ಕೊರೊನಾ ಎಫೆಕ್ಟ್: ಶ್ರೀಮಂತ ಕುಳಗಳಿಗೆ ತೆರಿಗೆ ಹೆಚ್ಚಿಸಲು ಸಿದ್ಧವಾಗಿದೆ ಯೋಜನೆ
ಭಾರತೀಯ ಕಂದಾಯ ಸೇವೆ (ಐಆರ್ ಎಸ್)ಗೆ ಸೇರಿದ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ಗುಂಪು ಕೊರೊನಾ ವಿರುದ್ಧ ಹೋರಾಟಕ್ಕೆ ಹೊಸ ಯೋಜನೆಯೊಂದನ್ನು ಮುಂದಿಟ್ಟಿದೆ. ಅಲ್ಪಾವಧಿ ಕ್ರಮ ಎಂಬಂತೆ, ಕೇಂದ್ರೀಯ ನೇರ ತೆರಿಗೆ ಮಂಡಳಿಗೆ ಈ ಅಧಿಕಾರಿಗಳು ಸಲಹೆಯನ್ನು ನೀಡಿದ್ದಾರೆ. 10 ಲಕ್ಷಕ್ಕಿಂತ ಹೆಚ್ಚಿನ ಆದಾಯ ಇರುವವರಿಗೆ ಹೆಚ್ಚಿನ ತೆರಿಗೆ ಮತ್ತು ಕೋವಿಡ್- ಪರಿಹಾರ ಸೆಸ್ ವಿಧಿಸಲು ಸಲಹೆ ಮಾಡಿದ್ದಾರೆ.
ಆರ್ಥಿಕ ವರ್ಷದಲ್ಲಿ 1 ಕೋಟಿಗಿಂತ ಹೆಚ್ಚು ಗಳಿಸುವವರಿಗೆ 40 ಪರ್ಸೆಂಟ್ ಗೆ ತೆರಿಗೆ ಏರಿಸಲು ಸಲಹೆ ಮಾಡಲಾಗಿದೆ. ಇನ್ನೊಂದು ಪರ್ಯಾಯ ಮಾರ್ಗವಾಗಿ ಯಾರ ನಿವ್ವಳ ಆಸ್ತಿ ಮೌಲ್ಯವು 5 ಕೋಟಿ ಅಥವಾ ಅದಕ್ಕಿಂತ ಹೆಚ್ಚಿರುತ್ತದೋ ಅಂಥವರಿಗೆ ವೆಲ್ತ್ ಟ್ಯಾಕ್ಸ್ ಹಾಕಲು ಸಲಹೆ ಮಾಡಲಾಗಿದೆ.
ಹೆಚ್ಚುವರಿಯಾಗಿ 15ರಿಂದ 18 ಸಾವಿರ ಕೋಟಿ ಸಂಗ್ರಹ
ಆದರೆ, ಈ ತೆರಿಗೆಯನ್ನು 3ರಿಂದ 6 ತಿಂಗಳ ಸೀಮಿತ ಮತ್ತು ಅಲ್ಪಾವಧಿಗೆ ವಿಧಿಸಬೇಕು ಎನ್ನಲಾಗಿದೆ. ಇನ್ನು ಐವತ್ತು ಮಂದಿ ಐಆರ್ ಎಸ್ ಅಧಿಕಾರಿಗಳ ಸಲಹೆಯಂತೆ, ಹೆಚ್ಚುವರಿಯಾಗಿ ಒಂದು ಬಾರಿ 4% ಸೆಸ್ ಅನ್ನು ಕೋವಿಡ್ ಪರಿಹಾರ ಸೆಸ್ ಎಂದು ವಿಧಿಸಲು ಸಲಹೆ ನೀಡಿದ್ದಾರೆ. ಹೀಗೆ ಮಾಡುವುದರಿಂದ ಹೆಚ್ಚುವರಿಯಾಗಿ 15ರಿಂದ 18 ಸಾವಿರ ಕೋಟಿ ರುಪಾಯಿ ಸಂಗ್ರಹ ಆಗಬಹುದು ಎಂಬ ನಿರೀಕ್ಷೆ ಇದೆ.
10 ಲಕ್ಷ ರುಪಾಯಿಗಿಂತ ಹೆಚ್ಚು ಆದಾಯ ಇರುವವರಿಗೆ ಅನ್ವಯ
ಮಧ್ಯಮ ವರ್ಗದವರಿಗೆ ಇದರ ಹೊರೆ ಬೀಳದಂತೆ ಯಾರ ಆದಾಯವು 10 ಲಕ್ಷ ರುಪಾಯಿಗಿಂತ ಹೆಚ್ಚಿರುತ್ತದೋ ಅಂಥವರಿಗೆ ಹೆಚ್ಚುವರಿ ತೆರಿಗೆ ಹಾಕಬೇಕು ಎಂಬುದು ಸಲಹೆಯಾಗಿದೆ. ಇನ್ನು ತೆರಿಗೆ ವಿನಾಯಿತಿಯನ್ನು ಪ್ರಾಮಾಣಿಕ ಪಾವತಿದಾರರಿಗೆ ನೀಡಬೇಕು ಎಂದು ಸಲಹೆ ಬಂದಿದೆ.
ಅತ್ಯಂತ ಶ್ರೀಮಂತರು ಸ್ವಯಂಪ್ರೇರಿತರಾಗಿ ಬಿಟ್ಟುಕೊಡಲಿ
ಹೇಗೆ ಎಲ್ ಪಿಜಿ ಸಬ್ಸಿಡಿ ಬಿಟ್ಟಕೊಡಲು 'ಗೀವ್ ಇಟ್ ಅಪ್' ಎಂಬ ಅಭಿಯಾನ ಶುರುವಾಗಿತ್ತೋ, ಅದೇ ರೀತಿ ಅತ್ಯಂತ ಶ್ರೀಮಂತರು ಕನಿಷ್ಠ ಒಂದು ತೆರಿಗೆ ಸಬ್ಸಿಡಿ/ವಿನಾಯಿತಿ/ ತೆರಿಗೆ ರಿಯಾಯಿತಿಯನ್ನು ಒಂದು ಬಾರಿ ಸ್ವಯಂಪ್ರೇರಿತರಾಗಿ ಬಿಟ್ಟುಕೊಡಲು ಕೇಳಿಕೊಳ್ಳುವ ಬಗ್ಗೆ ಕೂಡ ಸಲಹೆ ಬಂದಿದೆ.
ವಿದೇಶಿ ಕಂಪೆನಿಗಳು ಸರ್ ಚಾರ್ಜ್ ಏರಿಕೆ
ಮಧ್ಯಮ ಅವಧಿಗೆ, ಅಂದರೆ 9- 12 ತಿಂಗಳ ಅವಧಿಗೆ ವಿದೇಶಿ ಕಂಪೆನಿಗಳಿಗೆ ಈಗಿರುವ 1ರಿಂದ 10 ಕೋಟಿ ಆದಾಯದ ಸರ್ ಚಾರ್ಜ್ 2 ಪರ್ಸೆಂಟ್ ಅನ್ನು ಏರಿಸಬೇಕು. ಇನ್ನು 10 ಕೋಟಿ ಮೀರಿದ ಆದಾಯ ಇರುವ ಕಂಪೆನಿಗಳಿಗೆ ಈಗಿರುವ 5% ಅನ್ನು ಏರಿಸುವ ಮೂಲಕ ಸರ್ಕಾರದ ಆದಾಯ ಹೆಚ್ಚಿಸಿಕೊಳ್ಳುವುದಕ್ಕೆ ಸಲಹೆ ಬಂದಿದೆ.