EPF ಬಗ್ಗೆ ಕೇಂದ್ರದಿಂದ ಮಹತ್ವದ ಘೋಷಣೆ ಸಾಧ್ಯತೆ; ಆರ್ಥಿಕ ಉತ್ತೇಜನಕ್ಕೆ ದಾರಿ
100ಕ್ಕೂ ಹೆಚ್ಚು ಮಂದಿ ಕಾರ್ಮಿಕರು ಕೆಲಸ ಮಾಡುವ ಸಂಸ್ಥೆಗಳಲ್ಲಿ 15 ಸಾವಿರ ರುಪಾಯಿಯೊಳಗೆ ಆದಾಯ ಸಿಬ್ಬಂದಿಯ ಇಪಿಎಫ್ (ಕಾರ್ಮಿಕ ಭವಿಷ್ಯ ನಿಧಿ) ಪಾಲನ್ನು ಸರ್ಕಾರವೇ ಪಾವತಿಸುವ ಬಗ್ಗೆ ಇರುವ ಪ್ರಸ್ತಾವವನ್ನು ಪರಿಶೀಲಿಸಲಾಗುತ್ತಿದೆ. ಯಾರಿಗೆ ಕಡಿಮೆ ಸಂಬಳ ಬರುತ್ತಿದೆಯೋ ಅಂಥವರಿಗೆ ಈ ಯೋಜನೆಯು ಅನ್ವಯ ಆಗಲಿದೆ.
ಈ ಹಿಂದೆ ಸರ್ಕಾರ ಘೋಷಿಸಿದ್ದ ಯೋಜನೆಯ ವಿಸ್ತರಣೆಯ ಭಾಗದಂತೆ ಇದು ಗೋಚರಿಸುತ್ತಿದೆ. ಈ ಹಿಂದೆ, ಯಾವ ಕಂಪೆನಿಯಲ್ಲಿ ನೂರು ಮಂದಿ ತನಕ ಕಾರ್ಮಿಕರಿದ್ದಾರೋ ಮತ್ತು ಆ ಪೈಕಿ 90 ಪರ್ಸೆಂಟ್ ನಷ್ಟು ಮಂದಿ ತಿಂಗಳಿಗೆ 15 ಸಾವಿರಕ್ಕಿಂತ ಕಡಿಮೆ ದುಡಿಯುತ್ತಿರುತ್ತಾರೋ ಅಂಥವರ ಪಿ.ಎಫ್. ಪಾಲನ್ನು ಕೇಂದ್ರ ಸರ್ಕಾರ ಪಾವತಿ ಮಾಡುತ್ತದೆ ಎಂದು ಘೋಷಿಸಲಾಗಿತ್ತು.
ಸದ್ಯಕ್ಕೆ ಹೊಸ ಪ್ರಸ್ತಾಪ ಮಾತ್ರ ಇದೆ. ಇನ್ನೂ ಸಾಕಷ್ಟು ಮಾಹಿತಿ ಹೊರಬರಬೇಕಿದೆ ಎಂದು ಹೆಸರು ಹೇಳಲು ಇಚ್ಛಿಸದ ಸರ್ಕಾರಿ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಹಾಗಿದ್ದರೆ ಆ ಪ್ರಸ್ತಾಪ ಏನು ಎಂಬುದರ ವಿವರ ಹೀಗಿದೆ.
15 ಸಾವಿರದೊಳಗೆ ಆದಾಯ ಇರುವ ಎಲ್ಲರ ಪಿಎಫ್ ಪಾವತಿ
* 15 ಸಾವಿರ ರುಪಾಯಿಯೊಳಗೆ ಆದಾಯ ಇರುವ ಎಲ್ಲ ಕಾರ್ಮಿಕರ ಪಿಎಫ್ ಅನ್ನು ಪಾವತಿಸುವುದು. ಈಗಿರುವಂತೆ ನೂರು ಕಾರ್ಮಿಕರಲ್ಲಿ 90% ಮಂದಿಗೆ ಎಂಬ ಹದಿನೈದು ಸಾವಿರದೊಳಗೆ ವೇತನ ಇರಬೇಕು ಎಂಬ ನಿಯಮದಿಂದ ವಿನಾಯಿತಿ ನೀಡುವುದು.
* 200 ಮಂದಿಯಷ್ಟು ಕಾರ್ಮಿಕರನ್ನು ನೇಮಿಸಿಕೊಂಡಿದ್ದರು 90 ಪರ್ಸೆಂಟ್ ಮಂದಿ 15 ಸಾವಿರದೊಳಗೆ ಸಂಬಳ ಪಡೆಯುತ್ತಿದ್ದರೆ ಅಂತಹವರ ಪಿಎಫ್ ಮೊತ್ತವನ್ನೂ ಪಾವತಿಸುವುದು.
* 100 ಮಂದಿಯೊಳಗೆ ಸಿಬ್ಬಂದಿ ಇದ್ದು, ಅದರಲ್ಲಿ 90 ಪರ್ಸೆಂಟ್ ಬದಲಿಗೆ 60 ಪರ್ಸೆಂಟ್ ಮಂದಿಗೆ 15 ಸಾವಿರದೊಳಗೆ ಸಂಬಳ ಪಡೆಯುತ್ತಿದ್ದರೂ ಪಿಎಫ್ ಪಾವತಿಸುವುದು.
ಎಷ್ಟು ಮೊತ್ತ ಸರ್ಕಾರ ಪಾವತಿಸುತ್ತದೆ?
ಇನ್ನು ಉದ್ಯೋಗದಾತರು ಹಾಗೂ ಉದ್ಯೋಗಿಗಳು ಇಬ್ಬರದೂ ಸೇರಿ 24% ಪಿ.ಎಫ್. ಮೊತ್ತವನ್ನು ಸರ್ಕಾರವೇ ನಿಡುತ್ತದೋ ಅಥವಾ ಅದರಲ್ಲಿ ಸ್ವಲ್ಪ ಮೊತ್ತವನ್ನು ಮಾತ್ರ ನಿಡುತ್ತದೋ ಎಂಬುದು ತಿಳಿದುಬಂದಿಲ್ಲ. ಒಂದು ವೇಳೆ ಈ ಯೋಜನೆ ಜಾರಿಗೆ ಬಂದಲ್ಲಿ ಮೂರು ತಿಂಗಳ ಅವಧಿಗೆ ಮಾತ್ರ.
ಎಲ್ಲ ವಲಯಕ್ಕೂ ಅನ್ವಯ
ಸರ್ಕಾರದಿಂದ ಮುಂದಿನ ಆರ್ಥಿಕ ಉತ್ತೇಜನ ಬಂದಲ್ಲಿ ಈ ಅಂಶ ಒಳಗೊಂಡಿರಲಿದೆ ಎಂಬುದನ್ನು ಅಧಿಕಾರಿಗಳು ಹೇಳುತ್ತಾರೆ. ಎಲ್ಲ ವಲಯದಲ್ಲೂ ಇದು ಅನ್ವಯಿಸಲಾಗುತ್ತದೆ. ಆದರೆ ಫಲಾನುಭವಿಗಳನ್ನು ನಿರ್ಧರಿಸುವಾಗ 15 ಸಾವಿರ ಮೊತ್ತವನ್ನು ನಿಗದಿ ಮಾಡಲಾಗುತ್ತದೆ ಎಂದು ತಿಳಿಸಲಾಗಿದೆ.
ಹಣಕಾಸು ಸಮಸ್ಯೆ ಇರುವ ಸಂಸ್ಥೆಗಳಿಗೆ ಅನುಕೂಲ
ಸದ್ಯಕ್ಕೆ ಜಾರಿಯಲ್ಲಿರುವ ಪ್ರಸ್ತಾಪದಿಂದ ಹನ್ನೊಂದು ಲಕ್ಷ ಮಂದಿಗೆ ಅನುಕೂಲ ಆಗಲಿದೆ. ಅದೇ ಇನ್ನಷ್ಟು ವಿನಾಯಿತಿ ನೀಡಿದರೆ ಕಡಿಮೆ ಸಂಬಳ ಪಡೆಯುವ ಇಪ್ಪತ್ತು ಲಕ್ಷ ಮಂದಿಗೆ ಸಹಾಯ ಆಗಲಿದೆ. ಇದು ಸಾಕಾ ಅಂದರೆ, ಕೆಲವರು ಇಲ್ಲ ಅನ್ನಬಹುದು. ಆದರೆ ತುಂಬ ಕಷ್ಟದಲ್ಲಿ ನಡೆಯುತ್ತಿರುವ, ಹಣದ ಸಮಸ್ಯೆ ಎದುರಿಸುತ್ತಿರುವ ಸಂಸ್ಥೆಗಳಿಗೆ ಖಂಡಿತಾ ಅನುಕೂಲ ಆಗಲಿದೆ.