ದೇಶದಲ್ಲಿ ಹಣದುಬ್ಬರ ಅಧಿಕವಾಗುತ್ತಿದೆ. ಈ ಕಾರಣದಿಂದಾಗಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ದಿಢೀರ್ ಆಗಿ ರೆಪೋ ದರವನ್ನು ಏರಿಕೆ ಮಾಡಿದೆ. ಇದಕ್ಕೂ ಮುನ್ನವೇ ದೇಶದಲ್ಲಿ ಜನರು ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಿಂದಾಗಿ ತತ್ತರಿಸಿ ಹೋಗಿದ್ದಾರೆ. ಈಗ ಈ ರಷ್ಯಾ ಉಕ್ರೇನ್ ಯುದ್ಧದ ನಡುವೆ ಜಾಗತಿಕ ಮಟ್ಟದಲ್ಲಿ ಕಚ್ಚಾ ತೈಲ ಬೆಲೆಯು ಹೆಚ್ಚಳವಾಗುತ್ತಲೇ ಇದ್ದು, ದೇಶದಲ್ಲಿ ಪೆಟ್ರೋಲ್, ಡೀಸೆಲ್ ದರವು ಏರಿಕೆಯಾಗುವ ಸಾಧ್ಯತೆ ಇದೆ.
ಇನ್ನು ರೆಪೋ ದರ ಏರಿಕೆಯಾದ ಕಾರಣದಿಂದಾಗಿ ದೇಶದಲ್ಲಿ ಗೃಹ ಸಾಲಗಳ ಮೇಲಿನ ಬಡ್ಡಿದರವು ಏರಿಕೆ ಆಗಿದೆ. ಜನರಿಗೆ ಇಎಂಐ ಹೊರೆಯು ಅಧಿಕವಾಗಿದೆ. ಆದರೆ ಈ ಇಎಂಐ ಹೊರೆ ಮಾತ್ರವಲ್ಲದೆ ಜನರಿಗೆ ಬೆಲೆ ಏರಿಕೆಯು ತೀವ್ರ ಪ್ರಮಾಣದಲ್ಲಿ ಪ್ರಭಾವ ಬೀರುತ್ತಿದೆ.
ಈಗಾಗಲೇ ನಿಂಬೆ ಹಣ್ಣು, ಟೊಮೆಟೊ ಮೊದಲಾದ ತರಕಾರಿ ಬೆಲೆಗಳು ಹೆಚ್ಚಾಗಿದೆ. ಈ ನಡುವೆ ರೆಪೋ ದರ ಏರಿಕೆಯು ಜನರ ಜೇಬಿಗೆ ಕತ್ತರಿ ಹಾಕುತ್ತಿದೆ. ಇನ್ನು ಇಎಂಐ ಹೊರೆ ಹೆಚ್ಚಳ ಮಾತ್ರವಲ್ಲದೆ ಜನರ ಮೇಲೆ ಖಾದ್ಯ ಎಣ್ಣೆ, ಗೋಧಿ, ಔಷಧಗಳ ಬೆಲೆ ಏರಿಕೆಯು ಕೂಡಾ ಹೊರೆಯಾಗಿದೆ. ಇಎಂಐ ಮಾತ್ರವಲ್ಲದೇ ಬೇರೆ ಇನ್ನೇನು ದುಬಾರಿಯಾಗಲಿದೆ ಎಂಬ ಬಗ್ಗೆ ತಿಳಿಯೋಣ ಮುಂದೆ ಓದಿ..
ಆಹಾರ, ಎಣ್ಣೆ, ಗೋಧಿ ಬೆಲೆ ಹೆಚ್ಚಳ
ಪೆಟ್ರೋಲ್, ಡೀಸೆಲ್ ಜೊತೆಗೆ ಭಾರತೀಯರಿಗೆ ಅಡುಗೆ ಎಣ್ಣೆ ಕೂಡಾ ಅತೀ ಮುಖ್ಯವಾಗಿದೆ. ಪ್ರಮುಖ ಉತ್ಪಾದನಾ ರಾಷ್ಟ್ರಗಳ ರಫ್ತು ನಿರ್ಬಂಧಗಳು ಮತ್ತು ಯುದ್ಧದಿಂದಾಗಿ ಸೂರ್ಯಕಾಂತಿ ಎಣ್ಣೆ ಉತ್ಪಾದನೆಯ ನಷ್ಟದಿಂದಾಗಿ ಖಾದ್ಯ ತೈಲಗಳ ಬೆಲೆಗಳು ಮತ್ತಷ್ಟು ಏರಿಕೆ ಆಗಬಹುದು ಎಂದು ಮೇ 5 ರಂದು ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್ ಶಕ್ತಿಕಾಂತ ದಾಸ್ ಹೇಳಿದರು. ಈ ನಡುವೆ ಜನರು ತಾಳೆ ಎಣ್ಣೆಯಂತಹ ಅಗ್ಗ ಬೆಲೆಯ ಎಣ್ಣೆ ಖರೀದಿಯತ್ತ ವಾಲುತ್ತಿದ್ದಾರೆ. ಆದರೆ ಇಂಡೋನೇಷ್ಯಾ ತನ್ನ ರಫ್ತುಗಳನ್ನು ನಿಷೇಧಿಸಿದ ನಂತರ ತಾಳೆ ಎಣ್ಣೆಯ ಬೆಲೆ ಏರುತ್ತಿದೆ. ಈ ನಡುವೆ ಲಘು ಆಹಾರ ಕೂಡಾ ದುಬಾರಿಯಾಗಿದೆ. ಹಣದುಬ್ಬರವು ಅಂತರಾಷ್ಟ್ರೀಯ ಸಮಸ್ಯೆಯಾಗಿದೆ. ಈ ನಡುವೆ ಗೋಧಿಯಂತಹ ಭಾರತದಲ್ಲಿ ಪೂರೈಕೆಯಲ್ಲಿ ಯಾವುದೇ ಅಡೆತಡೆಗಳನ್ನು ಕಾಣದ ಉತ್ಪನ್ನಗಳು ಸಹ ಜಾಗತಿಕ ಬೆಲೆಗಳ ಏರಿಕೆಯಿಂದಾಗಿ ಏರುತ್ತಿದೆ.
ಔಷಧಿಗಳ ಬೆಲೆ ಏರಿಕೆ
ಈಗಾಗಲೇ ಕಳೆದ ತಿಂಗಳ ಆರಂಭದಿಂದ ಹಲವಾರು ಅಗತ್ಯ ಔಷಧಿಗಳ ಬೆಲೆಯು ಏರಿಕೆ ಕಂಡಿದೆ. ಈ ನಡುವೆ ಇನ್ನು ಕೂಡಾ ಕೆಲವು ಅಗತ್ಯ ಔಷಧಿಗಳ ಬೆಲೆ ಏರಿಕ ಸಾಧ್ಯತೆ ಇದೆ. ಎರಡನೆಯ ಅತ್ಯಂತ ಅನಿವಾರ್ಯವಾದ ವೆಚ್ಚವೆಂದರೆ ಆರೋಗ್ಯ ರಕ್ಷಣೆ ವೆಚ್ಚಾಗಿದೆ. ಆದರೆ ಅದು ಕೂಡಾ ದುಬಾರಿಯಾಗಲಿದೆ. ದೇಶದಲ್ಲಿ ಈ ಹೊಸ ಹಣಕಾಸು ವರ್ಷದಲ್ಲಿ ಅಗತ್ಯ ಔಷಧಿಗಳ ಬೆಲೆಯು ಏರಿಕೆ ಕಂಡಿದೆ. 800 ಕ್ಕೂ ಹೆಚ್ಚು ಔಷಧಿಗಳ ಬೆಲೆಯನ್ನು ಏರಿಕೆ ಮಾಡಲಾಗುತ್ತದೆ. ನೋವು ನಿವಾರಕ ಔಷಧಿಗಳು, ಆಂಟಿಅಲರ್ಜಿಕ್ಸ್, ಆಂಟಿಬಯೋಟಿಕ್, ಆಂಟಿಕಾನ್ವಲ್ಸೆಂಟ್ಗಳು, ಹೃದಯರಕ್ತನಾಳದ, ವಿಟಮಿನ್ ಮತ್ತು ಖನಿಜಗಳಂತಹ ಔಷಧಿಗಳ ಬೆಲೆಗಳು ಏಪ್ರಿಲ್ 1ರಿಂದ ಏರಿಕೆ ಕಂಡಿದೆ. ಇನ್ನು ಹಲವು ಔಷಧಿಗಳ ಬೆಲೆ ಏರಿಕೆ ಸಾಧ್ಯತೆ ಇದೆ.
ವಿದ್ಯುತ್ ಬಿಲ್ ಹೆಚ್ಚಳ ಸಾಧ್ಯತೆ
ಈ ನಡುವೆ ಸಿಹಿ ಸುದ್ದಿ ಒಂದಿದೆ. ದೇಶದಲ್ಲಿ ವಿದ್ಯುತ್ ಕಡಿತವಾಗದಂತೆ ನೋಡಿಕೊಳ್ಳಲು ಹೆಚ್ಚಿನ ಕಲ್ಲಿದ್ದಲು ರಫ್ತು ಮಾಡಲು ವಿದ್ಯುತ್ ಕಂಪನಿಗಳಿಗೆ ಸರ್ಕಾರ ಸೂಚನೆ ನೀಡಿದೆ. ಆದರೆ ಇದರಿಂದಾಗಿಯೂ ಕೆಟ್ಟ ಸುದ್ದಿ ಇದೆ. ಹೌದು ವಿದ್ಯುತ್ ವಲಯದಲ್ಲಿರುವ ಆಳವಾದ ಆರ್ಥಿಕ ಬಿಕ್ಕಟ್ಟಿನಿಂದಾಗಿ ವಿದ್ಯುತ್ ಉತ್ಪಾದಕರು ಮತ್ತು ವಿದ್ಯುತ್ ವಿತರಕರ ಮೇಲೆ ಹೆಚ್ಚಿನ ಒತ್ತಡವನ್ನು ಉಂಟು ಮಾಡುವ ಸಾಧ್ಯತೆ ಇದೆ. "ವಿದ್ಯುತ್ ಬಿಲ್ ಹೆಚ್ಚಳ ಮಾಡುವ ಸಾಧ್ಯತೆ ಇದೆ," ಎಂದು ಬಾರ್ಕ್ಲೇಸ್ನ ಹಣದುಬ್ಬರದ ಸಂಶೋಧನಾ ವರದಿ ಹೇಳಿದೆ. ಸೀಮೆಎಣ್ಣೆ ಬೆಲೆಗಳು ಸಹ ಏಪ್ರಿಲ್ನಲ್ಲಿ ತೀವ್ರವಾಗಿ ಏರಿತು. ಈ ನಡುವೆ ಈಗಾಗಲೇ ಜನರು ಅಡುಗೆ ಅನಿಲ ಬೆಲೆ ಏರಿಕೆಯಿಂದಾಗಿ ತತ್ತರಿಸಿಹೋಗಿದ್ದಾರೆ.
ಗೃಹ ಸಾಲದ ಇಎಂಐ ಏರಿಕೆ
ಕೇಂದ್ರ ಬ್ಯಾಂಕ್ ರೆಪೋ ದರವನ್ನು ಏರಿಕೆ ಮಾಡಿದ ಬೆನ್ನಲ್ಲೇ ಹಲವಾರು ಬ್ಯಾಂಕ್ಗಳಲ್ಲಿ ಗೃಹ ಸಾಲದ ಮೇಲಿನ ಇಎಂಐ ದರವು ಹೆಚ್ಚಳವಾಗಲಿದೆ. ಈಗಾಗಲೇ ಕೆಲವು ಬ್ಯಾಂಕ್ಗಳು ಇಎಂಐ ದರವನ್ನು ಅಧಿಕ ಮಾಡಿದೆ. ಇನ್ನೂ ಕೆಲವು ಬ್ಯಾಂಕುಗಳಲ್ಲಿ ಸಾಲ ಹೆಚ್ಚಲಿದೆ ಎಂದು ತಜ್ಞರು ಹೇಳಿದ್ದಾರೆ. ಈಗಾಗಲೇ ಎಚ್ಡಿಎಫ್ಸಿ, ಐಸಿಐಸಿಐ ಬ್ಯಾಂಕ್, ಪಂಜಾಬ್ ನ್ಯಾಷನಲ್ ಬ್ಯಾಂಕ್, ಬ್ಯಾಂಕ್ ಆಫ್ ಬರೋಡಾ, ಬ್ಯಾಂಕ್ ಆಫ್ ಇಂಡಿಯಾ ಗೃಹ ಸಾಲದ ಬಡ್ಡಿದರವನ್ನು ಹೆಚ್ಚಳ ಮಾಡಿದೆ.


Click it and Unblock the Notifications