಡದ್ದಾದರೂ ಇದರ ಸತ್ಯ ಜಗತ್ತಿನ ಎಲ್ಲಾ ಜನರಿಗೂ ಅನ್ವಯವಾಗುತ್ತದೆ.
ಹಣ ಕಂಡರೆ ಹೆಣ ಬಾಯಿಬಿಡತ್ತೆ, ದುಡ್ಡಿದ್ದವನೇ ದೊಡ್ಡಪ್ಪ ಇವು ಹಣದ ಮಹತ್ವ ಸಾರುವ ಗಾದೆಗಳು. ಗಾದೆ ಕನ್ನಡದ್ದಾದರೂ ಇದರ ಸತ್ಯ ಜಗತ್ತಿನ ಎಲ್ಲಾ ಜನರಿಗೂ ಅನ್ವಯವಾಗುತ್ತದೆ. ಒಟ್ಟಾರೆ ಹಣವಿದ್ದವರನ್ನೇ ಈ ಸಮಾಜ ಪ್ರಮುಖ ವ್ಯಕ್ತಿಯನ್ನಾಗಿ ಗುರುತಿಸುತ್ತದೆ. ಹಣ ಕೈಯಲ್ಲಿದ್ದರೇ ಏನೂ ಮಾಡಲು ಅಗತ್ಯವಾದ ಮನೋಬಲ ದೊರಕುತ್ತದೆ. ನಿಮಗಿಷ್ಟವಾದುದನ್ನು ಖರೀದಿಸಲು ಸಾಧ್ಯವಾಗುತ್ತದೆ. ಈಗ ಹಣ ಸುಲಭವಾಗಿ ಸಾಲರೂಪದಲ್ಲಿ ದೊರಕುವ ಕಾರಣ ಸಾಲ ಮಾಡಿಯಾದರೂ ಮೇಲೋಗರ ಉಣ್ಣುವ ಪರಿ ಎಲ್ಲರ ಮನದಲ್ಲಿಯೂ ಮೂಡುತ್ತದೆ. ಇಂದಿನ ದಿನಗಳಲ್ಲಿ ಲಭ್ಯವಿರುವ ಕ್ರೆಡಿಟ್ ಕಾರ್ಡ್ ಮೂಲಕ ಜಗತ್ತಿನ ಯಾವುದೇ ವಸ್ತುವನ್ನು ಖರೀದಿಸುವುದು ಮತ್ತು ಆ ಖರೀದಿಯನ್ನು ಮುಂದಿನ ಹಲವು ತಿಂಗಳು ಅಥವಾ ವರ್ಷಗಳವರೆಗೆ ಕಂತುಗಳಲ್ಲಿ ತೀರಿಸುವುದು ಸುಲಭವಾಗಿದೆ. ಆದರೆ ಸಾಲ ಪಡೆದುಕೊಳ್ಳುವಾಗ ಇರುವ ಸುಖ ತೀರಿಸುವಾಗ ಇರುವುದಿಲ್ಲ. ಆದ್ದರಿಂದಲೇ ಹಿರಿಯರು ಹಾಸಿಗೆ ಇದ್ದಷ್ಟು ಕಾಲು ಚಾಚು ಎಂದು ಹೇಳಿದ್ದಾರೆ. ಅಂದರೆ ನಮ್ಮ ಗಳಿಕೆಯ ಸಾಮರ್ಥ್ಯಕ್ಕನುಗುಣವಾಗಿಯೇ ನಮ್ಮ ಖರ್ಚುಗಳು ಅಥವಾ ದೊಡ್ಡ ಖರ್ಚಿಯ ಕಂತು ಇರಬೇಕು. ಗಳಿಸಿದ್ದನ್ನೆಲ್ಲಾ ಖರ್ಚು ಮಾಡದೇ ಒಂದಿಷ್ಟು ಮುಂದಿನ ದಿನಗಳಿಗಾಗಿ ಉಳಿತಾಯ ಮಾಡಿ ಎಂದೇಕೆ ಹೇಳುತ್ತಾರೆ ಎಂಬುದಕ್ಕೆ ಇಲ್ಲಿವೆ ಹತ್ತು ಕಾರಣಗಳು:
ಆರ್ಥಿಕ ಸ್ವಾತಂತ್ರ್ಯ
ಸಿರಿತನದ ಬಗ್ಗೆ ಮಾತನಾಡುವುದಕ್ಕೂ ಶ್ರೀಮಂತರಾಗಿರುವುದಕ್ಕೂ ಆಗಾಧ ವ್ಯತ್ಯಾಸವಿದೆ. ಆದರೆ ಆರ್ಥಿಕವಾಗಿ ಶ್ರೀಮಂತರಾಗಿರುವ ವ್ಯಕ್ತಿಗಳು ತಮ್ಮ ಗಳಿಕೆಯನ್ನು ವೃಥಾ ಖರ್ಚು ಮಾಡದೇ ಉಳಿಸಿಟ್ಟಿರುವುದು ಹಾಗೂ ತಮ್ಮ ಸ್ವಂತ ಗಳಿಕೆಯಿಂದಲೇ ಜೀವನ ನಡೆಸುತ್ತಿರುವುದನ್ನು ಕಾಣಬಹುದು. ಆರ್ಥಿಕವಾಗಿ ಪರಿಗಣಿಸಿದರೆ ಈ ವ್ಯಕ್ತಿಗಳು ಜೀವನದಲ್ಲಿ ತಮಗೆ ಬೇಕಾದುದನ್ನು ಖರೀದಿಸಲು ಅಗತ್ಯವಿರುವ ಹಣಕ್ಕಾಗಿ ಬೇರೆ ಯಾವುದೇ ಆದಾಯಕ್ಕೆ ಅವಲಂಬಿತರಾಗಬೇಕಿಲ್ಲ. ಆರ್ಥಿಕವಾಗಿ ಸ್ವತಂತ್ರರಾಗಿರುವ ವ್ಯಕ್ತಿಗಳು ತಮಗಿಷ್ಟ ಬಂದಲ್ಲಿ ತಮಗಿಷ್ಟವಾದ ಸಮಯದಲ್ಲಿ ರಜಾದಿನಗಳನ್ನು ಕಳೆಯಬಹುದು. ಆದರೆ ಈ ಜಗತ್ತಿನಲ್ಲಿ ಆರ್ಥಿಕ ಸ್ವಾತಂತ್ರ್ಯ ಎಂಬುದು ಶೇಕಡಾ ತೊಂಭತ್ತಕ್ಕೂ ಹೆಚ್ಚು ಜನರಿಗೆ ಲಭ್ಯವಿಲ್ಲ. ಇವರು ಯಾವುದೇ ನಿರ್ಧಾರ ಕೈಗೊಳ್ಳಬೇಕಾದರೂ ತಮ್ಮ ಕೆಲಸವನ್ನು ಹಾಗೇ ಬಿಟ್ಟು ಬರುವಂತಿಲ್ಲ. ಆರ್ಥಿಕ ಸ್ವಾತಂತ್ರ್ಯತೆ ಅಂದರೆ ಶ್ರೀಮಂತರಾಗಿರುವುದೇ ಅಲ್ಲ. ಆದರೆ ಜೀವನದ ನಿರ್ವಹಣೆಗಾಗಿ ನಿಗದಿತ ಆದಾಯದ ಮೇಲೆ ಅವಲಂಬಿತರಾಗಿರದೇ ಇರುವುದಾಗಿದೆ.
ಉಳಿತಾಯ ಬಹುಮುಖ್ಯ
ಕ್ರೆಡಿಟ್ ಕಾರ್ಡ್ ಇದೆ ಎಂದರೆ ಕೊಳ್ಳಬಹುದಾದ ವಸ್ತುಗಳ ಮೊತ್ತ ಕ್ರೆಡಿಟ್ ಕಾರ್ಡ್ ನಲ್ಲಿ ಲಭ್ಯವಿರುವ ಮೊತ್ತದ ಮಿತಿಯನ್ನು ಅವಲಂಬಿಸಿರುತ್ತದೆ. ಅದೇ ನಗದು ಖರೀದಿಗೆ ನಗದು ಹಣ ಎಷ್ಟಿದೆಯೋ ಅದರ ಮೇಲೆ ಅವಲಂಬಿತವಾಗಿರುತ್ತದೆ. ಕ್ರೆಡಿಟ್ ಕಾರ್ಡ್ ನಲ್ಲಿ ಸಾಮಾನ್ಯವಾಗಿ ವೇತನಕ್ಕೂ ಹೆಚ್ಚೇ ಮಿತಿ ಲಭ್ಯವಿರುವ ಕಾರಣ ಕೊಳ್ಳುವ ಮನಸ್ಸು ಹೆಚ್ಚೇ ಕೊಳ್ಳಲು ಪ್ರೇರಣೆ ನೀಡುತ್ತದೆ. ಹಾಗಾಗಿ ತಿಂಗಳಿಡೀ ಹೀಗೆ ಕೊಂಡ ವಸ್ತುಗಳ ಮೊತ್ತವನ್ನು ಅದೇ ತಿಂಗಳು ಕಟ್ಟಬೇಕಾಗಿ ಬರುತ್ತದೆ. ಒಂದು ವೇಳೆ ಇದು ಸಾಧ್ಯವಾಗದೇ ಹೋದರೆ ಮುಂದೆ ಕಟ್ಟಬೇಕಾಗಿ ಬರುವ ಬಡ್ಡಿ ಭಾರಿಯಾಗಿ ಪರಿಣಮಿಸುತ್ತದೆ. ಹೆಚ್ಚೂ ಕಡಿಮೆ ಶೇಖಡಾ ಐವತ್ತರಷ್ಟು ವಸ್ತುಗಳನ್ನು ನಾವು ಅನಾವಶ್ಯಕವಾಗಿ ಕೊಂಡಿರುತ್ತೇವೆ. ಆದ್ದರಿಂದ ಈ ವಸ್ತುಗಳಿಗೆ ಅನುಸಾರವಾಗಿ ನಿಮ್ಮ ಜೀವನವನ್ನು ಈಗ ಮಾರ್ಪಾಡಿಸಿಕೊಂಡಿದ್ದರೆ ವಾಸ್ತವಿಕತೆಗೆ ಮರಳಿ ನಿಮ್ಮ ಅಗತ್ಯಕ್ಕೆ ತಕ್ಕಷ್ಟು ಮಾತ್ರವೇ ಕೊಳ್ಳುವುದನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಇದರಿಂದ ಅಷ್ಟರ ಮಟ್ಟಿಗೆ ಉಳಿತಾಯ ಸಾಧಿಸಲು ನೆರವಾಗುತ್ತದೆ. ಆಗಾಗ ವಿಶೇಷ ರಿಯಾಯಿತಿಯ ಅವಕಾಶಗಳು ಬರುತ್ತಲೇ ಇರುತ್ತವೆ. ಈ ಅವಕಾಶದ ಸದುಪಯೋಗಪಡಿಸಿಕೊಳ್ಳಲು ನಿಮ್ಮ ಉಳಿತಾಯದ ಮೊತ್ತ ಕೆಲಸಕ್ಕೆ ಬರುತ್ತದೆ. ಆಹಾರವಸ್ತುಗಳ ವಿಷಯ ಬಂದಾಗ ಹೆಚ್ಚು ಕಾಲ ಶೇಖರಿಸಿಡಬಹುದಾದ ಆಹಾರಗಳು ವಿಶೇಷ ರಿಯಾಯಿತಿಯ ಸಮಯದಲ್ಲಿ ಮಾರುಕಟ್ಟೆಗೆ ಬಂದಾಗ ಇವನ್ನು ಹೆಚ್ಚಿನ ಪ್ರಮಾಣದಲ್ಲಿ ಕೊಂಡು ಮನೆಯಲ್ಲಿ ಶೇಖರಿಸಿಡಬಹುದು. ಅಂದರೆ ಮುಂದಿನ ತಿಂಗಳು ಈ ವಸ್ತುಗಳನ್ನು ಕೊಳ್ಳುವ ಅಗತ್ಯವಿಲ್ಲ. ಈ ರೀತಿಯಾಗಿ ಸುಮಾರು 24% ರಷ್ಟು ಖರ್ಚನ್ನು ವಾರ್ಷಿಕವಾಗಿ ಉಳಿಸಬಹುದು.
ಸ್ವಂತ ಮನೆ ಖರೀದಿಸಿ
ಸ್ವಂತ ಮನೆಯನ್ನು ಹೊಂದುವುದು ಪ್ರತಿಯೊಬ್ಬರ ಕನಸಾಗಿರುತ್ತದೆ. ಆದರೆ ಯಾವುದೇ ಮನೆ ಇಂದು ಅಗ್ಗವಾಗಿ ಲಭಿಸುವುದಿಲ್ಲ. ಬ್ಯಾಂಕ್ ಸಾಲ ಮನೆಯನ್ನು ಕೊಳ್ಳುವುದನ್ನು ಸುಲಭವಾಗಿಸಿದರೂ ಇದಕ್ಕೆ ಪಾವತಿಸಬೇಕಾದ ಪ್ರಾಥಮಿಕ ಮೊತ್ತವನ್ನು ಮಾತ್ರ ನಿಮ್ಮ ಹತ್ತಿರ ಇರಬೇಕೆಂದು ಬ್ಯಾಂಕ್ ನ ನಿಯಮವಿದೆ. ಇದಕ್ಕೆ ಡೌನ್ ಪೇಮೆಂಟ್ ಎಂದು ಕರೆಯುತ್ತಾರೆ. ಆದರೆ ಈ ಮೊತ್ತವನ್ನು ಸಾಲವಾಗಿ ಯಾವುದೇ ಬ್ಯಾಂಕ್ ನೀಡುವುದಿಲ್ಲ. ಈ ಮೊತ್ತ ಸಾಮಾನ್ಯವಾಗಿ ಒಟ್ಟು ಮನೆಯ ಮೊತ್ತದ ಶೇಖಡಾ ಐದರಷ್ಟಿರುತ್ತದೆ. ಅಂದರೆ ಉಳಿದ ತೊಂಭತ್ತೈದು ಶೇಖಡಾ ಮೊತ್ತವನ್ನು ಬ್ಯಾಂಕ್ ಸಾಲವಾಗಿ ನೀಡುತ್ತದೆ. ಅದೂ ಹಂತಹಂತವಾಗಿ. ಮನೆ ಪೂರ್ಣಗೊಳ್ಳುವ ಹೊತ್ತಿಗೆ ವಿವರಿಸಲಾಗದ ಇನ್ನಷ್ಟು ಹೆಚ್ಚು ಖರ್ಚುಗಳು ಸೇರಿಕೊಳ್ಳುತ್ತವೆ. ಇದು ಸುಮಾರು ಐದು ಶೇಖಡಾದಷ್ಟಾಗಬಹುದು. ನಿಮ್ಮದೇ ಉಳಿತಾಯದ ಹಣ ಇದ್ದರೆ ಡೌನ್ ಪೇಮೆಂಟ್ ನೀಡಿ ಮನೆ ಸಾಲ ಪಡೆಯುವುದು ಸುಲಭವಾಗುತ್ತದೆ.
ಸ್ವಂತ ಕಾರು ಇದ್ದರೆ ಚೆನ್ನ ಅಲ್ವಾ
ಕಾರೊಂದನ್ನು ಕೊಳ್ಳಿ ಸ್ವಂತ ಮನೆಯಂತೆಯೇ ಸ್ವಂತ ಕಾರು ಸಹಾ ಹೆಚ್ಚಿನವರ ಕನಸಾಗಿದೆ. ಮನೆಸಾಲದಂತೆಯೇ ಕಾರನ್ನು ಸಹಾ ಸಾಲದ ಮೂಲಕ ಖರೀದಿಸಬಹುದಾಗಿದ್ದು ಇಲ್ಲಿಯೂ ಡೌನ್ ಪೇಮೆಂಟ್ ಅಗತ್ಯವಿದೆ. ಹಾಗೂ ಈ ಸಾಲಕ್ಕೆ ಸುಲಭ ಬಡ್ಡಿದರವೂ ಲಭ್ಯ. ಕ್ರೆಡಿಟ್ ಕಾರ್ಡ್ ಇದ್ದವರು ಈ ಡೌನ್ ಪೇಮೆಂಟ್ ಅನ್ನು ಕಾರ್ಡ್ ಮೂಲಕ ಪಾವತಿಸಿ ಉಳಿದ ಕಂತುಗಳನ್ನು ಸುಲಭದರದಲ್ಲಿ ಹಿಂದಿರುಗಿಸುವ ಇರಾದೆ ಹೊಂದಿರುತ್ತಾರೆ. ಮೇಲ್ನೋಟಕ್ಕೆ ಇದು ಸುಲಭವಾಗಿ ಕಂಡುಬಂದರೂ ಮುಂದಿನ ತಿಂಗಳ ಕ್ರೆಡಿಟ್ ಕಾರ್ಡ್ ಬಿಲ್ಲಿನಲ್ಲಿ 20%ಕ್ಕೂ ಹೆಚ್ಚಿನ ಬಡ್ಡಿ ಬಂದಿರುವುದು ಗಮನಕ್ಕೆ ಬರುತ್ತದೆ. ಈಗ ಸರ್ವಜ್ಞನ 'ಕಿಬ್ಬದಿಯ ಕೀಲು ಮುರಿದಂತೆ' ವಚನವಾಕ್ಯ ನೆನಪಾಯಿತೇ? ಈ ಪರಿಯಾಗಿ ಕಿಬ್ಬದಿಯ ಕೀಲು ಮುರಿಸಿಕೊಳ್ಳುವ ಬದಲು ಕೊಂಚಕೊಂಚವಾಗಿ ನಮ್ಮದೇ ಹಣವನ್ನು ಉಳಿತಾಯದ ಮೂಲಕ ಸಂಗ್ರಹಿಸಿಟ್ಟು ನಮ್ಮ ಕನಸಿನ ಕಾರನ್ನು ಈ ಹಣವನ್ನೇ ಮುಂಗಡವಾಗಿ ನೀಡಿ ಉಳಿದ ಕಂತುಗಳನ್ನು ಸುಲಭವಾಗಿ ಮುಂದಿನ ತಿಂಗಳುಗಳಲ್ಲಿ ಹೆಚ್ಚಿನ ಹೊರೆಯಿಲ್ಲದೇ ತೀರಿಸಬಹುದು. ಹೊಸ ಕಾರಿನ ಬದಲು ವಿಶ್ವಾಸಾರ್ಹವಾದ ಸೆಕೆಂಡ್ ಹ್ಯಾಂಡ್ ಕಾರನ್ನೂ ಕೊಂಚ ಕಡಿಮೆ ಬೆಲೆಗೆ ಖರೀದಿಸಬಹುದು.
ಸಾಲದಿಂದ ದೂರವಿರ, ಇಲ್ಲವೆ ಮುಕ್ತರಾಗಿ
ಸಾಲದಿಂದ ಮುಕ್ತರಾಗಲು ಸಹಾ ಉಳಿತಾಯದ ಹಣ ಬೇಕು. ಈ ವಾಕ್ಯ ವಿರೋಧಾಭಾಸವಾಗಿ ಕಂಡುಬರುತ್ತಿದೆ ಅಲ್ಲವೇ? ಕ್ರೆಡಿಟ್ ಕಾರ್ಡ್ ಅನ್ನು ಎಲ್ಲಾ ತುರ್ತು ಸಮಯಗಳಿಗೆಲ್ಲಾ ಉಪಯೋಗಿಸಿ ಲಭ್ಯವಿರುವ ಮೊತ್ತವನ್ನು ಖರ್ಚು ಮಾಡಿದರೆ ಈ ಮೊತ್ತವನ್ನು ತೀರಿಸುವುದು ಸುಲಭಸಾಧ್ಯವಲ್ಲ. ನೀವು ಎಷ್ಟೇ ಉತ್ತಮವಾಗಿ ನಿಮ್ಮ ಆರ್ಥಿಕ ವಿಷಯಗಳನ್ನು ನಿಯೋಜಿಸಿದರೂ ನಿಮ್ಮ ಕಲ್ಪನೆಗೆ ಮೀರಿದ ಖರ್ಚುಗಳು ಈ ಯೋಜನೆಗಳನ್ನೆಲ್ಲಾ ಕಲಸು ಮೇಲೋಗರವಾಗಿಸುತ್ತವೆ. (ಈ ಖರ್ಚುಗಳಲ್ಲಿ ಅರ್ಧಕ್ಕೂ ಹೆಚ್ಚು ಖರ್ಚುಗಳು ನಿಮ್ಮ ಕಾರು ನಡುರಸ್ತೆಯಲ್ಲಿ ಕೈಕೊಟ್ಟಿರುವುದು ಪ್ರಮುಖ ಕಾರಣವಾಗಿರುತ್ತದೆ) ಆದ್ದರಿಂದ ನಿಮ್ಮ ಕ್ರೆಡಿಟ್ ಕಾರ್ಡ್ ಅನ್ನು ಸಡಿಲ ಬಿಟ್ಟು ಖರ್ಚು ಮಾಡುವ ಮೊದಲು ಉಳಿತಾಯವಿರುವಂತೆ ನೋಡಿಕೊಳ್ಳಿ. ಇದು ಅಪ್ಪಟವಾಗಿ 'ತುರ್ತು ಪರಿಸ್ಥಿತಿಗೆ ಮಾತ್ರ' ಎಂಬ ನಿಧಿಯಾಗಿರಬೇಕು. ಇದರಿಂದ ನೀವು ಅಕಸ್ಮಿಕವಾಗಿ ಎದುರಾಗುವ ಯಾವುದೇ ಖರ್ಚಿಗೆ ಸಿದ್ಧರಾಗಿರಬಹುದು. ಅಲ್ಲದೇ 'ತುರ್ತು ನಿಧಿ'ಯೊಂದು ಇದೆ ಎಂದ ಮಾತ್ರಕ್ಕೇ ಇದು ಮಾನಸಿಕವಾಗಿ ನೀಡುವ ನೆಮ್ಮದಿ ಹಾಗೂ ಕೆಟ್ಟ ಖರೀದಿಗಳಿಗೆ ಹಾಕುವ ಕಡಿವಾಣ ಅತ್ಯಮೂಲ್ಯ ಪ್ರಯೋಜನಗಳಾಗಿವೆ.
ವಾರ್ಷಿಕ ಖರ್ಚುವೆಚ್ಚ
ಒಂದು ವೇಳೆ ನಿಮಗೆ ಉತ್ತಮ ಹಾಗೂ ನೆಮ್ಮದಿಯ ಆರ್ಥಿಕ ಜೀವನ ಬೇಕೆಂದಿದ್ದರೆ ನೀವು ನಿಮ್ಮ ವಾರ್ಷಿಕ ಖರ್ಚುಗಳಿಗಾಗಿ ನಿಯಮಿತವಾಗಿ ಉಳಿತಾಯ ಮಾಡಬೇಕು. ವರ್ಷಕ್ಕೊಮ್ಮೆ ಬರುವ ಖರ್ಚುಗಳಾದ ಉಡುಗೊರೆಗಳು, ರಜಾದಿನದ ಪ್ರವಾಸ, ವಾಹನದ ದುರಸ್ತಿ, ಶಾಲಾ ಫೀಸ್, ಚಿಕ್ಕ ಪುಟ್ಟ ಮನೆಯ ರಿಪೇರಿ, ಬಣ್ಣ ಹೊಡೆಸುವುದು, ಉಪಕರಣಗಳ ದುರಸ್ತಿ, ಆಸ್ತಿ ತೆರಿಗೆ ಪಾವತಿ ಹಾಗೂ ಅನ್ವಯವಾದರೆ ಆದಾಯ ತೆರಿಗೆ ಪಾವತಿ ಇತ್ಯಾದಿಗಳು ವಾರ್ಷಿಕವಾಗಿರುತ್ತವೆ. ಕೆಲವೊಮ್ಮೆ ನಿಮ್ಮಲ್ಲಿರುವ ಕ್ರೆಡಿಟ್ ಕಾರ್ಡ್ ನ ಸಾಲ ವರ್ಷ ಕಳೆದ ಬಳಿಕ ಭಾರೀ ಮೊತ್ತವಾಗಿದ್ದು ಇದನ್ನು ತೀರಿಸಲು ಮನೆಯನ್ನೇ ಗಿರವಿ ಇಡಬೇಕಾಗಿ ಬರಬಹುದು. ಆದರೆ ಇದು ತೀರಾ ಅಪಾಯಕಾರಿಯಾದ ನಿರ್ಧಾರವಾಗಿದೆ. ಆದ್ದರಿಂದ ಇಂತಹ ಖರ್ಚುಗಳಿಂದ ರಕ್ಷಣೆ ಪಡೆಯಬೇಕಾದರೆ ಈ ಪರಿಸ್ಥಿತಿಗಾಗಿ ಪ್ರತಿತಿಂಗಳೂ ವಾರ್ಷಿಕ ನಿಧಿಯೊಂದಕ್ಕೆ ನಿಯಮಿತವಾಗಿ ಉಳಿತಾಯ ಮಾಡಿಡಬೇಕು. ಇದರಿಂದ ವಾರ್ಷಿಕ ಖರ್ಚುಗಳನ್ನು ನಿಭಾಯಿಸುವುದು ಸಾಧ್ಯವಾಗುವುದು ಮಾತ್ರವಲ್ಲ ಮನಸ್ಸಿಗೂ ನೆಮ್ಮದಿ.
ಆಕಸ್ಮಿಕ ಅವಘಡಗಳು
ಕೆಲವು ಖರ್ಚುಗಳು ಧುತ್ತನೇ ಎದುರಾಗುತ್ತವೆ. ಮನೆಯ ಸದಸ್ಯರು ಆಸ್ಪತ್ರೆ ಸೇರುವುದು, ಕಾರು ಥಟ್ಟನೇ ಸ್ಥಗಿತವಾಗುವುದು ಇತ್ಯಾದಿ. ಮಳೆ ಬಂದಾಗ ಸೋರುವ ಮಾಳಿಗೆ, ತೆಂಗಿನ ಮರ ಬಿದ್ದು ಛಾವಣಿ ಮುರಿದಿರುವುದು ಮೊದಲಾದ ಧುತ್ತನೇ ಎದುರಾಗುವ ಸಂದರ್ಭಗಳನ್ನು ಯಾರೂ ಊಹಿಸಿರುವುದೇ ಇಲ್ಲ. ಕೆಲವು ವಿಷಯಗಳಿಗೆ ವಿಮೆ ಲಭ್ಯವಿದ್ದರೂ ಎಲ್ಲಾ ವಿಷಯಗಳಿಗೆ ವಿಮೆ ಲಭ್ಯವಿರುವುದಿಲ್ಲ. ಪ್ರತಿ ಖರ್ಚಿಗೂ ನಿಮ್ಮ ಬ್ಯಾಂಕ್ ನೆರವು ನೀಡುತ್ತದೆ ಎಂದು ನಿರೀಕ್ಷಿಸುವಂತಿಲ್ಲ. ಈ ಸಂದರ್ಭಗಳಿಗೆ ತಕ್ಷಣವೇ ಸ್ಪಂದಿಸಿ ಅಗತ್ಯವಿರುವ ಹಣ ನೀಡಿ ಸರಿಪಡಿಸಿಕೊಳ್ಳುವುದು ಅಗತ್ಯವಾಗಿದ್ದು ಇದಕ್ಕೂ ಉಳಿತಾಯದ ಹಣವೇ ನೆರವಿಗೆ ಬರುತ್ತದೆ.
ತುರ್ತು ಪರಿಸ್ಥಿತಿ
ತುರ್ತು ಪರಿಸ್ಥಿತಿ ನಮಗಾರಿಗೂ ಬರಬಾರದು ಎಂದು ನಾವೆಲ್ಲಾ ಅಶಿಸುತ್ತೇವೆ. ಆದರೆ ವಾಸ್ತವದಲ್ಲಿ ಹಾಗಾಗುವುದಿಲ್ಲ. ಪ್ರತಿಯೊಬ್ಬರಿಗೂ ತುರ್ತು ಪರಿಸ್ಥಿತಿ ಎದುರಾಗಬಹುದು. ಮನೆಯ ಸದಸ್ಯರಿಗೆ ಹಠಾತ್ತಾಗಿ ಅನಾರೋಗ್ಯ ಎದುರಾಗಬಹುದು. ಆಕಸ್ಮಿಕವಾಗಿ ದೂರದೂರಿಗೆ ಪ್ರಯಾಣ ಬೆಳೆಸಬೇಕಾಗಿ ಬರಬಹುದು, ಕಾರು ಅಪಘಾತಕ್ಕೊಳಗಾಗಬಹುದು, ನಿಸರ್ಗ ವಿಕೋಪದ ಕಾರಣ ಕಟ್ಟಡ ಕುಸಿಯಬಹುದು, ಮನೆಯೊಳಗೆ ನೀರು, ನೀರಿನ ಪೈಪುಗಳು ಒಡೆಯುವುದು, ಆಪ್ತರ ನಿಧನದಲ್ಲಿ ಭಾಗಿಯಾಗಲು ತಕ್ಷಣವೇ ದುಬಾರಿ ವಿಮಾನಯಾನದದ ಪ್ರಯಾಣ ಕೈಗೊಳ್ಳಬೇಕಾಗಿ ಬರಬಹುದು. ಯಾವುದೇ ತುರ್ತು ಪರಿಸ್ಥಿತಿಯನ್ನು ನಿಭಾಯಿಸುವುದು ಸುಲಭವಂತೂ ಅಲ್ಲ ಆದರೆ ದುಬಾರಿ ಹೌದು. ನಾವೆಲ್ಲರೂ ಒಂದಲ್ಲಾ ಒಂದು ತುರ್ತು ಪರಿಸ್ಥಿತಿಯನ್ನು ಎದುರಿಸಿಯೇ ಇರುತ್ತೇವೆ. ಮುಂದಿನ ತುರ್ತು ಪರಿಸ್ಥಿತಿಗೆ ಉಳಿತಾಯದ ಹಣ ನೀಡುವ ಮಾನಸಿಕ ಬೆಂಬಲ ಬೇರಾವುದೂ ನೀಡದು.
ಕೆಲಸ ಹೋಗಬಹುದು ಅಥವಾ ಅಪಘಾತ ಎದುರಾಗಬಹುದು
ಎಲ್ಲವೂ ಚೆನ್ನಾಗಿದ್ದಾಗ ಎಲ್ಲರೂ ಒಳ್ಳೆಯವರೇ ಆಗಿರುತ್ತಾರೆ. ಆದರೆ ಪರಿಸ್ಥಿತಿ ಬಿಗಡಾಯಿಸಿದಾಗ ಮಾತ್ರ ಯಾರ ಮೇಲಾದರೂ ಸಿಡಿಲು ಎರಗಬಹುದು. ಅಕಸ್ಮಿಕವಾಗಿ ನಿಮ್ಮ ಕೆಲಸ ಹೋಗಬಹುದು, ನಿಮ್ಮ ವ್ಯಾಪಾರ ಕುಸಿಯಬಹುದು ಅಥವಾ ಬೇರೆ ಯಾರದ್ದೋ ತಪ್ಪಿನ ಫಲವಾಗಿ ನಿಮಗೆ ಅಪಘಾತವಾಗಿ ಅಂಗವೈಕಲ್ಯಕ್ಕೆ ಒಳಗಾಗಬಹುದು. ಇದು ದೈಹಿಕ ಅಥವಾ ಮಾನಸಿಕವಾಗಿ ಭಾರೀ ಆಘಾತಕ್ಕೆ ಕಾರಣವಾಗಬಹುದು. Employment Insurance (EI) ಎಂಬ ವಿಮೆ ನಿಮ್ಮ ಕೆಲಸ ಹೋದ ಕನಿಷ್ಟ ಆರು ವಾರಗಳ ಬಳಿಕ ಮಾತ್ರವೇ ಅನ್ವಯವಾಗುತ್ತದೆ. ಈ ದಿನಗಳ ಖರ್ಚಿಗೇನು ಮಾಡುತ್ತೀರಿ? ಈಗ ಉಳಿತಾಯವಿಲ್ಲದಿದ್ದರೆ ಸಾಲ ಅನಿವಾರ್ಯವಾಗುತ್ತದೆ. ಇದು ಪರಿಸ್ಥಿತಿಯನ್ನು ಇನ್ನಷ್ಟು ಬಿಗಡಾಯಿಸಬಹುದು. ಕ್ರೆಡಿಟ್ ಕಾರ್ಡ್ ನ ಕನಿಷ್ಟ ಮೊತ್ತವನ್ನು ಪಾವತಿಸುವುದೂ ಭಾರಿಯಾಗಿ ಪರಿಣಮಿಸಬಹುದು. ಮುಂದಿನ ದಿನಗಳಲ್ಲಿ ಕೆಲಸ ಸಿಕ್ಕರೂ ಇದರ ವೇತನವನ್ನು ಹಿಂದಿನ ದಿನಗಳ ಸಾಲವನ್ನು ತೀರಿಸಲು ಪ್ರತಿತಿಂಗಳೂ ಹೆಣಗಾಡುತ್ತಾ ಬರಬೇಕಾಗಿ ಬರಬಹುದು. ಅಲ್ಲದೇ ಈಗಿನ ಕೆಲಸದ ವೇತನ ಹಿಂದಿನ ವೇತನಕ್ಕಿಂತಲೂ ಹೆಚ್ಚಿದ್ದಾಗ ಮಾತ್ರವೇ ಇದು ಸಾಧ್ಯವಾಗುತ್ತದೆ. ಇಲ್ಲದಿದ್ದರೆ ಹಿಂದಿನ ಸಾಲಗಳನ್ನು ಪಾವತಿಸಲು ವರ್ಷಗಟ್ಟಲೇ ತಗಲಬಹುದು.
ಉತ್ತಮ ಜೀವನಕ್ಕಾಗಿ
ನಮ್ಮ ಜೀವನವನ್ನು ನೆಮ್ಮದಿಯಿಂದ, ಯಾವುದೇ ಮಾನಸಿಕ ಅಥವಾ ದೈಹಿಕ ತೊಂದರೆಯಿಲ್ಲದೇ ಕಳೆಯಲು ನಾವೆಲ್ಲಾ ಬಯಸುತ್ತೇವೆ. ಆದರೆ ತಿಂಗಳ ಖರ್ಚನ್ನು ತಿಂಗಳ ಆದಾಯದಿಂದ ಸರಿದೂಗಿಸುವ ಹಾಗೂ ಮುಂದಿನ ದಿನಗಳಿಗೆ ಯಾವುದೇ ಯೋಜನೆ ಹಾಕಿಕೊಳ್ಳದ ಕುಟುಂಬಗಳು "ತೊಂದರೆ" ಯಿಂದ "ತೊಂದರೆ"ಗೇ ಧಾವಿಸುತ್ತಿರುತ್ತವೆ. ಆದ್ದರಿಂದ ವೇತನ ಅಥವಾ ಆದಾಯವೆಷ್ಟೇ ಇರಲಿ, ಇದನ್ನು ಸೂಕ್ತವಾಗಿ ವಿನಿಯೋಗಿಸಿ ಮುಂದಿನ ದಿನಗಳಿಗಾಗಿ ಕೊಂಚ ಉಳಿತಾಯ ಸಾಧಿಸುವುದು ಅಗತ್ಯವಾಗಿದೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನದು ಬರುವುದಿದೆ ಹಾಗೂ ಇದರ ಮೇಲೆ ನಿಮ್ಮ ನಿಯಂತ್ರಣವಿರುವುದಿಲ್ಲ. ಆದ್ದರಿಂದ ಇಂದಿನ ದಿನಗಳಲ್ಲಿ ಸಾಧ್ಯವಾದಷ್ಟು ಕೂಡಿಡುವ ಮೂಲಕ ಮುಂದಿನ ದಿನಗಳಲ್ಲಿ ಪಡೆಯಬಹುದಾದ ನೆಮ್ಮದಿಗೆ ನಾಂದಿಯಾಗಬಹುದು. ಉಳಿತಾಯದಿಂದ ಕಳೆದುಕೊಳ್ಳುವುದೇನೂ ಇಲ್ಲ, ಏನಿದ್ದರೂ ಮುಂದಿನ ದಿನಗಳಲ್ಲಿ ಸುಖಕರ ಜೀವನ ಹಾಗೂ ಮಾನಸಿಕ ನೆಮ್ಮದಿ ಗಳಿಸುವುದು ಮಾತ್ರ!