72ನೇ ಸ್ವಾತಂತ್ರ್ಯೋತ್ಸವ: ಭಾರತದ ಆರ್ಥಿಕತೆ ಎದುರಿಸುತ್ತಿರುವ ಮುಖ್ಯ ಸಮಸ್ಯೆಗಳೇನು ಗೊತ್ತೆ?
ಪ್ರಸ್ತುತ ಭಾರತದ ಅರ್ಥವ್ಯವಸ್ಥೆ ಜಾಗತಿಕವಾಗಿ ಅತಿ ವೇಗದಲ್ಲಿ ಬೆಳವಣಿಗೆ ಸಾಧಿಸುತ್ತಿರುವ ಅರ್ಥವ್ಯವಸ್ಥೆಗಳಲ್ಲೊಂದಾಗಿದೆ. ಇಷ್ಟಾದರೂ ನಮ್ಮ ಅರ್ಥವ್ಯವಸ್ಥೆಯಲ್ಲಿ ಎಲ್ಲವೂ ಸರಿಯಾಗಿದೆ ಎಂದು ಹೇಳುವಂತಿಲ್ಲ.
1991ರ ನಂತರದಲ್ಲಿ ಭಾರತದ ಅರ್ಥವ್ಯವಸ್ಥೆಯು ಉದಾರೀಕರಣದ ಮುಕ್ತ ಮಾರುಕಟ್ಟೆ, ಹೆಚ್ಚಿನ ವ್ಯಾಪಾರ ಸ್ವಾತಂತ್ರ್ಯ ಹಾಗೂ ಮೂಲಭೂತ ಸೌಕರ್ಯಗಳ ನಿರ್ಮಾಣದಲ್ಲಿ ಹೆಚ್ಚಿನ ಬಂಡವಾಳ ಹೂಡಿಕೆಗೆ ಮುಕ್ತವಾಗಿ ತೆರೆದುಕೊಂಡಿದೆ. ಇದರಿಂದ ಭಾರತದ ಅರ್ಥವ್ಯವಸ್ಥೆಯು ತ್ವರಿತವಾಗಿ ಬೆಳವಣಿಗೆ ಹಾಗೂ ಆರ್ಥಿಕಾಭಿವೃದ್ಧಿ ಸಾಧಿಸಲು ನೆರವಾಯಿತು.
ಪ್ರಸ್ತುತ ಭಾರತದ ಅರ್ಥವ್ಯವಸ್ಥೆ ಜಾಗತಿಕವಾಗಿ ಅತಿ ವೇಗದಲ್ಲಿ ಬೆಳವಣಿಗೆ ಸಾಧಿಸುತ್ತಿರುವ ಅರ್ಥವ್ಯವಸ್ಥೆಗಳಲ್ಲೊಂದಾಗಿದೆ. ಇಷ್ಟಾದರೂ ನಮ್ಮ ಅರ್ಥವ್ಯವಸ್ಥೆಯಲ್ಲಿ ಎಲ್ಲವೂ ಸರಿಯಾಗಿದೆ ಎಂದು ಹೇಳುವಂತಿಲ್ಲ. ಈಗಲೂ ಹಲವಾರು ಸವಾಲು ಹಾಗೂ ಸಮಸ್ಯೆಗಳನ್ನು ಭಾರತ ಎದುರಿಸುತ್ತಿದೆ. ಪ್ರಸ್ತುತ ನಮ್ಮ ಆರ್ಥಿಕ ವ್ಯವಸ್ಥೆ ಎದುರಿಸುತ್ತಿರುವ ಪ್ರಮುಖ ಸವಾಲು ಹಾಗೂ ಸಮಸ್ಯೆಗಳು ಯಾವುವು ಎಂಬುದನ್ನು ನೋಡೋಣ.
1. ನಿರುದ್ಯೋಗ ಸಮಸ್ಯೆ
ತ್ವರಿತ ಆರ್ಥಿಕ ಅಭಿವೃದ್ಧಿಯ ನಡುವೆಯೂ ದೇಶದ ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಈಗಲೂ ನಿರುದ್ಯೋಗ ಸಮಸ್ಯೆ ತಾಂಡವವಾಡುತ್ತಿದೆ. ವೇಗವಾಗಿ ಬೆಳೆಯುತ್ತಿರುವ ಆರ್ಥಿಕ ವ್ಯವಸ್ಥೆಯಲ್ಲಿ ಕೌಶಲ್ಯ ರಹಿತ ಕಾರ್ಮಿಕರು ಕೆಲಸ ಕಳೆದುಕೊಂಡಿದ್ದು, ಔದ್ಯೋಗಿಕ ವಲಯದಲ್ಲಿ ಕೆಲಸ ಹುಡುಕಲು ಅವರು ಪರದಾಡುವಂತಾಗಿದೆ. ೨೦೧೭ರಲ್ಲಿ ಸರಕಾರದ ಅಧಿಕೃತ ಅಂಕಿ-ಅಂಶಗಳ ಪ್ರಕಾರ ನಿರುದ್ಯೋಗ ಪ್ರಮಾಣ ಶೇ.೫ ಕ್ಕಿಂತ ಕೊಂಚ ಕಡಿಮೆ ಇತ್ತು. ಆದರೆ ಓಇಸಿಡಿ (OECD) ಯ ಒಂದು ವರದಿಯ ಪ್ರಕಾರ ದೇಶದಲ್ಲಿನ ೧೫ ರಿಂದ ೨೯ ವಯೋಮಾನದ ಶೇ.೩೦ ಕ್ಕೂ ಹೆಚ್ಚು ಜನ ಯಾವುದೇ ಉದ್ಯೋಗ, ಶಿಕ್ಷಣ ಅಥವಾ ತರಬೇತಿ ಯಾವುದರಲ್ಲೂ ನಿರತರಾಗಿಲ್ಲ. ಇದನ್ನು ಲೈವ್ ಮಿಂಟ್ ಪತ್ರಿಕೆ ಮಾರ್ಚ್ ೬, ೨೦೧೭ ರಂದು ವರದಿ ಮಾಡಿದೆ. ಇವರಿಗೆ ಸರಕಾರದ ಯಾವುದೇ ಕಲ್ಯಾಣ ಯೋಜನೆಗಳು ಸಹ ತಲುಪದೆ ಬಡತನ ಹೆಚ್ಚಾಗುತ್ತಿದೆ. ಅತಿಹೆಚ್ಚು ಸಾಲ ಹೊಂದಿರುವ ವಿಶ್ವದ 10 ದೇಶಗಳು, ಭಾರತ ಎಷ್ಟನೇ ಸ್ಥಾನದಲ್ಲಿದೆ?
2. ಶಿಕ್ಷಣದ ಕಳಪೆ ಗುಣಮಟ್ಟ
ಭಾರತದಲ್ಲಿ ಇಂಗ್ಲಿಷ್ ಮಾತನಾಡಬಲ್ಲ ಜನ ಸಾಕಷ್ಟಿದ್ದರೂ (ಇವರಿಂದ ಕಾಲ್ ಸೆಂಟರ್ ಉದ್ಯಮಕ್ಕೆ ಲಾಭವಾಗಿದೆ), ನಿರಕ್ಷರತೆಯ ಪ್ರಮಾಣ ಈಗಲೂ ಸಾಕಸ್ಟಿದೆ. ಅದರಲ್ಲೂ ಗ್ರಾಮೀಣ ಪ್ರದೇಶದ ಹೆಣ್ಣು ಮಕ್ಕಳು ಶಿಕ್ಷಣದಿಂದ ವಂಚಿತರಾಗಿದ್ದಾರೆ. ಇಂದಿಗೂ ಭಾರತದ ಶೇ.೫೦ ಕ್ಕೂ ಹೆಚ್ಚು ಮಹಿಳೆಯರು ಅಶಿಕ್ಷಿತರಾಗಿರುವುದರಿಂದ ಅರ್ಥವ್ಯವಸ್ಥೆಯ ಬೆಳವಣಿಗೆಗೆ ಹೊಡೆತ ನೀಡುತ್ತಿದೆ. ಜೊತೆಗೆ ಕುಶಲ ಕಾರ್ಮಿಕರ ಕೊರತೆ ಎದುರಿಸುವಂತಾಗಿದೆ. ಪ್ರಧಾನಿ ನರೇಂದ್ರ ಮೋದಿಯವರ 10 ವೈಫಲ್ಯಗಳು ಯಾವುವು ಗೊತ್ತೆ?
3. ಮೂಲಭೂತ ಸೌಕರ್ಯಗಳ ಕೊರತೆ
ಕುಡಿಯುವ ನೀರು ಸೇರಿದಂತೆ ಹಲವಾರು ಮೂಲಭೂತ ಸೌಕರ್ಯಗಳು ಈಗಲೂ ದೇಶದ ಅನೇಕ ಭಾಗಗಳಲ್ಲಿ ಮರೀಚಿಕೆಯಾಗಿವೆ. ಅಧಿಕಾರಶಾಹಿಗಳು ಹಾಗೂ ಅಸಮರ್ಥತೆಯಿಂದ ಮೂಲ ಸೌಕರ್ಯಗಳು ಜನರ ಬಳಿಗೆ ತಲುಪುತ್ತಿಲ್ಲ. ಭಾರತದಲ್ಲಿ ಬೆಳೆಯಲಾಗುವ ಒಟ್ಟು ಹಣ್ಣುಗಳ ಉತ್ಪಾದನೆಯಲ್ಲಿ ಶೇ.೪೦ ರಷ್ಟು ಮಾರುಕಟ್ಟೆ ತಲುಪುವ ಮೊದಲೇ ಕೊಳೆತು ಹೋಗುತ್ತವೆ. ಅಂದರೆ ದೇಶದಲ್ಲಿನ ಸಂಗ್ರಹ ಹಾಗೂ ಸಾರಿಗೆ ವ್ಯವಸ್ಥೆ ಕೊರತೆ ಎಷ್ಟಿದೆ ಎಂಬುದನ್ನು ತಿಳಿಯಬಹುದು. ಇದೂ ಸಹ ಆರ್ಥಿಕತೆಯ ಬೆಳವಣಿಗೆಗೆ ದೊಡ್ಡ ಅಡ್ಡಿಯಾಗಿ ಪರಿಣಮಿಸಿದೆ.
4. ಅರ್ಥವ್ಯವಸ್ಥೆಯಲ್ಲಿ ಚಾಲ್ತಿ ಖಾತೆ ಕೊರತೆ
ದೇಶದಲ್ಲಿ ಈಗ ದೊಡ್ಡ ಪ್ರಮಾಣದ ವಿದೇಶಿ ಕರೆನ್ಸಿ ಸಂಗ್ರಹವಿದ್ದರೂ ಏರುಗತಿಯ ಆರ್ಥಿಕಾಭಿವೃದ್ಧಿಯಿಂದ ಚಾಲ್ತಿ ಖಾತೆಯಲ್ಲಿ ಕೊರತೆ ಎದುರಿಸುವಂತಾಗಿದೆ. ೨೦೧೨ರ ಕೊನೆಯ ಭಾಗದಲ್ಲಿ ಚಾಲ್ತಿ ಖಾತೆ ಕೊರತೆ ದೇಶದ ಜಿಡಿಪಿಯ ಶೇ.೬ ರಷ್ಟು ಹೆಚ್ಚಿನ ಪ್ರಮಾಣದಲ್ಲಿತ್ತು. ತದನಂತರ ಪರಿಸ್ಥಿತಿ ಸಾಕಷ್ಟು ಸುಧಾರಿಸಿದೆ. ಆದರೆ ದೇಶದಲ್ಲಿ ಆಮದು ಪ್ರಮಾಣ ಏರುಗತಿಯಲ್ಲಿ ಬೆಳೆಯುತ್ತಿದ್ದು, ಅದೇ ಪ್ರಮಾಣದಲ್ಲಿ ರಫ್ತು ಪ್ರಮಾಣ ಬೆಳೆಯುತ್ತಿಲ್ಲ. ಹೀಗಾಗಿ ದೊಡ್ಡ ಪ್ರಮಾಣದಲ್ಲಿ ಹೊರಗಿನ ಬಂಡವಾಳ ಹೂಡಿಕೆಯನ್ನು ದೇಶಕ್ಕೆ ತರುವುದು ಅಗತ್ಯವಾಗಿದೆ. ಬಂಡವಾಳ ಕೊರತೆಯಿಂದ ೨೦೧೨ ರಿಂದ ೧೪ ರ ಅವಧಿಯಲ್ಲಿ ರೂಪಾಯಿ ಭಾರಿ ಪ್ರಮಾಣದಲ್ಲಿ ಮೌಲ್ಯ ಕಳೆದುಕೊಂಡಿತು. ಈಗಲೂ ರೂಪಾಯಿ ಮೌಲ್ಯ ಮತ್ತಷ್ಟು ಕುಸಿಯುವ ಭೀತಿ ಇದ್ದೇ ಇದೆ. ಇದನ್ನು ನಿವಾರಿಸಿ ಅರ್ಥವ್ಯವಸ್ಥೆಯನ್ನು ಸಮತೋಲಿತಗೊಳಿಸಲು ರಫ್ತಿನ ಪ್ರಮಾಣವನ್ನು ತ್ವರಿತಗತಿಯಲ್ಲಿ ಹೆಚ್ಚಿಸಬೇಕಿದೆ.
5. ಹೆಚ್ಚು ಪ್ರಮಾಣದ ಖಾಸಗಿ ಸಾಲ
ಆಸ್ತಿ ಮಾರುಕಟ್ಟೆಯಲ್ಲಿನ ಬೆಳವಣಿಗೆಯಿಂದ ಕಳೆದ ವರ್ಷದಲ್ಲಿ ಸಾಲ ಪಡೆಯುವ ಪ್ರಮಾಣ ಶೇ.೩೦ ರಷ್ಟು ಹೆಚ್ಚಳವಾಗಿದೆ. ಜೊತೆಗೆ ಈ ಸಾಲಗಳ ಭದ್ರತೆಯ ಬಗ್ಗೆಯೂ ಚಿಂತೆ ಎದುರಾಗಿದೆ. ಆಸ್ತಿಗಳ ಮೌಲ್ಯದಲ್ಲಿ ಹೆಚ್ಚಳದ ನಿರೀಕ್ಷೆ ಇಟ್ಟು ಸಾಲ ಪಡೆದಿದ್ದರೆ ಭವಿಷ್ಯದಲ್ಲಿ ಇದು ಸಮಸ್ಯೆ ಸೃಷ್ಟಿಸಬಹುದು. ಇನ್ನು ಹಣದುಬ್ಬರ ಹೆಚ್ಚಾದಲ್ಲಿ ಆರ್ಬಿಐ ಸಹಜವಾಗಿಯೇ ಬಡ್ಡಿ ದರಗಳನ್ನು ಹೆಚ್ಚಿಸುವ ಎಲ್ಲ ಸಾಧ್ಯತೆಗಳಿವೆ. ಒಂದು ವೇಳೆ ಬಡ್ಡಿ ದರಗಳಲ್ಲಿ ಗಮನಾರ್ಹ ಹೆಚ್ಚಳವಾದಲ್ಲಿ ಬಡ್ಡಿ ಪಾವತಿ ಹೆಚ್ಚಾಗಲಿದೆ ಹಾಗೂ ಅದೇ ಸಮಯಕ್ಕೆ ಗ್ರಾಹಕರು ಖರ್ಚು ಮಾಡುವ ಸಾಮರ್ಥ್ಯವನ್ನು ಕಡಿಮೆ ಮಾಡಲಿದೆ.
6. ಹೆಚ್ಚಿದ ಅಸಮಾನತೆ
ತ್ವರಿತ ಆರ್ಥಿಕ ಬೆಳವಣಿಗೆಯಿಂದ ದೇಶದ ಬಡವರನ್ನು ಬಡತನ ರೇಖೆಯಿಂದ ಮೇಲೆತ್ತಬಹುದು ಎಂದು ನಂಬಲಾಗಿತ್ತು. ಆದರೆ ಪ್ರಸ್ತುತ ಆರ್ಥಿಕ ಬೆಳವಣಿಗೆ ತೀರಾ ಅಸಮತೋಲಿತವಾಗಿದ್ದು, ಕೌಶಲ್ಯ ಹೊಂದಿದವರು ಹಾಗೂ ಈಗಾಗಲೇ ಇರುವ ಶ್ರೀಮಂತರು ಮಾತ್ರ ಇದರ ಲಾಭ ಪಡೆಯುವಂತಾಗಿದೆ. ಈಗಲೂ ದೇಶದ ೭೮ ಮಿಲಿಯನ್ ಮನೆಗಳಲ್ಲಿ ವಿದ್ಯುತ್ ಸೌಕರ್ಯವಿಲ್ಲ. ಶೇ.೩೩ ರಷ್ಟು ಜನ ದಿನಕ್ಕೆ ಒಂದು ಡಾಲರ್ಗಿಂತಲೂ ಕಡಿಮೆ ಆದಾಯದಲ್ಲಿ ಜೀವಿಸುತ್ತಿದ್ದಾರೆ. ಆದರೆ ದೇಶದ ಹಳ್ಳಿಗಳ ಮನೆ ಮನೆಗಳಿಗೆ ಮುಟ್ಟಿರುವ ಟಿವಿ ಮಾಧ್ಯಮದಿಂದ ತಮಗಾಗುತ್ತಿರುವ ಅಸಮತೋಲನವನ್ನು ಜನ ಅರಿತುಕೊಳ್ಳುತ್ತಿದ್ದಾರೆ.
7. ಬಜೆಟ್ನಲ್ಲಿ ಬೃಹತ್ ಕೊರತೆ
ಬೆಳವಣಿಗೆ ಹೊಂದುತ್ತಿರುವ ರಾಷ್ಟ್ರಗಳಲ್ಲಿ ಭಾರತ ಅತಿ ಹೆಚ್ಚು ಬಜೆಟ್ ಕೊರತೆ ಹೊಂದಿರುವ ದೇಶವಾಗಿದೆ. ಸಬ್ಸಿಡಿಗಳನ್ನು ಹೊರತು ಪಡಿಸಿದರೂ ಇದು ಜಿಡಿಪಿಯ ಶೇ. ೮ರಷ್ಟಿದೆ. ಕಳೆದ ವರ್ಷ ಕೊರತೆ ಪ್ರಮಾಣ ಕೊಂಚ ಕಡಿಮೆಯಾಗಿದ್ದು ನಿಜ. ಬಜೆಟ್ ಕೊರತೆಯಿಂದ ಆರೋಗ್ಯ ಹಾಗೂ ಶಿಕ್ಷಣ ವಲಯಕ್ಕೆ ಹೆಚ್ಚಿನ ಅನುದಾನ ಒದಗಿಸಲು ತೊಡಕು ಉಂಟಾಗುತ್ತಿದೆ.
8. ಕಠಿಣ ಕಾರ್ಮಿಕ ಕಾನೂನುಗಳು
ಉದಾಹರಣೆಗೆ ನೋಡುವುದಾದರೆ- ೧೦೦ಕ್ಕಿಂತ ಹೆಚ್ಚು ಕಾರ್ಮಿಕರನ್ನು ಹೊಂದಿರುವ ಯಾವುದೇ ಕಂಪನಿ ತನ್ನ ಯಾವುದೇ ಕಾರ್ಮಿಕನನ್ನು ಸರಕಾರದ ಪರವಾನಗಿ ಇಲ್ಲದೆ ಕೆಲಸದಿಂದ ತೆಗೆಯುವಂತಿಲ್ಲ. ಆದರೆ ಇದು ಅನುಕೂಲವಾಗುವ ಬದಲು ಸಮಸ್ಯೆಯನ್ನು ಸೃಷ್ಟಿಸಿದೆ. ಸರಕಾರದ ಈ ನಿಯಮದಿಂದ ಪಾರಾಗಲು ಕಂಪನಿಗಳು ನೂರಕ್ಕಿಂತ ಹೆಚ್ಚು ಕಾರ್ಮಿಕರನ್ನು ನೇಮಿಸಿಕೊಳ್ಳಲು ಹಿಂಜರಿಯುತ್ತಿವೆ. ಇದು ವಿದೇಶಿ ಬಂಡವಾಳದ ಹರಿವಿಗೂ ಅಡ್ಡಿಯಾಗುತ್ತಿದೆ. ಇನ್ನು ಟ್ರೇಡ್ ಯುನಿಯನ್ಗಳು ಸಹ ರಾಜಕೀಯವಾಗಿ ಪ್ರಬಲವಾಗಿವೆ ಹಾಗೂ ರಾಜಕೀಯವಾಗಿ ಪ್ರಭಾವ ಬೀರಬಲ್ಲ ಕಾರ್ಮಿಕ ಕಾನೂನುಗಳ ಸುಧಾರಣೆಗೆ ಸರಕಾರಗಳು ಸಹ ಮುಂದಾಗುತ್ತಿಲ್ಲ.
9. ಅಸಮರ್ಪಕ ಕೃಷಿ ವ್ಯವಸ್ಥೆ
ಭಾರತದ ಆರ್ಥಿಕ ವ್ಯವಸ್ಥೆಯಲ್ಲಿ ಶೇ.೧೭.೪ ರಷ್ಟು ಕೊಡುಗೆ ಹೊಂದಿರುವ ಕೃಷಿ ವಲಯದಲ್ಲಿ ಶೇ.೫೧ ರಷ್ಟು ಜನ ಕೆಲಸ ಮಾಡುತ್ತಾರೆ. ಇದು ದೇಶದ ಆರ್ಥಿಕತೆಯ ಅತಿ ಅಸಮತೋಲಿತ ವಲಯವಾಗಿದೆ ಹಾಗೂ ಸರಕಾರದ ಸುಧಾರಣಾ ಕ್ರಮಗಳು ನಿರೀಕ್ಷಿತ ಮಟ್ಟದ ಫಲ ನೀಡುತ್ತಿಲ್ಲ.
10. ಕಳಪೆ ತೆರಿಗೆ ಸಂಗ್ರಹಣೆ ಪ್ರಮಾಣ
ಎಕನಾಮಿಸ್ಟ್ ಪತ್ರಿಕೆಯ ವರದಿಯ ಪ್ರಕಾರ ಭಾರತವು ಅದರ ಜಿಡಿಪಿಗೆ ಹೋಲಿಸಿದರೆ ಅತಿ ಕಳಪೆ ಪ್ರಮಾಣದ ತೆರಿಗೆಯನ್ನು ಸಂಗ್ರಹಿಸುತ್ತಿದೆ. ಭಾರತದ ಒಟ್ಟಾರೆ ಜಿಡಿಪಿಯಲ್ಲಿ ತೆರಿಗೆ ಮೂಲದಿಂದ ಬರುವ ಆದಾಯ ಕೇವಲ ಶೇ.೧೨ ರಷ್ಟಿದೆ. ಇದು ಯುರೋಪಿಯನ್ ಯುನಿಯನ್ ದೇಶಗಳಲ್ಲಿ ಶೇ.೪೫ ರಷ್ಟಿದೆ. ಸಿಕ್ಕಾಪಟ್ಟೆ ಭ್ರಷ್ಟಾಚಾರ, ತೆರಿಗೆ ಕಳ್ಳತನ ಹಾಗೂ ಸಂಕೀರ್ಣ ತೆರಿಗೆ ಕಾನೂನುಗಳಿಂದ ತೆರಿಗೆ ಸಂಗ್ರಹಣೆಗೆ ಏಟು ಬೀಳುತ್ತಿದೆ. ಇದನ್ನು ತಡೆಗಟ್ಟಲೆಂದೇ ೨೦೧೭ ರಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರಕಾರ ದೇಶಾದ್ಯಂತ ಏಕರೂಪದ ತೆರಿಗೆ ವ್ಯವಸ್ಥೆ ಜಿಎಸ್ಟಿ ಯನ್ನು ಜಾರಿಗೆ ಜಾರಿಗೆ ತಂದಿದೆ.
11. ವ್ಯಾಪಾರ ಅರಂಭಿಸಲು ತೊಡಕುಗಳು
ವಿಶ್ವಬ್ಯಾಂಕ್ ವರದಿಯ ಪ್ರಕಾರ ಭಾರತದಲ್ಲಿ ಈಗಲೂ ವ್ಯಾಪಾರ ಆರಂಭಿಸುವುದು ಕಷ್ಟಕರವಾಗಿಯೇ ಮುಂದುವರೆದಿದೆ. ಸರಳವಾಗಿ ವ್ಯವಹಾರ ವ್ಯವಸ್ಥೆಯ ಸೂಚ್ಯಂಕದಲ್ಲಿ ಜಾಗತಿಕವಾಗಿ ೧೯೦ ರಲ್ಲಿ ಭಾರತ ೧೩೦ನೇ ಸ್ಥಾನದಲ್ಲಿದೆ. ವ್ಯವಹಾರದಲ್ಲಿ ಕಂಪನಿಗಳು ಎದುರಿಸುತ್ತಿರುವ ಪ್ರಮುಖ ಸಮಸ್ಯೆಗಳೆಂದರೆ;
- ಸುಲಭವಾಗಿ ಒಪ್ಪಂದಗಳನ್ನು ಜಾರಿಗೊಳಿಸುವುದು
- ಕಟ್ಟಡ ನಿರ್ಮಾಣ ವಲಯದ ಒಪ್ಪಂದಗಳ ನಿರ್ವಹಣೆ
- ತೆರಿಗೆ ಪಾವತಿ
- ಅಂತಾರಾಷ್ಟ್ರೀಯ ವ್ಯಾಪಾರ
12. ಪ್ರಾದೇಶಿಕ ಅಸಮಾನತೆ
ಭಾರತದ ಆರ್ಥಿಕಾಭಿವೃದ್ಧಿಯ ಲಾಭಗಳು ದೇಶದ ಕೆಲ ಭಾಗಗಳಿಗೆ ಹೆಚ್ಚಾಗಿ ಸಿಕ್ಕಿದ್ದು, ಇನ್ನು ಕೆಲ ಭಾಗಗಳು ಇದರಿಂದ ವಂಚಿತವಾಗಿವೆ. ದೇಶದ ತಂತ್ರಜ್ಞಾನದ ರಾಜಧಾನಿಗಳಾದ ಮುಂಬೈ ಹಾಗೂ ದೆಹಲಿಯಂಥ ಮಹಾನಗರಗಳಲ್ಲಿ ದೊಡ್ಡ ಸಂಬಳದ ನೌಕರಿಗಳು ಸೃಷ್ಟಿಯಾಗಿವೆ. ಕುಶಲ ಹಾಗೂ ವಿದ್ಯಾವಂತ ಜನತೆ ನೌಕರಿಗಾಗಿ ಇಂಥ ಮಹಾನಗರಗಳಿಗೆ ಲಗ್ಗೆ ಇಟ್ಟಿದ್ದು, ಈ ನಗರಗಳು ವಿಪರೀತ ಜನದಟ್ಟಣೆಯಿಂದ ಬಳಲುತ್ತಿವೆ. ಆದರೆ ಅದೇ ಸಮಯಕ್ಕೆ ಗ್ರಾಮೀಣ ವಲಯದಲ್ಲಿ ಹೇಳಿಕೊಳ್ಳುವಂಥ ಉದ್ಯೋಗಗಳು ಸೃಷ್ಟಿಯಾಗುತ್ತಿಲ್ಲ. ಅದರಲ್ಲೂ ದೇಶದ ಈಶಾನ್ಯ ರಾಜ್ಯಗಳಲ್ಲಿ ಅಸಮತೋಲನ ತಲೆದೋರುತ್ತಿದೆ.
ಕೊನೆ ಮಾತು
ಭಾರತದ ಆರ್ಥಿಕ ವ್ಯವಸ್ಥೆ ತೀವ್ರಗತಿಯಲ್ಲಿ ಬೆಳವಣಿಗೆ ಸಾಧಿಸುತ್ತಿದ್ದರೂ, ಪ್ರಾದೇಶಿಕವಾಗಿ ದೇಶದ ಜನತೆಗೆ ಅದರ ಲಾಭಗಳು ಸಮವಾಗಿ ಲಭಿಸುತ್ತಿಲ್ಲ. ಸುಶಿಕ್ಷಿತ ಹಾಗೂ ಕುಶಲ ಕಾರ್ಮಿಕರು ಸುಲಭವಾಗಿ ಉದ್ಯೋಗ ಪಡೆಯುವಂತಾದರೂ, ಅಕುಶಲ ಕಾರ್ಮಿಕರು ನಿರುದ್ಯೋಗಿಗಳಾಗುವ ಪರಿಸ್ಥಿತಿ ಎದುರಾಗುತ್ತಿದೆ. ಆರ್ಥಿಕ ಬೆಳವಣಿಗೆ ಹಾಗೂ ಅದರ ಬೇಡಿಕೆಗಳಿಗೆ ಪೂರಕವಾಗಿ ಅಕುಶಲ ಕಾರ್ಮಿಕರಿಗೆ ಕೌಶಲ್ಯ ತರಬೇತಿ ನೀಡುವುದು ಅಗತ್ಯವಾಗಿದೆ. ಅಭಿವೃದ್ಧಿಯ ಲಾಭಗಳು ದೇಶದ ಎಲ್ಲ ವರ್ಗದ ಜನತೆಗೂ ಲಭಿಸುವಂತೆ ದೂರದೃಷ್ಟಿಯ ಕಲ್ಯಾಣ ಕಾರ್ಯಕ್ರಮಗಳನ್ನು ಸರಕಾರ ರೂಪಿಸಬೇಕಿದೆ.