ಸಾಲದ EMI ಪಾವತಿಸಿ ಎಂದು ಬ್ಯಾಂಕ್ನಿಂದ ಸಂದೇಶ: ಗ್ರಾಹಕರಲ್ಲಿ ಗೊಂದಲ
ಕೊರೊನಾವೈರಸ್ ವಿರುದ್ಧ ಹೋರಾಡಲು ಕೇಂದ್ರ ಸರ್ಕಾರ ದೇಶಾದ್ಯಂತ 21 ದಿನಗಳ ಲಾಕ್ ಡೌನ್ ಘೋಷಿಸಿದ್ದ ಹಿನ್ನೆಲೆಯಲ್ಲಿ ಸಾರ್ವಜನಿಕರ ಅನುಕೂಲಕ್ಕಾಗಿ ಹಲವು ಯೋಜನೆಗಳನ್ನು ಜಾರಿಗೆ ತಂದಿತು. ಇದರಲ್ಲಿ ಸಾಲ ಮರುಪಾವತಿಸಲು ಮೂರು ತಿಂಗಳ ಮುಂದೂಡಿಕೆಯು ಸೇರಿದೆ.
ದೇಶದ ಎಲ್ಲಾ ಸಹಕಾರಿ, ವಾಣಿಜ್ಯ, ರಾಷ್ಟ್ರೀಕೃತ ಬ್ಯಾಂಕ್ಗಳಲ್ಲಿ ಪಡೆದ ಸಾಲದ ಕಂತುಗಳನ್ನು ಮೂರು ತಿಂಗಳು ಮುಂದೂಡಲು ಆರ್ಬಿಐ ರಿಯಾಯ್ತಿ ನೀಡಿತು. ಆದರೆ ಈಗ ಬ್ಯಾಂಕುಗಳು ಆರ್ಬಿಐ ಆದೇಶವನ್ನು ಅನುಸರಿಸದೇ ಸಾಲಗಾರರಿಗೆ ಇಎಂಐ ಕಟ್ಟುವಂತೆ ಅಲರ್ಟ್ ಸಂದೇಶ ಕಳುಹಿಸಿದ್ದು, ಇದರಿಂದ ಗ್ರಾಹಕರು ಗೊಂದಲಕ್ಕೆ ಒಳಗಾಗುವಂತಾಗಿದೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ಪ್ರಮುಖ ಬ್ಯಾಂಕುಗಳಲ್ಲಿ ಇಎಂಐ ವಿನಾಯ್ತಿ ಬಗ್ಗೆ ಇನ್ನೂ ಆಗಿಲ್ಲ ಕ್ರಮ?
ದೇಶದ ಬಹುದೊಡ್ಡ ಹಾಗೂ ಪ್ರಮುಖ ಬ್ಯಾಂಕುಗಳಲ್ಲಿ ಇನ್ನೂ ಇಎಂಐ ವಿನಾಯ್ತಿ ನೀಡುವ ಬಗ್ಗೆ ಕ್ರಮ ತೆಗೆದುಕೊಂಡಿಲ್ಲ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಎಚ್ ಡಿಎಫ್ ಸಿ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಕೋಟಕ್ ಬ್ಯಾಂಕ್ ಹಾಗೂ ಆ್ಯಕ್ಸಿಸ್ ಬ್ಯಾಂಕ್ ಇಎಂಐ ವಿನಾಯ್ತಿ ನೀಡುವ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ವರದಿ ತಿಳಿಸಿದೆ.
ಹಲವಾರು ಗ್ರಾಹಕರಿಗೆ ಇಎಂಐ ಪಾವತಿಸಿ ಎಂದು ಸಂದೇಶ
ಗ್ರಾಹಕರಲ್ಲಿ ಗೊಂದಲ ಮೂಡಲು ಇದೇ ದೊಡ್ಡ ಕಾರಣವಾಗಿದೆ. ಸೋಮವಾರ ಹಲವಾರು ಗ್ರಾಹಕರಿಗೆ ಇಎಂಐ ಕಟ್ಟುವ ಸಂದೇಶ ಬಂದಿದ್ದು, ನಿಮ್ಮ ಖಾತೆಯಲ್ಲಿ ನಿರ್ದಿಷ್ಟ ಹಣ ಮೀಸಲಾಗಿಡಿ ಎಂದು ತಿಳಿಸಿದ್ದು, ಇದರಿಂದ ಗ್ರಾಹಕರು ಗೊಂದಲಕ್ಕೆ ಒಳಗಾಗಿದ್ದಾರೆ.
ಸಾಲಗಾರರ ಕಂತನ್ನು ಮುಂದೂಡಲು ಬ್ಯಾಂಕ್ಗಳಿಗೆ ಬಂದಿಲ್ಲ ಸಂದೇಶ
ಅನೇಕ ಸಾಲಗಾರರು ತಮ್ಮ ಕಂತನ್ನು ಕಟ್ಟಲು ತಯಾರಾಗಿದ್ದಾರೆ. ಆದರೆ ಬ್ಯಾಂಕ್ ಗಳು ಆರ್ಬಿಐ ನೀಡಿರುವ ಕಂತು ವಿನಾಯ್ತಿ ಜಾರಿಗೆ ತರಲು ಇನ್ನೂ ಸಿದ್ದವಾಗಿಲ್ಲ ಎಂದು ವರದಿ ವಿವರಿಸಿದೆ.
ಸಾಲಗಾರರ ಕಂತನ್ನು ಮುಂದೂಡುವ ಬಗ್ಗೆ ಬ್ಯಾಂಕ್ ಗಳ ಕೇಂದ್ರ ಕಚೇರಿಯಿಂದ ಯಾವುದೇ ಸೂಚನೆ ಬಹುತೇಕ ಬ್ಯಾಂಕ್ ಗಳಿಗೆ ಬಂದಿಲ್ಲ. ಇಎಂಐ ಕಂತು ಮುಂದೂಡಿಕೆ ಸಾಲಗಾರರಿಗೆ ಒಂದು ಆಯ್ಕೆಯಾಗಿದೆ ಎಂದು ತಿಳಿಸಿದೆ.
ಗ್ರಾಹಕರೇ ಸಾಲ ಮನ್ನಾ ಆಗಿಲ್ಲ!
ಕೆಲವು ಗ್ರಾಹಕರು ಸರ್ಕಾರ ತೆಗೆದುಕೊಂಡಿರುವ ತೀರ್ಮಾನವನ್ನು ತಪ್ಪಾಗಿ ಅರ್ಥೈಸಿಕೊಂಡಿರುವುದು ಸಹ ವರದಿಯಾಗಿದೆ. ಗ್ರಾಹಕರು ಮೊದಲು ತಿಳಿದುಕೊಳ್ಳಬೇಕಾದ ಅಂಶವೇನೆಂದರೆ ಇದು ಸಾಲ ಮನ್ನಾ ಅಲ್ಲ. ಆದರೆ ಹಣಕಾಸಿನ ತೊಂದರೆ ಇದ್ದಲ್ಲಿ ಮೂರು ತಿಂಗಳ ಕಂತು ಪಾವತಿಯನ್ನು ಮುಂದೂಡುವುದಾಗಿದೆ.
ಇನ್ನು ಒಂದು ವೇಳೆ ಇಎಂಐ ಕಟ್ಟುವುದನ್ನು ಮುಂದೂಡಿದರೆ ಅದರ ಮೇಲಿನ ಬಡ್ಡಿ ಮುಂದುವರಿಯುತ್ತದೆಯೇ ಅಥವಾ ಇಲ್ಲವೇ ಎಂಬ ಗೊಂದಲವೂ ಗ್ರಾಹಕರಲ್ಲಿ ಮನೆಮಾಡಿದೆ. ಒಂದು ವೇಳೆ ಇಎಂಐ ಕಟ್ಟುವುದು ತಡ ಮಾಡಿದರೆ ಬಡ್ಡಿ ಬೀಳುತ್ತಾ? ಮೂರು ತಿಂಗಳ ವಿನಾಯ್ತಿ ನಂತರ ಬಡ್ಡಿ ಸೇರಿಸಿ ಕಂತು ಕಟ್ಟಬೇಕಾ? ಎಂಬ ಪ್ರಶ್ನೆಯು ಸಹ ಗ್ರಾಹಕರಲ್ಲಿ ಕಾಡುತ್ತಿದೆ.