ಕೊರೊನಾ ಲಾಕ್ ಡೌನ್ ಅವಧಿಯಲ್ಲಿ ಎಲ್ಲರೂ ಮನೆಗಳಲ್ಲಿ ಇರುತ್ತಿರುವುದರಿಂದ ಕಳ್ಳರು ಚಿನ್ನ, ಬೆಳ್ಳಿ, ನಗದಿಗೆ ಕೈಯಿಡುವ ಬದಲಿಗೆ ತಮ್ಮ ವರಸೆಯನ್ನೇ ಬದಲಿಸಿಕೊಂಡಿದ್ದಾರೆ. ದಿನಸಿ ಅಂಗಡಿಗಳು, ಮದ್ಯ ಮಾರಾಟ ಮಳಿಗೆಗಳು ಈ ತಿಂಗಳಲ್ಲಿ ಕಳ್ಳರ ಪಾಲಿಗೆ ಗುರಿಯಾಗಿವೆ. ಮಹಾರಾಷ್ಟ್ರದಲ್ಲಂತೂ ಕಳವು ಪ್ರಕರಣಗಳನ್ನು ಗಮನಿಸಿದರೆ ರೆಸ್ಟೋರೆಂಟ್ ನಲ್ಲಿ ಕದ್ದಿರುವುದು ಸಹ ಕಂಡುಬರುತ್ತದೆ.
ಭಿವಂಡಿಯ ಕಿರಾಣಿ ಅಂಗಡಿಯೊಂದರಲ್ಲಿ ಮುನ್ನೂರು ಮೊಟ್ಟೆ, ಆರು ಪಾಕೆಟ್ ಹಿಟ್ಟು, ನಾಲ್ಕು ಲೀಟರ್ ಹಾಲು, ಅರವತ್ತು ಬ್ಯಾಗ್ ಅಕ್ಕಿ ಹಾಗೂ ಇತರ ದಿನಸಿ ವಸ್ತುಗಳನ್ನು ಕಳವು ಮಾಡಲಾಗಿದೆ. ಇನ್ನು ಬೊರಿವಿಲ್ಲಿಯ ಮಳಿಗೆಯೊಂದರಲ್ಲಿ 1400 ರುಪಾಯಿ ಮೌಲ್ಯದ ಬೆಣ್ಣೆ ಕದಿಯಲಾಗಿದೆ.
ಚೆಂಬೂರಿನಲ್ಲಿ ಅಂಗಡಿಯ ಷಟರ್ ಮುರಿದು, ಸಿಗರೇಟ್ ಪ್ಯಾಕೆಟ್ ಗಳು, ತಂಬಾಕು ಸ್ಯಾಚೆಟ್, ಬೀಡಿ ಹಾಗೂ ಮೂರು ಸಾವಿರ ರುಪಾಯಿ ನಗದು ಕದಿಯಲಾಗಿದೆ. ಕೋಲ್ಕತ್ತಾದ ಚಿತ್ಪೋರ್ ನಲ್ಲಿ ಸಂಬಾರ ಪದಾರ್ಥ, ಸೋಪ್, ಡಿಟರ್ಜೆಂಟ್ ಪೌಡರ್ ಕದ್ದಿದ್ದಾರೆ. ಆಂಧ್ರಪ್ರದೇಶದಲ್ಲಿ ಲಾಕ್ ಡೌನ್ ಅವಧಿಯಲ್ಲಿ ಇಪ್ಪತ್ನಾಲ್ಕು ಮದ್ಯ ಮಾರಾಟ ಮಳಿಗೆಗಳಲ್ಲಿ ಕಳುವಾಗಿವೆ.

ಆಂಧ್ರದಲ್ಲಿ ಮದ್ಯಮಳಿಗೆಯಲ್ಲಿ ಕಳುವು ಮಾಡಿದ್ದವರು ಬಿ.ಕಾಂ., ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿಗಳು. ಅವರನ್ನು ಬಂಧಿಸಿದ ಮೇಲೆ ಗೊತ್ತಾಗಿದ್ದೇನೆಂದರೆ, ಮದ್ಯ ಬಾಟಲಿಗಳ ಎಂ.ಆರ್.ಪಿ. ದರಕ್ಕಿಂತ ನಾಲ್ಕು ಪಟ್ಟು ಹೆಚ್ಚು ಬೆಲೆಗೆ ಅವರು ಮಾರಾಟ ಮಾಡಿದ್ದರು.
ಏಪ್ರಿಲ್ ತಿಂಗಳ ಆರಂಭದಲ್ಲಿ ಸರ್ಕಾರದ ಮದ್ಯದಂಗಡಿಗೆ ಕನ್ನ ಹಾಕಿದ್ದ ಕಳ್ಳರು ಲಕ್ಷಾಂತರ ರುಪಾಯಿ ಮೌಲ್ಯದ ಮದ್ಯದ ಬಾಟಲಿಗಳನ್ನು ಕದ್ದಿದ್ದರು. ಮತ್ತೂ ದೊಡ್ಡ ಸಮಸ್ಯೆ ಕಾಣಿಸಿಕೊಂಡಿದ್ದು ಪಂಜಾಬ್ ನ ಲುಧಿಯಾನ ಪೊಲೀಸರಿಗೆ. ಆ ಪೊಲೀಸರು ಇಬ್ಬರು ಬೈಕ್ ಕಳ್ಳರನ್ನು ಹಿಡಿದಾಗ ಒಬ್ಬನಲ್ಲಿ ಕೊರೊನಾ ಲಕ್ಷಣಗಳು ಕಾಣಿಸಿದವು. ಕೂಡಲೇ ಆತನನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಯಿತು. ಆತನಿಗೆ ಕೊರೊನಾ ಪಾಸಿಟಿವ್ ದೃಢವಾಯಿತು.
ಆ ನಂತ ಪೊಲೀಸ್ ಠಾಣೆಯ ಎಂಟು ಸಿಬ್ಬಂದಿ ಹಾಗೂ ಕಳ್ಳನನ್ನು ವಿಚಾರಣೆಗೆ ಹಾಜರು ಪಡಿಸಿದ್ದ ನ್ಯಾಯಾಧೀಶರ ಸಮೇತ ಹಲವರನ್ನು ಕ್ವಾರಂಟೈನ್ ಮಾಡಲಾಯಿತು.


Click it and Unblock the Notifications