ಬಡ್ಡಿದರದಲ್ಲಿ ಯಾವುದೇ ಬದಲಾವಣೆ ಇಲ್ಲ: ಆರ್ ಬಿಐ
ಮುಂಬೈ, ಸೆ.30: ಆರ್ ಬಿಐ ಬಡ್ಡಿ ದರದಲ್ಲಿ ಯಾವುದೇ ಬದಲಾವಣೆ ಮಾಡುತ್ತಿಲ್ಲ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಆರ್ ಬಿಐ ಗವರ್ನರ್ ರಘುರಾಮ್ ರಾಜನ್ ಸ್ಪಷ್ಟವಾಗಿ ಹೇಳಿದ್ದಾರೆ. ತೀವ್ರ ಹಣದುಬ್ಬರ ಮತ್ತು ಆರ್ಥಿಕ ಸಂಕಷ್ಟದ ನಡುವೆಯೂ ರೆಪೋ ರೇಟ್ ಹಾಗೇ ಉಳಿಸಿಕೊಳ್ಳಲಿದೆ. ಆರ್ಥಿಕ ನೀತಿ ನಿಯಮಗಳ ಕುರಿತು ರಘುರಾಮ್ ವರದಿ ನೀಡಿದ್ದು ಸಿಆರ್ಆರ್ ದರ ಕೂಡಾ ಬದಲಾವಣೆ ಮಾಡಲಾಗಿಲ್ಲ
ರೆಪೋ ದರ ಶೇ.8ರ ಪ್ರಮಾಣದಲ್ಲೇ ಮುಂದುವರೆದಿದೆ. ಬ್ಯಾಂಕುಗಳ ನಗದು ಕಾಯ್ದಿರಿಸುವಿಕೆಯ ದರ ಶೇ.4ರಷ್ಟಿದೆ. ಶೇ.22ರಷ್ಟಿರುವ ಎಸ್ಎಲ್ಆರ್ ನಲ್ಲೂ ಯಾವುದೇ ಬದಲಾವಣೆ ಮಾಡಿಲ್ಲ. 2015ರ ಜನವರಿ ವೇಳೆಗೆ ಹಣದುಬ್ಬರದ ದರ ಶೇ.8ಕ್ಕೆ ತಲುಪುವ ಆತಂಕವಿದೆ. ಇದರಿಂದಾಗಿ ಆಹಾರ ಉತ್ಪನ್ನಗಳ ಬೆಲೆ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.
ಮುಂಗಾರು ಹಿನ್ನಡೆಯಿಂದಾಗಿ ಆಹಾರ ಉತ್ಪಾದನೆ ಕುಂಠಿತವಾಗಿದ್ದು, ಸಹಜವಾಗಿ ದರ ಏರಿಕೆಯಾಗುವ ಸಾಧ್ಯತೆಗಳಿವೆ. ಆಹಾರ ಉತ್ಪನ್ನಗಳ ಅನಿಶ್ಚಿತ ಹಣದುಬ್ಬರ 2016ಕ್ಕೆ ಶೇ.6ರಷ್ಟಾಗಲಿದೆ ಎನ್ನಲಾಗಿದೆ.
ಆರ್ ಬಿಐ ತ್ರೈಮಾಸಿಕ ನೀತಿ ಗಮನಿಸಿದರೆ ಆರ್ಥಿಕ ಪ್ರಗತಿ ಬಗ್ಗೆ ಹೆಚ್ಚಿನ ಗಮನ ಹರಿಸಿದಂತೆ ಕಾಣುವುದಿಲ್ಲ. ಹಣದುಬ್ಬರದ ಜತೆ ಗುದ್ದಾಡುತ್ತಿದೆ.
ಇಂಧನ ದರ ತ್ವರಿತ ಗತಿ ಏರಿಕೆ, ರುಪಾಯಿ ಅಪಮೌಲ್ಯ, ಅಂತಾರಾಷ್ಟ್ರೀಯ ಸರಕು ಸಾಮಾಗ್ರಿ ದರ ಏರಿಕೆ ಎಲ್ಲವನ್ನು ಆರ್ ಬಿಐ ಗಮನದಲ್ಲಿಟ್ಟುಕೊಂಡು ಈ ನಿರ್ಧಾರಕ್ಕೆ ಬಂದಿದೆ.
CPI (ಗ್ರಾಹಕ ದರ ಸೂಚ್ಯಂಕ) ಎಣಿಕೆಯಂತೆ ರೀಟೇಲ್ ಮಟ್ಟದಲ್ಲಿ ಹಣದುಬ್ಬರ ನಾಲ್ಕು ವರ್ಷದಿಂದ ಏರಿಕೆ ಕಾಣುತ್ತಲೇ ಇದೆ. ಖಾರಿಫ್ ಬೆಳೆ ಕೊಯ್ಲಿನ ನಂತರ ಸಿಪಿಐ ಹಣದುಬ್ಬರದಲ್ಲಿ ಬದಲಾವಣೆ ಕಾಣಬಹುದಾಗಿದೆ ಎಂದು ಆರ್ ಬಿಐ ಭರವಸೆ ನೀಡಿದೆ.
ಜನ ಧನ್ ಯೋಜನೆ ಓಕೆ: ಜನ ಧನ್ ಯೋಜನೆ ಆರಂಭಿಸಲು ಸರ್ಕಾರ ನೀಡಿರುವ KYC ಬಗ್ಗೆ ಯಾವುದೇ ಆಕ್ಷೇಪವಿಲ್ಲ. ಇದು ಕೂಡಾ ಆರ್ ಬಿಐ ಯೋಜನೆಯ ಭಾಗವಾಗಿದೆ ಎಂದರು. ಅಗಸ್ಟ್ ತಿಂಗಳಿನಲ್ಲಿ ಆರಂಭವಾದ ಜನ್ ಧನ್ ಯೋಜನೆ 2015ರೊಳಗೆ 7.5 ಕೋಟಿಗೂ ಅಧಿಕ ಕುಟುಂಬಗಳಿಗೆ ಬ್ಯಾಂಕ್ ಆರಂಭಿಸುವ ಗುರಿ ಹೊಂದಿದೆ.
ಸಿಆರ್ ಅರ್: ಬ್ಯಾಂಕುಗಳಲ್ಲಿರುವ ಠೇವಣಿಗೆ ಅನುಗುಣವಾಗಿ ಆರ್ ಬಿಐ ನಲ್ಲಿ ಇಡಬೇಕಾದ ಹಣದ ಮೊತ್ತ.
ರೆಪೋ ದರ: ಆರ್ ಬಿಐನಿಂದ ಬ್ಯಾಂಕುಗಳು ಹಣ ಪಡೆಯುವ ದರ.