ಅಡುಗೆ ಅನಿಲ ಸಿಲಿಂಡರ್ ವ್ಯತ್ಯಯದ ಬಗ್ಗೆ ಆತಂಕ: ವಿತರಕರಿಗೆ ಕಿರಿಕಿರಿ ತಂದ ಜನರು
ಕೊರೊನಾ ಲಾಕ್ ಡೌನ್ ಗೆ ಹೆದರಿ ಅಗತ್ಯಕ್ಕೆ ಮೀರಿ ಗ್ರಾಹಕರು ಖರೀದಿ ಮಾಡಿರುವುದರಿಂದ ಭಾರತದ ಕೆಲವು ನಗರಗಳಲ್ಲಿ ಅಡುಗೆ ಅನಿಲ ಸಿಲಿಂಡರ್ ಪೂರೈಕೆಯಲ್ಲಿ ವ್ಯತ್ಯಯವಾಗಿದೆ. "15 ದಿನಕ್ಕೆ ಒಂದು ಸಿಲಿಂಡರ್" ಎಂಬ ನಿಯಮಕ್ಕೆ ಕಂಪೆನಿಗಳು ಬದ್ಧವಾಗಿದ್ದರೂ ಈ ರೀತಿಯ ಸಮಸ್ಯೆಯಾಗಿದೆ.
ಇದರಿಂದ ಸಮಯಕ್ಕೆ ಸರಿಯಾಗಿ ಹಾಗೂ ವ್ಯವಸ್ಥಿತವಾಗಿ ಮನೆಗಳಿಗೆ ಅಡುಗೆ ಅನಿಲ ಸಿಲಿಂಡರ್ ತಲುಪಿಸುವುದು ಸವಾಲಾಗಿದೆ. ಈ ವಿಚಾರವನ್ನು ಜಿಲ್ಲೆಯ ಅಧಿಕಾರಿಗಳಿಗೆ ತಂದಿದ್ದೇವೆ ಹಾಗೂ ಅಗತ್ಯ ಬಿದ್ದಲ್ಲಿ ನೆರವು ನೀಡುವಂತೆ ಕೇಳಿದ್ದೇವೆ ಎಂದು ಇಂಡಿಯನ್ ಆಯಿಲ್ ಕಾರ್ಪೊರೇಷನ್ ತಿಳಿಸಿದೆ.
ಯಾವುದೇ ಸಮಸ್ಯೆ ಆಗದಂತೆ ಅಡುಗೆ ಅನಿಲ ಸಿಲಿಂಡರ್ ಪೂರೈಸಲು ವಿತರಕರು ಜಿಲ್ಲಾಡಳಿತದಿಂದ ಮತ್ತೆ ಭದ್ರತೆ ಕೇಳಿದ್ದಾರೆ. ಏಪ್ರಿಲ್ 20ರಿಂದ ಸ್ವಲ್ಪ ಮಟ್ಟಿಗೆ ವಿನಾಯಿತಿ ನೀಡಿದ್ದರಿಂದ ಅದನ್ನು ವಾಪಸ್ ಪಡೆಯಲಾಗಿತ್ತು. ಇನ್ನು ಮನೆಗಳಿಗೆ ಸಿಲಿಂಡರ್ ತಲುಪಿಸಲು ತೆರಳುವಾಗ ಅಡ್ಡಗಟ್ಟುವ ಜನರು, ತಮಗೆ ಆ ಸಿಲಿಂಡರ್ ನೀಡುವಂತೆ ಕೇಳುತ್ತಿದ್ದಾರೆ.
ನಾನಾ ಬಗೆಯ ವದಂತಿಗಳು ಹರಿದಾಡುತ್ತಿರುವುದರಿಂದ ಎಲ್ ಪಿಜಿ ವಿತರಣೆ ಮಳಿಗೆ ಬಳಿ ಜನ ಗುಂಪುಗೂಡಿ, ಸಿಲಿಂಡರ್ ವಿತರಿಸುವುದಕ್ಕೆ ಒತ್ತಾಯಿಸುತ್ತಿದ್ದಾರೆ. ಸಿಲಿಂಡರ್ ಬುಕ್ಕಿಂಗ್ ಮಾಡದಿದ್ದರೂ ಕೆಲವರು ಗೋಡೌನ್ ಬಳಿಯೇ ಬಂದು, ಕೇಳುತ್ತಿದ್ದಾರೆ ಎಂದು ವಿತರಕರು ಹೇಳಿದ್ದಾರೆ.