"ಹೋಟೆಲ್ ಬಿಜಿನೆಸ್ ನಲ್ಲಿ ಇರುವಷ್ಟು ಲಾಭ ಯಾವುದರಲ್ಲೂ ಇಲ್ಲ"
- ಇಂಥ ಮಾತನ್ನು ನೀವು ಕೇಳಿರಬಹುದು. ಆಡಿರಬಹುದು. ಅಥವಾ ಗಟ್ಟಿಯಾಗಿ ನಂಬಿರಬಹುದು. ಹೋಟೆಲ್ ಶುರು ಮಾಡಬೇಕು ಅಂದುಕೊಳ್ಳುವವರಿಗಾಗಿ ಈ ಲೇಖನ. ಹೋಟೆಲ್ ಉದ್ಯಮದಲ್ಲೇ ಹತ್ತಿರ ಹತ್ತಿರ ಮೂವತ್ತೈದು- ನಲವತ್ತು ವರ್ಷದ ಅನುಭವ ಇರುವ ನರಸಿಂಹ ಜೆ ಪೂಜಾರಿಯನ್ನು ಗುಡ್ ರಿಟರ್ನ್ಸ್ ಕನ್ನಡದಿಂದ ಮಾತನಾಡಿಸಲಾಗಿದೆ.
ಬೆಂಗಳೂರಿನ ಚಾಮರಾಜಪೇಟೆಯಲ್ಲಿ ಇರುವ ಶಬರಿ ಹೋಟೆಲ್ ನಲ್ಲಿ ಮ್ಯಾನೇಜರ್ ಜವಾಬ್ದಾರಿ ಅವರದು. ಆದರೆ ಹೋಟೆಲ್ ಮಾಲೀಕರಾದ ಚಂದ್ರು ಅವರಿಗೆ ಚಿಕ್ಕಪ್ಪ ಆಗಬೇಕು ನರಸಿಂಹ ಪೂಜಾರಿ. ಶಬರಿ ಹೋಟೆಲ್ ಗೆ ಬಹಳ ಒಳ್ಳೆಯ ಹೆಸರಿದೆ. ಹೋಟೆಲ್ ಲಾಭದಲ್ಲಿದೆ. ಆಹಾರ ಪದಾರ್ಥಗಳ ಬಗ್ಗೆ ಗ್ರಾಹಕರು ತುಂಬ ಒಳ್ಳೆಯ ಮಾತನಾಡುತ್ತಾರೆ.
ಹೋಟೆಲ್ ಬಿಜಿನೆಸ್ ಮಾಡಬೇಕು ಅಂದುಕೊಳ್ಳುವವರಿಗೆ ನರಸಿಂಹ ಅವರು ಹಂಚಿಕೊಂಡ ಸಂಗತಿಗಳಿಂದ ಸಹಾಯ ಆಗಬಹುದು. ಇನ್ನೇಕೆ ತಡ, ಓವರ್ ಟು ನರಸಿಂಹ ಪೂಜಾರಿ.
ಸ್ಥಳದ ಆಯ್ಕೆ, ಅನುಮತಿ ಇತ್ಯಾದಿ
"ಹೋಟೆಲ್ ಶುರು ಮಾಡುವುದಕ್ಕೆ ಸ್ಥಳದ ಆಯ್ಕೆ ಬಹಳ ಮುಖ್ಯ. ಏಕೆಂದರೆ ಕೆಲವು ಸ್ಥಳದಲ್ಲಿ ಹೋಟೆಲ್ ಆರಂಭಿಸುವುದಕ್ಕೆ ಆಯಾ ಕಾರ್ಪೊರೇಷನ್ ನವರು ಅನುಮತಿ ನೀಡುವುದಿಲ್ಲ. ಉದಾಹರಣೆಗೆ ಶಾಲೆ ಹತ್ತಿರ ಇದ್ದ ಕಡೆ ಅನುಮತಿ ಸಿಗುವ ಸಾಧ್ಯತೆ ಕಡಿಮೆ. ಇನ್ನು ಆಯಾ ಕಾರ್ಪೊರೇಷನ್ ನವರ ಅನುಮತಿ, ವಿದ್ಯುಚ್ಛಕ್ತಿ ಕಂಪೆನಿಯವರ ಪರ್ಮಿಷನ್ ಇತ್ಯಾದಿ ಕಾನೂನಿಗೆ ಸಂಬಂಧಿಸಿದ ಎಲ್ಲ ವಿಚಾರಗಳನ್ನು ಒಂದು ಕಡೆಯಿಂದ ಪೂರೈಸಿಕೊಳ್ಳಬೇಕು. ಯಾವುದೇ ಹೋಟೆಲ್ ಗೆ ಅಡುಗೆ ಭಟ್ಟರು, ಕ್ಲೀನರ್ ಗಳು, ಹೆಲ್ಪರ್ ಗಳು ಬಹಳ ಮುಖ್ಯ. ಒಂದೇ ರೀತಿಯಲ್ಲಿ ರುಚಿಯನ್ನು ಕೊಡಬೇಕಾಗುತ್ತದೆ. ನಮ್ಮದು ಚಿಕ್ಕ ಹೋಟೆಲ್. ಇಲ್ಲಿಗೆ ನನ್ನನ್ನೂ ಸೇರಿದ ಹಾಗೆ ಇಪ್ಪತ್ತೆರಡು ಮಂದಿ ಕೆಲಸಗಾರರು ಇದ್ದೀವಿ. ಅವರು ಉಳಿದುಕೊಳ್ಳುವುದಕ್ಕೆ ಸ್ಥಳಾವಕಾಶ, ಸಂಬಳ ಇತ್ಯಾದಿ ವ್ಯವಸ್ಥೆ ಮಾಡಿಕೊಡಬೇಕು. ನನ್ನ ಪ್ರಕಾರ: ಕ್ಲೀನರ್ ಗಳು ಸಿಗುವುದಂತೂ ಬಹಳ ಕಷ್ಟ ಇದೆ. ಮಾಲೀಕರಾದವರಿಗೆ ಹೋಟೆಲ್ ಬಗ್ಗೆ ಸ್ವಲ್ಪವಾದರೂ ತಿಳಿವಳಿಕೆ ಇರಬೇಕು. ಅಡುಗೆ- ಕಾಫಿ ಮಾಡಬೇಕು ಅಂತಲ್ಲದಿದ್ದರೂ ಕನಿಷ್ಠ ಪಕ್ಷ ಕ್ಯಾಷಿಯರ್ ಆಗಿ ಕೂತು ಕೆಲಸ ಮಾಡುವಂಥ ತಾಳ್ಮೆ, ತಿಳಿವಳಿಕೆಯಾದರೂ ಇರಲೇಬೇಕು.
ಸರ್ವೀಸ್ ಗಿಂತ ಸೆಲ್ಫ್ ಸರ್ವೀಸ್ ಗೆ ಡಿಮ್ಯಾಂಡ್
"ಈಗೆಲ್ಲ ಸರ್ವೀಸ್ ಹೋಟೆಲ್ ಗೆ ಟ್ರೆಂಡ್ ಇಲ್ಲ. ಏಕೆಂದರೆ, ಸ್ವಿಗ್ಗಿ- ಝೊಮ್ಯಾಟೋ ಇಂಥವೆಲ್ಲ ಬಂದು, ಬೇಡಿಕೆ ಕಡಿಮೆ ಆಗಿದೆ. ಆದರೆ ಸರ್ವೀಸ್ ಇರುವ ಹೋಟೆಲ್ ಮಾಡಬೇಕು ಅಂದರೆ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ಬೇಕಾಗುತ್ತಾರೆ. ಹೋಟೆಲ್ ಉದ್ಯಮದ ನಿಜವಾದ ಸಮಸ್ಯೆ ಇರುವುದು ಕಾರ್ಮಿಕರ ಕೊರತೆ ಎನ್ನುವುದರಲ್ಲಿ. ಇನ್ನು ರಾಶಿ ರಾಶಿ ತಿಂಡಿ- ಊಟ ಕೊಡುವುದನ್ನು ಬಯಸುವವರಿಗಿಂತ ರುಚಿಯಾಗಿ ನೀಡುವುದನ್ನು ನಿರೀಕ್ಷೆ ಮಾಡುತ್ತಾರೆ. ಆದರೆ ಕಟ್ಟಡ ನಿರ್ಮಾಣ ಮತ್ತಿತರ ಶ್ರಮದ ಕೆಲಸ ಮಾಡುವಂಥ ಜಾಗಗಳಲ್ಲಿ ಹೋಟೆಲ್ ಇದ್ದರೆ ಪ್ರಮಾಣ ಕೂಡ ಹೆಚ್ಚಿಗೆ ನೀಡಬೇಕಾಗುತ್ತದೆ. ದರವನ್ನು ಹೋಟೆಲ್ ಅಸೋಸಿಯೇಷನ್ ನಿಂದ ನಿಗದಿ ಮಾಡಲಾಗುತ್ತದೆ. ಅದಕ್ಕಿಂತ ವಿಪರೀತ ಹೆಚ್ಚಿನ ದರ ಇಟ್ಟಿದ್ದರೆ, ಚೆನ್ನಾಗಿ ನಿರ್ವಹಣೆ ಮಾಡದಿದ್ದಲ್ಲಿ ದೂರು ನೀಡಬಹುದಾಗಿರುತ್ತದೆ. ನಮ್ಮ ಹೋಟೆಲ್ ನಲ್ಲಿ ಮಾಡುವ ಬಿಸಿಬೇಳೆ ಬಾತ್, ಪಲಾವ್ ಹಾಗೂ ಭಾನುವಾರದ ದಿನ ಮಾತ್ರ ಸಿಗುವ ಮೈಸೂರು ಮಸಾಲೆ ದೋಸೆಗೆ ಬೇಡಿಕೆ ಜಾಸ್ತಿ. ಇನ್ನು ಚಟ್ನಿ, ವಿಶೇಷವಾಗಿ ಸಾಂಬಾರ್ ಇಷ್ಟ ಪಡುವವರು ಜಾಸ್ತಿ. ಸಾಂಬಾರ್ ಖಾಲಿಯಾಯಿತು ಅಂದಾಗ ತಿಂಡಿಯನ್ನೇ ತಿನ್ನದೆ ಹಾಗೇ ಹೋದವರು ಉಂಟು. ಆದ್ದರಿಂದ ನಮಗೆ ನಷ್ಟವಾದರೂ ಪರವಾಗಿಲ್ಲ. ಸಾಂಬಾರ್ ಕೊರತೆ ಮಾಡಲ್ಲ. ನಿಮ್ಮ ಗ್ರಾಹಕರ ನಿರೀಕ್ಷೆಯನ್ನು ಯಾವ ಸಂದರ್ಭಕ್ಕೂ ನಿರಾಶೆ ಮಾಡಬಾರದು ಅನ್ನೋದಕ್ಕೆ ಇದನ್ನು ಹೇಳುತ್ತಾ ಇದ್ದೀನಿ.
ಬಂಡವಾಳ ಎಷ್ಟು ಬೇಕು?
"ಬಂಡವಾಳ ನಿರ್ಧಾರ ಆಗುವುದು ಆಯ್ಕೆ ಮಾಡಿಕೊಳ್ಳುವ ಸ್ಥಳದ ಬಾಡಿಗೆ, ಪಾತ್ರೆ ಇತ್ಯಾದಿಗಳ ಖರೀದಿ ಆಧಾರದಲ್ಲಿ. ನನ್ನ ಅನುಭವದಲ್ಲಿ ಹೇಳುವುದಾದರೆ ಬೆಂಗಳೂರಿನಂಥ ಕಡೆ ಎಂಟು- ಹತ್ತು ಲಕ್ಷದಿಂದ ಐವತ್ತು ಲಕ್ಷ ರುಪಾಯಿ ತನಕ ಬಂಡವಾಳ ಬೇಕಾಗಬಹುದು. ನಿಮ್ಮ ಖರ್ಚಿಗೆ ತಕ್ಕಂತೆ ಗ್ರಾಹಕರು ಸರಿಯಾದ ರೀತಿಯಲ್ಲಿ ಹೆಚ್ಚಾದರೆ ಇಪ್ಪತ್ತು ಪರ್ಸೆಂಟ್ ತನಕ ಲಾಭ ನಿರೀಕ್ಷೆ ಮಾಡಬಹುದು. ಆದರೆ ಮಾಲೀಕರಾಗುವವರು ಎಲ್ಲ ಬಗೆಯ ಕೆಲಸಕ್ಕೂ ಸಿದ್ಧರಿರಬೇಕು. ನಮಗೆ ದಿನಕ್ಕೆ ಹದಿನಾಲ್ಕರಿಂದ ಹದಿನಾರು ತಾಸು ಹೋಟೆಲ್ ನಲ್ಲೇ ಕಳೆದುಹೋಗುತ್ತದೆ. ವಾರದಲ್ಲಿ ಅರ್ಧ ದಿನ ರಜಾ ಸಿಗುತ್ತದೆ. ಉಳಿದಂತೆ ಕುಟುಂಬದವರ ಜತೆ ಹೊರಗೆ ಹೋಗುವುದು, ಬೇರೆ ಕಡೆ ಹೋಗುವುದು ಇವೆಲ್ಲ ಬಹಳ ಕಷ್ಟ. ಕೆಲವು ಏಜೆನ್ಸಿಗಳವರು ಕಾರ್ಮಿಕರನ್ನು ಒದಗಿಸುತ್ತಾರೆ. ಆದರೆ ಅವರು ಬಹಳ ಕಾಲ ಉಳಿದು, ಕೆಲಸ ಮಾಡಲ್ಲ. ಮುಂಚೆಲ್ಲ ಉಡುಪಿ, ದಕ್ಷಿಣ ಕನ್ನಡ ಕರಾವಳಿ ಭಾಗದವರು ಹೋಟೆಲ್ ಉದ್ಯಮಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಬರುತ್ತಿದ್ದರು. ಆದರೆ ಈಗ ಬಿಹಾರ, ಉತ್ತರಪ್ರದೇಶ, ಜಾರ್ಖಂಡ್, ಈಶಾನ್ಯ ರಾಜ್ಯಗಳವರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದಾರೆ. ಅವರನ್ನು ಸ್ವಂತ ಮಕ್ಕಳ ರೀತಿ ನೋಡಿಕೊಳ್ಳಬೇಕು. ರೇಗದಂತೆ- ಕೂಗದಂತೆ ನೈಸಾಗಿ ಕೆಲಸ ಮಾಡಿಸಿಕೊಳ್ಳಬೇಕು.
ನೀರಿನ ಕೊರತೆ ಇರದಂತೆ ನೋಡಿಕೊಳ್ಳಬೇಕು
"ಕಾಫಿ- ಟೀಯಿಂದ ಹೆಚ್ಚಿನ ಲಾಭ ಇರುವುದಿಲ್ಲ. ಆದರೆ ಅವು ಮಾಡದಿದ್ದಲ್ಲಿ ಹೋಟೆಲ್ ಗಳಿಗೆ ಕೆಲ ವರ್ಗದ ಜನರು ಬರುವುದು ಕಷ್ಟ. ಇನ್ನು ಆರಂಭದಲ್ಲಿ ಹೇಳಲು ಮರೆತ ವಿಚಾರವೊಂದಿದೆ. ಅದು ನೀರು. ನೀವು ಹೋಟೆಲ್ ಆರಂಭಿಸುವ ಜಾಗದಲ್ಲಿ ನೀರಿನ ಲಭ್ಯತೆ ಹೇಗಿದೆ ಎಂಬುದನ್ನು ಮೊದಲಿಗೇ ಗಮನಿಸಿಕೊಳ್ಳಿ. ಮತ್ತು ಆ ನೀರು ಶುದ್ಧವಾಗಿರಬೇಕು. ಅಡುಗೆಗೆ- ಕುಡಿಯುವುದಕ್ಕೆ ಬಳಸಲು ಯೋಗ್ಯವಾಗಿರಬೇಕು. ಇಲ್ಲದಿದ್ದಲ್ಲಿ ನೀರಿಗಾಗಿಯೇ ಬಹಳ ಹಣ ಖರ್ಚು ಮಾಡುವಂತಾಗುತ್ತದೆ. ಮೇಲ್ನೋಟಕ್ಕೆ ಈ ಅಂಶ ಅಷ್ಟೇನೂ ಮುಖ್ಯ ಅಲ್ಲ ಅಂತನ್ನಿಸಬಹುದು. ಆದರೆ ಅದರಿಂದ ಕಷ್ಟ ಅನುಭವಿಸಿದವರಿಗೆ ವಾಸ್ತವ ಸ್ಥಿತಿ ಚೆನ್ನಾಗಿ ಗೊತ್ತಿರುತ್ತದೆ. ಅದೇ ರೀತಿ ಶುದ್ಧತೆ ಕಡೆಗೆ ಹೆಚ್ಚಿನ ಗಮನ ನೀಡಿ. ಈ ಮಾತು ಕೂಡ ಸರಳ ಅನ್ನಿಸಬಹುದು. ಆದರೆ ಗ್ರಾಹಕರಿಗೆ ಒಮ್ಮೆ ಹೋಟೆಲ್ ನಲ್ಲಿ ಶುದ್ಧತೆ- ಸ್ವಚ್ಛತೆ ಕೊರತೆ ಇದೆ ಎಂಬ ಭಾವನೆ ಬಂದುಬಿಟ್ಟರೆ ಅದನ್ನು ಹೋಗಲಾಡಿಸುವುದು ಕಷ್ಟಸಾಧ್ಯದ ಮಾತು. ಇಷ್ಟೆಲ್ಲ ಹೇಳಿದ ಮೇಲೂ ಕೊನೆಯದಾಗಿ ಹೇಳುವ ಮಾತಿದೆ: ಶ್ರಮ, ಪ್ರಯತ್ನ ಎಲ್ಲ ಇದ್ದರೂ ಅದೃಷ್ಟ ಕೂಡ ಕೈ ಹಿಡಿಯಬೇಕು" ಎನ್ನುತ್ತಾ ತಮ್ಮ ಕೆಲಸಕ್ಕೆ ತೆರಳಿದರು ನರಸಿಂಹ.
More From GoodReturns

Hubballi Vijayapura: ಉತ್ತರ ಕರ್ನಾಟಕಕ್ಕೆ ಸಂಚಾರ ಕ್ರಾಂತಿ...ಹುಬ್ಬಳ್ಳಿ–ವಿಜಯಪುರ NH52 ದ್ವಿಪಥ ರಸ್ತೆ ಅಭಿವೃದ್ಧಿ ಆರಂಭ!

Hosur Road: ಹೊಸೂರು ರಸ್ತೆ ಪ್ರಯಾಣಿಕರಿಗೆ ಬಿಗ್ ಅಪ್ಡೇಟ್! ಇನ್ಮೇಲೆ ಸಂಚಾರ ಮತ್ತಷ್ಟು ಸುಲಭ

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ



Click it and Unblock the Notifications