ಜಾಹೀರಾತುಗಳ ಮೇಲಿನ ಜಿಎಸ್ ಟಿ ರದ್ದು ಮಾಡುವಂತೆ ಮಾಧ್ಯಮಗಳ ಮನವಿ
ಪ್ರಸಾರ ಮಾಧ್ಯಮಗಳಿಗೆ ಸದ್ಯಕ್ಕೆ ಜಾಹೀರಾತುಗಳ ಮೇಲೆ ಇರುವ 18% ಜಿಎಸ್ ಟಿಯನ್ನು ತೆಗೆಯಬೇಕು ಅಥವಾ ಅದನ್ನು 5 ಪರ್ಸೆಂಟ್ ಗೆ ಇಳಿಸಬೇಕು ಎಂದು ನ್ಯೂಸ್ ಬ್ರಾಡ್ ಕಾಸ್ಟರ್ಸ್ ಅಸೋಸಿಯೇಷನ್ ನಿಂದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಪತ್ರ ಬರೆಯಲಾಗಿದೆ.
ವ್ಯಾಪಾರ ಹಾಗೂ ಉದ್ಯಮಗಳಿಗೆ ಅತಿ ಮುಖ್ಯವಾದ ಹಾಗೂ ಅವಿಭಾಜ್ಯವಾದ ಭಾಗ ಜಾಹೀರಾತು. ಸುದ್ದಿ ಪ್ರಸಾರ ಮಾಧ್ಯಮಗಳಿಗೆ ಜಾಹೀರಾತು ಅತಿ ಮುಖ್ಯವಾದ ಆದಾಯ. ಕೊರೊನಾ ನಂತರ ಮಾಧ್ಯಮಗಳು ಗಂಭೀರವಾದ ಬಿಕ್ಕಟ್ಟಿನಲ್ಲಿ ಸಿಲುಕಿಕೊಂಡಿವೆ ಎಂದು ಪತ್ರದಲ್ಲಿ ಹೇಳಲಾಗಿದೆ.
ಜಾಹೀರಾತು ಸಂಸ್ಥೆಗಳು ಹಣ ಪಾವತಿಯನ್ನು ಮುಂದಕ್ಕೆ ಮಾತ್ರ ಹಾಕುತ್ತಿಲ್ಲ. ಸಾಲದ ಅವಧಿಗಿಂತ ಹೆಚ್ಚು ಸಮಯವನ್ನು ಕೇಳುತ್ತಿವೆ. ಮುಂದಿನ 30ರಿಂದ 90 ದಿನಗಳು ಹಣ ವಾಪಸ್ ವಸೂಲಿ ಮಾಡುವುದು ಸುದ್ದಿ ಮಾಧ್ಯಮಗಳಿಗೆ ಅತಿ ದೊಡ್ಡ ಸವಾಲಾಗಲಿದೆ. ಇದರ ಜತೆಗೆ ಜಾಹೀರಾತುಗಳನ್ನು ರದ್ದು ಮಾಡುವ ಉದಾಹರಣೆಗಳು ಹೆಚ್ಚಾಗಿವೆ. ಪ್ರಮುಖ ಸುದ್ದಿ ಮಾಧ್ಯಮಗಳ ಶೇಕಡಾ 50ರಷ್ಟು ಜಾಹೀರಾತುಗಳು ರದ್ದಾಗಿವೆ.
ವಸೂಲಾತಿಯಲ್ಲಿನ ಸಮಸ್ಯೆ, ಭವಿಷ್ಯದ ಆದಾಯದಲ್ಲಿನ ಅನಿಶ್ಚಿತತೆ ಕಾರಣಕ್ಕೆ ಮುಂದಿನ ಎರಡು- ಮೂರು ತ್ರೈಮಾಸಿಕ ಸುದ್ದಿ ಮಾಧ್ಯಮಗಳಿಗೆ ಕಷ್ಟ ಇದೆ. ಈ ಆರ್ಥಿಕ ವರ್ಷದ ಕೊನೆಗೆ ಸ್ಥಿತಿ ಸುಧಾರಿಸಬಹುದು ಎಂಬ ಅಂದಾಜಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಕೊರೊನಾ ಹಬ್ಬಿರುವ ಈ ಸನ್ನಿವೇಶದಲ್ಲಿ ವರದಿಗಾರಿಕೆಗೆ, ಸುದ್ದಿ ಕಲೆಹಾಕಲು ಕಾರ್ಯನಿರ್ವಹಣಾ ವೆಚ್ಚ ಹೆಚ್ಚಾಗಿದೆ. ವಿಶೇಷ ಸಿದ್ಧತೆಗೆ ಹೆಚ್ಚಿನ ಖರ್ಚಾಗುತ್ತಿದೆ ಎಂದು ಹೇಳಲಾಗಿದೆ. ನ್ಯೂಸ್ ಬ್ರಾಡ್ ಕಾಸ್ಟರ್ ಅಸೋಸಿಯೇಷನ್ ಒಂದು ಖಾಸಗಿ ಒಕ್ಕೂಟ. ಭಾರತದಲ್ಲಿ ಪ್ರಸಕ್ತ ವಿದ್ಯಮಾನ ಹಾಗೂ ಸುದ್ದಿ ಪ್ರಸಾರ ಮಾಡುವ ಮಾಧ್ಯಮ ಸಂಸ್ಥೆಗಳ ಒಕ್ಕೂಟ ಇದಾಗಿದೆ.