ಮೋದಿ ಸರ್ಕಾರಕ್ಕೆ ನಾಲ್ಕು! ಕಳೆದ 4 ವರ್ಷಗಳಲ್ಲಿ ನರೇಂದ್ರ ಮೋದಿ ಸರ್ಕಾರದ ಸಾಧನೆಗಳೇನು?
ನರೇಂದ್ರ ಮೋದಿ ಸರ್ಕಾರದ ಕಳೆದ ನಾಲ್ಕು ವರ್ಷದ ಸಾಧನೆಯ ವಿವರಗಳನ್ನು ನೀಡಲಿದೆ. ಮೇ 2014 ರಲ್ಲಿ ಸಂಪೂರ್ಣ ಬಹುಮತದಿಂದ ಸರ್ಕಾರ ರಚಿಸಿದ ನಂತರ ಮಾಡಿದ ಸಾಧನೆಗಳ ಪಟ್ಟಿ ಇದು.
ಭ್ರಷ್ಟಾಚಾರ ರಹಿತ ಆಡಳಿತ, ಉದ್ಯೋಗ ಸೃಷ್ಟಿ, ಕಪ್ಪುಹಣ ನಿಯಂತ್ರಣ, ಆರ್ಥಿಕ ಅಭಿವೃದ್ಧಿ, ಅಂತರ್ ಹಾಗು ವಿದೇಶಿ ಸಂಬಂಧ ಭದ್ರಪಡಿಸುವಿಕೆ, ರೈತರ ಆದಾಯ ದುಪ್ಪಟ್ಟು, ರಾಮಮಂದಿರ ನಿರ್ಮಾಣ ಮುಂತಾದ ಭರವಸೆಗಳ ಮೂಲಕ ಅಧಿಕಾರಕ್ಕೆ ಬಂದ ನರೇಂದ್ರ ಮೋದಿ ಸರ್ಕಾರದ ಕಳೆದ ನಾಲ್ಕು ವರ್ಷದ ಸಾಧನೆಯ ವಿವರಗಳನ್ನು ಈ ಲೇಖನ ನೀಡಲಿದೆ. ಮೇ 2014 ರಲ್ಲಿ ಸಂಪೂರ್ಣ ಬಹುಮತದಿಂದ ಸರ್ಕಾರ ರಚಿಸಿದ ನಂತರ ಮಾಡಿದ ಸಾಧನೆಗಳ ಪಟ್ಟಿ ಇದು.
ಕೇಂದ್ರದಲ್ಲಿ ಸಂಪೂರ್ಣ ಬಹುಮತದಿಂದ ಬಿಜೆಪಿಯು ಸರ್ಕಾರ ರಚಿಸಿ ನಾಲ್ಕು ವರ್ಷಗಳಾಗಿದೆ. ಮೇ 26ಕ್ಕೆ ಸರ್ಕಾರ ರಚಿಸಿ 4 ವರ್ಷ ಕಳೆಯುವುದರಿಂದಾಗಿ ಬಿಜೆಪಿ ಪಕ್ಷವು ಸಂಭ್ರಮಾಚರಣೆಯಲ್ಲಿ ತೊಡಗಿದೆ.
ಕಳೆದ ಕೆಲವು ದಿನಗಳಿಂದ ಬಿಜೆಪಿ ಸಚಿವರು ಸುದ್ದಿಗೋಷ್ಟಿ ನಡೆಸುವುದು ಮತ್ತು ತಮ್ಮ ಸರ್ಕಾರ ಮೋದಿ ನೇತೃತ್ವದಲ್ಲಿ ಕೈಗೊಂಡ ಯೋಜನೆಗಳು ಮತ್ತು ಸಾಧನೆಗಳ ಪಟ್ಟಿ ನೀಡಲು ಆರಂಭಿಸಿದ್ದಾರೆ. ಸರ್ಕಾರವು ಮೇ 26 ರಿಂದ ಜೂನ್ 15 ರ ವರೆಗೆ ಮೋದಿ ಹಬ್ಬ ಹೆಸರಿನಲ್ಲಿ ಸಾಧನೆಗಳ ಪಟ್ಟಿಯನ್ನು ಜನರ ಮುಂದಿಡಲು ಯೋಜನೆ ರೂಪಿಸಿದ್ದಾರೆ.
ನರೇಂದ್ರ ಮೋದಿಯ ನೇತೃತ್ವದಲ್ಲಿ ಭಾರತವು ಉತ್ತಮ ನಾಯಕತ್ವವನ್ನು ಪಡೆದು ಗುರುತಿಸಿಕೊಂಡಿದ್ದರೂ ಕೂಡ, ಇನ್ನೂ ಹಲವು ಸಮಸ್ಯೆಗಳನ್ನು ಕೇಂದ್ರ ಸರ್ಕಾರ ಗಮನ ಹರಿಸಬೇಕಾಗಿದೆ.
ಈ ಲೇಖನವು 10 ಪ್ರಮುಖ ಸಾಧನೆಯ ಬಗ್ಗೆ ಗಮನ ಹರಿಸುತ್ತಿದೆ ಮತ್ತು ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಈ ಸಾಧನೆಯನ್ನು ವಿವರಿಸಲಿದೆ. ಪ್ರಧಾನಿ ನರೇಂದ್ರ ಮೋದಿಯವರ 10 ವೈಫಲ್ಯಗಳು ಯಾವುವು ಗೊತ್ತೆ?
1. ಆರ್ಥಿಕತೆಯನ್ನು ಬಲಿಷ್ಟಗೊಳಿಸಿರುವುದು
ಗುಜರಾತಿನ ಮುಖ್ಯಮಂತ್ರಿಯಾಗಿದ್ದಾಗಿನಿಂದಲೂ ನರೇಂದ್ರ ಮೋದಿ ಭಾರತದ ಆರ್ಥಿಕತೆಗೆ ಒತ್ತು ನೀಡಿದ್ದರು. ಆ ನಿಟ್ಟಿನಲ್ಲಿ ಹಲವು ಯೋಜನೆಗಳನ್ನು ರೂಪಿಸಿ ಭಾರತದ ಆರ್ಥಿಕತೆಗೆ ಸಹಾಯ ನೀಡಿದ್ದರೂ ಅದು ಈಗ ಪ್ರಧಾನಿಯಾದ ನಂತರವೂ ಮುಂದುವರೆದಿದೆ. ನರೇಂದ್ರ ಮೋದಿ ಸರ್ಕಾರದ ಸಾಧನೆಯಲ್ಲಿ ಆರ್ಥಿಕತೆಯನ್ನು ಬಲಿಷ್ಟಗೊಳಿಸಿರುವ ಮೊದಲ ಸ್ಥಾನದಲ್ಲಿ ನಿಲ್ಲಲಿದೆ.
ಮೋದಿ ನಾಯಕತ್ವದಲ್ಲಿ, ಗುಜರಾತ್ ಒಂದು ಬಲಿಷ್ಟ ರಾಜ್ಯವಾಗಿ ದೇಶದಲ್ಲೇ ಗುರುತಿಸಿಕೊಂಡಿತ್ತು ಮತ್ತು ಹಲವು ವಿದೇಶಿ ಕಂಪೆನಿಯ ಜೊತೆ ಕೈಜೋಡಿಸಿ ಗುಜರಾತ್ ಆರ್ಥಿಕತೆಯಲ್ಲಿ ಮುಂದುವರಿದ ರಾಜ್ಯವಾಗಿತ್ತು. ಅದೇ ವ್ಯವಸ್ಥೆಯನ್ನು ಮುಂದಿನ ಹಂತದಲ್ಲೂ ಮುಂದುವರೆಸಿದ್ದ ಮೋದಿ, ಪ್ರಧಾನಿಯಾಗಿ ದೇಶದ ಆರ್ಥಿಕತೆಯನ್ನು ಹೆಚ್ಚುವಂತೆ ಮಾಡಿದ್ದಾರೆ. ಅವರ ವಿದೇಶಿ ಪ್ರವಾಸದಿಂದಾಗಿ ಭಾರತಕ್ಕೆ ಬಹಳಷ್ಟು ಬಂಡವಾಳ ಹರಿದು ಬಂದಿದೆ. ಪ್ರಮುಖವಾಗಿ ಜಪಾನ್ ದೇಶವು ಬುಲೆಟ್ ಟ್ರೈನ್ ವಿಚಾರದಲ್ಲಿ ಸಾಕಷ್ಟು ಬಂಡವಾಳ ಹೂಡಿದೆ.
2. ಅಂತರಾಷ್ಟ್ರೀಯ ಸಂಬಂಧದ ಬಲವರ್ಧನೆ
ವಿದೇಶಿ ನಿಯಮಗಳು ಮೋದಿ ಸಾಧನೆಯ ಮತ್ತೊಂದು ಮೈಲಿಗಲ್ಲು. ವಿರೋಧ ಪಕ್ಷದವರಿಂದ ಪ್ರಧಾನಿ ವಿದೇಶಿ ಪ್ರವಾಸದ ಬಗ್ಗೆ ಸಾಕಷ್ಟು ಟೀಕೆಗಳು ಕೇಳಿ ಬಂದಿದ್ದವು. ಆದರೆ ಪ್ರಧಾನಿಯ ವಿದೇಶಿ ಪ್ರವಾಸದಿಂದಾಗಿ ಭಾರತಕ್ಕೆ ಹಲವು ವಿದೇಶಿ ಗೆಳೆಯರು ಸಿಕ್ಕಿದ್ದಾರೆ ಅನ್ನುವುದನ್ನು ತಳ್ಳಿ ಹಾಕುವಂತಿಲ್ಲ. ಅಮೇರಿಕಾ ಪ್ರಧಾನಿ ಬರಾಕ್ ಒಬಾಮಾ ಮತ್ತು ಜಪಾನ್ ಪ್ರಧಾನಿ ಶಿಂಜೋ ಅಬೆಯೊಂದಿಗಿನ ಗೆಳೆತನದಿಂದಾಗಿ ಪ್ರಪಂಚದಲ್ಲೇ ಭಾರತವನ್ನು ಎಲ್ಲರೂ ತಿರುಗಿ ನೋಡುವಂತೆ ಮಾಡಿದ್ದಾರೆ. ಇದು ಕೇವಲ ಮೋದಿಯ ಚಾಣಾಕ್ಷ ನಾಯಕತನದಿಂದ ಸಾಧ್ಯವಾಗಿದ್ದು ಮತ್ತು ಪಾಕಿಸ್ತಾನದ ಟೆರರಿಸಂನ್ನು ಇಡೀ ವಿಶ್ವವೇ ದ್ವೇಷಿಸುವಂತೆ ಮಾಡಿದ್ದು ಇವರ ಸಾಧನೆ. ಅಷ್ಟೇ ಅಲ್ಲ ಬಾಂಗ್ಲಾದೇಶ, ನೇಪಾಳ, ಅಫಘಾನಿಸ್ತಾನದ ರಾಷ್ಟ್ರಗಳಿಗೆ ಭಾರತವು ಹಣಕಾಸಿನ ಸಹಾಯ ಹಸ್ತ ಚಾಚಿದ್ದು ಸ್ವಾಭಾವಿಕವಾಗಿಯೇ ಭಾರತಕ್ಕೆ ಲಾಭದಾಯಕವಾಗಿದೆ. ಸೌತ್ ಏಷಿಯಾ ಸ್ಯಾಟಲೈಟ್ ನ್ನು ಉಡಾವಣೆ ಮಾಡಲು ಭಾರತವು ತಯಾರಾದದ್ದು ಭಾರತಕ್ಕೆ ಸೂಪರ್ ಪವರ್ ಬಂದಂತಾಗಿದೆ.
3. ಕಷ್ಟದ ಪರಿಸ್ಥಿತಿ ನಾಜೂಕಾಗಿ ಬದಲಾಯಿಸಿದ್ದು
ಹಿಂದಿನ ಪ್ರಧಾನಿಯ ನೇತ್ವತ್ವದಲ್ಲಿ ಭಾರತವು ಸೈನ್ಯದ ವಿಚಾರದಲ್ಲಿ ಭಾರೀ ಸಮಸ್ಯೆ ಎದುರಾಗಿ ಶಾಂತಿಯುತ ರಾಷ್ಟ್ರ ಎಂಬ ಖ್ಯಾತಿಯಿಂದ ಅಪಖ್ಯಾತಿ ಪಡೆಯುವ ಹಂತಕ್ಕೆ ತಲುಪಿತ್ತು. ಆದರೆ ಪ್ರಧಾನಿ ಮೋದಿಯ ನೇತೃತ್ವದಲ್ಲಿ ಇಂತಹ ಸೂಕ್ಷ್ಮ ವಿಚಾರವನ್ನು ನಾಜೂಕಾಗಿ ನಿಭಾಯಿಸಿದ್ದಾರೆ. ಪಾಕ್ ಆಕ್ರಮಿತ ಕಾಶ್ಮೀರದ ವಿಚಾರದಲ್ಲಿ ನಡೆದ ಸರ್ಜಿಕಲ್ ಸ್ಟ್ರೈಕ್, ಪಾಕಿಗಳ ಬೇಸ್ ಕ್ಯಾಂಪ್ ಗಳನ್ನು ನಾಶಗೊಳಿಸಿದ್ದು ಇದಕ್ಕೆ ಸಾಕ್ಷಿಯಾಗಿವೆ. ಅರುಣಾಚಲ ಪ್ರದೇಶ ಮತ್ತು ದಲಾಯಿ ಲಾಮ ವಿಚಾರಗಳಲ್ಲಿ ಚೀನಾವನ್ನು ಮುಖತಹಃ ಎದುರಿಸಿದ್ದು ಭಾರತದ ಸಾಧನೆಯಾಗಿದೆ. ಯಾವುದೇ ಪ್ರತಿಕ್ರಿಯೆಗಳಿಗೂ ತಲೆಕೆಡಿಸಿಕೊಳ್ಳದೆ ಇಸ್ರೇಲ್ ಜೊತೆ ಕೈಜೋಡಿಸಿ ಸೈನ್ಯ ಮತ್ತು ಟೆಕ್ನಾಲಜಿಯ ಬಗ್ಗೆ ಎರಡೂ ರಾಷ್ಟ್ರಗಳು ಒಟ್ಟಿಗೆ ಕೆಲಸ ನಿರ್ವಹಿಸುತ್ತಿರುವುದು ಸಾಗತಾರ್ಹ ವಿಚಾರವಾಗಿದೆ. ಚೀನಾದ ಯಾವುದೇ ಒತ್ತಡಕ್ಕೂ ಮಣಿಯದೆ, ಡೋಕ್ಲಾಮ್ ಸಮಸ್ಯೆಗೆ ಭಾರತ ನೀಡಿದ ಪರಿಹಾರವೂ ಆಶ್ಚರ್ಯ ಹುಟ್ಟಿಸುವಂತದ್ದು. ಇವು ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತದ ಶಕ್ತಿಯನ್ನು ಮತ್ತಷ್ಟು ಹೆಚ್ಚಿಸಿದ್ದು, ಇಂತಹ ಹಲವು ವಿಚಾರಗಳ ಬಗ್ಗೆ ತನ್ನದೇ ಆದ ಅಭಿಪ್ರಾಯಗಳನ್ನು ಸ್ವತಂತ್ರವಾಗಿ ಮಂಡಿಸುವ ಸಾಮರ್ಥ್ಯವನ್ನು ಭಾರತವು ಭವಿಷ್ಯದಲ್ಲಿ ಹೊಂದಿದೆ ಎಂಬ ಸಂದೇಶವನ್ನು ಸಾರಿದಂತಾಗಿದೆ.
4. ಅಂತರಿಕ ಭದ್ರತೆಯನ್ನು ಹೆಚ್ಚಿಸಿದ್ದು
ಗಡಿಯಲ್ಲಿ ಪಾಕಿಸ್ತಾನದ ಭಯ ಮತ್ತು ಅವರನ್ನು ಎದುರಿಸುವುದು ಭಾರತಕ್ಕೆ ಎಷ್ಟು ಮುಖ್ಯವೋ ಅಷ್ಟೇ ಮುಖ್ಯವಾದ ವಿಚಾರವೇನೆಂದರೆ ಭಾರತದಲ್ಲಿ ಒಳಗಿರುವ ಕೆಲವು ದುಷ್ಟಶಕ್ತಿಗಳನ್ನು ಸದೆ ಬಡಿಯುವುದು. ಆ ನಿಟ್ಟಿನಲ್ಲೂ ಕೂಡ ಮೋದಿ ಸರ್ಕಾರ ದಿಟ್ಟ ಹೆಜ್ಜೆ ಇಟ್ಟಿದೆ. ಮಾವೋವಾದಿಗಳು, ನಕ್ಸಲೇಟ್ಸ, ಜಿಹಾದಿ ಟೆರರಿಸ್ಟ್ ಇವರುಗಳ ಪುಂಡಾಟಕ್ಕೆ ಬ್ರೇಕ್ ಬೀಳುವಂತೆ ಮಾಡಿದ್ದಾರೆ. ಹಲವು ಸಪರ್ಮಕ ಯೋಜನೆಗಳ ಮೂಲಕ ಹಲವು ಟೆರರಿಸ್ಟ್ ಗಳನ್ನು ಹಿಡಿಯುವಲ್ಲಿ ಭದ್ರತಾ ಪಡೆ ಯಶಸ್ವಿಯಾಗಿದೆ. ಭಾರತದಲ್ಲಿರುವ ನಿಜವಾದ ಸಮಸ್ಯೆಗಳತ್ತ ಗಮನ ಕೇಂದ್ರೀಕರಿಸಲು ಇದು ಸಹಾಯ ಮಾಡಿದೆ.
5. ಮೇಕ್ ಇನ್ ಇಂಡಿಯಾ ಮತ್ತು ಡಿಜಿಟಲ್ ಇಂಡಿಯಾ
ಸಾಮಾನ್ಯ ಜನರಿಗೆ ನೇರವಾಗಿ ಸರ್ಕಾರಿ ಸೌಲಭ್ಯಗಳು ಲಭ್ಯವಾಗುವ ನಿಟ್ಟಿನಲ್ಲಿ ನರೇಂದ್ರ ಮೋದಿ ಸರ್ಕಾರ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಮೇಕ್ ಇನ್ ಇಂಡಿಯಾ ಯೋಜನೆಯ ಫಲವಾಗಿ ಹಲವು ಎಂಎನ್ಸಿಗಳು ದೇಶಕ್ಕೆ ಆರ್ಥಿಕವಾಗಿ ಬಲ ನೀಡುವಂತೆ ಮಾಡಿದೆ. ಅಂತರ್ಜಾಲದ ಸದ್ಭಳಕೆ ಬಗ್ಗೆ ಜಾಗೃತಿ ಕಾರ್ಯಕ್ರಮಗಳು, ಪ್ರತಿ ಹಳ್ಳಿಯಲ್ಲೂ 2020 ರ ವೇಳೆಗೆ ಬ್ರಾಡ್ ಬ್ಯಾಂಡ್ ಕನೆಕ್ಷನ್ ಲಭ್ಯವಾಗುವಂತೆ ಮಾಡುವ ಗುರಿಯನ್ನು ಮೋದಿ ಸರ್ಕಾರ ಹೊಂದಿದೆ. ಇದು ಭಾರತದ ಭವಿಷ್ಯದ ನಿಟ್ಟಿನಲ್ಲಿ ಬಹಳ ಪ್ರಯೋಜನಕಾರಿಯಾಗಿದೆ.
6. ಸ್ವಚ್ಛ ಸರ್ಕಾರವಾಗಿ ಉಳಿದಿರುವುದು
ಭಾರತದ ಸರ್ಕಾರವೂ ಹೆಚ್ಚಾಗಿ ಭ್ರಷ್ಟಾಚಾರದಿಂದಲೇ ಫೇಮಸ್ ಆಗಿರುತ್ತಿತ್ತು. ಹಿಂದಿನ ಸರ್ಕಾರವು 2ಜಿ ಹಗರಣ, ಕಲ್ಲಿದ್ದಲ್ಲು ಹಗರಣ, CWGಗಳಿಂದ ಎಲ್ಲರ ಮನೆಮಾತಾಗಿತ್ತು. ಆದರೆ ಮೋದಿ ಸರ್ಕಾರವು ಇಂತಹ ಯಾವುದೇ ಹಗರಣವನ್ನೂ ಮಾಡದೇ ಸ್ವಚ್ಛ ಸರ್ಕಾರವಾಗಿ ಗುರುತಿಸಿಕೊಂಡಿದೆ. ರಾಜಕಾರಣಿಗಳು ಸ್ವಚ್ಛವಾಗಿರುವಂತೆ ನೋಡಿಕೊಂಡಿರುವುದು ಮೋದಿಯ ಸಾಧನೆ. ಈ ನಿಟ್ಟಿನಲ್ಲಿ ರಾಜಕಾರಣಿಗಳ ಬಗ್ಗೆ ಒಂದು ಜನಸಾಮಾನ್ಯರಲ್ಲಿ ಹೆಮ್ಮೆ ಬರುವಂತೆ ಮಾಡಿದ್ದು ಮೋದಿ.
ಇದುವರೆಗೂ ಮೋದಿ ಒಂದು ದಿನವೂ ರಜೆ ತೆಗೆದುಕೊಂಡಿಲ್ಲ. ಸರ್ಕಾರ ಮತ್ತು ಸಾಮಾನ್ಯ ಜನರ ನಡುವೆ ನೇರ ಸಂಬಂಧವಿರುವಂತೆ ನೋಡಿಕೊಂಡಿದ್ದಾರೆ. ಯಾವುದೇ ಸಮಸ್ಯೆಯಾಗಲಿ ಮೋದಿಗೆ ನೇರವಾಗಿ ಸಂಪರ್ಕ ಮಾಡಬಹುದಾಗಿದೆ. ಮನ್ ಕಿ ಬಾತ್ ನಂತ ಕಾರ್ಯಕ್ರಮದ ಮೂಲಕ ಜನಸಾಮಾನ್ಯರ ಸಮಸ್ಯೆಗಳ ಬಗ್ಗೆ ಸುದೀರ್ಘ ಮಾತುಕತೆಯನ್ನು ಮೋದಿ ಮಾಡುತ್ತಿರುತ್ತಾರೆ.
7. ಸ್ವಚ್ಛ ಭಾರತ
ಸ್ವಚ್ಛ ಭಾರತ ಕಾರ್ಯಕ್ರಮವನ್ನು ಸರ್ಕಾರ ಆಯೋಜಿಸಿದಾಗ ಹೆಚ್ಚಿನವರು ನಗಾಡಿದ್ದರು. ಸಣ್ಣ ಸಣ್ಣ ವಿಚಾರದ ಬಗ್ಗೆ ಸರ್ಕಾರ ತಲೆಕೆಡಿಸಿಕೊಳ್ಳುತ್ತಿದೆ ಎಂದು ಮೂದಲಿಸಿದ್ದರು. ಆದರೆ ಕಳೆದ ಎರಡುವರೆ ವರ್ಷದಲ್ಲಿ ದೊಡ್ಡ ದೊಡ್ಡ ಸಿಟಿಯ ಮಂದಿ ತಮ್ಮ ಪ್ರದೇಶದ ಸ್ವಚ್ಛತೆಯ ಬಗ್ಗೆ ಜಾಗೃತರಾಗಿದ್ದಾರೆ. ರೈಲ್ವೇ ಸ್ಟೇಷನ್ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಸ್ವಚ್ಛವಾಗಿಡಲು ಸಾರ್ವಜನಿಕರೂ ಕೂಡ ತಮ್ಮ ಜವಾಬ್ದಾರಿಯನ್ನು ನಿರ್ವಹಿಸುತ್ತಿರುವುದು ಗಮನಾರ್ಹ.
8. ಜಿಎಸ್ಟಿ
ಜಿಎಸ್ಟಿ ತೆರಿಗೆಯು ಸ್ವಾತಂತ್ರ್ಯ ನಂತರದಲ್ಲಿ ತೆರಿಗೆ ವಿಚಾರದಲ್ಲಿ ಭಾರತ ತೆಗೆದುಕೊಂಡ ಒಂದು ದೊಡ್ಡ ನಿರ್ಧಾರವಾಗಿದೆ. ಜುಲೈ 1 ರಿಂದ ಜಾರಿಗೆ ಬಂದಿದ್ದು, ದೇಶಾದ್ಯಂತ ದೊಡ್ಡ ಮಟ್ಟದ ಚರ್ಚೆಗೆ ಗ್ರಾಸವಾಗಿತ್ತು. ಹೆಚ್ಚಿನ ತೆರಿಗೆ ಪಾವತಿಸುವುದನ್ನು ತಡೆದು, ತೆರಿಗೆ ವಂಚನೆಯನ್ನು ನಿಲ್ಲಿಸುವ ನಿಟ್ಟಿನಲ್ಲಿ ಜಾರಿಗೆ ಬಂದ ಜಿಎಸ್ಟಿ ಕಾರ್ಯಕ್ರಮವು ದೊಡ್ಡ ಮಟ್ಟದಲ್ಲಿ ಯಶಸ್ವಿಯಾಗದಿದ್ದರೂ ಪ್ರತಿಯೊಬ್ಬರೂ ಗಮನಿಸಬೇಕಾದ ಅಂಶವಾಗಿದೆ. ಜಿಎಸ್ಟಿ ನಂತರ ಹಲವು ವಸ್ತುಗಳ ಬೆಲೆಯಲ್ಲಿ ಇಳಿಮುಖವಾಗಿದ್ದು, ಸರ್ಕಾರದ ಈ ಯೋಜನೆಯ ಫಲಾನುಭವವನ್ನು ಜನರು ನೇರವಾಗಿ ಪಡೆಯುವಂತಾಗಿದೆ. ಮಧ್ಯಮ ವರ್ಗದ ಜನರಿಗೆ ತೆರಿಗೆ ಪಾವತಿಸುವುದು ಕಷ್ಟವಾಗಬಾರದು ಅನ್ನುವ ಕಾರಣಕ್ಕೆ ಜಿಎಸ್ಟಿ ಮೂಲಕ ತೆರಿಗೆಯನ್ನು ಶೇ. 10 ರಿಂದ 5ಕ್ಕೆ ಸರ್ಕಾರ ಇಳಿಸಿದೆ.
9. ಭಾರತದ ಹಳ್ಳಿಗಳಿಗೆ ಹೆಚ್ಚಿನ ಆಧ್ಯತೆ
ಪ್ರಧಾನ ಮಂತ್ರಿ ಉಜ್ವಲ ಯೋಜನೆ ಸರ್ಕಾರ ಜಾರಿಗೆ ತಂದಿದೆ. ಹಳ್ಳಿಗಾಡಿನ ಮಹಿಳೆಯರಿಗೆ ಉಜ್ವಲ ಭವಿಷ್ಯ ಕಲ್ಪಿಸುವ ನಿಟ್ಟಿನಲ್ಲಿ ಈ ಯೋಜನೆಯು ಮಹತ್ವದ ಕೆಲಸವನ್ನು ನಿರ್ವಹಿಸಲಿದೆ. ಕೃಷಿ ಸಿಂಚಯಿ ಯೋಜನೆ, ಪ್ರಧಾನ ಮಂತ್ರಿ ಆವಾಸ ಯೋಜನೆ, ಸುಕನ್ಯಾ ಸಮೃದ್ಧಿ ಯೋಜನೆಗಳು ನೇರವಾಗಿ ಹಳ್ಳಿಗಳ ಜನರ ಬದುಕನ್ನು ಉತ್ತಮ ಗೊಳಿಸುವ ನಿಟ್ಟಿನಲ್ಲಿ ಪ್ರಾರಂಭಿಸಿರುವ ಯೋಜನೆಗಳಾಗಿವೆ.
ಇತ್ತೀಚೆಗೆ ಭಾರತ ಸರ್ಕಾರವು ಪ್ರತಿ ಹಳ್ಳಿಗೂ ಶೇಕಡಾ 100 ರಷ್ಟು ವಿದ್ಯುತ್ ಕಲ್ಪಿಸುವ ಯೋಜನೆಯೊಂದನ್ನು ರೂಪಿಸಿದೆ. ಈ ಯೋಜನೆಯನ್ನು ಯಶಸ್ವಿಯಾಗಿ ನಿರ್ವಹಿಸಬೇಕಾಗಿದೆ.
10. ನೀತಿ ಆಯೋಗ
ಸ್ವಾತಂತ್ರ್ಯ ಬಂದ ನಂತರ ಕೇಂದ್ರ ಮಟ್ಟದಲ್ಲಿ ಹಲವು ಪ್ಲಾನಿಂಗ್ ಕಮಿಷನ್ ಇದ್ದರೂ ಕೂಡ ಸರಿಯಾದ ಯೋಜನೆಯನ್ನು ರೂಪಿಸುತ್ತಿರಲಿಲ್ಲ. ಹಾಗಾಗಿ ಅದರ ಬದಲಾಗಿ ನೀತಿ ಆಯೋಗ ರಚನೆ ಮಾಡಲಾಗಿದೆ. ಪ್ರತಿ ರಾಜ್ಯಕ್ಕೂ ಸಮಾನ ಅವಕಾಶ ಕಲ್ಪಿಸಿ, ಕೇಂದ್ರಕ್ಕೆ ಪ್ಲಾನ್ ಮಾಡಲು ಎಷ್ಟು ಅವಕಾಶಗಳಿವೆಯೋ ಹಾಗೆ ರಾಜ್ಯ ಸರ್ಕಾರವೂ ಕೂಡ ತನ್ನ ರಾಜ್ಯದ ಸಮಸ್ಯೆಗಳ ವಿಚಾರದಲ್ಲಿ ಅಷ್ಟೇ ಪ್ಲಾನಿಂಗ್ ರೂಪಿಸಿ ಯೋಜನೆ ಕಲ್ಪಿಸಲು ಅವಕಾಶ ನೀಡಲಾಗಿದೆ.
11. ಸೂಕ್ಷ್ಮ ವಿಚಾರಗಳ ಬಗ್ಗೆ ದಿಟ್ಟ ನಿರ್ಧಾರಗಳು
ಸರ್ಕಾರವು ರಾಜಕೀಯ ಓಲೈಕೆ ತಂತ್ರದಿಂದ ದುರ ಉಳಿದಿದ್ದು, ತ್ರಿವಳಿ ತಲಾಕ್ ನ್ನು ಸುಪ್ರೀಂ ಕೋರ್ಟ್ ಅಸಂವಿಧಾನಿಕ ಮತ್ತು 6 ತಿಂಗಳ ಒಳಗಾಗಿ ಸರ್ಕಾರ ಒಂದು ಕಾನೂನು ರಚಿಸುವಂತೆ ತಿಳಿಸಿತ್ತು. ಈ ನಿರ್ಧಾರದ ಬಗ್ಗೆ ವಿವಿಧ ಅಭಿಪ್ರಾಯಗಳು ವ್ಯಕ್ತವಾಗಿದ್ದವು. ಆದರೆ ಮುಸ್ಲೀಂ ಮಹಿಳೆಯರು ನೇರವಾಗಿ ಸರ್ಕಾರಕ್ಕೆ ಬೆಂಬಲ ಸೂಚಿಸಿದರು. ಆದರೆ ವಿರೋಧ ಪಕ್ಷವು ಸರ್ಕಾರವನ್ನು ವಿರೋಧಿಸಿತ್ತು. ಆದರೆ ಇದರ ಬಗ್ಗೆ ಕಾನೂನು ರಚಿಸಲು ಈಗಿನ ಸರ್ಕಾರಕ್ಕಿರುವ ಧೈರ್ಯವನ್ನು ಮೆಚ್ಚಲೇಬೇಕು. ತ್ರಿವಳಿ ತಲಾಕ್ ನಿಷೇಧಿಸಿ ಕಾನೂನು ರಚಿಸಿದ್ದು ಮೋದಿಯ ಸಾಧನೆ.
ಸಾದನೆಗಳ ಹಾಗೇ ವೈಫಲ್ಯ
ಇದು ಕಳೆದ ನಾಲ್ಕು ವರ್ಷದಲ್ಲಿ ಮೋದಿ ಸರ್ಕಾರ ಮಾಡಿದ ಕೆಲವು ಸಾಧನೆಗಳ ಪಟ್ಟಿ. ಇದಿಷ್ಟನ್ನೂ ಮೀರಿದ ಹಲವು ಯೋಜನೆಗಳನ್ನು ಕೇಂದ್ರ ಸರ್ಕಾರ ರಚಿಸಿದೆ. ಸಾದನೆಗಳ ಹಾಗೇ ವೈಫಲ್ಯಗಳು ಇಲ್ಲ ಅನ್ನುವಂತಿಲ್ಲ. ಆದರೆ ಪ್ರತಿಯೊಬ್ಬ ಭಾರತೀಯನಲ್ಲೂ ಭಾರತವು ಮೋದಿ ಸರ್ಕಾರದಿಂದ ಮುಗಿಲೆತ್ತರಕ್ಕೆ ಮುನ್ನೆಡೆಯಲಿದೆ ಎಂಬ ವಿಶ್ವಾಸ ಬರುವಂತೆ ಮಾಡಿದ್ದಾರೆ. ಇದೇ ರೀತಿ ಮೋದಿ ಸರ್ಕಾರ ಇನ್ನುಳಿದ ಕಾಲಾವಧಿಯಲ್ಲಿ ಮತ್ತಷ್ಟು ಸಾಧನೆ ಮಾಡಲಿದೆ ಎಂಬ ಭರವಸೆ ಇದೆ.