ನವದೆಹಲಿ, ಫೆಬ್ರವರಿ 1: ಕೊರೊನಾ ವೈರಸ್ ಸೋಂಕಿನ ಸಂಕಷ್ಟದ ನಡುವೆ ಆರ್ಥಿಕವಾಗಿ ಹೊಡೆತ ಅನುಭವಿಸಿದ ವಿವಿಧ ವಲಯಗಳ ಜನರು, ಉದ್ಯಮಿಗಳಿಗೆ ನೆರವಾಗುವ ಉದ್ದೇಶದಿಂದ ಕೇಂದ್ರ ಸರ್ಕಾರ 2020ರಲ್ಲಿ ಹಲವು ಆರ್ಥಿಕ ಪ್ಯಾಕೇಜ್ಗಳನ್ನು ಘೋಷಿಸಿತ್ತು. ಭಾರತೀಯ ರಿಸರ್ವ್ ಬ್ಯಾಂಕ್ ಕೂಡ ಹಣಕಾಸುವ ವಲಯದ ಪುನಶ್ಚೇತನಕ್ಕೆ ಕ್ರಮಗಳನ್ನು ತೆಗೆದುಕೊಂಡಿತ್ತು. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸೋಮವಾರ ಬಜೆಟ್ ಮಂಡನೆ ವೇಳೆ ಇದನ್ನು ಪ್ರಸ್ತಾಪಿಸಿದ್ದಾರೆ.
ಕಳೆದ ಕೆಲವು ತಿಂಗಳಲ್ಲಿ ಮೂರು ಬಾರಿ ವಿವಿಧ ಆರ್ಥಿಕ ಪ್ಯಾಕೇಜ್ಗಳನ್ನು ಸರ್ಕಾರ ಮತ್ತು ಆರ್ಬಿಐ ಘೋಷಿಸಿದೆ. ಎಲ್ಲ ಕೋವಿಡ್ ನಿರ್ವಹಣಾ ಕ್ರಮಗಳಿಗಾಗಿ ಘೋಷಿಸಿದ ಒಟ್ಟು ಅಂದಾಜು ಮೊತ್ತ 27.1 ಲಕ್ಷ ಕೋಟಿ ರೂದಷ್ಟಿದೆ. ಇದು ದೇಶದ ಜಿಡಿಪಿಯ ಶೇ 13ರಷ್ಟು ವೆಚ್ಚವಾಗಲಿದೆ ಎಂದು ನಿರ್ಮನಾ ಸೀತಾರಾಮನ್ ತಿಳಿಸಿದ್ದಾರೆ.
'ಹಿಂದೆಂದಿಗೂ ಇಲ್ಲದಂತಹ ಸನ್ನಿವೇಶದಲ್ಲಿ ಈ ಬಾರಿಯ ಬಜೆಟ್ ಸಿದ್ಧತೆ ನಡೆಸಲಾಗಿದೆ. ಜಾಗತಿಕ ಆರ್ಥಿಕತೆ ಭಾರಿ ನಿಧಾನಗತಿ ಅನುಭವಿಸುತ್ತಿದೆ. ಇದಕ್ಕೆ ಕಾರಣ ಕೋವಿಡ್ 19. ಒಂದು ವೇಳೆ ಲಾಕ್ಡೌನ್ಅನ್ನು ಇದುವರೆಗೆ ಜಾರಿಗೆ ತಾರದೆ ಹೋಗಿದ್ದರೆ ಉಂಟಾಗುತ್ತಿದ್ದ ಅಪಾಯ ಭಾರಿ ಮಟ್ಟದಲ್ಲಿ ಇರುತ್ತಿತ್ತು' ಎಂದು ನಿರ್ಮಲಾ ಹೇಳಿದ್ದಾರೆ.

ಕಳೆದ ವರ್ಷ ಜಾಗತಿಕ ಆರ್ಥಿಕತೆ ಇಂತಹ ಸಂಕುಚಿತ ಸ್ಥಿತಿಗೆ ಇಳಿಯಲಿದೆ ಎನ್ನುವುದನ್ನು ಕಲ್ಪಿಸಿಕೊಳ್ಳಲೂ ಸಾಧ್ಯವಿರಲಿಲ್ಲ ಎಂದ ನಿರ್ಮಲಾ, ಕೊರೊನಾ ವೈರಸ್ ಸಾಂಕ್ರಾಮಿಕದ ಸಂಕಷ್ಟದ ಸಂದರ್ಭದಲ್ಲಿ ಅಗತ್ಯ ಸೇವೆಗಳ ಪೂರೈಕೆದಾರರ ಕೊಡುಗೆಯನ್ನು ಶ್ಲಾಘಿಸಿದರು.
ಲಾಕ್ಡೌನ್ ಘೋಷಿಸಿದ 48 ಗಂಟೆಗಳ ಒಳಗೆ ಪ್ರಧಾನಿ ನರೇಂದ್ರ ಮೋದಿ ಅವರು ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಯೋಜನಾ ಜಾರಿಗೆ ತಂದರು. ಅದರ ಬಳಿಕ ಸರ್ಕಾರ ಐದು ಮಿನಿ ಬಜೆಟ್ಗಳನ್ನೇ ಘೋಷಿಸಿದೆ. ಕೋವಿಡ್ ವಿರುದ್ಧದ ಹೋರಾಟ 2021ರಲ್ಲಿಯೂ ಮುಂದುವರಿಯಲಿದೆ ಎಂದರು.


Click it and Unblock the Notifications