ಇನ್ನು ಒಂದು ವಾರ ಇದೆ. ಅದು ಕಳೆದರೆ ಜೂನ್ 30ನೇ ತಾರೀಕು. ಅಷ್ಟರೊಳಗೆ ಮುಗಿಸಲೇಬೇಕಾದ ಕೆಲವು ಜವಾಬ್ದಾರಿಗಳು ಇವೆ ಎಂಬುದು ನಿಮ್ಮ ಗಮನದಲ್ಲಿ ಇದೆಯಾ? ಕೆಲವು ಎಂದು ಹೇಳುವ ಬದಲಿಗೆ ನಿರ್ದಿಷ್ಟವಾಗಿ ಸಂಖ್ಯೆಯನ್ನು ತಿಳಿಸುವುದು ಉತ್ತಮ. ಈ ನಾಲ್ಕು ಜವಾಬ್ದಾರಿಯನ್ನು ಜೂನ್ 30, 2020ರೊಳಗೆ ಪೂರ್ಣ ಮಾಡಿ.
ಕೊರೊನಾ ನಿಯಂತ್ರಿಸುವ ಕಾರಣಕ್ಕೆ ಮಾರ್ಚ್ ನಲ್ಲಿ ಲಾಕ್ ಡೌನ್ ಘೋಷಣೆ ಮಾಡಿದ್ದರಿಂದ ಗಡುವು ಮುಂದಕ್ಕೆ ಹೋಗಿದ್ದಿದೆ. ಈ ಸಲ ಕೂಡ ಮುಂದಕ್ಕೆ ಹೋಗಬಹುದು ಅಂದುಕೊಳ್ಳದೆ ಇವುಗಳನ್ನು ಪೂರೈಸಿದರೆ ನಿಮಗೇ ನೆಮ್ಮದಿ. ಅವುಗಳನ್ನು ಇಲ್ಲಿ ವಿವರಿಸಲಾಗುತ್ತಿದೆ. ಮುಂದೆ ಓದಿ.
ತೆರಿಗೆ ಹೂಡಿಕೆ
ತೆರಿಗೆ ವಿನಾಯಿತಿ ಪಡೆಯುವುದಕ್ಕೆ ಅರ್ಹ ಇರುವ ತೆರಿಗೆ ಉಳಿತಾಯ ಯೋಜನೆಗಳನ್ನು ಅಂತಿಮ ಮಾಡಿಕೊಳ್ಳಲು ಇದೇ ಸಮಯ. ಆದಾಯ ತೆರಿಗೆ ಕಾಯ್ದೆ 1961ರ ಅಡಿಯಲ್ಲಿ ಆರ್ಥಿಕ ವರ್ಷ 2019- 20ಕ್ಕೆ ಅನ್ವಯಿಸುವಂತೆ ಕೊನೆ ದಿನ ಇರುವುದು ಜೂನ್ 30ಕ್ಕೆ. ಆದಾಯ ತೆರಿಗೆ ಇಲಾಖೆಯು ಹೊಸದಾಗಿ ಅಧಿಸೂಚನೆ ಹೊರಡಿಸಿದ ತೆರಿಗೆ ಅರ್ಜಿಯಲ್ಲಿ ಪಟ್ಟಿಯೊಂದನ್ನು ಸೇರಿಸಿದೆ. ಏಪ್ರಿಲ್ ಹಾಗೂ ಜೂನ್ ಮಧ್ಯೆ ಮಾಡಿರುವ ಹೂಡಿಕೆ ಮಾಹಿತಿಯನ್ನು ನೀಡಿ, ಆರ್ಥಿಕ ವರ್ಷ 20ಕ್ಕೆ ತೆರಿಗೆ ವಿನಾಯಿತಿಗಾಗಿ ಕ್ಲೇಮ್ ಮಾಡಬಹುದು.
ಆರ್ಥಿಕ ವರ್ಷ 19ರ ತಡವಾಗಿರುವ ಐಟಿಆರ್
ಸಾಮಾನ್ಯವಾಗಿ ಐಟಿಆರ್ ಗೆ ಕೊನೆ ದಿನ ಜುಲೈ 31. ಆದರೆ ತಡವಾಗಿರುವ ಐಟಿಆರ್ (ಗಡುವಿನ ನಂತರ ರಿಟರ್ನ್ಸ್ ಫೈಲ್ ಮಾಡುವುದು) ಆ ಅಸೆಸ್ ಮೆಂಟ್ ವರ್ಷದೊಳಗೆ ಅಥವಾ ಮಾರ್ಚ್ 31ರೊಳಗೆ ಮಾಡಬೇಕು. ಆರ್ಥಿಕ ವರ್ಷ 19ಕ್ಕೆ ರಿಟರ್ನ್ ಫೈಲ್ ಮಾಡುವುದಕ್ಕೆ ಕೊನೆ ದಿನ ಇದ್ದದ್ದು ಮಾರ್ಚ್ 30, 2020ಕ್ಕೆ. ಆ ನಂತರ ಅದನ್ನು ಜೂನ್ 30, 2020ಕ್ಕೆ ವಿಸ್ತರಿಸಲಾಯಿತು. ತಡವಾಗಿರುವ ಅಥವಾ ಈ ಹಿಂದೆ ಯಾವುದಾದರೂ ಆದಾಯ ತಿಳಿಸಲು ಮರೆತಿದ್ದಲ್ಲಿ ಅಥವಾ ಅದು ತಪ್ಪಾಗಿದ್ದಲ್ಲಿ ಪರಿಷ್ಕೃತ ರಿಟರ್ನ್ ಫೈಲ್ ಮಾಡುವುದಕ್ಕೆ ಸಹ ಇದು ಕೊನೆ ದಿನ.
ಪ್ಯಾನ್ ಕಾರ್ಡ್ ಹಾಗೂ ಆಧಾರ್ ಜೋಡಣೆ
ಆಧಾರ್ ಜತೆಗೆ ಪ್ಯಾನ್ ಕಾರ್ಡ್ ಜೋಡಣೆ ಮಾಡುವುದಕ್ಕೆ ಸಹ ಇದು ಕೊನೆ ದಿನ. ಒಂದು ವೇಳೆ ಜೂನ್ 30, 2020ರೊಳಗೆ ಮಾಡದಿದ್ದಲ್ಲಿ ಪ್ಯಾನ್ ಕಾರ್ಡ್ ಕಾರ್ಯ ನಿರ್ವಹಣೆ ನಿಂತುಹೋಗುತ್ತದೆ. ಯಾವುದೇ ಆಸ್ತಿ ವ್ಯವಹಾರ, ಬ್ಯಾಂಕ್ ವ್ಯವಹಾರ ಅಥವಾ ಡಿಮ್ಯಾಟ್ ಖಾತೆಗೆ ಪ್ಯಾನ್ ಕಾರ್ಡ್ ಅನಿವಾರ್ಯ.
ಇತರ ಉಳಿತಾಯ
ಪಿಪಿಎಫ್ (ಪಬ್ಲಿಕ್ ಪ್ರಾವಿಡೆಂಟ್ ಫಂಡ್), ಸುಕನ್ಯಾ ಸಮೃದ್ಧಿ ಯೋಜನಾ (ಎಸ್ ಎಸ್ ವೈ) ಇಂಥ ಸಣ್ಣ ಉಳಿತಾಯ ಯೋಜನೆಗಳಿಗೆ ಆರ್ಥಿಕ ವರ್ಷದ ಕೊನೆಯೊಳಗೆ ಕನಿಷ್ಠ ಮೊತ್ತದ ಹೂಡಿಕೆ ಮಾಡಬೇಕು. ಆಗಷ್ಟೇ ಖಾತೆ ಸಕ್ರಿಯವಾಗಿರುತ್ತದೆ. ಈ ಗಡುವು ಕೂಡ ಜೂನ್ 30ರ ತನಕ ವಿಸ್ತರಣೆ ಆಗಿದೆ. ಪಿಪಿಎಫ್ ಗೆ ಕನಿಷ್ಠ 500 ಹಾಗೂ ಸುಕನ್ಯಾ ಸಮೃದ್ಧಿಗೆ 250 ರುಪಾಯಿ ಪಾವತಿಸಬೇಕು. ಈ ತನಕ ಇವುಗಳನ್ನು ಮಾಡದಿದ್ದಲ್ಲಿ ಬೇಗನೇ ಪೂರ್ತಿಗೊಳಿಸಿ.


Click it and Unblock the Notifications