ಕೊರೊನಾ ಮುಗಿದ್ರೂ ಆರ್ಥಿಕ ಸಮಸ್ಯೆ ಮುಗಿಯಲ್ಲ: ಹಣವನ್ನು ಸಂರಕ್ಷಿಸಿ ಎಂದು ಟಾಟಾ ಗ್ರೂಪ್ ಕರೆ
ದೇಶಾದ್ಯಂತ ಕೊರೊನಾಯಿಂದಾಗಿ ಲಾಕ್ಡೌನ್ ಆಗಿದೆ. 21 ದಿನಗಳ ಲಾಕ್ಡೌನ್ ಮತ್ತಷ್ಟು ದಿನಗಳು ಮುಂದೂಡಿಕೆಯಾಗುವ ಸಾಧ್ಯತೆಯು ಇದೆ. ಇದರ ಜೊತೆಗೆ ಲಾಕ್ಡೌನ್ ಮುಗಿದ ಮೇಲೆ ದೇಶ ಅಷ್ಟೇ ಅಲ್ಲದೆ ವಿಶ್ವವೇ ಭಾರೀ ಆರ್ಥಿಕ ಸಮಸ್ಯೆ ಎದುರಿಸಬೇಕಾಗುತ್ತದೆ. ಅಲ್ಲದೆ ಹಣದ ಕೊರತೆ ಎದುರಾಗಬಹುದು ಎಂಬ ಕಾರಣಕ್ಕೆ ಸಾಕಷ್ಟು ದ್ರವ್ಯತೆಯನ್ನು(ಹಣವನ್ನು) ಖಾತ್ರಿ ಪಡಿಸಿಕೊಳ್ಳಲು ಅಥವಾ ಸಂರಕ್ಷಿಸಲು ಟಾಟಾ ಸನ್ಸ್ ತನ್ನ ಕಂಪನಿಗಳಿಗೆ ಕರೆ ನೀಡಿದೆ.
ಲಾಕ್ಡೌನ್ ಮುಗಿದ ಬಳಿಕ ಆರ್ಥಿಕತೆಯು ಇನ್ನಷ್ಟು ಹಿಂಜರಿತಕ್ಕೆ ಒಳಪಡಲಿದೆ. ಹಣದ ವಹಿವಾಟು ಪ್ರಮಾಣವೂ ತಗ್ಗುವ ಸಾಧ್ಯತೆ ಇದೆ. ಹೀಗಾಗಿ ತನ್ನೆಲ್ಲಾ ಕಂಪನಿಗಳು ತ್ವರಿತ ವಿಮರ್ಶೆಯನ್ನು ಕೈಗೊಳ್ಳಲಿ ಎಂದು ತಿಳಿಸಿದೆ.
113 ಬಿಲಿಯನ್ ಡಾಲರ್ ಮೌಲ್ಯದ ಟಾಟಾ ಗ್ರೂಪ್
ಕೋವಿಡ್-19 ನಿಂದಾಗಿ ದೇಶದಲ್ಲಿ ಮುಂದಿನ ದಿನಗಳಲ್ಲಿ ಸೃಷ್ಟಿಯಾಗುವ ಆರ್ಥಿಕ ಹಿಂಜರಿತದಿಂದಾಗಿ ಸಾಕಷ್ಟು ತೊಂದರೆ ಎದುರಿಸಬೇಕಾಗಬಹುದು. ಹೀಗಾಗಿ ಟಾಟಾ ಗ್ರೂಪ್ ತನ್ನ ಅಡಿಯಲ್ಲಿ ಬರುವ 113 ಬಿಲಿಯನ್ ಡಾಲರ್ ಮೌಲ್ಯದ ಎಲ್ಲಾ ಕಂಪನಿಗಳ ಸಿಇಓಗಳಿಗೆ ಕ್ಯಾಪೆಕ್ಸ್ ಯೋಜನೆಯನ್ನು ನಿಧಾನವಾಗಿ ಅಳವಡಿಸಿಕೊಳ್ಳಲು ತಿಳಿಸಿದೆ.
ಕೊರೊನಾವೈರಸ್ ಲಾಕ್ಡೌನ್ ವ್ಯವಹಾರಗಳ ಮೇಲೆ ಪರಿಣಾಮ ಬೀರುವುದನ್ನು ಗಮನದಲ್ಲಿಟ್ಟುಕೊಂಡು ಮೂರರಿಂದ ಆರು ತಿಂಗಳವರೆಗೆ ಈ ನಿರ್ದೇಶನ ನೀಡಲಾಗಿದೆ.
"2020-21ರ ಹಣವನ್ನು ಸಂರಕ್ಷಿಸುವುದು ಟಾಟಾ ಗ್ರೂಪ್ ಕಂಪನಿಗಳಿಗೆ ನಮ್ಮ ಸಂದೇಶವಾಗಿದೆ" ಎಂದು ಟಾಟಾ ಸನ್ಸ್ನ ಅಧ್ಯಕ್ಷ ಎನ್ ಚಂದ್ರಶೇಖರನ್ ಬುಧವಾರ ಎಕನಾಮಿಕ್ಸ್ ಟೈಮ್ಸ್ಗೆ ಸಂದರ್ಶನದಲ್ಲಿ ತಿಳಿಸಿದ್ದಾರೆ.
ಭಾರತದ ಜಿಡಿಪಿ ಮೇಲೂ ಬೀರಲಿದೆ ಪರಿಣಾಮ
''ಕೊರೊನಾ ಸಾಂಕ್ರಾಮಿಕ ರೋಗವು ವಿಶ್ವದ ಎಲ್ಲಾ ರಾಷ್ಟ್ರಗಳ ಮೇಲೆ ಪರಿಣಾಮ ಬೀರಿರುವುದರಿಂದ ಪ್ರತಿಯೊಂದು ರಾಷ್ಟ್ರವು ಉದ್ಯೋಗದ ಮೇಲೆ ಗಂಭೀರ ಪರಿಣಾಮ ಎದುರಿಸಲಿದೆ. ಮತ್ತು ಎಲ್ಲಾ ದೇಶಗಳ ಜಿಡಿಪಿ ಮೇಲಿನ ಕೆಟ್ಟ ಪರಿಣಾಮವನ್ನು ಎದುರಿಸಬೇಕಾಗುತ್ತದೆ. ಭಾರತದ ಜಿಡಿಪಿಯ ಮೇಲೂ ಕೊರೊನಾ ಛಾಯೆ ಜೋರಾಗಲಿದ್ದು ಸುಮಾರು 250 ಬಿಲಿಯನ್ ಡಾಲರ್ನಷ್ಟು ಕೊರತೆ ಕಂಡು ಬರಲಿದೆ'' ಎಂದು ಟಾಟಾ ಸನ್ಸ್ನ ಅಧ್ಯಕ್ಷ ಎನ್ ಚಂದ್ರಶೇಖರನ್ ಹೇಳಿದ್ದಾರೆ.
ಲಾಕ್ಡೌನ್ ಮುಗಿದ ಬಳಿಕ ಹಣದ ವಹಿವಾಟು ನಿಧಾನಗತಿಯಲ್ಲಿ ಮುಂದಾಗಲಿದೆ ಮತ್ತು ಸಾಲವು ಆರ್ಥಿಕತೆಯ ಮೇಲೆ ಪರಿಣಾಮ ಬೀರಲಿದೆ. ಸಣ್ಣ ಮತ್ತು ಸೂಕ್ಷ್ಮ ಕೈಗಾರಿಕೆಗಳು ಇದರಿಂದ ಸಾಕಷ್ಟು ತೊಂದರೆ ಅನುಭವಿಸಲಿದ್ದು ಅವುಗಳಿಗೆ ಸಾಕಷ್ಟು ಬಾಹ್ಯ ಬೆಂಬಲ ಬೇಕಾಗುತ್ತದೆ ಎಂದು ಹೇಳಿದ್ದಾರೆ.
ಆರ್ಥಿಕ ಹಿಂಜರಿತ ಎಷ್ಟು ದಿನ ಇರಬಹುದು ಎಂದು ತಿಳಿಯುವುದೇ ದೊಡ್ಡ ಸವಾಲು
ಕೊರೊನಾ ಸಮಸ್ಯೆ ಮುಗಿದ ಬಳಿಕ ದೇಶದ ಆರ್ಥಿಕತೆಯು ಅನೇಕ ಸವಾಲುಗಳನ್ನು ಎದುರಿಸಲಿದೆ. ಎಲ್ಲಾ ಉದ್ಯಮಗಳು ನಷ್ಟದಿಂದ ಮೇಲೆ ಬರಬೇಕಾಗುತ್ತದೆ. ಆದರೆ ಈ ಆರ್ಥಿಕ ಹಿಂಜರಿತವು ಎಲ್ಲಿಯವರೆಗೂ ಇರಬಹುದು ಎಂದು ಹೇಳಲು ಸಾಧ್ಯವಿಲ್ಲ. ಹೀಗಿರುವಾಗ ಈ ಬೃಹತ್ ಸವಾಲನ್ನು ಅಂದಾಜು ಮಾಡುವುದೇ ದೊಡ್ಡ ಸವಾಲಾಗಿರುತ್ತದೆ.
ಕೆಲವು ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗುತ್ತದೆ
ಆರ್ಥಿಕ ಬಿಕ್ಕಟ್ಟಿನ ಪರಿಣಾಮ ಗ್ರೂಪ್ ಕಂಪನಿಗಳಿಗೆ ವಾರ್ಷಿಕ ಯೋಜನೆಗಳನ್ನು ಪುನರುಜ್ಜೀವನಗೊಳಿಸಲು ಟಾಟಾ ಸನ್ಸ್ ಕೋರಿದೆ. ತಾತ್ಕಾಲಿಕ ಕೆಲಸಗಾರರಿಗೆ(ಟೆಂಪರರಿ ವರ್ಕರ್ಸ್)ಗೆ ತಾತ್ಕಾಲಿಕ ಅವಧಿವರೆಗೂ ಸಂಬಳ ಮುಂದುವರಿಸುವುದಾಗಿ ಈ ಹಿಂದೆ ಹೇಳಿದೆ. ಆದರೆ ಕೆಲವು ಆರ್ಥಿಕ ಬಿಕಟ್ಟು ಪರಿಹರಿಸಲು ಪೋರ್ಟ್ಪೊಲಿಯೋ ಪುನರ್ರಚನೆಯ ವಿಷಯದಲ್ಲಿ ಕೆಲವು ಕಠಿಣ ನಿರ್ಧಾರಗಳಿಗೆ ಕಾರಣವಾಗಲಿದೆ ಎಂದು ಟಾಟಾ ಗ್ರೂಪ್ ಹೇಳಿದೆ.