ಕೊರೊನಾ ವೈರಸ್ ಹಬ್ಬದಿರುವಂತೆ ಭಾರತದಲ್ಲಿ ಲಾಕ್ ಡೌನ್ ಆಗಿರುವುದು ಈಗಾಗಲೇ ರೂಢಿಯಾಗಿದೆ ಎಂಬುದು ಜನರ ಮಾತಾಯಿತು. ಆದರೆ ರಾಸುಗಳ ಗತಿಯೇನು? ಅವುಗಳ ಮೇವಿಗಾಗಿ ಏನು ಮಾಡಲಾಗುತ್ತಿದೆ? ಬೆಳೆಯನ್ನು ರೈತರು ಏನು ಮಾಡುತ್ತಿದ್ದಾರೆ? ಇಂಥ ಪ್ರಶ್ನೆಗಳಿಗೆ ಉತ್ತರ ಅನ್ನೋ ಹಾಗೆ ಈ ವರದಿ ನಿಮ್ಮೆದುರಿಗೆ ಇದೆ.
ಮಹಾರಾಷ್ಟ್ರದ ಸತಾರಾದಲ್ಲಿ ಸ್ಟ್ರಾಬೆರಿ ಹಾಗೂ ಬಣ್ಣದ ಹೂ ಕೋಸು ಬೆಳೆದ ರೈತರು ತಮ್ಮ ಫಸಲನ್ನು ಸಾಗಾಟ ಮಾಡಲಾಗದೆ, ರಾಸುಗಳಿಗೆ ಮೇವು ಒದಗಿಸಲಾಗದೆ ಬೆಳೆದ ಬೆಳೆಯನ್ನೇ ಅವುಗಳ ಮೇವಾಗಿ ಬಳಸುತ್ತಿದ್ದಾರೆ. ಬೇಸಿಗೆ ಬಂತೆಂದರೆ ಸ್ಟ್ರಾಬೆರಿ, ಬಣ್ಣದ ಹೂ ಕೋಸಿಗೆ ವಿಪರೀತ ಬೇಡಿಕೆ ಬರುತ್ತದೆ. ಆದರೆ ಮಾರುಕಟ್ಟೆ ತನಕ ಸಾಗಿಸುವುದಕ್ಕೆ ಸಾಗಾಟ ವ್ಯವಸ್ಥೆಯ ಇಲ್ಲ.
"ಪ್ರವಾಸಿಗರು, ಐಸ್ ಕ್ರೀಂ ತಯಾರಕರು ಸ್ಟ್ರಾಬೆರಿಯ ಮುಖ್ಯ ಖರೀದಿದಾರರು. ಸದ್ಯಕ್ಕೆ ಪ್ರವಾಸಿಗರೇ ಸುಳಿವೇ ಇಲ್ಲ" ಎನ್ನುತ್ತಾರೆ ಅಲ್ಲಿನ ರೈತ. ಸತಾರಾ ಜಿಲ್ಲೆಯಲ್ಲಿ ಎರಡು ಎಕರೆ ಪ್ರದೇಶದಲ್ಲಿ ಬೆಳೆದ ಸ್ಟ್ರಾಬೆರಿಯನ್ನು ತಮ್ಮ ರಾಸುಗಳಿಗೆ ಮೇವಾಗಿ ಹಾಕುತ್ತಿದ್ದಾರೆ. ಮಾರ್ಕೆಟ್ ಗೆ ಹಾಕಿದ್ದರೆ 8 ಲಕ್ಷ ರುಪಾಯಿ ಬಂದಿರುತ್ತಿತ್ತು. ಆದರೆ ಈಗ ಅದು ಬೆಳೆಯಲು ಖರ್ಚು ಮಾಡಿರುವ 2.50 ಲಕ್ಷ ಕೂಡ ಬರುವುದಿಲ್ಲ ಎನ್ನುತ್ತಾರೆ.

ಚಿಕ್ಕಬಳ್ಳಾಪುರದ ರೈತರೊಬ್ಬರು 15 ಟನ್ ದ್ರಾಕ್ಷಿಯನ್ನು ಮಾರಲಾಗದೆ ಹತ್ತಿರದ ಕಾಡಿನಲ್ಲಿ ಸುರಿದಿದ್ದಾರೆ. ಅಷ್ಟು ಪ್ರಮಾಣದಲ್ಲಿ ದ್ರಾಕ್ಷಿ ಬೆಳೆಯಲು ಅವರು ಐದು ಲಕ್ಷ ರುಪಾಯಿ ಖರ್ಚು ಮಾಡಿದ್ದರು. ಬಂದು ಫ್ರೀ ಆಗಿ ತೆಗೆದುಕೊಂಡು ಹೋಗಿ ಅಂತ ಹತ್ತಿರದ ಹಳ್ಳಿಗರಿಗೆ ಹೇಳಿದರೂ ಕೆಲವರು ಮಾತ್ರ ಬಂದಿದ್ದಾರೆ.
ಭಾರತದ ದ್ರಾಕ್ಷಿ ಯುರೋಪ್ ಗೆ ರಫ್ತಾಗುತ್ತಿತ್ತು. ಆದರೆ ಕೊರೊನಾ ಅಲ್ಲೂ ವ್ಯಾಪಿಸಿರುವುದರಿಂದ ಕಳೆದ ಕೆಲ ವಾರದಿಂದ ಬೆಲೆಯಲ್ಲಿ ಭಾರೀ ಇಳಿಕೆ ಆಗಿದೆ. ಇನ್ನು ಹೂವು, ಕೆಲವು ತರಕಾರಿ ಬೆಳೆಗಾರರ ಸ್ಥಿತಿ ಕೂಡ ಇದಕ್ಕಿಂತ ಭಿನ್ನವಾಗಿಲ್ಲ. ಮದುವೆಗಳಿಂದ ಬೇಡಿಕೆಯಲ್ಲಿ ಇರುತ್ತಿದ್ದ ಹೂವು- ತರಕಾರಿಗಳನ್ನು ಈಗ ಕೇಳುವವರೇ ಇಲ್ಲದಂತಾಗಿದೆ.


Click it and Unblock the Notifications