Pradhan Mantri Shram Yogi Maandhan Yojana : ತಿಂಗಳಿಗೆ 3 ಸಾವಿರ ರು. ಪೆನ್ಷನ್
ವರ್ಷದ ಹಿಂದೆ ಆರಂಭಿಸಲಾದ ಪೆನ್ಷನ್ ಸ್ಕೀಮ್ ವೊಂದನ್ನು ಈ ಲೇಖನದಲ್ಲಿ ವಿವರಿಸಲಾಗುತ್ತಿದೆ. ಇದು ಸರ್ಕಾರದ ಸ್ಕೀಮ್. ಹೆಸರು ಪ್ರಧಾನಮಂತ್ರಿ ಶ್ರಮ್ ಯೋಗಿ ಮಾನ್ ಧನ್ ಯೋಜನಾ. ಈ ಯೋಜನೆಯ ಗುರಿ ಅಸಂಘಟಿತ ವಲಯದ ಕಾರ್ಮಿಕರಿಗೆ ಅನುಕೂಲ ಮಾಡಿಕೊಡುವುದು.
ಈ ಯೋಜನೆಯ ಅಡಿಯಲ್ಲಿ ಫಲಾನುಭವಿಗಳಿಗೆ ಅರವತ್ತು ವರ್ಷ ಪೂರೈಸಿದ ನಂತರ ತಿಂಗಳಿಗೆ ಕನಿಷ್ಠ 3 ಸಾವಿರ ರುಪಾಯಿ ಪೆನ್ಷನ್ ಬರುತ್ತದೆ. ಇನ್ನು ಈ ಯೋಜನೆಯ ಅನುಕೂಲ ಪಡೆಯಲು ಇರುವಂಥ ಅರ್ಹತಾ ಮಾನದಂಡ ಏನು ಅಂತ ನೋಡುವುದಾದರೆ...
ಅರ್ಹತೆಗಳು ಏನು?
ವಯಸ್ಸು 18ರಿಂದ 40 ವರ್ಷದೊಳಗೆ ಇರಬೇಕು. ಯಾರು ಅಸಂಘಟಿತ ವಲಯದಲ್ಲಿ ಕಾರ್ಯನಿರ್ವಹಿಸುತ್ತಾರೋ ಅಂಥವರು ಅರ್ಹರು. ಅವರಿಗೆ ತಿಂಗಳಿಗೆ 15 ಸಾವಿರ ರುಪಾಯಿ ಅಥವಾ ಅದಕ್ಕಿಂತ ಕಡಿಮೆ ಆದಾಯ ಇರಬೇಕು. ಚಂದಾದಾರರು ಆದಾಯ ತೆರಿಗೆ ಪಾವತಿದಾರರಾಗಿರಬಾರದು. ಅಥವಾ ಬೇರೆ ಯಾವುದೇ ಸ್ಕೀಮ್ ಗಳ ಅಡಿಯಲ್ಲಿ, ಅಂದರೆ ನ್ಯಾಷನಲ್ ಪೆನ್ಷನ್ ಸ್ಕೀಮ್, ಇಎಸ್ ಐಸಿ ಅಥವಾ ಇಪಿಎಫ್ ಯೋಜನೆಯ ಚಂದಾದಾರರಾಗಿ ಇರಬಾರದು.
ಯೋಜನೆ ಫೀಚರ್ ಗಳೇನು?
ಈ ಯೋಜನೆ ಅಡಿಯಲ್ಲಿ ಫಲಾನುಭವಿಗಳು ಎಷ್ಟು ಮೊತ್ತವನ್ನು ಕೊಡುಗೆಯಾಗಿ ನೀಡುತ್ತಾರೋ ಅಷ್ಟೇ ಮೊತ್ತವನ್ನು ಸರ್ಕಾರ ಕೂಡ ಭರಿಸುತ್ತದೆ. ನಿರ್ದಿಷ್ಟ ವಯಸ್ಸಿಗೆ, ಇಂತಿಷ್ಟು ಹಣ ಪಾವತಿ ಮಾಡಬೇಕು ಎಂಬ ಲೆಕ್ಕಾಚಾರ ಇದೆ. ಈ ಯೋಜನೆ ಅಡಿಯಲ್ಲಿ ಪ್ರತಿ ಚಂದಾದಾರರು ಕನಿಷ್ಠ ಖಾತ್ರಿ ಪೆನ್ಷನ್ ಮೊತ್ತ 3000 ರುಪಾಯಿಯನ್ನು 60 ವರ್ಷ ತುಂಬಿದ ನಂತರ ಪ್ರತಿ ತಿಂಗಳು ಪಡೆಯುತ್ತಾರೆ. ಒಂದು ವೇಳೆ ಚಂದಾದಾರರು ಅರವತ್ತು ವರ್ಷದೊಳಗೆ ಮೃತಪಟ್ಟಲ್ಲಿ ಪತ್ನಿ/ಪತಿ ಈ ಯೋಜನೆಯನ್ನು ಮುಂದುವರಿಸಿಕೊಂಡು ಹೋಗಬಹುದು.
ನೋಂದಣಿ ಹೇಗೆ?
ಅರ್ಹ ಚಂದಾದಾರರು ಹತ್ತಿರದ ಕಾಮನ್ ಸರ್ವೀಸ್ ಸೆಂಟರ್ ಗಳಿಗೆ (ಸಿಎಸ್ ಸಿಗಳು) ಭೇಟಿ ನೀಡಿ, ನೋಂದಣಿ ಮಾಡಿಕೊಳ್ಳಬಹುದು. ಎಲ್ ಐಸಿಯಲ್ಲಿ ಕಾಮನ್ ಸರ್ವೀಸ್ ಸೆಂಟರ್ ಪಟ್ಟಿ ಸಿಗುತ್ತದೆ. ಉಳಿತಾಯ ಖಾತೆ ಅಥವಾ ಜನ್ ಧನ್ ಖಾತೆ ಮತ್ತು ಆಧಾರ್ ಖಾತೆಯು ಈ ಪೆನ್ಷನ್ ಖಾತೆ ತೆರೆಯುವುದಕ್ಕೆ ಅಗತ್ಯ. ದೇಶದಲ್ಲಿ ಇರುವ ಮೂರು ಲಕ್ಷಕ್ಕೂ ಹೆಚ್ಚು ಸಿಎಸ್ ಸಿಗಳಲ್ಲಿ ನೋಂದಣಿ ಸೇವೆ ಒದಗಿಸಲಾಗುತ್ತದೆ.
ಫಲಾನುಭವಿ ಮಧ್ಯದಲ್ಲೇ ಯೋಜನೆಯಿಂದ ನಿರ್ಗಮಿಸಿದರೆ...
ಒಂದು ವೇಳೆ ಚಂದಾದಾರರು ಹತ್ತು ವರ್ಷದ ಅವಧಿಯೊಳಗೆ ಈ ಯೋಜನೆಯಿಂದ ಹಣ ಹಿಂಪಡೆಯಬೇಕು ಅಂತ ಬಯಸಿದಲ್ಲಿ ಫಲಾನುಭವಿ ಪಾವತಿಸಿದ ಮೊತ್ತವನ್ನು ಬ್ಯಾಂಕ್ ಗಳ ಉಳಿತಾಯ ಖಾತೆ ಬಡ್ಡಿಯ ಲೆಕ್ಕದಲ್ಲಿ ಹಾಕಿ, ಹಿಂತಿರುಗಿಸಲಾಗುತ್ತದೆ. ಒಂದು ವೇಳೆ ಹತ್ತು ವರ್ಷದ ನಂತರ ಹಾಗೂ ಅವರಿಗೆ ಅರವತ್ತು ವರ್ಷ ತುಂಬುವ ಮೊದಲು ನಿರ್ಗಮಿಸಿದರೆ ಫಲಾನುಭವಿ ನೀಡಿದ ಕೊಡುಗೆ ಹಣ, ಆ ನಿಧಿ ಮೂಲಕ ಬಂದ ಬಡ್ಡಿ ಅಥವಾ ಉಳಿತಾಯ ಖಾತೆಯ ಬಡ್ಡಿದರ ಇವೆರಡರಲ್ಲಿ ಯಾವುದೋ ಹೆಚ್ಚು ಅದನ್ನು ಪಾವತಿಸಲಾಗುತ್ತದೆ.
ಈ ಯೋಜನೆ ಹೇಗೆ ಕೆಲಸ ಮಾಡುತ್ತದೆ?
ಕಾರ್ಮಿಕರೊಬ್ಬರು 18ನೇ ವಯಸ್ಸಿನಲ್ಲಿ ಈ ಯೋಜನೆಗೆ ಸೇರ್ಪಡೆಯಾದರೆ 55 ರುಪಾಯಿ ತಿಂಗಳ ಮೊತ್ತ ಪಾವತಿಸಲು ಶುರು ಮಾಡುತ್ತಾರೆ. ಅಷ್ಟೇ ಮೊತ್ತವನ್ನು ಸರ್ಕಾರ ನೀಡುತ್ತದೆ. ವಯಸ್ಸು ಹೆಚ್ಚಾಗುತ್ತಾ ಸಾಗಿದಂತೆ ಕಟ್ಟಬೇಕಾದ ಮೊತ್ತವೂ ಹೆಚ್ಚಾಗುತ್ತದೆ, ಮೊದಲ ತಿಂಗಳ ಮೊತ್ತವನ್ನು ಚಂದಾದಾರರು ನಗದಿನಲ್ಲಿ ಪಾವತಿಸುತ್ತಾರೆ. ಅದಕ್ಕೆ ರಸೀದಿಯನ್ನು ಪಡೆಯುತ್ತಾರೆ. ಯಾರೆಲ್ಲ ಈ ಯೋಜನೆ ಅಡಿಯಲ್ಲಿ ನೋಂದಣಿ ಮಾಡಿಕೊಳ್ಳುತ್ತಾರೆ ಅವರಿಗೆ ಸಿಎಸ್ ಸಿಯಿಂದ ಕಾರ್ಡ್ ಗಳನ್ನು ವಿತರಿಸಲಾಗುತ್ತದೆ. ಅದರಲ್ಲಿ ವಿಶಿಷ್ಟ ಗುರುತಿನ ಸಂಖ್ಯೆ ಇರುತ್ತದೆ.