ಕಳೆದ 15 ದಿನದಲ್ಲಿ ಭಾರತದ ಚಿಲ್ಲರೆ ವ್ಯಾಪಾರ ವಲಯಕ್ಕೆ ಎಷ್ಟು ನಷ್ಟ ಆಗಿದೆ ಗೊತ್ತಾ? 2.2 ಲಕ್ಷ ಕೋಟಿ ರುಪಾಯಿ. ಇದು ಕೊರೊನಾ ವೈರಾಣುವಿನಿಂದ ಆರ್ಥಿಕ ಚಟುವಟಿಕೆ ಮೇಲೆ ಬೀರಿರುವ ಪ್ರಭಾವಕ್ಕೆ ಬಿದ್ದಿರುವ ಹೊಡೆತ. ಅಂದ ಹಾಗೆ ಈ ಸಂಖ್ಯೆಯನ್ನು ಮುಂದಿಟ್ಟಿರುವುದು ಕಾನ್ಫಡರೇಷನ್ ಆಫ್ ಆಲ್ ಇಂಡಿಯಾ ಟ್ರೇಡರ್ಸ್ (ಸಿಎಐಟಿ).
ಭಾರತದಲ್ಲಿ 7 ಕೋಟಿಯಷ್ಟು ಸಣ್ಣ, ಮಧ್ಯಮ ಹಾಗೂ ದೊಡ್ಡ ವರ್ತಕರು ಇದ್ದು, 45 ಕೋಟಿ ಮಂದಿಯನ್ನು ನೇಮಿಸಿಕೊಂಡಿದ್ದಾರೆ. ಒಂದು ತಿಂಗಳಿಗೆ ಅಂದಾಜು 5.2 ಲಕ್ಷ ಕೋಟಿ ರುಪಾಯಿ ವ್ಯಾಪಾರ ಮಾಡುತ್ತಾರೆ. ಜಾಗತಿಕ ಪಿಡುಗಾದ ಕೊರೊನಾದಿಂದ ದೊಡ್ಡ ಮಟ್ಟದ ಪೆಟ್ಟು ಬಿದ್ದಿರುವುದರಲ್ಲಿ ಚಿಲ್ಲರೆ ಮಾರಾಟ ಕ್ಷೇತ್ರವೂ ಒಂದು.
ಸಿಎಐಟಿ ಪ್ರಧಾನ ಕಾರ್ಯದರ್ಶಿ ಪ್ರವೀಣ್ ಖಂಡೇಲ್ ವಾಲ್ ಮಾತನಾಡಿ, ಜಾಗತಿಕ ಆರ್ಥಿಕತೆ ಹಾಗೂ ಭಾರತೀಯ ಆರ್ಥಿಕತೆ ನಿರೀಕ್ಷೆಗಿಂತ ಬೇಗ ಚೇತರಿಸಿಕೊಳ್ಳಬಹುದು. ಆದರೆ ಭಾರತದ ವರ್ತಕರು ಇದಕ್ಕೆ ದೊಡ್ಡ ಬೆಲೆ ತೆರುತ್ತಾರೆ. ಮತ್ತೆ ಸಹಜ ಸ್ಥಿತಿಗೆ ಮರಳಲು ನಿರೀಕ್ಷೆಗಿಂತ ಹೆಚ್ಚು ಸಮಯ ಬೇಕಾಗುತ್ತದೆ ಎಂದಿದ್ದಾರೆ.

ಆಮದು ವ್ಯವಹಾರದ ಮೇಲೂ ಕೊರೊನಾದ ಪರಿಣಾಮ ಆಗಿದೆ. ಮಾರಾಟ ಮಾಡುವುದಕ್ಕೆ ಅಗತ್ಯ ಪ್ರಮಾಣದ ಸರಕು ಇಲ್ಲ. ಇನ್ನು ಲಾಕ್ ಡೌನ್ ಮುಗಿದು, ಚೀನಾ, ಯುಎಸ್ ಎ ಹಾಗೂ ಯುರೋಪ್ ನಿಂದ ಆಮದು ಮತ್ತೆ ಶುರುವಾದರೂ ಚೇತರಿಕೆ ಕಂಡು, ಸಹಜ ಸ್ಥಿತಿಗೆ ಮರಳುವುದಕ್ಕೆ ಸಮಯ ಬೇಕಾಗುತ್ತದೆ ಎನ್ನುತ್ತಾರೆ ಖಂಡೇಲ್ ವಾಲ್.
ದೇಶದಾದ್ಯಂತ ಲಾಕ್ ಡೌನ್ ಮಾಡಿರುವುದರಿಂದ ನಗರ ಕೇಂದ್ರಿತ ವ್ಯಾಪಾರ ಮಳಿಗೆಗಳಲ್ಲಿ ಕೆಲಸಗಾರರಿಗೆ ಕೊರತೆ ಕಾಣಲಿದೆ. ಏಕೆಂದರೆ ಪಟ್ಟಣ, ನಗರ ಪ್ರದೇಶಗಳಲ್ಲಿ ಇದ್ದ ಬಹುಮಂದಿ ತಮ್ಮ ಊರುಗಳಿಗೆ ವಾಪಸಾಗಿದ್ದಾರೆ. ಈ ಕಾರಣಕ್ಕೆ ಕೆಲಸಗಾರರಿಗೆ ಕೊರತೆ ಕಾಣಿಸಿಕೊಳ್ಳುತ್ತದೆ?


Click it and Unblock the Notifications