ಜಿಎಸ್ಟಿ: ಕರ್ನಾಟಕಕ್ಕೆ ಖುಷಿ ಸುದ್ದಿ ನೀಡಿದ ಕೇಂದ್ರ ಸರ್ಕಾರ
ಬೆಂಗಳೂರು, ಜೂನ್ 6: ಕೊರೊನಾವೈರಸ್ ಲಾಕ್ಡೌನ್ ನಿಂದ ಆರ್ಥಿಕ ಸಂಕಷ್ಟಕ್ಕೆ ತುತ್ತಾಗಿರುವ ಕರ್ನಾಟಕ ಸರ್ಕಾರಕ್ಕೆ ಕೊಂಚ ನೆಮ್ಮದಿ ನೀಡುವಂತ ಕ್ರಮವನ್ನು ಕೇಂದ್ರ ಸರ್ಕಾರ ಕೈಗೊಂಡಿದೆ.
ಕೇಂದ್ರದ ಸರಕು ಮತ್ತು ಸೇವಾ ತೆರಿಗೆ (GST) ಕಾಯ್ದೆ ಅನ್ವಯ ಆದಾಯ ನಷ್ಟದ ಪರಿಹಾರವಾಗಿ ಕೇಂದ್ರ ಹಣಕಾಸು ಇಲಾಖೆ ಕರ್ನಾಟಕ ರಾಜ್ಯಕ್ಕೆ 4,314 ಕೋಟಿ ರುಪಾಯಿ ನೆರವನ್ನು ಶುಕ್ರವಾರ ಬಿಡುಗಡೆ ಮಾಡಿದೆ.
ಆದಾಯ ತೆರಿಗೆ ಇಲಾಖೆ ಹೊಸ ಐಟಿಆರ್ ಫಾರ್ಮ್: ಪೂರ್ಣ ವಿವರ ಇಲ್ಲಿದೆ
ಕರ್ನಾಟಕ 2019ರ ಡಿಸೆಂಬರ್ನಿಂದ 2020ರ ಫೆಬ್ರುವರಿ ಅವಧಿಯಲ್ಲಿ ಎದುರಿಸಿರುವ ಆದಾಯದ ನಷ್ಟದ ಪರಿಹಾರ ರೂಪದಲ್ಲಿ ಈ ನೆರವನ್ನು ಒದಗಿಸಲಾಗಿದೆ ಎಂದು ಕೇಂದ್ರದ ಹಣಕಾಸು ಸಚಿವಾಲಯದ ಆದೇಶ ತಿಳಿಸಿದೆ. 2017ರ ಜುಲೈ 1ರಂದು ಜಾರಿಯಾದ ಜಿಎಸ್ಟಿ ಕಾಯ್ದೆಯ ಅನ್ವಯ ಕೇಂದ್ರವು ಐದು ವರ್ಷಗಳ ಕಾಲ ರಾಜ್ಯಗಳಿಗೆ ಈ ನಷ್ಟ ಪರಿಹಾರ ಒದಗಿಸಲಿದೆ.
ಕೋವಿಡ್ ಮಹಾಮಾರಿ ನಿಗ್ರಹಿಸುವುದಕ್ಕಾಗಿ ಘೋಷಿಸಲಾದ ಲಾಕ್ಡೌನ್ನಿಂದ ಕರ್ನಾಟಕ ಸರ್ಕಾರ 30 ಸಾವಿರ ಕೋಟಿ ರುಪಾಯಿವರೆಗೆ ಆದಾಯದಲ್ಲಿ ನಷ್ಟ ಅನುಭವಿಸಿದೆ ಎಂದು ಹೇಳಲಾಗುತ್ತಿದೆ. ರಾಜ್ಯ ಸರ್ಕಾರಗಳಿಗೆ ಈ ಪರಿಹಾರ ಬಿಡುಗಡೆ ಮಾಡಿದ್ದರಿಂದ ಸಾಕಷ್ಟು ಅನುಕೂಲವಾಗಲಿದೆ ಎನ್ನಲಾಗಿದೆ.