ಕೇಂದ್ರ ಸರ್ಕಾರವು ಕಂಪೆನಿಗಳಿಗೆ ಮಹತ್ವದ ಸೂಚನೆಯೊಂದನ್ನು ನೀಡಿದೆ. ಕೊರೊನಾ ವೈರಾಣುವಿನ ಕಾರಣಕ್ಕೆ ಮುಂಜಾಗ್ರತೆಯಾಗಿ ರಜಾ ಪಡೆಯುವ ಕಾರ್ಮಿಕರನ್ನು, ಅದರಲ್ಲೂ ಗುತ್ತಿಗೆ ನೌಕರರನ್ನು 'ಆನ್ ಡ್ಯೂಟಿ' (ಕರ್ತವ್ಯದ ಮೇಲಿದ್ದಾರೆ) ಎಂದು ಪರಿಗಣಿಸಬೇಕು ಹಾಗೂ ಅವರ ವೇತನ ಕಡಿತ ಮಾಡಬಾರದು ಎಂದು ತಿಳಿಸಿದೆ.
ಈಗಿನ ಸವಾಲಿನ ಸನ್ನಿವೇಶದಲ್ಲಿ ಸಾರ್ವಜನಿಕ ಹಾಗೂ ಖಾಸಗಿ ಕಂಪೆನಿಗಳು ಯಾವುದೇ ಸಿಬ್ಬಂದಿಯನ್ನು ಕೆಲಸದಿಂದ ತೆಗೆಯಬಾರದು. ಅದರಲ್ಲಿ ಗುತ್ತಿಗೆ ನೌಕರರನ್ನು ಕೆಲಸದಿಂದ ತೆಗೆಯುವುದು ಹಾಗೂ ಅವರ ವೇತನ ಕಡಿತ ಮಾಡಬಾರದು ಎಂದು ಕೇಂದ್ರ ಕಾರ್ಮಿಕ ಹಾಗೂ ಉದ್ಯೋಗ ಸಚಿವಾಲಯದ ಜಂಟಿ ಕಾರ್ಯದರ್ಶಿ ಕಲ್ಪನಾ ರಾಜ್ ಸಿಂಘೋಟ್ ಪತ್ರ ಬರೆದಿದ್ದಾರೆ.
'ಆನ್ ಡ್ಯೂಟಿ' ಅಂತಲೇ ಪರಿಗಣಿಸಬೇಕು
ಯಾರಾದರೂ ಕಾರ್ಮಿಕ ರಜಾ ಪಡೆದಲ್ಲಿ 'ಆನ್ ಡ್ಯೂಟಿ' ಅಂತಲೇ ಪರಿಗಣಿಸಬೇಕು ಹಾಗೂ ವೇತನದಲ್ಲಿ ಯಾವ ಕಡಿತವನ್ನೂ ಮಾಡಬಾರದು ಎಂದು ತಿಳಿಸಿದ್ದಾರೆ. ಯಾವುದೇ ಉದ್ಯೋಗ ಸ್ಥಳದಲ್ಲಿ ಕೊರೊನಾ ಪಾಸಿಟಿವ್ ಕಂಡುಬಂದು, ಆ ಸ್ಥಳವನ್ನು ತೆರವುಗೊಳಿಸಿ, ಬಂದ್ ಮಾಡಿದ್ದಲ್ಲಿ ಕಾರ್ಮಿಕರು 'ಆನ್ ಡ್ಯೂಟಿ'ಯಲ್ಲಿ ಇದ್ದಾರೆ ಅಂತಲೇ ಪರಿಗಣಿಸಬೇಕು, ರಜಾ ಅಂತಲ್ಲ ಎಂದು ತಿಳಿಸಲಾಗಿದೆ.
ಸಚಿವಾಲಯದ ಪತ್ರದಲ್ಲಿ ಏನಿದೆ?
ಕೊರೊನಾದ ಕಾರಣಕ್ಕೆ ಗುತ್ತಿಗೆ ಸಿಬ್ಬಂದಿಯಲ್ಲು ಕೆಲಸದಿಂದ ತೆಗೆಯಲು ನೋಡಬಹುದು ಅಥವಾ ವೇತನ ಇಲ್ಲದಂತೆ ರಜೆ ಮೇಲೆ ತೆರಳಲು ಒತ್ತಡ ಹಾಕಬಹುದು. ಆದ್ದರಿಂದ ಈ ಪತ್ರ ಬರೆಯಲಾಗಿದೆ ಎಂದು ಸಚಿವಾಲಯದ ಮೂಲಕ ತಿಳಿಸಲಾಗಿದೆ. "ಕೆಲಸದಿಂದ ತೆಗೆಯುವುದೋ ಅಥವಾ ವೇತನ ಕಡಿತ ಮಾಡುವುದೋ ಇಂಥ ಸನ್ನಿವೇಶದಲ್ಲಿ ಇನ್ನಷ್ಟು ಬಿಕ್ಕಟ್ಟು ತಂದೊಡ್ಡುತ್ತದೆ. ಜತೆಗೆ ಉದ್ಯೋಗಿಗಳ ಆರ್ಥಿಕ ಸ್ಥಿತಿ ದುರ್ಬಲವಾಗುತ್ತದೆ. ಕೊರೊನಾ ವೈರಾಣು ವಿರುದ್ಧ ಹೋರಾಡಬೇಕಾದ ಅವರ ಮನೋಬಲವೇ ಕುಗ್ಗಿ ಹೋಗುತ್ತದೆ" ಎಂದು ಪತ್ರದಲ್ಲಿ ಹೇಳಲಾಗಿದೆ.
ಇಪಿಎಫ್ ಒ ಅಗತ್ಯ ಸೇವೆಗಳು ಲಭ್ಯ
ಕಾರ್ಮಿಕರ ಭವಿಷ್ಯ ನಿಧಿ ಒಕ್ಕೂಟದಿಂದ ಅಗತ್ಯ ಸೇವೆಗಳು ಎಲ್ಲವೂ ಲಭ್ಯ ಇರುತ್ತದೆ. ಭವಿಷ್ಯ ನಿಧಿ ಕ್ಲೇಮ್ ಮತ್ತು ಪಿಂಚಣಿ ವಿತರಣೆಯಲ್ಲಿ ಯಾವುದೇ ವ್ಯತ್ಯಯ ಆಗುವುದಿಲ್ಲ. ಈ ಅವಧಿಯಲ್ಲಿ ಕಾರ್ಮಿಕರ ಭವಿಷ್ಯ ನಿಧಿ ಮೊತ್ತವನ್ನು ವರ್ಗಾವಣೆ ಮಾಡುವುದನ್ನು ಖಾತ್ರಿ ಪಡಿಸಿ ಎಂದು ಉದ್ಯೋಗದಾತರಿಗೆ ಈಗಾಗಲೇ ಸೂಚನೆ ನೀಡಲಾಗಿದೆ. ಅಸಂಘಟಿತ ವಲಯದ ಕಾರ್ಮಿಕರಿಗೆ ಯಾವುದೇ ರೀತಿಯಲ್ಲೂ ತೊಂದರೆ ಆಗದಂತೆ ನೋಡಿಕೊಳ್ಳಿ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಮನವಿ ಮಾಡಿದ್ದಾರೆ. ಅಂದಹಾಗೆ ವಿಮಾನ ಯಾನ ಸಂಸ್ಥೆಗಳ ಮೇಲೆ ಕೊರೊನಾದ ಪರಿಣಾಮ ಭೀಕರವಾಗಿದೆ.
90 ಪರ್ಸೆಂಟ್ ನಷ್ಟು ಮಂದಿ ಕಾರ್ಮಿಕ ಕಾನೂನು ವ್ಯಾಪ್ತಿಯಲ್ಲಿಲ್ಲ
ಗೋ ಏರ್ ವಿಮಾನಯಾನ ಸಂಸ್ಥೆಯು ತನ್ನ ಉದ್ಯೋಗಿಗಳಿಗೆ ಅಲ್ಪಾವಧಿ ರಜೆ ಮೇಲೆ ಯಾವುದೇ ವೇತನ ಇಲ್ಲದಂತೆ ತೆರಳಲು ಸೂಚಿಸಿತ್ತು. ಹಲವು ಕಂಪೆನಿಗಳು ತಾತ್ಕಾಲಿಕವಾಗಿ ಮುಚ್ಚಿವೆ. ತಮ್ಮದೇ ಕಂಪೆನಿಯ ಉದ್ಯೋಗಿಗಳಲ್ಲಿ ಕೊರೊನಾ ಪಾಸಿಟಿವ್ ಕಂಡುಬಂದಿದ್ದರಿಂದ ಇಂಥ ನಿರ್ಧಾರ ಮಾಡಿದೆ. ಸಂಘಟಿತ ವಲಯದ ಕಂಪೆನಿಗಳಾದರೆ ಮುಚ್ಚುವ ಮುನ್ನ ನ್ಯಾಯಬದ್ಧವಾಗಿ ನೀಡಬೇಕಾದ ಬಾಕಿ ಕೊಡಬೇಕಾಗುತ್ತದೆ. ಆದರೆ ಭಾರತದಲ್ಲಿ ಕಾರ್ಮಿಕ ಕಾನೂನಿನ ವ್ಯಾಪ್ತಿಯೊಳಗೆ ಬಾರದ 90 ಪರ್ಸೆಂಟ್ ನಷ್ಟು ಅಸಂಘಟಿತ ವಲಯದ ಕಾರ್ಮಿಕರಿದ್ದಾರೆ.


Click it and Unblock the Notifications