ಸ್ವರ್ಣ ಭಾರತಿ ಸಹಕಾರ ಬ್ಯಾಂಕಿಗೆ 2.54 ಕೋಟಿ ರೂ. ಲಾಭ
ಬೆಂಗಳೂರು ಏಪ್ರಿಲ್ 4: ರಾಜ್ಯದ ಪ್ರಮುಖ ಸಹಕಾರ ಬ್ಯಾಂಕುಗಳಲ್ಲಿ ಒಂದಾಗಿರುವ ಸ್ವರ್ಣ ಭಾರತಿ ಸಹಕಾರ ಬ್ಯಾಂಕ್ 2018-19 ನೇ ಸಾಲಿನಲ್ಲಿ ರೂ. 2.54 ಕೋಟಿ ಲಾಭ ಗಳಿಸುವ ಮೂಲಕ ಗುರಿ ಮೀರಿದ ಸಾಧನೆ ಮಾಡಿದೆ ಎಂದು ಸ್ವರ್ಣ ಭಾರತಿ ಸಹಕಾರ ಬ್ಯಾಂಕ್ ನ ಅಧ್ಯಕ್ಷರಾದ ಪಿ ಎಲ್ ವೆಂಕಟರಾಮ ರೆಡ್ಡಿಯವರು ಮಾಹಿತಿ ನೀಡಿದ್ದಾರೆ.
ಈ ಪ್ರಗತಿ ಬಗ್ಗೆ ಮಾಹಿತಿ ನೀಡಿರುವ ಬ್ಯಾಂಕಿನ ಅಧ್ಯಕ್ಷರಾದ ಪಿ.ಎಲ್.ವೆಂಕಟರಾಮ ರೆಡ್ಡಿಯವರು 2018-19 ನೇ ಸಾಲಿನಲ್ಲಿ ನಮ್ಮ ನಿರೀಕ್ಷೆಗೂ ಮೀರಿ ಲಾಭ ಗಳಿಸಿದ್ದು, ಇದಕ್ಕೆ ಪ್ರಮುಖ ಕಾರಣ ಬ್ಯಾಂಕಿನ ಸದಸ್ಯರು ಮತ್ತು ಪಾಲುದಾರರು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಆರ್ಥಿಕ ವರ್ಷದ ಮೊದಲ ದಿನ ಷೇರು ಪೇಟೆ ಎಂಬ ಮಾಯೆ ಬಗ್ಗೆ
ಇದಕ್ಕೂ ಮುನ್ನ ನಡೆದ ಬ್ಯಾಂಕಿನ ಆಡಳಿತ ಮಂಡಳಿ ಸಭೆಯಲ್ಲಿ ಮಾತನಾಡಿದ ಬ್ಯಾಂಕಿನ ಉಪಾಧ್ಯಕ್ಷರಾದ ತಿಬ್ಬೇಗೌಡರು, ವರ್ಷದಿಂದ ವರ್ಷಕ್ಕೆ ಬ್ಯಾಂಕಿನ ಸದಸ್ಯರ ಸಂಖ್ಯೆ ಹೆಚ್ಚುತ್ತಲೇ ಇದೆ. ಪ್ರಸ್ತುತ 8000 ಕ್ಕೂ ಅಧಿಕ ಸದಸ್ಯರನ್ನು ಹೊಂದಿರುವ ಬ್ಯಾಂಕ್ ಬೆಂಗಳೂರು ನಗರದಲ್ಲಿ ಮುಂಚೂಣಿಯಲ್ಲಿರುವ ಪ್ರಮುಖ ಬ್ಯಾಂಕುಗಳಲ್ಲಿ ಒಂದಾಗಿದೆ ಎಂಬ ಹೆಗ್ಗಳಿಕೆ ಹೊಂದಿರುವುದು ನಮಗೆ ಸಂತಸ ತಂದಿದೆ ಎಂದರು.
ಬ್ಯಾಂಕಿನಲ್ಲಿ 6.16 ಕೋಟಿ ರೂಪಾಯಿಗಳಿಗೂ ಮೀರಿದ ಮೊತ್ತದ ಷೇರು ಬಂಡವಾಳ ಸಂಗ್ರಹವಾಗಿದ್ದು, 132 ಕೋಟಿ ರೂಪಾಯಿಗೂ ಅಧಿಕ ಹಣವನ್ನು ಠೇವಣಿಯನ್ನಾಗಿ ಇಡಲಾಗಿದೆ. ಇದಲ್ಲದೇ, ಬ್ಯಾಂಕಿನ ಗ್ರಾಹಕರಿಗೆ 91 ಕೋಟಿ ರೂಪಾಯಿವರೆಗೆ ಸಾಲವನ್ನು ವಿತರಿಸಲಾಗಿದೆ ಎಂದು ವಿವರಗಳನ್ನು ನೀಡಿದರು.
ಬ್ಯಾಂಕ್ ಕಳೆದ 3-4 ವರ್ಷಗಳಿಂದ ಸಾಲ ವಸೂಲಾತಿಯಲ್ಲಿ ಉತ್ತಮ ಸಾಧನೆ ಮಾಡಿದೆ. ಈ ಮೂಲಕ ನಿವ್ವಳ ಎನ್ಪಿಎಯನ್ನು ಶೇ. ಶೂನ್ಯಕ್ಕೆ (Net NPA 0 %) ತರಲಾಗಿದೆ. ದುಡಿಯುವ ಬಂಡವಾಳ 148 ಕೋಟಿ ರೂಪಾಯಿಗಳನ್ನು ಮೀರಿರುವುದು ಬ್ಯಾಂಕಿನ ಮೇಲೆ ಸಾರ್ವಜನಿಕರು ಇಟ್ಟಿರುವ ವಿಶ್ವಾಸವನ್ನು ತೋರಿಸುತ್ತದೆ ಎಂದು ಅವರು ಹೇಳಿದರು.
ಓಪ್ಟೋ ಸರ್ಕ್ಯೂಟ್ ಇಂಡಿಯಾ ಶೇ 25ರಷ್ಟು ಪ್ರಗತಿ ಸಾಧಿಸುವ ನಿರೀಕ್ಷೆ
ಬ್ಯಾಂಕ್ ವರ್ಷದಿಂದ ವರ್ಷಕ್ಕೆ ಉತ್ತಮ ಪ್ರಗತಿಯನ್ನು ಸಾಧಿಸುತ್ತಿದೆ. ಇದಕ್ಕೆ ಬ್ಯಾಂಕಿನ ಎಲ್ಲಾ ಸಿಬ್ಬಂದಿ ಮತ್ತು ಬ್ಯಾಂಕಿನ ಆಡಳಿತ ಮಂಡಳಿ ಸದಸ್ಯರ ನಿಸ್ವಾರ್ಥ ಸೇವೆ ಕಾರಣವಾಗಿದೆ. ಮುಂಬರುವ ದಿನಗಳಲ್ಲಿ ನಾವೆಲ್ಲಾ ಒಗ್ಗಟ್ಟಾಗಿ ಬ್ಯಾಂಕನ್ನು ಇನ್ನೂ ಎತ್ತರಕ್ಕೆ ಕೊಂಡೊಯ್ಯಲು ಶ್ರಮಿಸುತ್ತೇವೆ ಎಂದು ತಿಳಿಸಿದರು.