ಕೊರೊನಾ ಬಿಕ್ಕಟ್ಟು ಪೂರ್ಣವಾಗಿ ನಿವಾರಣೆ ಆದ ನಂತರ ನಮ್ಮ ನಿಮ್ಮೆಲ್ಲರ ಬದುಕು ಈ ಹಿಂದಿನಂತೆ ಆಗುವುದಿಲ್ಲ. ಆದಾಯಕ್ಕೆ ಹೊಸ ದಾರಿಯನ್ನು ಕಂಡುಕೊಳ್ಳಬೇಕಾಗುತ್ತದೆ. ಖರ್ಚಿನ ಪರಿಯನ್ನೂ ಬದಲಿಸಿಕೊಳ್ಳಬೇಕಾಗುತ್ತದೆ. ಏಕೆಂದರೆ, ಈಗಾಗಲೇ ಎಫ್.ಡಿ. ಮೇಲಿನ ಬಡ್ಡಿ ದರ ಕಡಿಮೆ ಆಗಿದೆ. ಇನ್ನು ಬಾಡಿಗೆ ಮನೆಗಳಿಗೆ ಬೆಂಗಳೂರಿನಂಥ ನಗರಗಳಲ್ಲಿ ಮುಂಚಿನಂತೆ ಬೇಡಿಕೆ ಇಲ್ಲ.
ಪಿ.ಜಿ.ಗಳನ್ನು ನಡೆಸುತ್ತಿದ್ದವರು ಅವುಗಳನ್ನು ಮುಚ್ಚಿ ಯಾವ ಕಾಲವಾಯಿತೋ? ಕಂಪೆನಿಗಳಿಗೆ ಕ್ಯಾಬ್ ಓಡಿಸುತ್ತಿದ್ದವರು, ಬಾರ್- ರೆಸ್ಟೋರೆಂಟ್ ಗಳನ್ನು ನಡೆಸುತ್ತಿದ್ದವರು, ಅಷ್ಟೇ ಏಕೆ ಮುದ್ರಣ ಮಾಧ್ಯಮಕ್ಕೂ ಹೊಡೆತ ಬಿದ್ದಿದೆ. ಕಣ್ಣು ಮುಚ್ಚಿ ತೆರೆಯುವಷ್ಟರಲ್ಲಿ ಅರಗಿನ ಮನೆಯಂತೆ ಕರಗಿಹೋಗುತ್ತಿದೆ ಆರ್ಥಿಕತೆ ಸೌಧ.
ಈಗಿನ ಸನ್ನಿವೇಶದಲ್ಲಿ ಏನು ಮಾಡಬೇಕು ಎಂಬುದು ಹಲವರ ಪ್ರಶ್ನೆ. ಈ ಲೇಖನದಲ್ಲಿ ಕೆಲವು ಸಲಹೆಗಳನ್ನು ನೀಡಲಾಗುತ್ತಿದೆ. ನೀವೇ ಅಳೆದು- ತೂಗಿ ನೋಡಿ. ಸರಿ ಎನಿಸಿದರಷ್ಟೇ ಅಳವಡಿಸಿಕೊಳ್ಳಿ.
ಹೊಸದಾಗಿ ಸಾಲ ಮಾಡಬೇಡಿ
ಆರ್ಥಿಕತೆಗೆ ಚೈತನ್ಯ ತುಂಬಬೇಕು ಎಂಬ ಕಾರಣಕ್ಕೆ ಕಡಿಮೆ ಬಡ್ಡಿ ದರಕ್ಕೆ ಸಾಲ ನೀಡಲಾಗುತ್ತಿದೆ. ಮನೆ ಸಾಲ, ಕಾರು ಸಾಲ, ಪರ್ಸನಲ್ ಲೋನ್, ಚಿನ್ನದ ಮೇಲಿನ ಸಾಲ ಎಲ್ಲವೂ ಕಡಿಮೆ ಬಡ್ಡಿ ದರಕ್ಕೆ ದೊರೆಯುತ್ತಿದೆ. ಆದರೆ ನೆನಪಿಡಿ, ಬಾಡಿಗೆ ಮನೆಗಳು ಸಿಕ್ಕಾಪಟ್ಟೆ ಖಾಲಿ ಇವೆ. ಮುಂಚಿನಂತೆ ಬೇಡಿಕೆ ಇಲ್ಲ. ಅದರಲ್ಲೂ ಬೆಂಗಳೂರಿನಂಥ ನಗರಗಳಲ್ಲಿ ಕೆಲಸ ಮಾಡುತ್ತಿದ್ದವರು ತಂತಮ್ಮ ಊರುಗಳಿಗೆ ತೆರಳಿದ್ದು, ವರ್ಕ್ ಫ್ರಮ್ ಹೋಮ್ ಮಾಡುತ್ತಿದ್ದಾರೆ. ಅವರ್ಯಾರೂ ತಕ್ಷಣಕ್ಕೆ ಹಿಂತಿರುಗುವ ಸಾಧ್ಯತೆ ಇಲ್ಲ. ಇನ್ನು ಕಾರಿನ ಸಾಲ ಕಡಿಮೆಗೆ ಸಿಗುತ್ತದೆ ಅಂತ ಖರೀದಿಸುವ ಮುನ್ನ ಪೆಟ್ರೋಲ್ ದರ, ನಿರ್ವಹಣೆ ವೆಚ್ಚ ಎಲ್ಲವನ್ನೂ ಗಮನಿಸಿ. ಅದಕ್ಕೂ ಮುನ್ನ ಒಂದು ಕಾರು ನಿಮಗೆ ಅಗತ್ಯವೇ ಎಂಬುದನ್ನು ಆಲೋಚನೆ ಮಾಡಿ. ಕಡಿಮೆ ಬಡ್ಡಿಗೆ ಸಿಗುತ್ತದೆ ಎಂಬುದೊಂದೇ ಸಾಲ ಪಡೆಯುವುದಕ್ಕೆ ಮಾನದಂಡ ಅಲ್ಲ. ಆದರೆ ಮನೆ ಲೀಸ್ ಗೆ ಹಾಕಿಸಿಕೊಳ್ಳುವುದಿದ್ದರೆ, ಅದು ಕೂಡ ಬ್ಯಾಂಕ್ ಬಡ್ಡಿಗಿಂತ ಹೆಚ್ಚಿಗೆ ವರ್ಕ್ ಔಟ್ ಆಗುತ್ತದೆ ಎನ್ನುವುದಾದರೆ ಮಾಡಬಹುದು. ಬಾಡಿಗೆ ಅಂತ ಕಟ್ಟುತ್ತಿದ್ದ ಹಣವನ್ನು ಇಎಂಐಗೆ ಕಟ್ಟುತ್ತೇವೆ. ಲೀಸ್ ಮೊತ್ತ ನಮ್ಮ ಪಾಲಿಗೆ ಉಳಿತಾಯ ಆಗುತ್ತದೆ ಎಂದಾದಲ್ಲಿ ಹಾಗೆ ಮಾಡಬಹುದು.
ಯಾವ ವದಂತಿಯನ್ನೂ ನಂಬಬೇಡಿ
ಕೊರೊನಾ ಕಾರಣಕ್ಕೆ ನಾನಾ ವದಂತಿಗಳನ್ನು ಹಬ್ಬಿಸಲಾಗುತ್ತಿದೆ. ಚಿನ್ನದ ಬೆಲೆ ಹತ್ತು ಗ್ರಾಮ್ ಗೆ ಎಂಬತ್ತು ಸಾವಿರ ಆಗುತ್ತೆ ಅಥವಾ ಮೂವತ್ತು ಸಾವಿರಕ್ಕೂ ಕೆಳಗೆ ಬರುತ್ತದೆ. ರಿಯಲ್ ಎಸ್ಟೇಟ್ ಕೇಳುವವರೇ ಇಲ್ಲದಂತಾಗುತ್ತದೆ ಅಥವಾ ಬ್ಯಾಂಕ್ ಖಾತೆಯಲ್ಲಿನ ಹಣವನ್ನು ಸರ್ಕಾರ ತೆಗೆದುಕೊಳ್ಳಬಹುದು... ಹೀಗೆ ದಿನಕ್ಕೊಂದು ಬಗೆಯಲ್ಲಿ ವದಂತಿ ತೇಲಾಡುತ್ತಿರುತ್ತದೆ. ಅಧಿಕೃತವಾಗಿ ಸರ್ಕಾರದಿಂದ ಯಾವ ಘೋಷಣೆ ಬಾರದೆ ಏನನ್ನೂ ನಂಬದಿರಿ. ಅದೇ ರೀತಿ ಸಾಲ, ಯೋಜನೆಗಳ ಘೋಷಣೆಗಳನ್ನೂ ಸರ್ಕಾರದ ಮೂಲಕ ಬಂದರೆ ಮಾತ್ರ ನಂಬಿ. ಗಾಬರಿ ಬಿದ್ದು, ಯಾವುದೇ ಆತುರದ ನಿರ್ಧಾರಕ್ಕೆ ಬರಬೇಡಿ. ಇದೇ ಸಮಯ ಅಂದುಕೊಂಡು ಕೆಲವರು ನಿಮ್ಮ ಹಣಕ್ಕೆ ಅಧಿಕ ಬಡ್ಡಿಯನ್ನು ನೀಡುವ ಆಸೆ ತೋರಿಸುತ್ತಿದ್ದಾರೆ. ಆರ್ ಬಿಐ ಈ ವಿಚಾರದಲ್ಲಿ ನಿಯಮ ರೂಪಿಸಿದೆ. ಆ ನಿಗದಿತ ಮಿತಿಗಿಂತ ಹೆಚ್ಚಿನ ದರದ ಬಡ್ಡಿ ನೀಡಲು ಸಾಧ್ಯವಿಲ್ಲ. ಹಾಗೂ ಒಂದು ವೇಳೆ ನೀಡುತ್ತಿದ್ದಲ್ಲಿ ದೂರು ನೀಡಿ. ಅಂಥ ಕಡೆ ಹಣ ಹೂಡಿಕೆ ಮಾಡಬೇಡಿ.
ಕಡ್ಡಾಯವಾಗಿ ಇನ್ಷೂರೆನ್ಸ್ ಮಾಡಿಸಿ
ಭಾರತದಲ್ಲಿ ಇನ್ಷೂರೆನ್ಸ್ ಬಗ್ಗೆ ಒಂದು ಬಗೆಯ ನಿರ್ಲಕ್ಷ್ಯ ಇದೆ. ಜೀವ ವಿಮೆ, ಆರೋಗ್ಯ ವಿಮೆ, ಟರ್ಮ್ ಇನ್ಷೂರೆನ್ಸ್ ಹೀಗೆ ಎಲ್ಲದರ ಬಗೆಯೂ ನಿರ್ಲಕ್ಷ್ಯ. ಆದರೆ ಹೆಲ್ತ್ ಇನ್ಷೂರೆನ್ಸ್ ಅದೆಷ್ಟು ಮುಖ್ಯವಾಗುತ್ತದೆ ಎಂಬುದು ಈ ಸಂದರ್ಭದಲ್ಲಿ ಅರಿವಿಗೆ ಬರುತ್ತದೆ. ಮನೆಯಲ್ಲಿರುವ ಎಲ್ಲ ವಯಸ್ಸಿನವರಿಗೂ ಹೆಲ್ತ್ ಇನ್ಷೂರೆನ್ಸ್ ಮಾಡಿಸಿ. ಇನ್ನು ಯಾರು ದುಡಿಯುತ್ತಿರುತ್ತಾರೋ ಅವರ ವಾರ್ಷಿಕ ಆದಾಯದ ಹತ್ತು ಪಟ್ಟು ಮೊತ್ತಕ್ಕೆ ಟರ್ಮ್ ಇನ್ಷೂರೆನ್ಸ್ ತೆಗೆದುಕೊಳ್ಳಿ. ವಿಮೆ ಮಾಡಿಸುವಾಗ ಉಳಿತಾಯ, ಹೂಡಿಕೆ ಹಾಗೂ ರಿಸ್ಕ್ ಇಂಥ ನಾನಾ ಉದ್ದೇಶಗಳಿಗೆ ಖರೀದಿ ಮಾಡಲಾಗುತ್ತದೆ. ನಿಮ್ಮ ಉದ್ದೇಶ ಏನು ಎಂಬ ಸ್ಪಷ್ಟತೆ ಇರಲಿ. ಕೆಲಸ ಕಳೆದುಕೊಂಡಲ್ಲಿ ಅದಕ್ಕೂ ಇನ್ಷೂರೆನ್ಸ್ ಇದೆ. ಅಂಥ ಅಪಾಯಗಳು ಇರುವವರು ಮುಂಚಿತವಾಗಿಯೇ ವಿಮೆ ಮಾಡಿಸಿಕೊಳ್ಳಿ.
ಹೂಡಿಕೆ, ಉಳಿತಾಯ, ಇಎಂಐ ನಿಲ್ಲಿಸಬೇಡಿ
ಕೊರೊನಾ ಬಂದುಬಿಟ್ಟಿದೆ, ಅದಕ್ಕೆ ನಮ್ಮ ಕೈಯಲ್ಲಿ ಹಣ ಇರಬೇಕು ಎಂಬ ಕಾರಣಕ್ಕೆ ಸದ್ಯಕ್ಕ್ ನೀವು ಮಾಡುತ್ತಿರುವ ಹೂಡಿಕೆ, ಉಳಿತಾಯ ಹಾಗೂ ಇಎಂಐ ಪಾವತಿ ಯಾವುದನ್ನೂ ನಿಲ್ಲಿಸಬೇಡಿ. ನಿಮ್ಮ ವೇತನದಲ್ಲಿ ಯಾವ ಬದಲಾವಣೆ ಆಗಿಲ್ಲ ಹಾಗೂ ಎಲ್ಲವನ್ನೂ ಮುಂದುವರಿಸಿಕೊಂಡು ಹೋಗಲು ಸಮಸ್ಯೆ ಇಲ್ಲ ಎಂದಾದಲ್ಲಿ ಯಾವುದನ್ನೂ ನಿಲ್ಲಿಸಬೇಡಿ. ಹಾಗೆ ಉಳಿತಾಯ ಹೂಡಿಕೆ ಮತ್ತು ಇಎಂಐ ನಿಲ್ಲಿಸುವುದರಿಂದ ಅತಿ ದೊಡ್ಡ ನಷ್ಟವನ್ನು ತಲೆ ಮೇಲೆ ಎಳೆದುಕೊಳ್ಳುತ್ತೀರಿ ಅಥವಾ ಲಾಭ ಕಡಿಮೆ ಆಗುತ್ತದೆ. ಆದ್ದರಿಂದ ಈ ಬಗ್ಗೆ ಹೆಚ್ಚಿನ ಗಮನ ಇರಲಿ. ಇನ್ನು ಹೊಸ ಗ್ಯಾಜೆಟ್, ಟೀವಿ, ಲ್ಯಾಪ್ ಟಾಪ್ ಅಂತ ಖರೀದಿಸಿ, ಹೊಸ ಇಎಂಐಗಳನ್ನು ಕಟ್ಟಬೇಕು ಎಂಬ ಸ್ಥಿತಿ ತಂದುಕೊಳ್ಳಬೇಡಿ.


Click it and Unblock the Notifications