ನವದೆಹಲಿ, ಮಾರ್ಚ್ 24: ಕೊರೊನಾವೈರಸ್ ಭೀತಿ ಹಣಕಾಸು ಸಂಸ್ಥೆಗಳ ಮೇಲೂ ಪರಿಣಾಮ ಬೀರಿವೆ. ದೇಶದ ಹಲವು ರಾಜ್ಯಗಳು ಲಾಕ್ ಡೌನ್ ಆಗಿದ್ದರೂ ಬ್ಯಾಂಕಿಂಗ್ ವ್ಯವಹಾರದಲ್ಲಿ ಯಾವುದೇ ವ್ಯತ್ಯಯ ಆಗದಂತೆ ಕೇಂದ್ರ ಸರ್ಕಾರ ನೋಡಿಕೊಳ್ಳುತ್ತಿದೆ. ಈ ನಡುವೆ ವಿಶೇಷ ಆರ್ಥಿಕ ಪ್ಯಾಕೇಜ್ ಘೋಷಿಸಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಎಟಿಎಂ ಬಳಕೆದಾರರಿಗೂ ಶುಭ ಸುದ್ದಿ ಕೊಟ್ಟಿದ್ದಾರೆ.
ಎಟಿಎಂ ಬಳಕೆ, ಹಣ ವಿಥ್ ಡ್ರಾ ಮೇಲೆ ವಿಧಿಸುತ್ತಿದ್ದ ಶುಲ್ಕವನ್ನು ಮುಂದಿನ ಮೂರು ತಿಂಗಳ ಅವಧಿಗೆ ತೆಗೆದು ಹಾಕಲಾಗಿದೆ. ಕನಿಷ್ಠ ಬ್ಯಾಲೆನ್ಸ್ ಮೊತ್ತ ಹೊಂದಿಲ್ಲದಿದ್ದರೆ ಹಾಕುತ್ತಿದ್ದ ದಂಡವೂ ಮಾಫಿಯಾಗಲಿದೆ. ಈ ಮೂಲಕ ಲಾಕ್ ಡೌನ್ ಸಂದರ್ಭದಲ್ಲಿ ಹೆಚ್ಚು ಆನ್ ಲೈನ್ ವ್ಯವಹಾರಕ್ಕೆ ಒತ್ತು ನೀಡುವಂತೆ ಸೂಚಿಸಲಾಗಿದೆ.
ಕೋವಿಡ್19 ಹರಡುತ್ತಿದ್ದಂತೆ ಬ್ಯಾಂಕ್ ಗಳಲ್ಲಿ ಕ್ಯಾಶ್ ಜಮೆ ಹಾಗೂ ವಿಥ್ ಡ್ರಾ, ಚೆಕ್ ಕ್ಲಿಯರಿಂಗ್, ಮುಂತಾದವುಗಳನ್ನು ಅಗತ್ಯ ಸೇವೆಗಳ ಅಡಿಗೆ ಮಾರ್ಚ್ 23, 2020ರಂದು ತರಲಾಗಿದೆ. ಹಲವು ಬ್ಯಾಂಕುಗಳು ತಮ್ಮ ಬ್ರ್ಯಾಂಚ್ ಗಳ ಕೆಲಸದ ಅವಧಿಯನ್ನು ಬದಲಾವಣೆ ಮಾಡಿವೆ. ಆಕ್ಸಿಸ್ ಬ್ಯಾಂಕ್ ವಿವಿಧ ಶುಲ್ಕಗಳನ್ನು ಮಾರ್ಚ್ 31ರತನಕ ರದ್ದುಗೊಳಿಸಿದೆ. ಆನ್ ಲೈನ್ ಪೇಮೆಂಟ್ ಮೇಲಿನ ಶುಲ್ಕ ತಗ್ಗಿಸಿರುವ ಬಗ್ಗೆ ಬ್ಯಾಂಕ್ ಆಫ್ ಬರೋಡಾ ಕೂಡಾ ಪತ್ರಿಕೆಗಳ ಮೂಲಕ ಪ್ರಕಟಣೆ ನೀಡಿದೆ.

ಎಚ್ ಡಿ ಎಫ್ ಸಿ, ಪೆಢರಲ್ ಬ್ಯಾಂಕ್, ಯೆಸ್ ಬ್ಯಾಂಕ್, ಎಚ್ ಎಸ್ ಬಿಸಿ ಬ್ಯಾಂಕ್ ಕೆಲಸದ ಅವಧಿಯನ್ನು 10 ರಿಂದ 2ಕ್ಕೆ ಬದಲಾಯಿಸಿಕೊಂಡಿವೆ.
ಎಸ್ ಬಿಐ ಬ್ಯಾಂಕ್ ಗ್ರಾಹಕರು ತಮ್ಮ ಖಾತೆಯಲ್ಲಿ ಹೊಂದಿರಬೇಕಾದ ಸರಾಸರಿ ತಿಂಗಳ ಬ್ಯಾಲೆನ್ಸ್ 3000ರು ಮೆಟ್ರೋ ನಗರಗಳಿಗೆ, 2000ರು ಸೆಮಿ ಅರ್ಬನ್ ಹಾಗೂ 1000 ರು ಗ್ರಾಮೀಣ ಭಾಗಕ್ಕೆ ಎಂದು ಬದಲಾವಣೆ ಮಾಡಿತ್ತು. ಕನಿಷ್ಠ ಸರಾಸರಿ ಬ್ಯಾಲೆನ್ಸ್ ಇಲ್ಲದಿದ್ದರೆ ಹಾಕಲಾಗುತ್ತಿದ್ದ ದಂಡವನ್ನು ರದ್ದು ಮಾಡಲಾಗಿದೆ.


Click it and Unblock the Notifications