ಎರಡು ದಿನಗಳಿಂದ ಮುಚ್ಚಲಾಗಿದ್ದ ಪೀಣ್ಯ ಮೇಲ್ಸೇತುವೆಯನ್ನು ಶುಕ್ರವಾರ ನಿರ್ದಿಷ್ಟ ವಾಹನಗಳಿಗಾಗಿ ತೆರೆಯಲಾಗಿದೆ. ವಾಹನಗಳನ್ನು ಲಘು ಮೋಟಾರು ವಾಹನಗಳು ಮತ್ತು ಲಘು ಸರಕು ವಾಹನಗಳ ಸಂಚಾರಕ್ಕೆ ಮಾತ್ರ ತೆರೆಯಲಾಗಿದೆ. ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್ಎಚ್ಎಐ) ಲೋಡ್ ಟೆಸ್ಟಿಂಗ್ಗೆ ಅನುಕೂಲವಾಗುವಂತೆ 4.2 ಕಿಮೀ ಉದ್ದದ ಮೇಲ್ಸೇತುವೆಯನ್ನು ಮಂಗಳವಾರ ರಾತ್ರಿ 11 ಗಂಟೆಯಿಂದ ಎಲ್ಲಾ ವಾಹನಗಳಿಗೆ ತಾತ್ಕಾಲಿಕವಾಗಿ ಮುಚ್ಚಲಾಗಿದೆ.
ಎನ್ಎಚ್ಎಐ ಅಧಿಕಾರಿಗಳು ಫ್ಲೈಓವರ್ ಅನ್ನು ಬಲಪಡಿಸಲು ಬಲವರ್ಧನೆಗಳಾಗಿ ಸೇರಿಸಲಾದ 240 ಪ್ರಿಸ್ಟ್ರೆಸ್ಡ್ ಕೇಬಲ್ಗಳ ಮೇಲೆ ಲೋಡ್ ಪರೀಕ್ಷೆಗಳನ್ನು ನಡೆಸಿದರು. ಶುಕ್ರವಾರ ಬೆಳಗ್ಗೆ 10 ಗಂಟೆಗೆ ಪರೀಕ್ಷೆಗಳು ಪೂರ್ಣಗೊಂಡಿವೆ. ಈ ಹಿನ್ನೆಲೆಯಲ್ಲಿ ಟ್ರಾಫಿಕ್ ಪೊಲೀಸರು ಪೀಣ್ಯ ಮತ್ತು ನಾಗಸಂದ್ರದ ಎರಡೂ ಕಡೆಗಳಲ್ಲಿ ಹಾಕಲಾಗಿದ್ದ ಬ್ಯಾರಿಕೇಡ್ಗಳನ್ನು ತೆಗೆದು ದ್ವಿಚಕ್ರ ವಾಹನಗಳು, ಕಾರುಗಳು ಮತ್ತು ಲಘು ಸರಕು ಸಾಗಣೆ ವಾಹನಗಳಿಗೆ ಮೇಲ್ಸೇತುವೆ ಪ್ರವೇಶಿಸಲು ಅನುವು ಮಾಡಿಕೊಟ್ಟರು.

ಈ ಬಗ್ಗೆ ಮಾಹಿತಿ ನೀಡಿದ ಉಪ ಪೊಲೀಸ್ ಆಯುಕ್ತ (ಸಂಚಾರ ಉತ್ತರ) ಡಿ ಆರ್ ಸಿರಿ ಗೌರಿ, "ಬೆಳಿಗ್ಗೆ 11 ಗಂಟೆಯಿಂದ, ಫ್ಲೈಓವರ್ ಮೇಲೆ ಲಘು ಮೋಟಾರು ವಾಹನಗಳು ಮತ್ತು ಲಘು ಸರಕು ವಾಹನಗಳನ್ನು ಮಾತ್ರ ಅನುಮತಿಸಲಾಗಿದೆ. ಎಲ್ಲಾ ಭಾರೀ ವಾಹನಗಳು ಕೆಳಗಿನ ಸರ್ವಿಸ್ ರಸ್ತೆಯನ್ನು ಸಾಗುತ್ತಿವೆ. ಫ್ಲೈಓವರ್ ಮೇಲೆ ಭಾರೀ ವಾಹನಗಳನ್ನು ಯಾವಾಗ ಅನುಮತಿಸಬಹುದು ಎಂದು ನಮಗೆ ಇನ್ನೂ ತಿಳಿಸಲಾಗಿಲ್ಲ," ಎಂದು ಉಪ ಪೊಲೀಸ್ ಆಯುಕ್ತ (ಸಂಚಾರ ಉತ್ತರ) ಡಿ ಆರ್ ಸಿರಿ ಗೌರಿ ಹೇಳಿದರು.
ಬುಧವಾರದ (ತಾತ್ಕಾಲಿಕ ಮುಚ್ಚುವಿಕೆಯ ನಂತರದ ಮೊದಲ ಬೆಳಿಗ್ಗೆ), ಗೊಂದಲ ಮತ್ತು ದಟ್ಟಣೆಗೆ ಹೋಲಿಸಿದರೆ, ಶುಕ್ರವಾರದ ಸಂಚಾರವು ಯಾವುದೇ ಅಡೆತಡೆಯಿಲ್ಲದೆ ನಡೆಯುತ್ತಿದೆ ಎಂದು ಪೀಣ್ಯ ಸಂಚಾರ ಪೊಲೀಸ್ ಠಾಣೆಯ ಹಿರಿಯ ಸಂಚಾರ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ ಎಂದು ಡೆಕ್ಕನ್ ಹೆರಾಲ್ಡ್ ವರದಿ ಮಾಡಿದೆ.
"ಮೊದಲ ದಿನ (ಬುಧವಾರ), ಸಂಚಾರದಟ್ಟಣೆ ಅಧಿಕವಾಗಿರುವುದನ್ನು ನಾವು ನೋಡಿದ್ದೇವೆ. ಏಕೆಂದರೆ ಸಾಮಾನ್ಯವಾಗಿಯೇ ಜನರಲ್ಲಿ ಗೊಂದಲವಿತ್ತು. ಆದ್ದರಿಂದಾಗಿ ಸರ್ವಿಸ್ ರೋಡ್ನಲ್ಲಿ ಹಲವಾರು ವಾಹನಗಳ ದಟ್ಟಣೆ ಕಂಡು ಬಂದಿದೆ. ಆದರೆ ಇದು ಗುರುವಾರ ಸರಿಯಾಯಿತು. ಇಂದು (ಶುಕ್ರವಾರ) ಪರಿಸ್ಥಿತಿ ಉತ್ತಮವಾಗಿದೆ," ಎಂದು ಅಧಿಕಾರಿ ಹೇಳಿದರು.
ಫ್ಲೈಓವರ್ನ ಮೂರು ಸ್ಪ್ಯಾನ್ಗಳಲ್ಲಿ ಪ್ರಿಸ್ಟ್ರೆಸ್ಡ್ ಕೇಬಲ್ಗಳಲ್ಲಿ ತುಕ್ಕು ಕಂಡುಬಂದ ನಂತರ ಡಿಸೆಂಬರ್ 2021 ರಲ್ಲಿ ಭಾರೀ ವಾಹನಗಳಿಗೆ ಫ್ಲೈಓವರ್ ಅನ್ನು ಮುಚ್ಚಲಾಯಿತು. "ಎನ್ಎಚ್ಎಐ ಲೋಡ್ ಟೆಸ್ಟಿಂಗ್ ವರದಿಯನ್ನು ಸರಿಯಾದ ಸಮಯದಲ್ಲಿ ತಿಳಿಸುತ್ತದೆ," ಎಂದು ಜಂಟಿ ಪೊಲೀಸ್ ಕಮಿಷನರ್ (ಸಂಚಾರ) ಎಂ ಎನ್ ಅನುಚೇತ್ ಹೇಳಿದರು. ಪರೀಕ್ಷಾ ಫಲಿತಾಂಶಗಳ ಆಧಾರದ ಮೇಲೆ, ಎನ್ಎಚ್ಎಐ ಮುಂದಿನ ಕೆಲವು ವಾರಗಳಲ್ಲಿ ಎಲ್ಲಾ ವಾಹನಗಳಿಗೆ ಫ್ಲೈಓವರ್ ಅನ್ನು ಪುನಃ ತೆರೆಯುವ ನಿರೀಕ್ಷೆಯಿದೆ.


Click it and Unblock the Notifications