ಹೊಸದಾಗಿ ಪೆಟ್ರೋಲ್ ಬಂಕ್ ಆರಂಭಿಸುವವರಿಗೆ ಈ ಬಗ್ಗೆ ತುರ್ತಾಗಿ ಗಮನಿಸಬೇಕಾದ ಸುದ್ದಿ ಇದೆ. ಪೆಟ್ರೋಲ್ ಬಂಕ್ ಗಳಿಂದ ಪರಿಸರದ ಮೇಲೆ ಆಗುವ ಅಡ್ಡ ಪರಿಣಾಮಗಳನ್ನು ಗಮನದಲ್ಲಿ ಇಟ್ಟುಕೊಂಡು ಕೇಂದ್ರೀಯ ಮಾಲಿನ್ಯ ನಿಯಂತ್ರಣ ಮಂಡಳಿಯು ತೈಲ ಮಾರ್ಕೆಟಿಂಗ್ ಕಂಪೆನಿಗಳಿಗೆ ನಿರ್ದೇಶನ ನೀಡಿದ್ದು, ಶಾಲೆ, ಆಸ್ಪತ್ರೆ ಮತ್ತು ವಸತಿ ಪ್ರದೇಶದಿಂದ ಕನಿಷ್ಠ ಐವತ್ತು ಮೀಟರ್ ದೂರಲ್ಲಿ ಪೆಟ್ರೋಲ್ ಬಂಕ್ ಗಳು ಇರಬೇಕು ಎಂದಿದೆ.
ರಾಷ್ಟ್ರೀಯ ಹಸಿರು ನ್ಯಾಯ ಮಂಡಳಿ ನಿರ್ದೇಶನದ ಅನ್ವಯ, ಹೊಸ ಪೆಟ್ರೋಲ್ ಬಂಕ್ ಗಳಲ್ಲಿ ವೇಪರ್ ರೆಕವರಿ ಸಿಸ್ಟಮ್ (ವಿಆರ್ ಎಸ್) ಅನ್ನು ಹೊಸ ಪೆಟ್ರೋಲ್ ಬಂಕ್ ಗಳಲ್ಲಿ ತೈಲ ಕಂಪೆನಿಗಳು ಅಳವಡಿಸಬೇಕು ಎಂದು ಕೂಡ ತಿಳಿಸಲಾಗಿದೆ. ಆದರೆ ತಿಂಗಳಿಗೆ ಮುನ್ನೂರು ಕಿಲೋ ಲೀಟರ್ಸ್ ಸ್ಪಿರಿಟ್ ಮಾರಾಟ ಮಾಡುವ ಸಾಮರ್ಥ್ಯ ಇರುವಂಥದ್ದಕ್ಕೆ ಮಾತ್ರ ಇದು ಅನ್ವಯಿಸಲಿದೆ.
ವಿಆರ್ ಎಸ್ ಅಳವಡಿಸದಿದ್ದರೆ ಶುಲ್ಕ
ಒಂದು ವೇಳೆ ವಿಆರ್ ಎಸ್ ಅಳವಡಿಕೆ ಮಾಡದಿದ್ದಲ್ಲಿ ಪರಿಸರ ಪರಿಹಾರ ಧನವನ್ನು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ವಿಧಿಸಬೇಕು ಎನ್ನಲಾಗಿದೆ. ಆ ಶುಲ್ಕವು ವಿಆರ್ ಎಸ್ ಗೆ ತಗುಲುವ ವೆಚ್ಚದಷ್ಟೇ ಇರಬೇಕು. ಎಷ್ಟು ಸಮಯ ಅಳವಡಿಕೆ ಮಾಡುವುದಿಲ್ಲವೋ ಅದರ ಪ್ರಮಾಣಕ್ಕೆ ತಕ್ಕಂತೆ ಏರಿಕೆ ಮಾಡಬೇಕು ಎಂದು ತಿಳಿಸಲಾಗಿದೆ. ವಿವಿಧ ಕ್ಷೇತ್ರದ ತಜ್ಞರ ಸಮಿತಿ ಮತ್ತು ಪೆಟ್ರೋಲಿಯಂ ಹಾಗೂ ನೈಸರ್ಗಿಕ ಅನಿಲ ಸಚಿವಾಲಯ, ಸಿಪಿಸಿಬಿ ಸೇರಿ ದೇಶದಲ್ಲಿ ಹೊಸದಾಗಿ ಪೆಟ್ರೋಲ್ ಬಂಕ್ ಆರಂಭಿಸುವುದಕ್ಕೆ ಮಾರ್ಗದರ್ಶಿ ಸೂತ್ರಗಳನ್ನು ರೂಪಿಸಲಾಗಿದೆ. ರಾಷ್ಟ್ರೀಯ ಹಸಿರು ನ್ಯಾಯ ಮಂಡಳಿ ನಿರ್ದೇಶನದ ಮೇರೆಗೆ ರಚಿಸಲಾದ ತಜ್ಞರ ಸಮಿತಿಯು ಪೆಟ್ರೋಲ್ ಬಂಕ್ ಗಳ ಸಂಖ್ಯೆಯ ಮೇಲೆ ಮಿತಿ ಹೇರಲು ಮಾಡಿದ್ದ ಮನವಿಯನ್ನು ಪರಾಂಬರಿಸಬೇಕಿತ್ತು.
ಹೈಟೆನ್ಷನ್ ವೈರ್ ಹಾದು ಹೋಗಿರುವಲ್ಲಿ ರೀಟೇರ್ ಔಟ್ ಲೆಟ್ ನಿಷಿದ್ಧ
ಮಾರ್ಗದರ್ಶಿ ಸೂತ್ರದ ಪ್ರಕಾರ, ಶಾಲೆ, ಆಸ್ಪತ್ರೆ (ಹತ್ತು ಹಾಸಿಗೆ ಮತ್ತು ಅದಕ್ಕಿಂತ ಹೆಚ್ಚು ಇರುವಂಥದ್ದು) ಮತ್ತು ಸ್ಥಳೀಯ ಕಾನೂನಿನ ಪ್ರಕಾರ ವಸತಿ ಬಡಾವಣೆ ಎಂದು ಘೋಷಣೆಯಾಗಿರುವಂಥದ್ದರಿಂದ ಐವತ್ತು ಮೀಟರ್ ನೊಳಗೆ ರೀಟೇಲ್ ಔಟ್ ಲೆಟ್ ಗಳನ್ನು ಆರಂಭಿಸಬಾರದು. ಒಂದು ವೇಳೆ ಹಾಗೆ ಐವತ್ತು ಮೀಟರ್ ಮಿತಿಯ ಪಾಲನೆ ಮಾಡಲು ಸಾಧ್ಯವಾಗದಿದ್ದಲ್ಲಿ ರೀಟೇಲ್ ಔಟ್ ಲೆಟ್ ಗಳಿಂದ ಪೆಟ್ರೋಲ್ ಅಂಡ್ ಎಕ್ಸ್ ಪ್ಲೋಸಿವ್ ಸೇಫ್ಟಿ ಆರ್ಗನೈಸೇಷನ್ ಪ್ರಕಾರ ಹೆಚ್ಚುವರಿ ಭದ್ರತೆ ಕ್ರಮಗಳನ್ನು ಅಳವಡಿಸಬೇಕು. ಶಾಲೆ, ಆಸ್ಪತ್ರೆ ಮತ್ತು ವಸತಿ ಪ್ರದೇಶದ ಮೂವತ್ತು ಮೀಟರ್ ನೊಳಗೆ ಹಾಗೂ ಹೈ ಟೆನ್ಷನ್ ವೈರ್ ಹಾದು ಹೋಗಿರುವ ಜಾಗದಲ್ಲಿ ಯಾವ ಕಾರಣಕ್ಕೂ ಪೆಟ್ರೋಲ್ ಬಂಕ್ ಆರಂಭಿಸಬಾರದು.
ಏಳು ವರ್ಷ ಮತ್ತು ಎರಡು ವರ್ಷಕ್ಕೊಮ್ಮೆ ಪರಿಶೀಲನೆ
ನೆಲದಡಿಯಲ್ಲಿ ಇರುವ ಟ್ಯಾಂಕ್ ಗಳು ಮತ್ತು ಪೈಪ್ ಲೈನ್ ಗಳನ್ನು ಸೋರಿಕೆ ಆಗುತ್ತಿದೆಯೇ ಎಂದು ಏಳು ವರ್ಷಕ್ಕೊಮ್ಮೆ ಪರಿಶೀಲಿಸಬೇಕು. ತಿಂಗಳಿಗೆ ಮುನ್ನೂರು ಕಿಲೋಲೀಟರ್ ಗಿಂತ ಹೆಚ್ಚು ಮಾರಾಟ ಮಾಡುವ ಮತ್ತು ಹತ್ತು ಲಕ್ಷಕ್ಕಿಂತ ಹೆಚ್ಚು ಜನಸಂಖ್ಯೆ ಇರುವ ಕಡೆಗಳಲ್ಲಿ ತೈಲ ಕಂಪೆನಿಗಳು ಎರಡು ವರ್ಷಕ್ಕೊಮ್ಮೆ ಪರಿಶೀಲನೆ ನಡೆಸಿ, ವರದಿ ಸಲ್ಲಿಸಬೇಕು.
ಪರಿಸರ ಹಾನಿಗೆ ಪರಿಹಾರ ಕಟ್ಟಿಕೊಡಬೇಕು
ತೈಲ ಸೋರಿಕೆಯಾಗಿ ಮಣ್ಣು, ಅಂತರ್ಜಲ ಕಲುಷಿತವಾದರೆ ಅದಕ್ಕೆ ತೈಲ ಮಾರ್ಕೆಟಿಂಗ್ ಕಂಪೆನಿಗಳೇ ಹೊಣೆಯಾಗಬೇಕು ಮತ್ತು ಪರಿಸರದ ಹಾನಿಗೆ ಪರಿಹಾರ ಕಟ್ಟಿಕೊಡಬೇಕಾಗುತ್ತದೆ ಎಂದು ತಿಳಿಸಲಾಗಿದೆ. ನೂರಾ ಅರವತ್ತೈದು ಲೀಟರ್ ಮೇಲ್ಪಟ್ಟು ಪೆಟ್ರೋಲ್ ಅಥವಾ ಡೀಸೆಲ್ ಸೋರಿಕೆಯಾದರೆ ಆ ಬಗ್ಗೆ ಇಪ್ಪತ್ನಾಲ್ಕು ಗಂಟೆಯೊಳಗಾಗಿ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಥವಾ ಜಿಲ್ಲಾಡಳಿತಕ್ಕೆ ಮಾಹಿತಿ ನೀಡಬೇಕು.


Click it and Unblock the Notifications