2030ರ ವೇಳೆಗೆ ಭಾರತ ಹೇಗಿರಬೇಕು? ಮೋದಿ ಸರ್ಕಾರದ ಟಾಪ್ 10 ವಿಷನ್ಗಳೇನು ಗೊತ್ತೆ?
ಮಧ್ಯಂತರ ಬಜೆಟ್ ಹಣಕಾಸು ಸಚಿವ ಪಿಯೂಷ್ ಗೋಯಲ್ ಅವರು, 2030 ರ ವೇಳೆಗೆ ಭಾರತ ಹೇಗಿರಬೇಕು ಹಾಗು ಯಾವ ಯಾವ ವಲಯದಲ್ಲಿ ಭಾರತ ಸ್ವಾವಲಂಬನೆ ಹಾಗು ಅಭಿವೃದ್ಧಿಯನ್ನು ಸಾಧಿಸಬೇಕು ಎಂಬುದನ್ನು 2030 ವಿಷನ್ ಮೂಲಕ ತಿಳಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಕೊನೆ ಬಜೆಟ್ ಅನ್ನು ಪಿಯೂಷ್ ಗೋಯಲ್ ಮಂಡಿಸಿದ್ದಾರೆ. ಮಧ್ಯಂತರ ಬಜೆಟ್ ಹಣಕಾಸು ಸಚಿವ ಪಿಯೂಷ್ ಗೋಯಲ್ ಅವರು, 2030 ರ ವೇಳೆಗೆ ಭಾರತ ಹೇಗಿರಬೇಕು ಹಾಗು ಯಾವ ಯಾವ ವಲಯದಲ್ಲಿ ಭಾರತ ಸ್ವಾವಲಂಬನೆ ಹಾಗು ಅಭಿವೃದ್ಧಿಯನ್ನು ಸಾಧಿಸಬೇಕು ಎಂಬುದನ್ನು 2030 ವಿಷನ್ ಮೂಲಕ ತಿಳಿಸಿದ್ದಾರೆ. ಮಧ್ಯಂತರ ಬಜೆಟ್ 2019: ಪಿಯೂಷ್ ಗೋಯಲ್ ಮಂಡಿಸಿರುವ ಟಾಪ್ 25 ಜನಪರ ಯೋಜನೆಗಳು ಯಾವುವು ಗೊತ್ತೆ?
2030ರ ವೇಳೆಗೆ ಭಾರತ ಹೇಗಿರಬೇಕು ಎಂಬ ಸರ್ಕಾರದ 10 ವಿಷನ್ ಗಳನ್ನು ಇಲ್ಲಿ ನೀಡಲಾಗಿದೆ..
ವಿಷನ್ 1: ಸಾಮಾಜಿಕ ಹಾಗೂ ಭೌತಿಕ ಮೂಲಭೂತ ಸೌಕರ್ಯ
ಪಿಯೂಷ್ ಗೋಯಲ್ ಹೇಳಿರುವಂತೆ, ಜನಜೀವನ ಸುಲಭವಾಗಿಸಲು 10 ಟ್ರಿಲಿಯನ್ ಡಾಲರ್ ಆರ್ಥಿಕತೆಯನ್ನು ರೂಪಿಸಲು ಸಾಮಾಜಿಕ ಹಾಗೂ ಭೌತಿಕ ಮೂಲಭೂತ ಸೌಕರ್ಯಗಳನ್ನು ಅಭಿವೃದ್ಧಿಪಡಿಸುವುದು.
ಇದು ಮುಂದಿನ ಪೀಳಿಗೆಯ ಮೂಲಸೌಕರ್ಯಗಳಾದ ರಸ್ತೆಗಳು, ರೈಲ್ವೆಗಳು, ಬಂದರುಗಳು, ವಿಮಾನ ನಿಲ್ದಾಣಗಳು, ನಗರ ಸಾರಿಗೆ, ಅನಿಲ ಮತ್ತು ವಿದ್ಯುತ್ ಪ್ರಸರಣ ಮತ್ತು ಒಳನಾಡಿನ ಜಲಮಾರ್ಗಗಳನ್ನು ಒಳಗೊಂಡಿದೆ.
ವಿಷನ್ 2: ಡಿಜಿಟಲ್ ಇಂಡಿಯಾ
ಮೋದಿ ಸರ್ಕಾರದ ಪ್ರಮುಖ ಯೋಜನೆಗಳಲ್ಲಿ ಡಿಜಿಟಲ್ ಇಂಡಿಯಾ ಬಹುಮುಖ್ಯ. ಕಳೆದ ಕೆಲ ವರ್ಷಗಳಲ್ಲಿ ಡಿಜಿಟಲ್ ಇನ್ಫ್ರಾಸ್ಟ್ರಕ್ಚರ್ ಮತ್ತು ಡಿಜಿಟಲ್ ಎಕಾನಾಮಿಯಲ್ಲಿ ಸಾಧಿಸಿರುವ ಯಶಸ್ಸಿನ ಮೇಲೆ ಇದನ್ನು ನಿರ್ಮಿಸಲಾಗುವುದು. ಡಿಜಿಟಲ್ ಇಂಡಿಯಾ ನಿರ್ಮಾಣದ ಮೂಲಕ ಹೆಚ್ಚಿನ ಉದ್ಯೋಗ ಅವಕಾಶ ಹಾಗೂ ನವೋದ್ಯಮಗಳನ್ನು ರೂಪಿಸುವ ಗುರಿ ಹೊಂದಲಾಗಿದೆ.
ವಿಷನ್ 3: ಸ್ವಚ್ಛ ಹಾಗೂ ಹಸಿರು ಭಾರತ
ಭಾರತವನ್ನು ಮಾಲಿನ್ಯ ಮುಕ್ತ ರಾಷ್ಟ್ರವನ್ನಾಗಿ ಮಾಡುವುದು ಸರ್ಕಾರದ ಗುರಿಯಾಗಿದೆ. ದೇಶವನ್ನು ಸ್ವಚ್ಛ ಹಾಗೂ ಹಸಿರು ಭಾರತವನ್ನಾಗಿ ಮಾರ್ಪಡಿಸಲು ಎಲೆಕ್ಟ್ರಿಕ್ ವಾಹನಗಳ ಬಳಕೆ ಹಾಗೂ ನವೀಕರಿಸಬಹುದಾದ ಶಕ್ತಿಗಳ ಬಳಕೆಗೆ ಪ್ರಾಮುಖ್ಯತೆ ಒತ್ತು ನೀಡಲಾಗುವುದು.
ವಿಷನ್ 4: ಗ್ರಾಮೀಣ ಕೈಗಾರೀಕರಣ
ಗಾಂಧೀಜಿಯವರ ಗ್ರಾಮಸ್ವರಾಜ್ಯದ ಕಲ್ಪನೆಯ ಹಳ್ಳಿಗಳ ಭಾರತದ ಅಭಿವೃದ್ಧಿ ತುಂಬಾ ಮುಖ್ಯ. ದೇಶದಾದ್ಯಂತ ಹರಡಿರುವ ಸ್ಟಾರ್ಟ್ಅಪ್ ಎಂಎಸ್ಎಂಇ, ಗ್ರಾಮೀಣ ಕೈಗಾರಿಕೆಗಳು ಸರ್ವರೀತಿ ಮತ್ತು ಯಾಂತ್ರಿಕ ವ್ಯವಸ್ಥೆಯ ಮೂಲಕ ಅಭಿವೃದ್ಧಿಪಡಿಸುವುದು. ನಗರದ ಆಧುನಿಕ ಕೈಗಾರಿಕಾ ತಂತ್ರಜ್ಞಾನಗಳನ್ನು ಬಳಸಿಕೊಂಡು ಗ್ರಾಮೀಣ ಕೈಗಾರಿಕೆಗಳನ್ನು ಹೆಚ್ಚು ಅಭಿವೃದ್ಧಿಪಡಿಸುವುದು.
ವಿಷನ್ 5: ಸ್ವಚ್ಛ ನದಿಗಳು
2030ರ ವೇಳೆಗೆ ಸ್ವಚ್ಛ ನದಿಗಳನ್ನು ರೂಪಿಸುವುದು ಸರ್ಕಾರದ 5ನೇ ಪ್ರಮುಖ ಗುರಿಯಾಗಿದೆ. ದೇಶದ ಎಲ್ಲಾ ಜನರಿಗೆ ಶುದ್ಧ ಕುಡಿಯುವ ನೀರು ಲಭಿಸುವಂತೆ ಮಾಡುವುದು. ಸೂಕ್ಷ್ಮ ನೀರಾವರಿ ತಂತ್ರಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವುದು.
ವಿಷನ್ 6: ಸಾಗರಗಳು ಮತ್ತು ಕರಾವಳಿ
ದೇಶದ ಆರ್ಥಿಕತೆಯ ಪ್ರಮಖ ಭಾಗಗಳೆಂದರೆ ಕರಾವಳಿ ಪ್ರದೇಶ, ಸಾಗರಗಳು, ಒಳನಾಡಿನ ಜಲಮಾರ್ಗಗಳು. ಈ ಪ್ರದೇಶಗಳನ್ನು ರಕ್ಷಣೆ ಮಾಡಿ, ನೀಲಿ ಆರ್ಥಿಕತೆಗೆ (Blue Economy) ಶಕ್ತಿ ತುಂಬಲು ಸಾಗರ್ ಮಾಲಾ ಯೋಜನೆಯನ್ನು ಜಾರಿ ಮಾಡುವುದು.
ವಿಷನ್ 7: ಬಾಹ್ಯಾಕಾಶ
ಬಾಹ್ಯಾಕಾಶ ಸಂಶೋಧನೆ ಅಭಿವೃದ್ಧಿ ಪಡಿಸಿ ಭಾರತವನ್ನು ಪ್ರಪಂಚದಲ್ಲೇ ಮುಖ್ಯ ಕೇಂದ್ರವಾಗಿಸುವುದು ಮುಖ್ಯ ಗುರಿ. ಅಲ್ಲದೇ 2022ರ ವೇಳೆಗೆ ಗಗನಯಾನಿಗಳನ್ನು ಬಾಹ್ಯಾಕಾಶಕ್ಕೆ ಕಳುಹಿಸುವ ಗುರಿ ಇರಿಸಲಾಗಿದೆ.
ವಿಷನ್ 8: ಸಾವಯವ ಆಹಾರ ಉತ್ಪಾದನೆ
ಸರ್ಕಾರ ಕೃಷಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲು ಮುಂದಾಗಿದ್ದು, ಆಹಾರ ಉತ್ಪಾದನೆಯಲ್ಲಿ ಸ್ವಾವಲಂಬನೆ ಹಾಗೂ ಸಾವಯವ ಆಹಾರ ಉತ್ಪಾದನೆಗೆ ಒತ್ತು ನೀಡಲಾಗುವುದು.
ವಿಷನ್ 9: ಆರೋಗ್ಯ
ಆರೋಗ್ಯಪೋರ್ಣ ಸಮಾಜ ನಿರ್ಮಾಣ ಮಾಡುವುದು ಸರ್ಕಾರದ ಉದ್ದೇಶ. ದೇಶದ ಪ್ರತಿಯೊಬ್ಬರಿಗೂ ಉತ್ತಮ ಸಮಗ್ರ ಆರೋಗ್ಯ ವ್ಯವಸ್ಥೆ ನಿರ್ಮಾಣಕ್ಕೆ ಒತ್ತು ನೀಡಲಾಗುವುದು. ಉಚಿತ ಆರೋಗ್ಯ ಆರೈಕೆ ಮತ್ತು ಕ್ರಿಯಾತ್ಮಕ ಮತ್ತು ಸಮಗ್ರ ಆರೋಗ್ಯ ವ್ಯವಸ್ಥೆಯನ್ನು ರೂಪಿಸುವುದು.
ವಿಷನ್ 10: ಕನಿಷ್ಠ ಸರ್ಕಾರ ಗರಿಷ್ಠ ಆಡಳಿತ
ಕೊನೆಯದಾಗಿ ಕನಿಷ್ಠ ಸರ್ಕಾರ ಹಾಗು ಗರಿಷ್ಠ ಆಡಳಿತ ನೀಡುವ ಗುರಿ ಹೊಂದಿದೆ. 2030 ರ ಹೊತ್ತಿಗೆ ಗರಿಷ್ಟ ಪ್ರಮಾಣದಲ್ಲಿ ಜನ ಸ್ನೇಹಿ, ಜವಾಬ್ದಾರಿಯುತ ಆಡಳಿತವನ್ನು ನೀಡುವುದು ಗುರಿ ಹೊಂದಲಾಗಿದೆ ಎಂದು ಪಿಯೂಷ್ ಗೋಯಲ್ ಹೇಳಿದ್ದಾರೆ.