ಉಚಿತ ಅನಿಲ ಸಿಲಿಂಡರ್ ನಿಂದ ಡ್ರೈವಿಂಗ್ ಲೈಸೆನ್ಸ್ ತನಕ ಅ. 1ರಿಂದ ಆಗುವ 8 ಬದಲಾವಣೆ
"ಇಷ್ಟು ದಿನ ಒಂದು ಲೆಕ್ಕ ಆಯಿತು, ಇನ್ಮೇಲೆ ಒಂದು ಲೆಕ್ಕ."- ಇದು ಯಾವ ಸಿನಿಮಾದ ಡೈಲಾಗ್ ಅಂದುಕೊಳ್ಳುತ್ತಿದ್ದೀರಾ? ಅಕ್ಟೋಬರ್ 1, 2020ರಿಂದ ಜಾರಿಗೆ ಬರಲಿರುವ ಬದಲಾವಣೆಗಳಿವು. ಆದ್ದರಿಂದಲೇ ಹೇಳಿದ್ದು, ಇಷ್ಟು ಸಮಯ ಒಂದು ಲೆಕ್ಕಾಚಾರ ಆಯಿತು. ಇನ್ಮುಂದೆ ಹೊಸ ಲೆಕ್ಕಾಚಾರ ಶುರು ಅಂತ. ಏನದು ಬದಲಾವಣೆಗಳು?
ಬ್ಯಾಂಕ್ ಗಳಿಗೆ ಅಕ್ಟೋಬರ್ ನಲ್ಲಿ 14 ದಿನ ರಜಾ: ಬ್ಯಾಂಕ್ ಗಳ ರಜಾಪಟ್ಟಿ
ಈ ಲೇಖನದಲ್ಲಿ 8 ಬದಲಾವಣೆಗಳನ್ನು ನಿಮ್ಮೆದುರು ಇಡಲಾಗುತ್ತಿದೆ. ಇವುಗಳಲ್ಲಿ ನಿಮಗೆ ಬಹಳ ಪ್ರಯೋಜನ ಆಗುವಂಥದ್ದು ಅಥವಾ ನಿಮ್ಮ ಸ್ನೇಹಿತರಿಗೆ ಉಪಯೋಗ ಅಗಬಹುದಾದದ್ದು ಇರಬಹುದು. ಆದ್ದರಿಂದ ಅವರ ಜತೆಗೂ ಈ ಮಾಹಿತಿ ಹಂಚಿಕೊಳ್ಳಿ. ಆ ಎಂಟು ಬದಲಾವಣೆಗಳೇನು ಎಂಬುದನ್ನು ತಿಳಿದುಕೊಳ್ಳಲು ಮುಂದೆ ಓದಿ.
ವಿದೇಶಕ್ಕೆ ಹಣ ಕಳಿಸಿದರೆ 5% ತೆರಿಗೆ
ಇನ್ನು ಮುಂದೆ ವಿದೇಶಗಳಿಗೆ ಹಣ ಕಳುಹಿಸಿದರೆ ಅದಕ್ಕೆ ಟಾಕ್ಸ್ ಕಲೆಕ್ಷನ್ ಅಟ್ ಸೋರ್ಸ್ (TCS) 5% ತೆರಿಗೆ ಕಟ್ಟಬೇಕಾಗುತ್ತದೆ. ಆದರೆ ಇದರಲ್ಲಿ ಕೆಲವು ವಿನಾಯಿತಿಗಳನ್ನು ನೀಡಲಾಗಿದೆ. ಉನ್ನತ ವ್ಯಾಸಂಗಕ್ಕೆ ಬ್ಯಾಂಕ್ ಗಳಿಗೆ ಶಿಕ್ಷಣ ಸಾಲ ಪಡೆದುಕೊಂಡಿದ್ದಲ್ಲಿ ಅಂಥದ್ದನ್ನು ವಿದೇಶಕ್ಕೆ ಕಳುಹಿಸಿದಲ್ಲಿ ಟಿಸಿಎಸ್ 0.5% ಕಡಿತ ಆಗಬಹುದು. ಆದರೆ ಇನ್ನೂ ಕೆಲವು ವಿನಾಯಿತಿಗಳಿವೆ. ಆ ಉದ್ದೇಶಗಳಿಗೆ ಹಾಗೂ ಆ ಮಿತಿಯೊಳಗೆ ಹಣವನ್ನು ರವಾನೆ ಮಾಡಿದಲ್ಲಿ ಯಾವುದೇ ಟಿಸಿಎಸ್ ಕಡಿತ ಆಗುವುದಿಲ್ಲ. ಅಕ್ಟೋಬರ್ 1ರಿಂದಲೇ ಇದು ಜಾರಿಗೆ ಬರುತ್ತದೆ ಎಂಬುದು ನೆನಪಿರಲಿ.
ಹೊಸ ಟಿಸಿಎಸ್ ನಿಯಮ
ಹೊಸದಾಗಿ ತೆರಿಗೆ ಇಲಾಖೆ ಪರಿಚಯಿಸಿರುವ ನಿಯಮದ ಪ್ರಕಾರ, ಇ ಕಾಮರ್ಸ್ ಕಂಪೆನಿಗಳು ಯಾವುದೇ ಸರಕು ಮತ್ತು ಸೇವೆಗಳ ಮಾರಾಟದ ಮೇಲೆ 1% ತೆರಿಗೆ ಕಡಿತ ಮಾಡಬೇಕು. ಇದು ಕೂಡ ಅ. 1ರಿಂದಲೇ ಅನ್ವಯ. ಹಣಕಾಸು ಕಾಯ್ದೆ, 2020ಕ್ಕೆ ಹೊಸ ಸೆಕ್ಷನ್ 194- O ಅನ್ನು ಆದಾಯ ತೆರಿಗೆ ಕಾಯ್ದೆ 1961ಕ್ಕೆ ಸೇರ್ಪಡೆ ಮಾಡಲಾಗಿದೆ.
ಮೋಟಾರು ವಾಹನ ನಿಯಮಗಳಲ್ಲಿ ಬದಲಾವಣೆ
ಕೇಂದ್ರ ಮೋಟಾರು ವಾಹನ ನಿಯಮ 1989ಕ್ಕೆ ಹಲವು ತಿದ್ದುಪಡಿಗಳು ಅ. 1ರಿಂದ ಅನ್ವಯ ಆಗುತ್ತವೆ. ಇನ್ನು ಮುಂದೆ ವಾಹನದ ದಾಖಲಾತಿಗಳು ಎಲೆಕ್ಟ್ರಾನಿಕ್ ಸ್ವರೂಪದಲ್ಲಿ ಇದ್ದರೆ ಸಾಕು. ಕಾಗದ- ಪತ್ರ, ದಾಖಲೆಗಳಲ್ಲೇ ತೋರಿಸಬೇಕು ಎಂದೇನಿಲ್ಲ. ಯಾವುದಾದರೂ ತಪ್ಪೆಸಗಿ, ದಾಖಲೆಗಳನ್ನು ವಶಪಡಿಸಿಕೊಳ್ಳಬೇಕು ಎಂಬ ಸನ್ನಿವೇಶ ಎದುರಾದಾಗಲೂ ಇದೇ ನಿಯಮ ಅನ್ವಯ. ಯಾವುದೇ ಡಿಎಲ್ ಬಳಕೆಗೆ ಮತ್ತೆ ಚಾಲನೆ ನೀಡಿದರೂ ಅಥವಾ ಅಮಾನ್ಯ ಮಾಡಿದರೂ ಅದು ಐಟಿ ಪೋರ್ಟಲ್ ನಲ್ಲಿ ಕಾಲಾನುಕ್ರಮದಲ್ಲಿ ದಾಖಲಾಗುತ್ತದೆ. ಆದ್ದರಿಂದ ಚಾಲಕರು ವಾಹನದ ದಾಖಲೆಗಳನ್ನು ಸರ್ಕಾರದ ಪೋರ್ಟಲ್ ಗಳಾದ ಡಿಜಿಲಾಕರ್ ಅಥ ಎಂ- ಪರಿವಾಹನ್ ನಲ್ಲಿ ಇಟ್ಟುಕೊಳ್ಳಬಹುದು.
ಆರೋಗ್ಯ ವಿಮೆ ಸ್ಟ್ಯಾಂಡರ್ಡೈಸೇಷನ್
ಈ ಹಿಂದೆ ಯಾವುದು ಹೆಲ್ತ್ ಇನ್ಷೂರೆನ್ಸ್ ಅಡಿಯಲ್ಲಿ ಕವರ್ ಆಗುತ್ತಿರಲಿಲ್ಲವೋ ಅಂಥವುಗಳ ಬಗ್ಗೆ ಐಆರ್ ಡಿಎಐ ಆದೇಶವೊಂದನ್ನು ಹೊರಡಿಸಿದೆ. ಅದರ ಪ್ರಕಾರ, ಹೆಲ್ತ್ ಇನ್ಷೂರೆನ್ಸ್ ಮಾಡಿಸುವ ನಲವತ್ತೆಂಟು ತಿಂಗಳು ಮುನ್ನ ಕಾಣಿಸಿಕೊಂಡ ಆರೋಗ್ಯ ಸಮಸ್ಯೆ ಹಾಗೂ ಪಾಲಿಸಿ ಪಡೆದ ಮೂರು ತಿಂಗಳಲ್ಲಿ ಕಾಣಿಸಿಕೊಂಡ ಅನಾರೋಗ್ಯ ಹಾಗೂ ಒತ್ತಡ ಅಥವಾ ಇನ್ಯಾವುದೇ ಮಾನಸಿಕ ಆರೋಗ್ಯ ಸಮಸ್ಯೆಗೆ ಚಿಕಿತ್ಸೆಯೂ ಕವರ್ ಆಗುತ್ತದೆ.
ಗೃಹ ಸಾಲ, ಪರ್ಸನಲ್ ಲೋನ್, ಕಾರ್ ಲೋನ್ ಬಡ್ಡಿ ದರ
ಆರ್ ಬಿಐನಿಂದ ಬ್ಯಾಂಕ್ ಗಳಿಗೆ ಕಡ್ಡಾಯವಾಗಿ ಸೂಚನೆ ಬಂದಿದೆ. ಅದರಂತೆ, ಕಾರು, ಮನೆ ಸಾಲ ಮತ್ತು ಪರ್ಸನಲ್ ಲೋನ್ ಹಾಗೂ ಎಂಎಸ್ ಎಂಇ ಸಾಲವನ್ನು ಸಹ ಎಕ್ಸ್ ಟರ್ನಲ್ ಬೆಂಚ್ ಮಾರ್ಕ್ ರೇಟ್ ಗೆ ಜೋಡಣೆ ಮಾಡಲೇಬೇಕು. ಇದರಿಂದಾಗಿ ವಿವಿಧ ಸಾಲಗಳ ಮೇಲಿನ ಬಡ್ಡಿ ದರವು ಕಡಿಮೆ ಆಗುತ್ತದೆ.
ಕ್ರೆಡಿಟ್/ ಡೆಬಿಟ್ ಕಾರ್ಡ್ ಗೆ ಹೊಸ ಮಾರ್ಗದರ್ಶಿ ಸೂತ್ರ
ಕ್ರೆಡಿಟ್, ಡೆಬಿಟ್ ಕಾರ್ಡ್ ಮೂಲಕ ಮಾಡುವ ಡಿಜಿಟಲ್ ವ್ಯವಹಾರ ಸುರಕ್ಷಿತವಾಗಿರಬೇಕು ಎಂಬ ಕಾರಣಕ್ಕೆ ಹೊಸ ನಿಯಮವನ್ನು ತಂದಿದೆ. ಅದರ ಪ್ರಕಾರ, ಕಾರ್ಡ್ ದಾರರು ತಮಗೆ ಬೇಕಾದ ಕಾರ್ಡ್ ಕಾರ್ಯ ನಿರ್ವಹಣೆಯನ್ನು ಆನ್ ಹಾಗೂ ಆಫ್ ಮಾಡಿಕೊಳ್ಳುವುದಕ್ಕೆ ಅವಕಾಶ ಇದೆ. ಉದಾಹರಣೆಗೆ ಎಟಿಎಂ, ಪಿಒಎಸ್, ಆನ್ ಲೈನ್ ಅಥವಾ ಕಾಂಟ್ಯಾಕ್ಟ್ ಲೆಸ್ ವ್ಯವಹಾರ... ಇವುಗಳನ್ನು ಬೇಕೆಂದಾಗ ಆಕ್ಟಿವೇಟ್ ಮಾಡಬಹುದು. ಬೇಡದಿದ್ದಾಗ ಡಿ ಆಕ್ಟಿವೇಟ್ ಮಾಡಿಕೊಳ್ಳಬಹುದು. ಜತೆಗೆ ತಾವು ಮಾಡುವ ವ್ಯವಹಾರಕ್ಕೆ ಮಿತಿಯನ್ನು ಕೂಡ ನಿಗದಿ ಮಾಡಿಕೊಳ್ಳಬಹುದು.
ಎಲ್ ಪಿಜಿ ಸಂಪರ್ಕ ಉಚಿತವಲ್ಲ
ಪ್ರಧಾನಮಂತ್ರಿ ಉಜ್ವಲ ಯೋಜನಾ (PMUY) ಅಡಿಯಲ್ಲಿ ಉಚಿತ ಗ್ಯಾಸ್ ಸಿಲಿಂಡರ್ ಯೋಜನೆಯು ಸೆಪ್ಟೆಂಬರ್ 30ಕ್ಕೆ ಕೊನೆಯಾಗುತ್ತದೆ. ಜುಲೈ ತಿಂಗಳಲ್ಲಿ ಕೇಂದ್ರ ಸಚಿವ ಸಂಪುಟವು ಉಚಿತ ಅನಿಲ ಸಿಲಿಂಡರ್ ಯೋಜನೆಯನ್ನು ಸೆಪ್ಟೆಂಬರ್ 30ನೇ ತಾರೀಕಿನ ತನಕ ವಿಸ್ತರಣೆ ಮಾಡಿತ್ತು.
ಟೀವಿ ಖರೀದಿ ದುಬಾರಿಯಾಗಲಿದೆ
ಈ ಹಿಂದೆ ಒಂದು ವರ್ಷಗಳ ಕಾಲ ಯಾವುದೇ ಸುಂಕ ಇಲ್ಲದೆ ಓಪನ್ ಸೆಲ್ ಪ್ಯಾನೆಲ್ ಗೆ ಅವಕಾಶ ಮಾಡಿಕೊಡಲಾಗಿತ್ತು. ಅದು ಸೆಪ್ಟೆಂಬರ್ 30ಕ್ಕೆ ಕೊನೆಯಾಗಿದೆ. ಟೀವಿ ಸೆಟ್ ಗಳು ದುಬಾರಿ ಆಗಲಿವೆ. ಅಕ್ಟೋಬರ್ 1ನೇ ತಾರೀಕಿನಿಂದ 5% ಆಮದು ಸುಂಕ ಬೀಳಲಿದೆ. ಇದು ಎಲ್ಲ ಓಪನ್ ಸೆಲ್ ಪ್ಯಾನೆಲ್ ಗೂ ಬೀಳುತ್ತದೆ. ಆತ್ಮನಿರ್ಭರ್ ಭಾರತ್ ಅಡಿಯಲ್ಲಿ ಸ್ಥಳೀಯವಾಗಿ ಉತ್ಪಾದಕರನ್ನು ಉತ್ತೇಜಿಸಬೇಕು ಹಾಗೂ ಆಮದು ಪ್ರಮಾಣ ಕಡಿಮೆ ಮಾಡಬೇಕು ಎಂಬ ಕೇಂದ್ರ ಸರ್ಕಾರದ ಆಲೋಚನೆಗೆ ಇದು ಸಹಾಯ ಮಾಡಬಹುದು.