ಮೋದಿ ಸರ್ಕಾರದ ವೈಫಲ್ಯಗಳ ಬಗ್ಗೆ ರಘುರಾಮ್ ರಾಜನ್ ಹೇಳಿದ್ದೇನು?
ಉದ್ಯೋಗ ಸೃಷ್ಟಿ, ಆರ್ಬಿಐ ಮತ್ತು ಕೇಂದ್ರದ ನಡುವಿನ ಜಟಾಪಟಿ ಒಳಗೊಂಡಂತೆ ಇನ್ನಿತರ ಪ್ರಮುಖ ಸಂಸ್ಥೆಗಳ ರಕ್ಷಣೆ, ವಿಭಿನ್ನ ದೃಷ್ಟಿಕೋನಗಳ ಸಹಿಷ್ಣುತೆ ಇತ್ಯಾದಿ ಗಂಭೀರ ಸಮಸ್ಯೆಗಳನ್ನು ಭಾರತ ಎದುರಿಸುತ್ತಿದೆ ಎಂದು ರಘುರಾಮ್ ರಾಜನ್ ಹೇಳಿದ್ದಾರೆ.
ಉದ್ಯೋಗ ಸೃಷ್ಟಿ, ಆರ್ಬಿಐ ಮತ್ತು ಕೇಂದ್ರದ ನಡುವಿನ ಜಟಾಪಟಿ ಒಳಗೊಂಡಂತೆ ಇನ್ನಿತರ ಪ್ರಮುಖ ಸಂಸ್ಥೆಗಳ ರಕ್ಷಣೆ, ವಿಭಿನ್ನ ದೃಷ್ಟಿಕೋನಗಳ ಸಹಿಷ್ಣುತೆ ಇತ್ಯಾದಿ ಗಂಭೀರ ಸಮಸ್ಯೆಗಳನ್ನು ಭಾರತ ಎದುರಿಸುತ್ತಿದೆ ಎಂದು ಆರ್ಬಿಐನ ಮಾಜಿ ಗವರ್ನರ್ ರಘುರಾಮ್ ರಾಜನ್ ಹೇಳಿದ್ದಾರೆ.
ಅವರು ಎಕಾನಾಮಿಕ್ ಟೈಮ್ಸ್ ನೌ (economictimes Now) ನಡೆಸಿದ ಸಂದರ್ಶನದಲ್ಲಿ ಈ ಕೆಳಗಿನಂತೆ ಹಲವಾರು ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ.
ಕೇಂದ್ರೀಕೃತ - ವಿಕೇಂದ್ರೀಕೃತ ನಾಯಕತ್ವ
ಕೇಂದ್ರೀಕೃತ ರಚನೆಯ ನಾಯಕತ್ವವನ್ನು ಸರ್ಕಾರ ನೀಡಬಹುದು. ಆದರೆ ಯೋಜನೆಗಳನ್ನು ಕಾರ್ಯಗತಗೊಳಿಸುವಾಗ ಕೇಂದ್ರೀಕೃತ ಸಾಮರ್ಥ್ಯ ನೀಡಬಾರದು. ಯಾವುದೇ ಸರ್ಕಾರಗಳಿಗೆ ವಿಕೇಂದ್ರೀಕೃತ ವಿನ್ಯಾಸದ ಅಗತ್ಯವಿದ್ದು, ಕೇಂದ್ರೀಕೃತ ಧೋರಣೆಯ ಸರ್ಕಾರದಿಂದ ಸುಧಾರಣೆಗಳನ್ನು ಜಾರಿಗೊಳಿಸುವುದು ಸಾಧ್ಯವಿಲ್ಲ ಎಂದು ರಘುರಾಮ್ ರಾಜನ್ ಹೇಳಿದ್ದಾರೆ.
ಆರ್ಥಿಕ ಸುಧಾರಣೆಗೆ ಸಲಹೆ
ಕೇಂದ್ರ ಸರಕಾರವು ಕಾರ್ಮಿಕ ವರ್ಗದ ಕಲ್ಯಾಣ, ಕಾರ್ಮಿಕ ಮತ್ತು ಭೂ ಸುಧಾರಣೆ, ಆರ್ಥಿಕ ಸುಧಾರಣೆಗಳಿಗೆ ಸಂಬಂದಿಸಿದ ನೀತಿಗಳನ್ನು ಹೇಗೆ ಜಾರಿಗೊಳಿಸಬೇಕು ಎನ್ನುವುದನ್ನು ನರಸಿಂಹರಾವ್ ಮತ್ತು ಡಾ. ಮನಮೋಹನ್ ಸಿಂಗ್ರನ್ನು ನೋಡಿ ಕಲಿಯಬೇಕು ಎಂದು ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.
ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ), ವಿತ್ತಿ ನೀತಿಯಲ್ಲಿ ಹಣದುಬ್ಬರದ ವಿಶಾಲವಾದ ಅಗತ್ಯತೆಯನ್ನು ನೋಡಬೇಕಾಗುತ್ತದೆ ಎಂದಿದ್ದಾರೆ.
ಲೋಕಸಭಾ ಚುನಾವಣೆ ಬಗ್ಗೆ ರಾಜನ್ ಹೇಳಿದ್ದೇನು?
ನಾವು ನಮ್ಮ ಮತದಾರರಲ್ಲಿ ಹೆಚ್ಚಿನ ನಂಬಿಕೆ ಇಡಬೇಕು. ಚುನಾವಣೆಯ ಸಂದರ್ಭಗಳಲ್ಲಿ ಮತದಾರರು ಸರ್ಕಾರಗಳಿಗೆ ಸ್ಪಷ್ಟ ಸಂದೇಶ ರವಾನಿಸಬೇಕು.
ಉದ್ಯೋಗ ಸೃಷ್ಟಿ ವೈಫಲ್ಯ, ಅಸಹಿಷ್ಣುತೆ, ಅಲ್ಪಸಂಖ್ಯಾತರ ಸಮಸ್ಯೆಗಳು ಹಾಗು ಸುಪ್ರೀಂಕೋರ್ಟ್, ಆರ್ಬಿಐ, ಚುನಾವಣಾ ಆಯೋಗ ಅಥವಾ ಆರ್ಬಿಐ ಸೇರಿದಂತೆ ಪ್ರಮುಖ ಸಂಸ್ಥೆಗಳನ್ನು ಸರಕಾರವು ನಡೆಸಿಕೊಂಡ ಬಗೆ ಈ ಎಲ್ಲಾ ಅಂಶಗಳು ಚುನಾವಣೆಯಲ್ಲಿ ಪ್ರಮುಖ ಪಾತ್ರವಹಿಸಲಿವೆ ಎಂದಿದ್ದಾರೆ.
ಮೋದಿ ಸರ್ಕಾರ ಧನಾತ್ಮಕ ಅಂಶಗಳು
ನರೇಂದ್ರ ಮೋದಿ ಸರ್ಕಾರ ಜಾರಿಗೊಳಿಸಿರುವ ಜಿಎಸ್ಟಿ ಮತ್ತು ದಿವಾಳಿ ಕಾಯ್ದೆ ಸಕಾರಾತ್ಮಕ ಅಂಶಗಳಾಗಿವೆ. ಆದರೆ ಉದ್ಯೋಗ ಸೃಷ್ಟಿ, ಕಾರ್ಮಿಕ ಮತ್ತು ಭೂ ಸುಧಾರಣೆ, ಕೃಷಿ ಕ್ಷೇತ್ರದ ವೈಫಲ್ಯಗಳು ಸರ್ಕಾರದ ಪ್ರಮುಖ ದೌರ್ಬಲ್ಯಗಳಾಗಿವೆ ಎಂದು ರಘುರಾಮ್ ರಾಜನ್ ಸರ್ಕಾರವನ್ನು ವಿಶ್ಲೇಷಣೆ ಮಾಡಿದ್ದಾರೆ.