ಆದಾಯದಲ್ಲಿನ ಇಳಿಕೆ, ಕೇಂದ್ರದಿಂದ ಬರುವ ಅನುದಾನದಲ್ಲೂ ಕುಸಿತ ಹಾಗೂ ಕೊರೊನಾ ಬಿಕ್ಕಟ್ಟಿನ ವಿರುದ್ಧ ಹೋರಾಟಕ್ಕೆ ಹೆಚ್ಚುತ್ತಿರುವ ಖರ್ಚು ಇವೆಲ್ಲವೂ ಸೇರಿ 18 ರಾಜ್ಯಗಳಿಂದ ಬಜೆಟ್ ನಿರೀಕ್ಷೆಗಿಂತ ಆದಾಯ ಕೊರತೆಯು 285% ಹೆಚ್ಚಳವಾಗಿದೆ. ಇದು ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕ ಏಪ್ರಿಲ್ ನಿಂದ ಜೂನ್ ಲೆಕ್ಕಾಚಾರ. ಕಳೆದ ವರ್ಷ ಇದೇ ಅವಧಿಯಲ್ಲಿ 12.9% ಇತ್ತು ಎಂದು ಇಂಡಿಯಾ ರೇಟಿಂಗ್ಸ್ (Inda- Ra) ವರದಿಯಲ್ಲಿ ಬಯಲಾಗಿದೆ.
ವರದಿಯ ಪ್ರಕಾರ, ಭಾರತದ 18 ದೊಡ್ಡ ರಾಜ್ಯಗಳ ಒಟ್ಟು ಖರ್ಚು ಮತ್ತು ಆದಾಯದ ಮಧ್ಯೆ ವ್ಯತ್ಯಾಸ ಬಜೆಟ್ ಅಂದಾಜಿಗಿಂತ 40.7% ನಷ್ಟಿದೆ. ಕಳೆದ ವರ್ಷ ಇದೇ ಅವಧಿಗೆ 13.4% ನಷ್ಟಿತ್ತು. ಆದಾಯದಲ್ಲಿನ ಉಳಿಕೆ ಹಾಗೂ ಹೆಚ್ಚಿನ ವೆಚ್ಚವು ರಾಜ್ಯ ಸರ್ಕಾರಗಳ ಮೇಲಿನ ಒತ್ತಡವನ್ನು ಸೂಚಿಸುತ್ತದೆ. ಇದು ಕೊರೊನಾ ವೈರಸ್ ನಿಯಂತ್ರಣಕ್ಕಾಗಿ ಹೇರಿದ ಲಾಕ್ ಡೌನ್ ಪರಿಣಾಮವಾಗಿದೆ. ಇದು ಆದಾಯ ಸಂಗ್ರಹದ ಮೇಲೆ ಪ್ರಭಾವ ಬೀರಿದೆ.
ಏಪ್ರಿಲ್- ಜೂನ್ ತ್ರೈಮಾಸಿಕದ ಆದಾಯ ಮಾಹಿತಿ ಸಿಕ್ಕಿರುವುದು ಭಾರತದ ಹದಿನೆಂಟು ರಾಜ್ಯಗಳದ್ದು ಮಾತ್ರ. ಒಟ್ಟಾರೆಯಾಗಿ ನೋಡಿದಾಗ ಈ ಎಲ್ಲ ರಾಜ್ಯಗಳ ಆದಾಯವು ಕಳೆದ ವರ್ಷಕ್ಕಿಂತ 18.41 ಪರ್ಸೆಂಟ್ ಕಡಿಮೆ ಆಗಿದೆ. ಇನ್ನು ಆದಾಯ ವೆಚ್ಚದ ಪ್ರಮಾಣ ಕಳೆದ ವರ್ಷಕ್ಕಿಂತ 11.7% ಹೆಚ್ಚಾಗಿದೆ.
ಈ ರಾಜ್ಯಗಳ ಆದಾಯದಲ್ಲಿ ಹೆಚ್ಚಳ
ಹಿಮಾಚಲ ಪ್ರದೇಶ, ಛತ್ತೀಸ್ ಗಢ, ನಾಗಾಲ್ಯಾಂಡ್ ಮತ್ತು ಒಡಿಶಾ ಹೊರತುಪಡಿಸಿ ಇತರ ಎಲ್ಲ ರಾಜ್ಯಗಳ ಆದಾಯದಲ್ಲಿ ಪ್ರಮಾಣವು ಎರಡಂಕಿಯಲ್ಲಿ ಕುಸಿತ ಕಂಡಿದೆ. ಆದರೆ ಆಂಧ್ರಪ್ರದೇಶ, ಮೇಘಾಲಯ, ಸಿಕ್ಕಿಂ, ತ್ರಿಪುರಾ ಹಾಗೂ ಉತ್ತರಾಖಂಡ ರಾಜ್ಯಗಳಲ್ಲಿ ಕಳೆದ ವರ್ಷದ ಇದೇ ಅವಧಿಗಿಂತ ಆದಾಯ ಪ್ರಮಾಣ ಜೂನ್ ತ್ರೈಮಾಸಿಕದಲ್ಲಿ ಹೆಚ್ಚಾಗಿದೆ. ಒಡಿಶಾ, ಜಾರ್ಖಂಡ್, ಹಿಮಾಚಲ ಪ್ರದೇಶ ಮತ್ತು ಉತ್ತರಾಖಂಡ್ ನಲ್ಲಿ ಆದಾಯ ಪ್ರಮಾಣ ಹೆಚ್ಚಾಗಿದೆ.
ವೇತನ, ಪಿಂಚಣಿ ಇಳಿಕೆ
ಒಟ್ಟಾರೆ ಹದಿನೆಂಟು ರಾಜ್ಯಗಳು ಕಳೆದ ವರ್ಷಕ್ಕಿಂತ ವೇತನ ಮತ್ತು ಪಿಂಚಣಿ ವೆಚ್ಚವನ್ನು ಹತ್ತು ಪರ್ಸೆಂಟ್ ಗೂ ಹೆಚ್ಚು ಇಳಿಕೆ ಮಾಡಿವೆ. ಸಬ್ಸಿಡಿಯನ್ನು ನಲವತ್ತು ಪರ್ಸೆಂಟ್ ನಷ್ಟು ಇಳಿಸಿವೆ. ಆದರೆ ಆರೋಗ್ಯ ಹಾಗೂ ಸಾರ್ವಜನಿಕ ಆಡಳಿತ ಸೇವೆಯ ವೆಚ್ಚ ನಲವತ್ತು ಪರ್ಸೆಂಟ್ ಗೂ ಹೆಚ್ಚು ಏರಿಕೆಯಾಗಿದೆ.
ಸಬ್ಸಿಡಿಗಳನ್ನು ಕಡಿತ ಮಾಡಲಾಗಿದೆ
ತಮಿಳುನಾಡು, ಕೇರಳ ಮತ್ತು ನಾಗಾಲ್ಯಾಂಡ್ ನಲ್ಲಿ ಸಂಬಳ ಮತ್ತು ಪಿಂಚಣಿ ಕಡಿತ ಅತಿ ಹೆಚ್ಚಿನ ಪ್ರಮಾಣದಲ್ಲಿ ಆಗಿದೆ. ಇನ್ನು ಛತ್ತೀಸ್ ಗಢ, ಹರ್ಯಾಣ, ಜಾರ್ಖಂಡ್ ಹಾಗೂ ಉತ್ತರಾಖಂಡ್ ನಲ್ಲಿ ಸಬ್ಸಿಡಿ ಕಡಿತ ದೊಡ್ಡ ಪ್ರಮಾಣದಲ್ಲಿ ಆಗಿದೆ. ಇನ್ನು ಆರ್ ಬಿಐನಿಂದ ನಗದು ನೆರವು ಪಡೆದಿರುವ ರಾಜ್ಯಗಳು ಕಳೆದ ವರ್ಷ ಕೂಡ ಪಡೆದಿದ್ದವು.
ಕರ್ನಾಟಕ ಸೇರಿ ಕೆಲ ರಾಜ್ಯ ಕೇಂದ್ರ ಬ್ಯಾಂಕ್ ನೆರವು ಪಡೆದಿಲ್ಲ
ಉದಾಹರಣೆಗೆ: ಆಂಧ್ರಪ್ರದೇಶ, ಪಂಜಾಬ್, ಕೇರಳ, ಹಿಮಾಚಲ ಪ್ರದೇಶ , ತೆಲಂಗಾಣ, ಪಶ್ಚಿಮ ಬಂಗಾಲ, ನಾಗಾಲ್ಯಾಂಡ್, ಮಣಿಪುರ ಮತ್ತು ಮಿಜೋರಾಂ. ಇನ್ನು ಮಹಾರಾಷ್ಟ್ರ, ಬಿಹಾರ, ತಮಿಳುನಾಡು, ಉತ್ತರಪ್ರದೇಶ, ಮಧ್ಯಪ್ರದೇಶ, ರಾಜಸ್ಥಾನ, ಕರ್ನಾಟಕ, ಜಾರ್ಖಂಡ್ ಮತ್ತು ಒಡಿಶಾದಲ್ಲಿ ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಆರ್ ಬಿಐನಿಂದ ಯಾವುದೇ ನಗದು ನೆರವು ತೆಗೆದುಕೊಂಡಿಲ್ಲ.


Click it and Unblock the Notifications