ಎಫ್ಆರ್ಡಿಐ ಮಸೂದೆ: ಸಾರ್ವಜನಿಕರ ಬ್ಯಾಂಕ್ ಠೇವಣಿಗಳಿಗೆ ರಕ್ಷಣೆ: ಜೇಟ್ಲಿ
ಬ್ಯಾಂಕು ಮತ್ತು ಹಣಕಾಸು ಸಂಸ್ಥೆಗಳಲ್ಲಿರುವ ಸಾರ್ವಜನಿಕ ಠೇವಣಿಗಳ ಸಂರಕ್ಷಣೆಗೆ ಸರ್ಕಾರ ಸಂಪೂರ್ಣವಾಗಿ ಬದ್ದವಾಗಿದೆ ಎಂದು ಹಣಕಾಸು ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ.
ಬ್ಯಾಂಕು ಮತ್ತು ಹಣಕಾಸು ಸಂಸ್ಥೆಗಳಲ್ಲಿರುವ ಸಾರ್ವಜನಿಕ ಠೇವಣಿಗಳ ಸಂರಕ್ಷಣೆಗೆ ಸರ್ಕಾರ ಸಂಪೂರ್ಣವಾಗಿ ಬದ್ದವಾಗಿದೆ ಎಂದು ಹಣಕಾಸು ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ.
ಹಣಕಾಸು ಪರಿಹಾರ ಮತ್ತು ಠೇವಣಿ ವಿಮೆ ಮಸೂದೆ (ಎಫ್ಆರ್ಡಿಐ) ಪ್ರಸ್ತಾವದ ಹಿನ್ನೆಲೆಯಲ್ಲಿ ಸಾರ್ವಜನಿಕರಲ್ಲಿ ತೀವ್ರವಾದ ಗೊಂದಲ ಉಂಟಾಗಿರುವ ಕಾರಣಕ್ಕೆ ಅರುಣ್ ಜೇಟ್ಲಿ ಸ್ಪಷ್ಟನೆ ನೀಡಿದ್ದಾರೆ.
ಏನಿದು ಎಫ್ಆರ್ಡಿಐ ವಿವಾದ?
ಎಫ್ಆರ್ಡಿಐ ಪ್ರಸ್ತಾವದ ಅನ್ವಯ ಬ್ಯಾಂಕುಗಳು ನಷ್ಟ ಅಥವಾ ದೀವಾಳಿಯಾಗುವ ಸಂದರ್ಭ ಎದುರಾದರೆ ಠೇವಣಿದಾರರ ಹಣವನ್ನು ಬಳಸಿಕೊಳ್ಳಲು 'ಬೇಲ್ ಇನ್' (bail-in) ಪ್ರಸ್ತಾವ ಒಳಗೊಂಡಿದೆ. ಇದು ಗ್ರಾಹಕರ ಖಾತೆಯಲ್ಲಿನ ಹಣ ಬಳಕೆಗೆ ಬ್ಯಾಂಕುಗಳಿಗೆ ಅವಕಾಶ ಮಾಡಿಕೊಡುತ್ತದೆ ಎನ್ನಲಾಗಿತ್ತು. ಆದರೆ ಎಫ್ಆರ್ಡಿಐ ಮಸೂದೆಯ ಪ್ರಸ್ತಾವನೆಯಲ್ಲಿ ಬದಲಾವಣೆ ತರುವ ಬಗ್ಗೆ ಸರ್ಕಾರ ಮುಕ್ತ ಮನಸ್ಸಿನಿಂದ ಇರುವುದಾಗಿ ಭರವಸೆ ನೀಡಿದ್ದಾರೆ. ಎಫ್ಆರ್ಡಿಐ ಮಸೂದೆ, ಬ್ಯಾಂಕುಗಳಲ್ಲಿ ನಿಮ್ಮ ಹಣ ಸುರಕ್ಷಿತವೇ?
ಬ್ಯಾಂಕುಗಳ ಹಣಕಾಸು ಸ್ಥಿರತೆಗೆ ಸರ್ಕಾರ ಬದ್ದ
ಬ್ಯಾಂಕುಗಳ ಹಣಕಾಸು ಸ್ಥಿರತೆಗಾಗಿ ರೂ. 2.11 ಲಕ್ಷ ಕೋಟಿ ಬಂಡವಾಳ ಹೂಡಿಕೆಗೆ ಸರ್ಕಾರ ಯೋಜಿಸಿದ್ದು, ಇದರಿಂದ ಬ್ಯಾಂಕುಗಳು ನಷ್ಟ ಅನುಭವಿಸುವ ಸಾಧ್ಯತೆ ಇರುವುದಿಲ್ಲ. ಒಂದು ವೇಳೆ ಅಂತಹ ಸಂದರ್ಭ ಒದಗಿದರೂ ಬ್ಯಾಂಕುಗಳಲ್ಲಿ ಇರಿಸಿರುವ ಠೇವಣಿಗಳಿಗೆ ಸರ್ಕಾರ ಸಂಪೂರ್ಣ ಭದ್ರತೆ ನೀಡಲಿದೆ ಎಂದು ಅರುಣ್ ಜೇಟ್ಲಿ ಹೇಳಿದ್ದಾರೆ.
ಸಂಸತ್ತಿನಲ್ಲಿ ಚರ್ಚೆ
ಹಣಕಾಸು ಇಲಾಖೆಯ ಹೊಸ ಎಫ್ಆರ್ಡಿಐ ವಿಧೇಯಕ ಸಂಸತ್ತಿನ ಜಂಟಿ ಸಮಿತಿಯ ಮುಂದಿದೆ. ಈ ಮಸೂದೆ ಚಳಿಗಾಲದ ಅಧೀವೇಶನದಲ್ಲಿ ಸಂಸತ್ತಿನ ಮುಂದೆ ಬರಲಿದೆ. ಎಫ್ಆರ್ಡಿಐ ಮಸೂದೆ ಅನ್ವಯ ತೀವ್ರ ನಷ್ಟಕ್ಕೆ ಅಥವಾ ದಿವಾಳಿಗೆ ಗುರಿಯಾಗುವ ಬ್ಯಾಂಕುಗಳು ತಮ್ಮ ನಷ್ಟದ ತೀವ್ರತೆ ತಗ್ಗಿಸಲು ಠೇವಣಿದಾರರ ಹಣ ಬಳಸಿಕೊಳ್ಳಲು ಅವಕಾಶ ಇರುವ ಪ್ರಸ್ತಾವವನ್ನು (bail-in) ಈ ಮಸೂದೆ ಒಳಗೊಂಡಿದೆ.