ಭಾರತವನ್ನು ತಲ್ಲಣಗೊಳಿಸಿದ ಟಾಪ್ 7 ಹಗರಣಗಳು
ಭಾರತದಲ್ಲಿ ಹಗರಣಗಳಿಗೇನು ಕಡಿಮೆಯಿಲ್ಲ. ದೇಶದ ಆರ್ಥಿಕ ಪರಿಸ್ಥಿತಿಯನ್ನು ಅಲುಗಾಡಿಸಿ ಷೇರು ಪೇಟೆಯಲ್ಲಿ ಸಂಚಲನ, ಕೋಲಾಹಲ ಎಬ್ಬಿಸಿದ ಪ್ರಮುಖ ಹಗರಣಗಳತ್ತ ಒಂದು ನೋಟ ಇಲ್ಲಿದೆ.
ಅಕ್ರಮವಾಗಿ ಹಣ ಸಂಗ್ರಹ, ವ್ಯವಹಾರ, ನಕಲಿ ದಾಖಲೆ, ಷೇರುಪೇಟೆಗೆ ತಪ್ಪು ಮಾಹಿತಿ ನೀಡಿಕೆ ಮುಂತಾದವು ಆರ್ಥಿಕ ಅಸಮತೋಲನ ಸೃಷ್ಟಿಸುತ್ತವೆ. ಸೆಕ್ಯುರಿಟಿ ಎಕ್ಸ್ ಚೇಂಜ್ ಬೋರ್ಡ್ ಆಫ್ ಇಂಡಿಯಾ ಸಾಕಷ್ಟು ಕಠಿಣ ನಿರ್ಣಯಗಳನ್ನು ಕೈಗೊಂಡು ಆರ್ಥಿಕ ಅವ್ಯಹಾರ ತಡೆಗೆ ಕ್ರಮ ಜರುಗಿಸುತ್ತಲೇ ಇದೆ.
[ಭಾರತದ ಟಾಪ್ 25 ಹಗರಣಗಳು]
ಆದರೆ, ಆರ್ಥಿಕ ಅವ್ಯವಹಾರಗಳು ಅವ್ಯಾಹತವಾಗಿ ನಡೆಯುತ್ತಲೇ ಇದೆ. ಇಲ್ಲಿತನಕ ದೇಶ ಕಂಡ ಪ್ರಮುಖ ಹಗರಣಗಳು ಮುಂದಿದೆ ನೋಡಿ...
ಹರ್ಷದ್ ಮೆಹ್ತಾ ಪ್ರಕರಣ
1991-92 ರಲ್ಲಿ ಷೇರುಮಾರುಕಟ್ಟೆ ಸುರಕ್ಷತೆ ಹಗರಣ, ಹರ್ಷದ್ ಮೆಹ್ತಾ ಅವರು ಬ್ಯಾಂಕ್ ಹಾಗೂ ಸ್ಟಾಕ್ ಮಾರುಕಟ್ಟೆಯಲ್ಲಿ ಮೂಡಿಸಿದ ಸಂಚಲನದಿಂದಾಗಿ ಎಸಿಸಿಯಂಥ ಷೇರುಗಳು 500 ರು ಮೌಲ್ಯದಿಂದ 10,000ಕ್ಕೇರಿತ್ತು.
ಸುಮಾರು 10,000 ಕೋಟಿ ಮೌಲ್ಯದ ಹಗರಣ ಇದಾಗಿದೆ. ಹಗರಣ ಬೆಳಕಿಗೆ ಬಂದ ಮೇಲೆ ಹರ್ಷದ್ ಮೆಹ್ತಾ ಬಂಧನವಾಯ್ತು, ಷೇರುಪೇಟೆ ವ್ಯವಹಾರ ನಡೆಸದಂತೆ ನಿಷೇಧ ಹೇರಲಾಯಿತು.ಕೇತನ್ ಪಾರೇಖ್ ಹಗರಣ
2001ರಲ್ಲಿ ಹೂಡಿಕೆದಾರರಿಗೆ ಕಳ್ಳ ಮಾರ್ಗ ಹಾಕಿಕೊಟ್ಟು ಅಲಹಾಬಾದ್ ಹಾಗೂ ಕೋಲ್ಕತ್ತಾ ಷೇರು ಪೇಟೆಯನ್ನು ಅಲ್ಲಾಡಿಸಿದ ಕೇತನ್ ಪಾರೇಖ್ k-10 ಸೂಚ್ಯಂಕ ಎಂದು ತನ್ನದೇ ಬದಲಿ ವ್ಯವಸ್ಥೆ ಸ್ಥಾಪಿಸಿ ಸುಮಾರು 1 ಲಕ್ಷ ಕೋಟಿ ರು ದೋಚಿದ್ದ ಎಂದು ಆರೋಪಿಸಲಾಗಿದೆ.CA ಓದಿರುವ ಕೇತನ್ ಎನ್ ಎಚ್ ಸೆಕ್ಯುರಿಟೀಸ್ ಹೆಸರಿನಲ್ಲಿ ಆರ್ಥಿಕ ಜಗತ್ತಿಗೆ ಕಾಲಿರಿಸಿದ್ದ.
ಸತ್ಯಂ ಹಗರಣ
2009ರಲ್ಲಿ ಬೆಳಕಿಗೆ ಬಂದ ಸತ್ಯಂ ಕಂಪ್ಯೂಟರ್ ಸರ್ವೀಸಸ್ ಹಗರಣ ಭಾರತ ಕಂಡ ಅತಿ ದೊಡ್ಡ ಕಾರ್ಪೊರೇಟ್ ಹಗರಣವಾಗಿದೆ. ಕಂಪನಿಯ ಆರ್ಥಿಕ ದಾಖಲೆಗಳನ್ನು ತಿದ್ದಿದ್ದಲ್ಲದೆ ಸ್ವಜನ ಪಕ್ಷಪಾತ ಮಾಡಿದ ಆರೋಪದ ಮೇಲೆ ಚೇರ್ಮನ್ ರಾಮಲಿಂಗ ರಾಜು ಜೈಲು ಸೇರಬೇಕಾಯಿತು.
2009ರ ಜ.7ರಂದು ರಾಜು ರಾಜೀನಾಮೆ ನೀಡಿದರು. ಸುಮಾರು 1.47 ಬಿಲಿಯನ್ ಡಾಲರ್ ಮೊತ್ತದ ಅವ್ಯವಹಾರ ಇದಾಗಿದೆ. ಸಿಬಿಐ ಸಮರ್ಥವಾದ ಚಾರ್ಜ್ ಶೀಟ್ ಹಾಕದ ಕಾರಣ ಸತ್ಯಂ ರಾಜು ಸುಪ್ರೀಂಕೋರ್ಟಿನಿಂದ ಜಾಮೀನು ಪಡೆದುಕೊಂಡರು. ಅದರೆ, ವಿಚಾರಣೆ ಇನ್ನೂ ಬಾಕಿಯಿದೆ.
ರೂಪ್ ಬಾನ್ಸಲಿ ಹಗರಣ
ಸಿ.ಆರ್ ಭಾನ್ಸಲಿ, ರೂಪ್ ಭಾನ್ಸಲಿ ಅವರ ಸಿಆರ್ ಬಿ ಹೆಸರಿನ ಹೂಡಿಕೆ ಸಂಸ್ಥೆ ಸ್ಥಾಪಿಸಿದ್ದರು. ಮ್ಯೂಚುವಲ್ ಫಂಡ್, ನಿಶ್ಚಿತ ಠೇವಣಿ ಮೂಲಕ ಗಳಿಸಿದ ಹಣವನ್ನು ಬೇನಾಮಿ ಕಂಪನಿಗಳಿಗೆ ವರ್ಗಾವಣೆ ಮಾಡಿ ಅಕ್ರಮವಾಗಿ ಹಣ ಗಳಿಸುತ್ತಿದ್ದರು.
ಸುಬ್ರತಾ ರಾಯ್ ಸಹರಾ ಇಂಡಿಯಾ
ಸೆಬಿಯ ಕಾನೂನುಗಳನ್ನು ಉಲ್ಲಂಘಿಸಿ ಹೂಡಿಕೆದಾರರಿಂದ ಹಣವನ್ನು ಸಂಗ್ರಹಿಸಿದ್ದಕ್ಕಾಗಿ ಸಹರಾ ಸಮೂಹದ ಈ ಎರಡು ಕಂಪೆನಿಗಳು ತಮ್ಮ ಹೂಡಿಕೆದಾರರಿಗೆ 24 ಸಾವಿರ ಕೋಟಿ ರೂ.ಗಳನ್ನು ಶೇ.15ರಷ್ಟು ವಾರ್ಷಿಕ ಬಡ್ಡಿಯೊಂದಿಗೆ ಮರುಪಾವತಿಸಬೇಕಾಗಿದೆ.
2008 ಮತ್ತು 2011ರ ನಡುವೆ ಷೇರು ಮಾರುಕಟ್ಟೆಯಲ್ಲಿ ಲಿಸ್ಟ್ ಆಗದಿರುವ ತನ್ನ ಎರಡು ಕಂಪನಿಗಳ ಮೂಲಕ ರೂ. 24,029 ಕೋಟಿ ನಿಯಮ ಉಲ್ಲಂಘಿಸಿ ಸಂಗ್ರಹಿಸಿದ ಆರೋಪ ಹೊತ್ತಿದೆ.
ಕಳೆದ 33 ವರ್ಷಗಳಲ್ಲಿ ಒಂದೇ ಒಂದು ಬೇನಾಮಿ ಖಾತೆ, ಹಣಕಾಸು ಅವ್ಯವಹಾರ ಕಾಣದೆ 12 ಕೋಟಿಗೂ ಅಧಿಕ ಹೂಡಿಕೆದಾರರನ್ನು ಸೃಷ್ಟಿಸಿದ ಸಹಾರಾ ಸಂಸ್ಥೆ ಎದೆಗುಂದಿಲ್ಲ ಎಂಬುದು ಅಚ್ಚರಿಯಾದರೂ ಸತ್ಯ ಸಂಗತಿ.
ಶಾರದಾ ಚಿಟ್ ಫಂಡ್ ಹಗರಣ
ಸುದಿಪ್ತೋ ಸೇನ್ ಮಾಲೀಕತ್ವದ ಶಾರದಾ ಸಮೂಹದ ಚಿಟ್ ಫಂಡ್ ಅವ್ಯವಹಾರ ಸುಮಾರು 20,000 ಕೋಟಿ ರು ಎನ್ನಲಾಗಿದೆ. ಪಶ್ಚಿಮ ಬಂಗಾಳದ ಬ್ಲೇಡ್ ಕಂಪನಿ ಸ್ಥಾಪಕರು ಸದ್ಯ ಜೈಲಿನಲ್ಲಿದ್ದಾರೆ. ತನಿಖೆ ಮುಂದುವರೆದಿದೆ.
ಎನ್ಎಸ್ ಇಎಲ್ ಹಗರಣ
ಕೇವಲ ಕಾಗದ ಪತ್ರ ವ್ಯವಹಾರದ ಮೂಲಕ ಹೂಡಿಕೆದಾರರ ಖರೀದಿ ಹಾಗೂ ಮಾರಾಟದ ಅಷ್ಟೂ ಪ್ರಕ್ರಿಯೆಯನ್ನು ನಡೆಸಲಾಗುತ್ತಿತ್ತು. ಆದರೆ, ಹೂಡಿದ ಹಣ ಷೇರುಗಳಾಗಿ ಪರಿವರ್ತನೆಗೊಳ್ಳುತ್ತಿಲ್ಲ ಎಂಬುದು ತಡವಾಗಿ ಬೆಳಕಿಗೆ ಬಂದಿತು.
ಎನ್ಎಎಫ್ ಇ ಹಾಗೂ ಫೈನಾನ್ಶಿಯಲ್ ಟೆಕ್ನಾಲಜೀಸ್ ಆಫ್ ಇಂಡಿಯಾ ಲಿನ ಬೆಂಬಲಿತ ಎನ್ ಎಸ್ ಇಎಲ್ ಸಂಸ್ಥೆಯ ಜಿಗ್ನೇಶ್ ಶಾ ಹಾಗೂ ಶ್ರೀಕಾಂತ್ ಜಾವಳ್ಗೇಕರ್ ಪ್ರಮುಖ ಆರೋಪಿಗಳು.